ಕಾಶ್ಮೀರದ ದಾಳಿಗೂ ನಮಗೂ ಸಂಬಂಧವಿಲ್ಲವೆಂದ ಪಾಕಿಸ್ತಾನ; ಪಾಕ್ ಸೇನಾ ಮುಖ್ಯಸ್ಥರ ವಿಡಿಯೋ ಮತ್ತೆ ವೈರಲ್
ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದಾರೆ. ಈ ದಾಳಿಯನ್ನು ಮಾಡಿದ್ದು ನಾವೇ ಎಂದು ಟಿಆರ್ಎಫ್ ಹೊಣೆ ಹೊತ್ತುಕೊಂಡಿದೆ. ಈ ನಡುವೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ನೀಡಿದ್ದ ಹೇಳಿಕೆ ಇದೀಗ ಮತ್ತೆ ಚರ್ಚೆಗೆ ಕಾರಣವಾಗಿದೆ. ಕಳೆದ ವಾರ ಇಸ್ಲಾಮಾಬಾದ್ನಲ್ಲಿ ಭಾಷಣ ಮಾಡುವಾಗ ಅಸೀಮ್ ಮುನೀರ್ ಕಾಶ್ಮೀರದ ಬಗ್ಗೆ ಪ್ರಸ್ತಾಪಿಸಿದ್ದ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ.

ನವದೆಹಲಿ, ಏಪ್ರಿಲ್ 23: ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದಾಗಿ (Pahalgam Terrorists Attack) 26 ಜನರು ಮೃತಪಟ್ಟಿದ್ದಾರೆ. ಅವರಲ್ಲಿ ಬಹುತೇಕರು ಪ್ರವಾಸಿಗರು. ಪಾಕಿಸ್ತಾನ ಕಾಶ್ಮೀರದ ಭಯೋತ್ಪಾದನಾ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡಿದೆ. ಆದರೆ, ಭಾರತ ಅದನ್ನು ನಂಬಲು ತಯಾರಿಲ್ಲ. ಏಕೆಂದರೆ, ಒಂದು ವಾರದ ಹಿಂದಷ್ಟೇ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಕಾಶ್ಮೀರ ಇಸ್ಲಾಮಾಬಾದ್ನ “ಕುತ್ತಿಗೆಯ ರಕ್ತನಾಳ” ಎಂದು ಹೇಳಿಕೆ ನೀಡಿದ್ದರು. “ಕಾಶ್ಮೀರದ ಬಗ್ಗೆ ನಮ್ಮ ನಿಲುವು ಸಂಪೂರ್ಣವಾಗಿ ಸ್ಪಷ್ಟವಾಗಿದೆ. ಅದು ನಮ್ಮ ರಕ್ತನಾಳ, ನಾವು ಅದನ್ನು ಮರೆಯುವುದಿಲ್ಲ. ನಮ್ಮ ಕಾಶ್ಮೀರಿ ಸಹೋದರರನ್ನು ಅವರ ಹೋರಾಟದಲ್ಲಿ ನಾವು ಬಿಡುವುದಿಲ್ಲ.” ಎಂದು ಪಾಕ್ ಸೇನಾ ಮುಖ್ಯಸ್ಥ ಹೇಳಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಅದಾದ ಒಂದೇ ವಾರಕ್ಕೆ ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆದಿದೆ.
ಇಂದು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ “ಪಹಲ್ಗಾಮ್ನ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ, ಎಲ್ಲಾ ರೀತಿಯ ಮತ್ತು ಎಲ್ಲೆಡೆ ಭಯೋತ್ಪಾದನೆಯನ್ನು ನಾವು ಖಂಡಿಸುತ್ತೇವೆ” ಎಂದು ಹೇಳಿದ್ದಾರೆ. ಆದರೆ, ಪ್ರಾಥಮಿಕ ತನಿಖೆಯು ನಾಗರಿಕರ ಮೇಲೆ ಗುಂಡು ಹಾರಿಸಿದ ಉಗ್ರರ ಗುಂಪಿನಲ್ಲಿ ಬೇರೆ ದೇಶದವರು ಇದ್ದರೆಂಬುದನ್ನು ಸೂಚಿಸಿರುವುದರಿಂದ ಭಾರತೀಯ ಅಧಿಕಾರಿಗಳು ಪಾಕಿಸ್ತಾನದ ಈ ಹೇಳಿಕೆಯನ್ನು ನಂಬುತ್ತಿಲ್ಲ.
ಇದನ್ನೂ ಓದಿ: Pahalgam Terror Attack: ಪಹಲ್ಗಾಮ್ನಲ್ಲಿ ಉಗ್ರರ ಗುಂಡಿನ ದಾಳಿ, 13 ಕನ್ನಡಿಗರ ಜೀವ ಉಳಿಸಿದ ಗುಡ್ಡ!
“ಅನಂತನಾಗ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಪ್ರವಾಸಿಗರು ಸಾವನ್ನಪ್ಪಿದ ಬಗ್ಗೆ ನಮಗೆ ಕಳವಳವಿದೆ. ಮೃತರ ಹತ್ತಿರದವರಿಗೆ ನಾವು ಸಂತಾಪ ಸೂಚಿಸುತ್ತೇವೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ” ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
In this👇 video, Asim Munir, Pakistan’s Chief of Army Staff, explains in clear terms what they fight and die for.
Indian Generals, come clean now! What exactly are you fighting for? For👇this?😂 pic.twitter.com/2l1TlfiszT
— M. Nageswara Rao IPS (Retired) (@MNageswarRaoIPS) April 17, 2025
ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೋಯ್ಬಾ (ಎಲ್ಇಟಿ) ಭಯೋತ್ಪಾದಕ ಸಂಘಟನೆಯ ಶಾಡೋ ಗುಂಪಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಹೇಳಲಾಗುತ್ತಿರುವುದರಿಂದ ಇಸ್ಲಾಮಾಬಾದ್ನ ಹೇಳಿಕೆಗಳ ಬಗ್ಗೆ ಭಾರತ ಸಂಶಯ ವ್ಯಕ್ತಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:00 pm, Wed, 23 April 25