
ನಾಗ್ಪುರ, ಜುಲೈ 15: ಕೇಂದ್ರ ಸಚಿವ ನಿತಿನ್ ಗಡ್ಕರಿ(Nitin Gadkari) ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು, ಎಥೆನಾಲ್ ಮಿಶ್ರಿತ ಇಂಧನ(E20 Petrol) ನೀತಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದಾರಿತಪ್ಪಿಸುವ ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಬಿಹಾರದ ಪ್ರಸಿದ್ಧ ಯೂಟ್ಯೂಬರ್ ಮನೀಷ್ ಕಶ್ಯಪ್ ಸೇರಿ ನಾಲ್ವರು ಇನ್ಫ್ಲುಯೆನ್ಸರ್ಗಳ ವಿರುದ್ಧ ನಾಗ್ಪುರ ಸೈಬರ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮನೀಶ್ ಕಶ್ಯಪ್ ಹೊರತುಪಡಿಸಿ, ಎಫ್ಐಆರ್ನಲ್ಲಿ ಹೆಸರಿಸಲಾದ ಇತರ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳೆಂದರೆ ‘ದೇಸಿ ಬಾಯ್ಸ್ ಎನ್ಸಿಆರ್’, ಹರ್ಷಿತ್ ರಥಿ ಮತ್ತು ಅಂಕಲೇಶ್ ಇನ್ವಾಟೆ.
ಪೊಲೀಸ್ ಮೂಲಗಳ ಪ್ರಕಾರ, ಈ ನಾಲ್ವರು ಇನ್ಫ್ಲುಯೆನ್ಸರ್ಗಳು ಕೇವಲ ವ್ಯೂಸ್ ಮತ್ತು ಫಾಲೋವರ್ಸ್ಗಳನ್ನು ಗಳಿಸುವ ಏಕೈಕ ಸ್ವಾರ್ಥ ಉದ್ದೇಶದಿಂದ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ವಿವಾದಾತ್ಮಕ ವೀಡಿಯೊಗಳನ್ನು ಅಪ್ಲೋಡ್ ಮಾಡಿದ್ದರು.
ವಂಚನೆಯ ಆರೋಪ: ಸರ್ಕಾರದ ಎಥೆನಾಲ್ ನೀತಿಯ ನೆಪದಲ್ಲಿ ದೇಶದಲ್ಲಿ ದೊಡ್ಡ ಪ್ರಮಾಣದ ಹಗರಣ ಮತ್ತು ನಕಲಿ ವಹಿವಾಟುಗಳು ನಡೆಯುತ್ತಿವೆ ಎಂದು ಇವರು ವೀಡಿಯೊಗಳಲ್ಲಿ ಪ್ರತಿಪಾದಿಸಿದ್ದರು.
ನಕಲಿ ಸಂದರ್ಶನಗಳು: ತಮ್ಮ ಸುಳ್ಳು ವೀಡಿಯೊಗಳಿಗೆ ಸಾರ್ವಜನಿಕ ನಂಬಿಕೆ ಸಿಗಲಿ ಎಂಬ ಕಾರಣಕ್ಕೆ, ಇವರು ಸಾಮಾನ್ಯ ನಾಗರಿಕರೊಂದಿಗೆ ನಕಲಿ ಹಾಗೂ ದಾರಿತಪ್ಪಿಸುವ ಸಂದರ್ಶನಗಳನ್ನು ಚಿತ್ರೀಕರಿಸಿ ಪ್ರಸಾರ ಮಾಡಿದ್ದರು. ಈ ಮೂಲಕ ನಿತಿನ್ ಗಡ್ಕರಿ ಅವರ ರಾಜಕೀಯ ಮತ್ತು ಸಾಮಾಜಿಕ ಖ್ಯಾತಿಗೆ ಕಳಂಕ ತರಲು ಪ್ರಯತ್ನಿಸಿದ್ದರು.
ಭಾರತೀಯ ಜನತಾ ಪಕ್ಷದ (BJP) ನಾಗ್ಪುರ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಶಿಶಿರ್ ತ್ರಿಪಾಠಿ ಅವರು ನೀಡಿದ ಔಪಚಾರಿಕ ದೂರಿನ ಆಧಾರದ ಮೇಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಮತ್ತಷ್ಟು ಓದಿ: ಇ20 ಪೆಟ್ರೋಲ್, ಭಯಪಡುವ ವಿಚಾರವಾ? ಜನರಿಗೆ ಇರುವ ಸಂದೇಹಗಳೇನು? ಸರ್ಕಾರ ಹೇಳುವುದೇನು? ಇಲ್ಲಿದೆ ಡೀಟೇಲ್ಸ್
ದೂರು ದಾಖಲಾದ ತಕ್ಷಣ ನಾಗ್ಪುರ ಸೈಬರ್ ಸೆಲ್ ಅಧಿಕಾರಿಗಳು ಈ ವೀಡಿಯೊಗಳ ಸತ್ಯಾಸತ್ಯತೆಯ ಬಗ್ಗೆ ತೀವ್ರ ತನಿಖೆ ನಡೆಸಿದರು. ತನಿಖೆಯಲ್ಲಿ ಇನ್ಫ್ಲುಯೆನ್ಸರ್ಗಳು ಪ್ರಸಾರ ಮಾಡಿದ ಮಾಹಿತಿಯು ಸಂಪೂರ್ಣವಾಗಿ ಆಧಾರರಹಿತ ಮತ್ತು ಕಲ್ಪಿತ ಎಂಬುದು ಸಾಬೀತಾಗಿದೆ. ಈ ವೀಡಿಯೊಗಳು ಕೇವಲ ಸಂವೇದನೆ ಸೃಷ್ಟಿಸಲು ಮಾಡಿದ ಷಡ್ಯಂತ್ರವಾಗಿದ್ದು, ವೀಡಿಯೊದಲ್ಲಿ ತೋರಿಸಲಾದ ಯಾವುದೇ ಘಟನೆಗಳಿಗೂ ಸಚಿವ ನಿತಿನ್ ಗಡ್ಕರಿ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸೈಬರ್ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ವೆಚ್ಚವನ್ನು ಉಳಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕ್ರಾಂತಿಕಾರಿ ನೀತಿ ಇದು. E20 ಎಂದರೆ ಶೇಕಡಾ 80 ರಷ್ಟು ಪೆಟ್ರೋಲ್ ಮತ್ತು ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಿತ ಇಂಧನವಾಗಿದೆ. ಈ ಎಥೆನಾಲ್ ಅನ್ನು ಕಬ್ಬು, ಹಾಳಾದ ಧಾನ್ಯಗಳು ಮತ್ತು ಕೃಷಿ ತ್ಯಾಜ್ಯದಿಂದ ಭಾರತದಲ್ಲೇ ಸ್ವದೇಶಿಯಾಗಿ ಉತ್ಪಾದಿಸಲಾಗುತ್ತದೆ.
ರೈತರಿಗೆ ಆರ್ಥಿಕ ಬಲ: ನಿತಿನ್ ಗಡ್ಕರಿ ಅವರು ಮೊದಲಿನಿಂದಲೂ ಎಥೆನಾಲ್ ಬಳಕೆಯನ್ನು ಪ್ರಬಲವಾಗಿ ಬೆಂಬಲಿಸುತ್ತಾ ಬಂದಿದ್ದಾರೆ. ಇದರಿಂದಾಗಿ ದೇಶದ ಕೋಟ್ಯಂತರ ಕಬ್ಬು ಬೆಳೆಯುವ ರೈತರಿಗೆ ನೇರ ಆರ್ಥಿಕ ಲಾಭ ಸಿಗುತ್ತಿದೆ. ಆದರೆ, ಈ ಇಂಧನ ಬಳಕೆಯಿಂದ ವಾಹನಗಳ ಇಂಜಿನ್ ಹಾಳಾಗುತ್ತದೆ ಎಂಬಂತಹ ಸುಳ್ಳು ವದಂತಿಗಳನ್ನು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹರಡಲಾಗುತ್ತಿತ್ತು. ಸದ್ಯ ಪೊಲೀಸರು ಈ ನಾಲ್ಕು ಇನ್ಫ್ಲುಯೆನ್ಸರ್ಸ್ಗಳ ಡಿಜಿಟಲ್ ಖಾತೆಗಳ ತಾಂತ್ರಿಕ ತನಿಖೆ ನಡೆಸುತ್ತಿದ್ದು, ಇದರ ಹಿಂದೆ ಯಾವುದಾದರೂ ರಾಜಕೀಯ ಪಿತೂರಿ ಇದೆಯೇ ಎಂಬ ಕೋನದಲ್ಲೂ ಜಾಲಾಡುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ