
ನವದೆಹಲಿ, ಜೂನ್ 26: ಶತ್ರು ರಾಷ್ಟ್ರದ ನೆಲದಲ್ಲಿದ್ದ ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಲು ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ್ದ ರಹಸ್ಯ ಮಿಲಿಟರಿ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ್’ನಲ್ಲಿ (Operation Sindhoor) ದೇಶಕ್ಕಾಗಿ ತ್ಯಾಗ ಮಾಡಿದ ಆರು ವೀರ ಸೈನಿಕರ ಹೆಸರುಗಳನ್ನು ಭಾರತ ಸರ್ಕಾರ ಮೊದಲ ಬಾರಿಗೆ ಅಧಿಕೃತವಾಗಿ ಸಾರ್ವಜನಿಕಗೊಳಿಸಿದೆ. ಈ ಧೈರ್ಯಶಾಲಿ ಯೋಧರ ಹೆಸರುಗಳನ್ನು ನವದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕದ (National War Memorial) ಗೌರವ ಪಟ್ಟಿಯಲ್ಲಿ ಶಾಶ್ವತವಾಗಿ ಕೆತ್ತಲಾಗಿದೆ.
ಏನಿದು ‘ಆಪರೇಷನ್ ಸಿಂಧೂರ್’?
ಏಪ್ರಿಲ್ 2025 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ಕ್ರೂರ ದಾಳಿ ನಡೆಸಿದ್ದರು. ಮಹಿಳೆಯರ ಕಣ್ಣೆದುರೇ ಅವರ ಪತಿಯಂದಿರನ್ನು ಕೊಂದು 26 ನಾಗರಿಕರ ಪ್ರಾಣ ತೆಗೆದಿದ್ದರು.
ಮಹಿಳೆಯರ ಈ ಆಘಾತ ಮತ್ತು ಭಾವನಾತ್ಮಕ ನೋವಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಪಡೆಗಳು ಮೇ 6 ಮತ್ತು 7, 2025 ರ ಮಧ್ಯರಾತ್ರಿ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿರುವ 9 ಪ್ರಮುಖ ಉಗ್ರರ ಅಡಗುತಾಣಗಳ ಮೇಲೆ ನಿಖರವಾದ ಹಾಗೂ ಭೀಕರ ದಾಳಿ ನಡೆಸಿದವು. ಇದಕ್ಕೆ ‘ಆಪರೇಷನ್ ಸಿಂಧೂರ್’ ಎಂದು ಹೆಸರಿಡಲಾಗಿತ್ತು. ಭಾರತದ ಹೊಡೆತಕ್ಕೆ ನಡುಗಿದ ಪಾಕಿಸ್ತಾನವು ದಾಳಿ ನಿಲ್ಲಿಸುವಂತೆ ಬೇಡಿಕೊಂಡ ಬಳಿಕ ಮೇ 10 ರಂದು ಕಾರ್ಯಾಚರಣೆ ಮುಕ್ತಾಯವಾಗಿತ್ತು.
ಮತ್ತಷ್ಟು ಓದಿ: Operation Sindoor: ಆಪರೇಷನ್ ಸಿಂಧೂರ್, ಪಿಒಕೆ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಪ್ರತೀಕಾರದ ದಾಳಿ
ಈ ಐತಿಹಾಸಿಕ ಕಾರ್ಯಾಚರಣೆಯಲ್ಲಿ ಭಾರತೀಯ ಭೂಸೇನೆಯ ಐವರು ಮತ್ತು ವಾಯುಸೇನೆಯ ಒಬ್ಬ ಸಾರ್ಜೆಂಟ್ ಸೇರಿದಂತೆ ಒಟ್ಟು ಆರು ಜನ ಧೀರರು ವೀರಮರಣ ಅಪ್ಪಿದ್ದರು. ಅವರ ಅಧಿಕೃತ ವಿವರಗಳು ಇಲ್ಲಿವೆ:
ಸುಬೇದಾರ್ ಮೇಜರ್ ಪವನ್ ಕುಮಾರ್
ರೈಫಲ್ಮ್ಯಾನ್ ಸುನಿಲ್ ಕುಮಾರ್
ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್
ಅಗ್ನಿವೀರ್ ಮೂಡ್ ಮುರಳಿ ನಾಯಕ್
ಹವಾಲ್ದಾರ್ ಸುನಿಲ್ ಕುಮಾರ್ ಸಿಂಗ್
ಸಾರ್ಜೆಂಟ್ ಸುರೇಂದ್ರ ಕುಮಾರ್
ದೇಹ ತ್ಯಾಗ ಮಾಡಿದ ಈ ಸೈನಿಕರ ಹೆಸರುಗಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ‘ವಾಲ್ 3D’ ಯ 2025 ರ ವಿಶೇಷ ವಿಭಾಗದಲ್ಲಿ, ಗ್ರಾನೈಟ್ ಇಟ್ಟಿಗೆಗಳ ಮೇಲೆ ಕೆತ್ತಲಾಗಿದೆ. ಇನ್ಮುಂದೆ ಸ್ಮಾರಕಕ್ಕೆ ಭೇಟಿ ನೀಡುವ ಲಕ್ಷಾಂತರ ಸಂದರ್ಶಕರು ಹಾಗೂ ದೇಶದ ನಾಗರಿಕರು ಈ ಆರು ಯೋಧರ ಅಪ್ರತಿಮ ಶೌರ್ಯ ಮತ್ತು ದೇಶಭಕ್ತಿಯ ಸಾಹಸಗಾಥೆಯನ್ನು ಇಲ್ಲಿ ಓದುವುದರ ಜೊತೆಗೆ ಅವರಿಗೆ ಗೌರವ ನಮನ ಸಲ್ಲಿಸಬಹುದಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Fri, 26 June 26