ಖಾತೆದಾರರು ಬಂದ್ರೆ ಮಾತ್ರ ಹಣ ಕೊಡೋದು ಎಂದ ಬ್ಯಾಂಕ್ ಸಿಬ್ಬಂದಿ, ಮೃತ ಸಹೋದರಿಯ ಅಸ್ಥಿಪಂಜರ ಹೊತ್ತು ಬಂದ ವ್ಯಕ್ತಿ

ಒಡಿಶಾದ ಕಿಯೋಂಜಾರ್‌ನಲ್ಲಿ ಜಿತು ಮುಂಡಾ ಎಂಬಾತ ಮೃತ ಸಹೋದರಿಯ 19,300 ರೂ. ಪಡೆಯಲು, ಬ್ಯಾಂಕ್‌ ನಿಯಮಗಳ ತೊಡಕಿನಿಂದಾಗಿ ಅವಳ ಅಸ್ಥಿಪಂಜರವನ್ನೇ ಹೊತ್ತು 3 ಕಿ.ಮೀ ನಡೆದು ಬ್ಯಾಂಕ್‌ಗೆ ಬಂದಿದ್ದಾನೆ. ಹಣ ಪಡೆಯಲು ಮರಣ ಪ್ರಮಾಣಪತ್ರ, ಉತ್ತರಾಧಿಕಾರ ಪತ್ರದಂತಹ ದಾಖಲೆಗಳಿಲ್ಲದ ಬುಡಕಟ್ಟು ಜನಾಂಗದ ಜಿತು ಅವರ ಈ ದುರಂತ ನಿರ್ಧಾರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಬ್ಯಾಂಕ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಖಾತೆದಾರರು ಬಂದ್ರೆ ಮಾತ್ರ ಹಣ ಕೊಡೋದು ಎಂದ ಬ್ಯಾಂಕ್ ಸಿಬ್ಬಂದಿ, ಮೃತ ಸಹೋದರಿಯ ಅಸ್ಥಿಪಂಜರ ಹೊತ್ತು ಬಂದ ವ್ಯಕ್ತಿ
ಅಸ್ಥಿಪಂಜರ ಹಿಡಿದು ಬ್ಯಾಂಕಿಗೆ ಹೋದ ವ್ಯಕ್ತಿ
Image Credit source: NDTV

Updated on: Apr 28, 2026 | 7:17 AM

ಕಿಯೋಂಜಾರ್, ಏಪ್ರಿಲ್ 28:  ವ್ಯಕ್ತಿಯೊಬ್ಬರು ತನ್ನ ಮೃತ ಸಹೋದರಿಯ ಅಸ್ಥಿಪಂಜರ(Skeleton)ವನ್ನೇ ಹೊತ್ತು ಉರಿಯುವ ಬಿಸಿಲಿನಲ್ಲಿ 3 ಕಿಲೋಮೀಟರ್ ನಡೆದು ಬ್ಯಾಂಕಿಗೆ ಹೋಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಕಿಯೋಂಜಾರ್ ಜಿಲ್ಲೆಯ ಡಯಾನಾಲಿ ಗ್ರಾಮದ ಜಿತು ಮುಂಡಾ ಅವರ ಸಹೋದರಿ ಕಾಕ್ರಾ ಮುಂಡಾ ಎರಡು ತಿಂಗಳ ಹಿಂದೆ ನಿಧನರಾಗಿದ್ದರು. ಕಾಕ್ರಾ ಅವರ ಪತಿ ಮತ್ತು ಮಗು ಮೊದಲೇ ಮೃತಪಟ್ಟಿದ್ದರಿಂದ, ಜಿತು ಅವರೇ ಏಕೈಕ ಸಂಬಂಧಿಯಾಗಿದ್ದರು. ಸಹೋದರಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪಡೆಯಲು ಜಿತು ಅವರು ಬ್ಯಾಂಕ್ ಮ್ಯಾನೇಜರ್ ಅನ್ನು ಭೇಟಿ ಮಾಡಿದಾಗ, ಖಾತೆದಾರರು ಖುದ್ದಾಗಿ ಬರಬೇಕು ಅಥವಾ ಕಾನೂನುಬದ್ಧ ಉತ್ತರಾಧಿಕಾರಿ ದಾಖಲೆಗಳನ್ನು ನೀಡಬೇಕು ಎಂದು ಬ್ಯಾಂಕ್ ನಿಯಮದ ನೆಪವೊಡ್ಡಿತ್ತು.

ಯಾವುದೇ ಶಿಕ್ಷಣವಿಲ್ಲದ ಮತ್ತು ಬುಡಕಟ್ಟು ಜನಾಂಗದ ಜಿತು ಅವರಿಗೆ ಮರಣ ಪ್ರಮಾಣಪತ್ರ ಪಡೆಯುವ ಅಥವಾ ಉತ್ತರಾಧಿಕಾರ ಪತ್ರದ ಸಂಕೀರ್ಣ ಪ್ರಕ್ರಿಯೆಗಳ ಬಗ್ಗೆ ತಿಳಿದಿರಲಿಲ್ಲ. ಹಣ ಸಿಗದಿದ್ದರೆ ಜೀವನ ನಡೆಸುವುದು ಕಷ್ಟ ಎಂಬ ಭಯದಿಂದ ಜಿತು ಅವರು ಸೋಮವಾರ ನಿರ್ಧಾರವೊಂದನ್ನು ತೆಗೆದುಕೊಂಡರು.

ಬೇರೆ ದಾರಿ ಕಾಣದ ಜಿತು, ಹಳ್ಳಿಯ ಸ್ಮಶಾನಕ್ಕೆ ಹೋಗಿ ಸಹೋದರಿಯ ಅವಶೇಷಗಳನ್ನು ಅಗೆದು ತೆಗೆದಿದ್ದಾರೆ. ಅಸ್ಥಿಪಂಜರವನ್ನು ಬಟ್ಟೆಯಲ್ಲಿ ಸುತ್ತಿ, ಅದನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು 3 ಕಿಲೋಮೀಟರ್ ನಡೆದು ಬ್ಯಾಂಕ್‌ಗೆ ಬಂದಿದ್ದಾರೆ. ಅಸ್ಥಿಪಂಜರವನ್ನು ಬ್ಯಾಂಕ್ ಎದುರು ಇರಿಸಿದಾಗ ಅಲ್ಲಿದ್ದ ಜನರು ಮತ್ತು ಬ್ಯಾಂಕ್ ಸಿಬ್ಬಂದಿ ದಿಗ್ಭ್ರಮೆಗೊಂಡರು. ಈ ದೃಶ್ಯ ಕಂಡ ಗ್ರಾಮಸ್ಥರು ಬ್ಯಾಂಕ್‌ನ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮತ್ತಷ್ಟು ಓದಿ: ತೆಕ್ಕಲಕೋಟೆ ಉತ್ಖನನದ ವೇಳೆ ಶಿಲಾಯುಗ ಕಾಲದ 3ನೇ ಅಸ್ಥಿಪಂಜರ ಪತ್ತೆ: ಇಲ್ಲಿದೆ ಸಂಪೂರ್ಣ ಮಾಹಿತಿ

ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಜಿತು ಮುಂಡಾ ಅವರನ್ನು ಸಮಾಧಾನಪಡಿಸಿದರು. ಕೇವಲ ದಾಖಲೆಗಳಿಗಾಗಿ ಹಠ ಹಿಡಿಯುವ ಬದಲು, ಸ್ಥಳೀಯ ಸರಪಂಚರ ಮೂಲಕ ಬ್ಯಾಂಕ್ ಪರಿಶೀಲನೆ ನಡೆಸಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಸದ್ಯ ಪೊಲೀಸರು ಈ ಪ್ರಕರಣವನ್ನು ಮಾನವೀಯ ನೆಲೆಯಲ್ಲಿ ನಿಭಾಯಿಸುವುದಾಗಿ ಭರವಸೆ ನೀಡಿದ್ದಾರೆ ಮತ್ತು ಬ್ಯಾಂಕ್‌ನಿಂದ ಸೂಕ್ತ ವಿವರಣೆ ಕೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us