PM Modi Announcement: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ, ಲಾಕ್​ಡೌನ್ ಎಂಬುದು ರಾಜ್ಯಗಳ ಕೊನೆ ಆಯ್ಕೆಯಾಗಲಿ: ಮೋದಿ

|

Updated on: Apr 20, 2021 | 9:13 PM

PM Narendra Modi Speech Highlights: ಕೊರೊನಾ ಎರಡನೇ ಅಲೆಯಲ್ಲಿ ಲಾಕ್​ಡೌನ್ ಎಂಬುದು ರಾಜ್ಯಗಳ ಕೊನೆ ಆಯ್ಕೆಯಾಗಲಿ, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲಾಗುವುದು ಎಂದು ಪ್ರಧಾನಿ ಹೇಳಿದರು.

PM Modi Announcement: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ, ಲಾಕ್​ಡೌನ್ ಎಂಬುದು ರಾಜ್ಯಗಳ ಕೊನೆ ಆಯ್ಕೆಯಾಗಲಿ: ಮೋದಿ
ನರೇಂದ್ರ ಮೋದಿ
Follow us on

ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆಯ ಕಾರಣಕ್ಕೆ ಸೋಂಕಿನ ಪ್ರಮಾಣ ವಿಪರೀತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ (ಏಪ್ರಿಲ್ 20, 2021) ಮಾತನಾಡಿದರು. ಕೊರನಾ ಎರಡನೇ ಅಲೆಯು ಬಿರುಗಾಳಿಯಂತೆ ಬಂದಿದೆ. ಇಂದಿನ ಸಂಕಷ್ಟದ ಸಮಸ್ಯೆಯಲ್ಲಿ ಕುಟುಂಬದ ಸದಸ್ಯನ ರೀತಿಯಲ್ಲಿ ನಿಮ್ಮ ದುಃಖದಲ್ಲಿ ಜತೆಯಾಗಿದ್ದೇನೆ. ದೇಶದ ಎಲ್ಲ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಸಫಾಯಿ ಕರ್ಮಚಾರಿಗಳು ಕೊರೊನಾ ಮೊದಲ ಅಲೆಯಲ್ಲಿ ನಮ್ಮೆಲ್ಲರ ಜೀವವನ್ನು ಉಳಿಸಿದ್ದೀರಿ ಎಂದರು.

ಈ ಬಾರಿ ಆಕ್ಸಿಜನ್ (ವೈದ್ಯಕೀಯ ಆಮ್ಲಜನಕ) ಉತ್ಪಾದನೆ ಹೆಚ್ಚಿಸಲು ಪ್ರಯತ್ನ ನಡೆಯುತ್ತಿದೆ. ಫಾರ್ಮಾ ವಲಯವು ಔಷಧದ ಉತ್ಪಾದನೆಯನ್ನು ಹೆಚ್ಚಿಸಿವೆ. ಈಗ ಇನ್ನೂ ವೇಗ ಮಾಡಲಾಗುತ್ತದೆ. ನಮ್ಮ ದೇಶದ ಪ್ರಮುಖ ಫಾರ್ಮಾಸ್ಯುಟಿಕಲ್ ಕಂಪೆನಿಗಳ ಜತೆಗೆ ದೀರ್ಘವಾದ ಮಾತುಕತೆ ನಡೆದಿದೆ. ನಮ್ಮ ದೇಶದಲ್ಲಿ ಅತ್ಯುತ್ತಮ ಫಾರ್ಮಾಸ್ಯುಟಿಕಲ್ ವ್ಯವಸ್ಥೆ ಇದೆ. ವಿಶಾಲವಾದ ಹಾಗೂ ಸುಸಜ್ಜಿತವಾದ ಕೋವಿಡ್ ಆಸ್ಪತ್ರೆ ಮಾಡಲಾಗುತ್ತಿದೆ ಎಂದು ಹೇಳಿದರು.

ಇವತ್ತಿಗೆ ಅತ್ಯಂತ ಕಡಿಮೆ ಬೆಲೆಗೆ ಲಸಿಕೆ ಸಿಗುತ್ತಿರುವುದು ಭಾರತದಲ್ಲಿ. ಲಸಿಕೆಗಳ ಅನುಮತಿ, ನಿಯಂತ್ರಕರ ಅನುಮತಿಯನ್ನು ವೇಗವಾಗಿ ಇರಿಸುವ ಮೂಲಕ ಶೀಘ್ರ ಲಸಿಕೆ ಸಿಗಲು ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದಲೇ ಮೇಡ್ ಇನ್ ಇಂಡಿಯಾದ ಎರಡು ಲಸಿಕೆ ಮಾಡಲು ಸಾಧ್ಯವಾಗಿದೆ. 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲಾಗುವುದು. ಭಾರತದಲ್ಲಿ ಉತ್ಪಾದನೆ ಆಗುವ ಲಸಿಕೆ ನೇರವಾಗಿ ರಾಜ್ಯಗಳಿಗೆ ಹೋಗಲಿದೆ. ಮುಂಚಿನ ತರಹವೇ ಸರ್ಕಾರಿ ಆಸ್ಪತ್ರೆಯಲ್ಲಿ ಮುಕ್ತವಾಗಿ ಲಸಿಕೆ ದೊರೆಯಲಿದೆ. ಇದರ ಲಾಭ ಬಡವರಿಗೆ, ನಿಮ್ನ ವರ್ಗಕ್ಕೆ ಸಿಗಲಿದೆ ಎಂದರು.

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಮೂಲಕ ದುಡಿಮೆ ವರ್ಗಕ್ಕೆ ಶೀಘ್ರವೇ ಲಸಿಕೆ ದೊರೆಯಲಿದೆ. ಶ್ರಮಿಕ ವರ್ಗದ ವಿಶ್ವಾಸ ಉಳಿಸಿಕೊಳ್ಳಬೇಕು ಎಂಬುದು ರಾಜ್ಯ ಸರ್ಕಾರಗಳಿಗೆ ನನ್ನ ಆಗ್ರಹ. ಈ ಹಿಂದಿನ ಪರಿಸ್ಥಿತಿ ಈಗಿನದಕ್ಕಿಂತ ಭಿನ್ನವಾಗಿತ್ತು. ನಮ್ಮ ಬಳಿ ಮೂಲಸೌಕರ್ಯ ಇರಲಿಲ್ಲ. ಪರೀಕ್ಷೆ ಮಾಡುವ ಕೇಂದ್ರ ಇರಲಿಲ್ಲ. ಪಿಪಿಇ ಕಿಟ್ ಉತ್ಪಾದಿಸುವುದಕ್ಕೆ ಸೌಕರ್ಯ ಇರಲಿಲ್ಲ. ಕಾಯಿಲೆ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಆದರೆ ಈ ಸಲ ಆ ಮಿತಿಗಳು ಮೀರಿದ್ದೇವೆ. ಕೊರೊನಾ ಜತೆ ಹೋರಾಡುತ್ತಾ ಇಲ್ಲಿವರೆಗೆ ಬಂದಿದ್ದೇವೆ ಎಂದು ಮೋದಿ ಹೇಳಿದರು.

ನನ್ನ ಯುವ ಜನರಲ್ಲಿ ಮನವಿ ಮಾಡುತ್ತೇನೆ. ತಾವಿರುವ ಸ್ಥಳಗಳಲ್ಲಿ ಪುಟ್ಟ-ಪುಟ್ಟ ಗುಂಪು ಮಾಡಿಕೊಂಡು, ಕೋವಿಡ್ ನಿಯಮಗಳನ್ನು ಅನುಸರಿಸಲು ಸಹಕರಿಸಿ. ಸ್ವಚ್ಛತಾ ಅಭಿಯಾನದ ವೇಳೆ ಪುಟ್ಟ ಪುಟ್ಟ ಬಾಲಕರು ಹಿರಿಯರಲ್ಲಿ ಅರಿವು ಮೂಡಿಸಿದ್ದರು. ವಿನಾ ಕಾರಣವಾಗಿ ಮನೆಯಿಂದ ಆಚೆ ಬಾರದಂತೆ ನೋಡಿಕೊಳ್ಳಿ. ಪ್ರಚಾರ ಮಾಧ್ಯಮಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದನ್ನು ಹೆಚ್ಚಿಸಬೇಕು. ಇವತ್ತಿನ ಸ್ಥಿತಿಯಲ್ಲಿ ದೇಶವನ್ನು ಲಾಕ್​ಡೌನ್​ನಿಂದ ಕಾಪಾಡಬೇಕು. ರಾಜ್ಯಗಳು ಲಾಕ್​ಡೌನ್​ ಅನ್ನು ಕೊನೆ ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಇಂದು ನವರಾತ್ರಿಯ ಕೊನೆ ದಿನ. ನಾಳೆ ಶ್ರೀರಾಮ ನವಮಿ. ನಾವು ಮರ್ಯಾದೆ ದಾಟಬಾರದು. ರಮ್ಜಾನ್ ಮಾಸದಲ್ಲಿ ಆತ್ಮಸಂಯಮ ಪಾಲಿಸಬೇಕು. ಕೋವಿಡ್ ನಿಯಮ ಅನುಸರಿಸಬೇಕು. ನಿಮ್ಮೆಲ್ಲರ ಸಾಹಸ, ಧೈರ್ಯದ ಸಹಕಾರದಿಂದ ಕೊರೊನಾವನ್ನು ಎದುರಿಸುತ್ತೇವೆ ಎಂದು ಹೇಳಿ, ಮಾತು ಮುಗಿಸಿದರು.

ಇದನ್ನೂ ಓದಿ: PM Narendra Modi LIVE: ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ