ತೃತೀಯ ರಂಗ ರಚನೆಯ ಕನಸಿನಲ್ಲಿ ಬೆಂಗಳೂರಿಗೆ ತೆಲಂಗಾಣ ಸಿಎಂ ಕೆಸಿಆರ್: ಹೈದರಾಬಾದ್​ಗೆ ಮೋದಿ ಬಂದರೂ ಆಗುತ್ತಿಲ್ಲ ಭೇಟಿ

ಪ್ರಧಾನಿ ಯಾವುದೇ ರಾಜ್ಯಕ್ಕೆ ಭೇಟಿ ನೀಡಿದಾಗ ಅಲ್ಲಿನ ಮುಖ್ಯಮಂತ್ರಿಯನ್ನು ಸ್ವಾಗತಿಸಬೇಕಾದ್ದು ಶಿಷ್ಟಾಚಾರ.

ತೃತೀಯ ರಂಗ ರಚನೆಯ ಕನಸಿನಲ್ಲಿ ಬೆಂಗಳೂರಿಗೆ ತೆಲಂಗಾಣ ಸಿಎಂ ಕೆಸಿಆರ್: ಹೈದರಾಬಾದ್​ಗೆ ಮೋದಿ ಬಂದರೂ ಆಗುತ್ತಿಲ್ಲ ಭೇಟಿ
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಪ್ರಧಾನಿ ನರೇಂದ್ರ ಮೋದಿ
Edited By:

Updated on: May 26, 2022 | 10:24 AM

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (ಮೇ 26) ಹೈದರಾಬಾದ್​ಗೆ ಭೇಟಿ ನೀಡಿ, ಭಾರತೀಯ ವಾಣಿಜ್ಯ ಸಂಸ್ಥೆಯ (Indian School of Business – ISB) 20ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಯಾವುದೇ ರಾಜ್ಯಕ್ಕೆ ಭೇಟಿ ನೀಡಿದಾಗ ಅಲ್ಲಿನ ಮುಖ್ಯಮಂತ್ರಿಯನ್ನು ಸ್ವಾಗತಿಸಬೇಕಾದ್ದು ಶಿಷ್ಟಾಚಾರ. ಆದರೆ ಈ ಬಾರಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್ ಈ ಶಿಷ್ಟಾಚಾರ ಉಲ್ಲಂಘಿಸಿ, ಬೆಂಗಳೂರಿಗೆ ತೆರಳಿದ್ದಾರೆ. 2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ರಾಜಕೀಯ ಚಟುವಟಿಕೆ ಚುರುಕುಗೊಳಿಸಿರುವ ಕೆಸಿಆರ್, ಬಿಜೆಪಿ ವಿರುದ್ಧ ಕಾಂಗ್ರೆಸ್ಸೇತರ ಪಕ್ಷಗಳನ್ನು ಸಂಘಟಿಸಲು ಪ್ರಯತ್ನಿಸುತ್ತಿದ್ದಾರೆ.

ಕಳೆದ ನಾಲ್ಕು ತಿಂಗಳಲ್ಲಿ ಎರಡನೇ ಬಾರಿ ಮೋದಿ ಅವರ ಭೇಟಿಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಕಳೆದ ಫೆಬ್ರುವರಿ 5ರಂದು ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ಅನಾವರಣಗೊಳಿಸಲೆಂದು ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್​ಗೆ ಬಂದಿದ್ದರು. ಅಂದೂ ಸಹ ಮೋದಿ ಅವರನ್ನು ಕೆಸಿಆರ್ ಭೇಟಿಯಾಗಿರಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹೈದರಾಬಾದ್ ವಾಣಿಜ್ಯ ಸಂಸ್ಥೆಯ 20ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, 2022ರ ಸ್ನಾತಕೋತ್ತರ ಪದವೀಧರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮುಖ್ಯಮಂತ್ರಿ ಕೆಸಿಆರ್​ ಪೂರ್ವನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು, ಪ್ರಧಾನಿ ಭೇಟಿಯಿಂದ ತಪ್ಪಿಸಿಕೊಳ್ಳಲಿದ್ದಾರೆ. ಮೋದಿ ಭೇಟಿ ವೇಳೆ ಕೆಸಿಆರ್ ತೆಲಂಗಾಣದಲ್ಲಿ ಇರುವುದರಿಲ್ಲ ಎಂಬ ವರದಿಗಳು ಮಾಧ್ಯಮಗಳಲ್ಲಿ ಕಾಣಿಸಿಕೊಂಡ ನಂತರ ಬಿಜೆಪಿಯು ಕೆಸಿಆರ್ ವಿರುದ್ಧ ಟೀಕಾ ಪ್ರಕಾರ ನಡೆಸಿತ್ತು.

ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಘಟಕದ ಅಧ್ಯಕ್ಷ ಡಾ.ಕೆ.ಲಕ್ಷ್ಮಣ್ ಈ ಕುರಿತು ಪ್ರತಿಕ್ರಿಯಿಸಿ, ತೆಲಂಗಾಣದ ಜನರು ಇಲ್ಲಿನ ಟಿಆರ್​ಎಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಕೆಸಿಆರ್ ಬಗ್ಗೆ ಬೇಸರಗೊಂಡಿದ್ದಾರೆ. ಪ್ರಧಾನಿಯನ್ನು ಎದುರುಗೊಂಡು ಸ್ವಾಗತಿಸುವುದು ಮುಖ್ಯಮಂತ್ರಿಯಾಗಿ ಅವರ ಕರ್ತವ್ಯವಾಗಿತ್ತು. ಪ್ರಧಾನಿ ತೆಲಂಗಾಣಕ್ಕೆ ಬರುವಾಗ ಕೆಸಿಆರ್ ಬೇರೆ ರಾಜ್ಯಕ್ಕೆ ಹೋಗುತ್ತಿರುವುದು ಇದು ಎರಡನೇ ಬಾರಿ. ಇವರ ವರ್ತನೆ ಕಂಡು ಜನರು ನಗುತ್ತಿದ್ದಾರೆ ಎಂದು ಹೇಳಿದರು.

ಇದು ಶಿಷ್ಟಾಚಾರವಲ್ಲ, ಆದರೆ ಮುಖ್ಯಮಂತ್ರಿ ಹಾಗೆ ವರ್ತಿಸುತ್ತಿದ್ದಾರೆ. ರಾಜಕೀಯ ಪಕ್ಷ ಮತ್ತು ರಾಜಕಾರಣ ಹೊರತುಪಡಿಸಿ ಯೋಚಿಸಿದರೂ ಇದು ಸರಿಯಾದ ಕ್ರಮವಲ್ಲ ಎಂಬುದು ಅರ್ಥವಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಪ್ರಧಾನಿಯನ್ನು ಸ್ವಾಗತಿಸುವುದು ಮುಖ್ಯಮಂತ್ರಿಯ ಜವಾಬ್ದಾರಿ. ಶಿಷ್ಟಾಚಾರವನ್ನು ನಾವೆಲ್ಲರೂ ಕಾಪಾಡಿಕೊಳ್ಳಬೇಕು. ಮುಖ್ಯ ಕಾರ್ಯದರ್ಶಿ ಹೊರತುಪಡಿಸಿದರೆ ತೆಲಂಗಾಣ ಸರ್ಕಾರದ ಯಾವೊಬ್ಬ ಮಂತ್ರಿಯೂ ಪ್ರಧಾನಿ ಭೇಟಿಗೆ ತೆರಳುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮೋದಿ ಭೇಟಿಯ ಹಿನ್ನೆಲೆಯಲ್ಲಿ ತೆಲಂಗಾಣ ಪೊಲೀಸರು ಹೈದರಾಬಾದ್ ನಗರದಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಸುಮಾರು 2,500 ಸಿಬ್ಬಂದಿಯನ್ನು ಬಂದೋಬಸ್ತ್​ಗೆ ನಿಯೋಜಿಸಲಾಗಿದೆ.

ತೆಲುಗಿನಲ್ಲಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:20 am, Thu, 26 May 22

Follow Us