ಗಡಿಗಳು ಈಗ ಶಾಂತವಾಗಿವೆ; ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜೊತೆ ಅಜಿತ್ ದೋವಲ್ ಸಭೆ

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ 2 ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಇಂದು ರಾಷ್ಟ್ರ ರಾಜಧಾನಿಯ ಹೈದರಾಬಾದ್ ಹೌಸ್‌ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದರು. ಇಂದು ವಾಂಗ್ ಯಿ ಅವರೊಂದಿಗಿನ ಸಭೆಯಲ್ಲಿ NSA ಅಜಿತ್ ದೋವಲ್ ಎರಡೂ ದೇಶಗಳ ನಡುವಿನ ವಿಶ್ವಾಸವನ್ನು ಗಟ್ಟಿಗೊಳಿಸಲು ಮತ್ತು ಸಹಕಾರವನ್ನು ಬಲಪಡಿಸಲು ಒತ್ತಾಯಿಸಿದ್ದಾರೆ.

ಗಡಿಗಳು ಈಗ ಶಾಂತವಾಗಿವೆ; ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜೊತೆ ಅಜಿತ್ ದೋವಲ್ ಸಭೆ
Ajit Doval With China Minister

Updated on: Aug 19, 2025 | 9:55 PM

ನವದೆಹಲಿ, ಆಗಸ್ಟ್ 19: ಚೀನಾ-ಭಾರತ ಗಡಿ ಪ್ರಶ್ನೆಯ ಕುರಿತು ವಿಶೇಷ ಪ್ರತಿನಿಧಿಗಳ 24ನೇ ಸಭೆ ಇಂದು ದೆಹಲಿಯಲ್ಲಿ ನಡೆಯಿತು. ಈ ವೇಳೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ (Wang Yi) ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ (Ajit Doval) ಚೀನಾ-ಭಾರತ ಗಡಿ ಸಮಸ್ಯೆ ಮತ್ತು ದ್ವಿಪಕ್ಷೀಯ ಸಂಬಂಧಗಳ ಕುರಿತು ಸಮಗ್ರ ಚರ್ಚೆಗಳನ್ನು ನಡೆಸಿದರು. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮಂಗಳವಾರ ರಾಷ್ಟ್ರ ರಾಜಧಾನಿಯ ಹೈದರಾಬಾದ್ ಹೌಸ್‌ನಲ್ಲಿ ಎನ್‌ಎಸ್‌ಎ ದೋವಲ್ ಅವರನ್ನು ಭೇಟಿ ಮಾಡಿದರು.

ಕಳೆದ ಅಕ್ಟೋಬರ್‌ನಲ್ಲಿ ಮಿಲಿಟರಿ ಬಿಕ್ಕಟ್ಟು ಕೊನೆಗೊಂಡ ನಂತರ ಭಾರತ ಮತ್ತು ಚೀನಾ ಗಡಿಯಲ್ಲಿ ಶಾಂತಿ ನೆಲೆಸಿದೆ, ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಗಡಿ ವಿಷಯದ ಕುರಿತು ಮಾತುಕತೆ ನಡೆಸುತ್ತಿದ್ದಾಗ ಅವರು ಈ ವಿಷಯ ತಿಳಿಸಿದರು.


ಇದನ್ನೂ ಓದಿ: ಭಯೋತ್ಪಾದನಾ ನಿಗ್ರಹಕ್ಕೆ ಆದ್ಯತೆ; ಚೀನಾದ ವಿದೇಶಾಂಗ ಸಚಿವರ ಜೊತೆ ಜೈಶಂಕರ್ ಮಾತುಕತೆ

ವಾಂಗ್ ಯಿ ಸೋಮವಾರ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಈ ವೇಳೆ ಅವರು ವಿದೇಶಾಂಗ ಸಚಿವ (ಇಎಎಂ) ಎಸ್. ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿದರು. ಭಾರತ ಮತ್ತು ಚೀನಾದ ಇಬ್ಬರು ಉನ್ನತ ನಾಯಕರ ನಡುವಿನ ಕಜಾನ್ ಸಭೆಯು ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳ ಸುಧಾರಣೆ ಮತ್ತು ಅಭಿವೃದ್ಧಿಯಲ್ಲಿ ಒಂದು ಮಹತ್ವದ ತಿರುವು ಎಂದು ಎನ್‌ಎಸ್‌ಎ ಅಜಿತ್ ದೋವಲ್ ವಿವರಿಸಿದ್ದಾರೆ. ಈಗ ಎಎರಡೂ ದೇಶಗಳು ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಂಡಿದೆ, ದ್ವಿಪಕ್ಷೀಯ ಸಂಬಂಧಗಳಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಿದೆ ಎಂದು ಅವರು ಹೇಳಿದ್ದಾರೆ.


ಪ್ರಸ್ತುತ ಪ್ರಕ್ಷುಬ್ಧ ಅಂತಾರಾಷ್ಟ್ರೀಯ ಪರಿಸ್ಥಿತಿಯ ನಡುವೆ ಭಾರತ ಮತ್ತು ಚೀನಾ ಹಲವಾರು ಸಾಮಾನ್ಯ ಸವಾಲುಗಳನ್ನು ಎದುರಿಸುತ್ತಿವೆ ಎಂದು ಅಜಿತ್ ದೋವಲ್ ಹೇಳಿದ್ದಾರೆ.


ಇದನ್ನೂ ಓದಿ: China Flood: ಚೀನಾದಲ್ಲಿ ಪ್ರವಾಹಕ್ಕೆ ಸಿಲುಕಿ 10 ಜನ ಸಾವು, 33 ಮಂದಿ ನಾಪತ್ತೆ

“ಪ್ರಧಾನಿ ಮೋದಿ ಚೀನಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಟಿಯಾಂಜಿನ್ ಶೃಂಗಸಭೆಯಲ್ಲಿ ಭಾಗವಹಿಸಲು ಎದುರು ನೋಡುತ್ತಿದ್ದಾರೆ. ಇದು ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಬೆಳವಣಿಗೆಗಳನ್ನು ಉತ್ತೇಜಿಸುತ್ತದೆ ಎಂಬ ನಂಬಿಕೆಯಿದೆ. ಶೃಂಗಸಭೆಯನ್ನು ಆಯೋಜಿಸುವಲ್ಲಿ ಭಾರತ ಚೀನಾವನ್ನು ಬೆಂಬಲಿಸುತ್ತದೆ” ಎಂದು ಅಜಿತ್ ದೋವಲ್ ಹೇಳಿದರು ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 9:49 pm, Tue, 19 August 25