ಪಿಎಫ್​ಐ ರ್‍ಯಾಲಿಯಲ್ಲಿ ಹಿಂದೂ-ಕ್ರಿಶ್ಚಿಯನ್ನರ ವಿರುದ್ಧ ಘೋಷಣೆ: ಒಬ್ಬನ ಬಂಧನ, ನಾಯಕರ ವಿರುದ್ಧ ದೂರು ದಾಖಲು

| Updated By: ಆಯೇಷಾ ಬಾನು

Updated on: May 24, 2022 | 9:49 PM

ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಘೋಷಣೆ ಕೂಗಿದ್ದ ಆರೋಪದ ಮೇಲೆ ಕೇರಳ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪಿಎಫ್​ಐ ರ್‍ಯಾಲಿಯಲ್ಲಿ ಹಿಂದೂ-ಕ್ರಿಶ್ಚಿಯನ್ನರ ವಿರುದ್ಧ ಘೋಷಣೆ: ಒಬ್ಬನ ಬಂಧನ, ನಾಯಕರ ವಿರುದ್ಧ ದೂರು ದಾಖಲು
ಪ್ರಾತಿನಿಧಿಕ ಚಿತ್ರ
Follow us on

ಕೊಚ್ಚಿ: ಅಲಪ್ಪುಳ ಜಿಲ್ಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front of India – PFI) ಆಯೋಜಿಸಿದ್ದ ರ್‍ಯಾಲಿಯಲ್ಲಿ ಕ್ರಿಶ್ಚಿಯನ್ನರು ಮತ್ತು ಹಿಂದೂಗಳ ವಿರುದ್ಧ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಘೋಷಣೆ ಕೂಗಿದ್ದ ಆರೋಪದ ಮೇಲೆ ಕೇರಳ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಪ್ರಕರಣವೊಂದನ್ನು ದಾಖಲಿಸಿದ್ದು, ಪಿಎಫ್​ಐನ ಹಲವು ನಾಯಕರನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ. ಬಂಧಿತ ವ್ಯಕ್ತಿಯು ಕೊಟ್ಟಾಯಂನ ಎರಟ್ಟುಪೆಟ್ಟಾ ಗ್ರಾಮಕ್ಕೆ ಸೇರಿದವನು ಎಂದು ಪೊಲೀಸರು ಹೇಳಿದ್ದಾರೆ. ರ್‍ಯಾಲಿಗೆ ಬಾಲಕನನ್ನು ಈತನೇ ಕರೆತಂದಿದ್ದ ಎಂದು ‘ಮಲಯಾಳ ಮನೋರಮಾ’ ಸುದ್ದಿತಾಣ ವರದಿ ಮಾಡಿದೆ.

ಪಿಎಫ್​ಐನ ಅಲಪ್ಪುಳ ಘಟಕದ ಅಧ್ಯಕ್ಷ ನವಾಸ್ ವಂದನ್ ಮತ್ತು ಕಾರ್ಯದರ್ಶಿ ಮುಜೀಬ್ ಅವರನ್ನು ಸಹ ಈ ಪ್ರಕರಣದ ಮೊದಲ ಮತ್ತು ಎರಡನೇ ಆರೋಪಿಗಳೆಂದು ಉಲ್ಲೇಖಿಸಲಲಾಗಿದೆ. ಬಾಲಕನನ್ನು ಹೆಗಲ ಮೇಲೆ ಹೊತ್ತು ಸಾಗಿದ್ದ ವ್ಯಕ್ತಿಯನ್ನೂ ಆರೋಪಿ ಎಂದು ಪರಿಗಣಿಸಲಾಗಿದೆ. ಭಾರತೀಯ ದಂಡ ಸಂಹಿತೆಯ (Indian Penal Code – IPC) ಹಲವು ವಿಧಿಗಳನ್ನು ಉಲ್ಲೇಖಿಸಿ ಪ್ರಕರಣ ದಾಖಲಿಸಲಾಗಿದೆ. ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಬಿತ್ತುವ ಸಂಚಿನ ಆರೋಪ ಹೊರಿಸಲಾಗಿದೆ.

‘ಱಲಿ ಆಯೋಜಿಸಿದ್ದವರ ವಿರುದ್ಧ ಸೆಕ್ಷನ್ ‘153 ಎ’ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಕ ಪಾಲ್ಗೊಂಡಿದ್ದ ರ್‍ಯಾಲಿಯನ್ನು ಆಯೋಜಿಸಿದವರ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಪ್ರಕರಣದ ವಿವರ

ಕೇರಳದ ಅಲಪ್ಪುಳದಲ್ಲಿ ಶನಿವಾರ ಪಿಎಫ್​ಐ ಆಯೋಜಿಸಿದ್ದ ಱಲಿಯಲ್ಲಿ ಬಾಲಕನೊಬ್ಬ ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಯುವಕನೊಬ್ಬನ ಹೆಗಲ ಮೇಲೆ ಕುಳಿತಿದ್ದ ಬಾಲಕ ‘ನಿಮ್ಮ ಅಕ್ಕಿ ಸಿದ್ಧಪಡಿಸಿಕೊಳ್ಳಿ, ಯಮ (ಮೃತ್ಯು ದೇವತೆ) ನಿಮ್ಮ ಮನೆಗಳಿಗೆ ಬರುತ್ತಾನೆ. ಗೌರವಯುತವಾಗಿ ವರ್ತಿಸಿದರೆ ಮಾತ್ರ ನಮ್ಮ ಜಾಗದಲ್ಲಿ ಬದುಕಬಹುದು. ಇಲ್ಲದಿದ್ದರೆ ನಿಮಗೆ ಏನಾಗುತ್ತೋ ನಮಗೆ ಗೊತ್ತಿಲ್ಲ’ ಎಂದು ಬಾಲಕ ಘೋಷಣೆಗಳನ್ನು ಕೂಗಿದ್ದ.

ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ನಂತರ ಪಿಎಫ್​ಐ ತನ್ನ ಪಾತ್ರವನ್ನು ನಿರಾಕರಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಪಿಎಫ್​ಐ ವಕ್ತಾರ ರೌಫ್ ಪಟ್ಟಾಂಬಿ, ‘ಸಂಘಟನೆಯ ಸಮಾವೇಶದಲ್ಲಿ ಆಯೋಜಕರು ಈ ಘೋಷಣೆಗಳನ್ನು ಕೂಗಿಲ್ಲ. ರ್‍ಯಾಲಿಯಲ್ಲಿ ಸಾವಿರಾರು ಜನರು ಪಾಲ್ಗೊಂಡಿರುತ್ತಾರೆ. ಯಾರೋ ಒಬ್ಬರು ಹೀಗೆ ಕೂಗಿದ್ದಾರೆ’ ಎಂದು ಹೇಳಿದ್ದರು. ಈ ಘೋಷಣೆಗಳನ್ನು ಹಿಂದೂ ಅಥವಾ ಕ್ರಿಶ್ಚಿಯನ್ನರು ಉದ್ದೇಶಿಸಿ ಕೂಗಿರಲಿಲ್ಲ. ಅವು ಹಿಂದೂ ತೀವ್ರವಾದಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೂಗಿದ್ದ ಘೋಷಣೆಗಳಾಗಿದ್ದವು ಎಂದು ಅಭಿಪ್ರಾಯಪಟ್ಟಿದ್ದರು.

Published On - 11:01 am, Tue, 24 May 22