Health Ministry Budget Webinar: ಇಂದು ಆರೋಗ್ಯ ಸಚಿವಾಲಯದ ಬಜೆಟ್​ ನಂತರದ ವೆಬಿನಾರ್​​ ಉದ್ಘಾಟಿಸಲಿರುವ ಪ್ರಧಾನಿ ಮೋದಿ

| Updated By: shivaprasad.hs

Updated on: Feb 26, 2022 | 8:08 AM

PM Modi Speech: ಬಜೆಟ್​ನಲ್ಲಿ ಘೋಷಿಸಲಾದ ಯೋಜನೆಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಅನುಷ್ಠಾನ ಮಾಡುವ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯವು ಆಯೋಜಿಸಿರುವ ವೆಬಿನಾರ್​ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಶನಿವಾರ) ಉದ್ಘಾಟಿಸಲಿದ್ದಾರೆ. ಈ ಕುರಿತ ಮಾಹಿತಿಗಳು ಇಲ್ಲಿವೆ.

Health Ministry Budget Webinar: ಇಂದು ಆರೋಗ್ಯ ಸಚಿವಾಲಯದ ಬಜೆಟ್​ ನಂತರದ ವೆಬಿನಾರ್​​ ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us on

ಹೊಸದಿಲ್ಲಿ: ಬಜೆಟ್​ನಲ್ಲಿ ಘೋಷಿಸಲಾದ ಯೋಜನೆಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಅನುಷ್ಠಾನ ಮಾಡುವ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (Union health and family welfare ministry) ಆಯೋಜಿಸಿರುವ ವೆಬಿನಾರ್​ಅನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಶನಿವಾರ (ಫೆ.26) ಉದ್ಘಾಟಿಸಲಿದ್ದಾರೆ. ಉದ್ಘಾಟನೆಯ ನಂತರ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್, ಇ-ಸಂಜೀವಿನಿ ಮತ್ತು ಟೆಲಿ-ಮೆಂಟಲ್ ಹೆಲ್ತ್ ಕಾರ್ಯಕ್ರಮದ ಸೆಷನ್‌ಗಳು ನಡೆಯಲಿವೆ. ‘ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರದ ವಿವಿಧ ಕ್ರಮಗಳನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಪಾಲುದಾರರನ್ನು ಒಳಗೊಳ್ಳುವುದು ವೆಬಿನಾರ್​​ನ ಉದ್ದೇಶವಾಗಿದೆ. ಬಜೆಟ್ ನಂತರದ ವೆಬಿನಾರ್‌ಗಳಿಗೆ (Health Ministry Budget Webinar) ಪ್ರಧಾನ ಮಂತ್ರಿಯವರ ಭಾಷಣವು ದಿಕ್ಸೂಚಿಯಾಗಲಿದೆ’ ಎಂದು ಸರ್ಕಾರದ ಪತ್ರಿಕಾ ಮತ್ತು ಮಾಹಿತಿ ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ‘ಈ ಸಂಕಿರಣವನ್ನು ಪಾಲುದಾರರೊಂದಿಗೆ ಹೆಚ್ಚಿನ ಸಂವಾದ ಸಾಧ್ಯವಾಗುವ ರೀತಿಯಲ್ಲಿ ಆಯೋಜಿಸಲಾಗಿದೆ. ಬಜೆಟ್ ನಂತರದ ಘೋಷಣೆಗಳನ್ನು ನಿರ್ದಿಷ್ಟ ಅವಧಿಯೊಳಗೆ ಅನುಷ್ಠಾನಗೊಳಿಸುವ ವಿಧಾನವನ್ನು ಚರ್ಚಿಸುವ ದೃಷ್ಟಿಯಿಂದ ಆಯೋಜಿಸಲಾಗಿದೆ’ ಎಂದು ಹೇಳಲಾಗಿದೆ.

ಕೇಂದ್ರ ಆರೋಗ್ಯ ಮತ್ತು ಆಯುಷ್ ಸಚಿವರಾದ ಮನ್ಸುಖ್ ಮಾಂಡವಿಯಾ ಮತ್ತು ಸರ್ಬಾನಂದ ಸೋನೋವಾಲ್ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಹೆಚ್ಚುವರಿ ಸಿಇಒ ಆಗಿರುವ ಪ್ರವೀಣ್ ಗೆಡಮ್ ಅವರ ಪ್ರಸ್ತುತಿಯ ನಂತರ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿಕೆ ಪೌಲ್ ಅವರು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಕುರಿತು ಅಧಿವೇಶನವನ್ನು ನಡೆಸಲಿದ್ದಾರೆ.

ನಾರಾಯಣ ಆರೋಗ್ಯಾಲಯದ ಅಧ್ಯಕ್ಷರಾದ ದೇವಿ ಶೆಟ್ಟಿ, ಯಶೋದಾ ಆಸ್ಪತ್ರೆಯ ಉಪಾಸನಾ ಅರೋರಾ, ಮೆಟ್ರೋಪೊಲಿಸ್ ಲ್ಯಾಬ್​ನ ನಿರ್ದೇಶಕರಾಗಿರುವ ಅಮೀರ ಶಾ, ಹರ್ಷ್ ಮಹಾಜನ್, ಅಧ್ಯಕ್ಷರು, ನ್ಯಾಟ್​ಹೆಲ್ತ್ ಮತ್ತು ಆಯುರ್ವೈಡ್ ಆಸ್ಪತ್ರೆಗಳ ರಾಜೀವ್ ವಾಸುದೇವನ್ ಮೊದಲಾದವರು ವೆಬಿನಾರ್​ನಲ್ಲಿ ಮಾತನಾಡಲಿದ್ದಾರೆ.

ವೆಬಿನಾರ್ ಕುರಿತ ಎಎನ್​ಐ ಟ್ವೀಟ್ ಇಲ್ಲಿದೆ:

ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಅಧ್ಯಕ್ಷ ಕೆ ಶ್ರೀನಾಥ್ ರೆಡ್ಡಿ ರಾಷ್ಟ್ರೀಯ ಟೆಲಿ-ಮೆಡಿಸಿನ್ ಉಪಕ್ರಮಗಳು ಮತ್ತು ಇ-ಸಂಜೀವನಿ ಕುರಿತ ಅಧಿವೇಶನವನ್ನು ನಡೆಸಲಿದ್ದಾರೆ. ಇದರ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾತನಾಡಲಿದ್ದಾರೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್‌ನ ನಿರ್ದೇಶಕಿ ಪ್ರತಿಮಾ ಮೂರ್ತಿ ಅವರು ಈ ವರ್ಷದ ಬಜೆಟ್‌ನ ಪ್ರಮುಖ ಕೇಂದ್ರವಾಗಿರುವ ಟೆಲಿ-ಮೆಂಟಲ್ ಹೆಲ್ತ್ ಪ್ರೋಗ್ರಾಂ ಕುರಿತು ಅಧಿವೇಶನವನ್ನು ನಡೆಸಲಿದ್ದಾರೆ. ನಂತರ ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕ ವಿಕಾಸ್ ಶೀಲ್ ಅವರು ಟೆಲಿ-ಮೆಡಿಸಿನ್ ಸೇವೆಗಳಿಗಾಗಿ ಸಚಿವಾಲಯದ ಪ್ರಯತ್ನಗಳ ಕುರಿತು ವಿಚಾರಗಳನ್ನು ಪ್ರಸ್ತುಪಡಿಸಲಿದ್ದಾರೆ.

ಇದನ್ನೂ ಓದಿ:

Russia Ukraine War: ಉಕ್ರೇನ್​ ಯುದ್ಧದ ಎಫೆಕ್ಟ್​ಗೆ ರಷ್ಯಾದ 22 ಶ್ರೀಮಂತರ 2.93 ಲಕ್ಷ ಕೋಟಿ ರೂಪಾಯಿ ಒಂದೇ ದಿನ ಉಡೀಸ್

ಸರ್ಕಾರ ನಡೆಸುತ್ತಿರುವ ಭಯೋತ್ಪಾದಕರನ್ನು ಕಿತ್ತೊಗೆದು ಅಧಿಕಾರ ಕೈಗೆತ್ತಿಕೊಳ್ಳಿ: ಉಕ್ರೇನ್ ಸೈನಿಕರನ್ನು ಆಗ್ರಹಿಸಿದ ಪುಟಿನ್

Published On - 7:59 am, Sat, 26 February 22