ಕೇರಳ: ‘ಶಕ್ತಿ ಕೇಂದ್ರ’ ಸಮ್ಮೇಳನದಲ್ಲಿ ಮೋದಿ ಭಾಗಿ; ಬಿಲ್ಲು ಬಾಣ ಉಡುಗೊರೆ ನೀಡಿದ ಬಿಜೆಪಿ

ಕೊಚ್ಚಿಯಲ್ಲಿ ಶಕ್ತಿಕೇಂದ್ರ ಇನ್ ಚಾರ್ಜ್ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತ್ರಿಶ್ಶೂರ್‌ನಲ್ಲಿ ನಡೆದ ನಾರಿ ಶಕ್ತಿ ಸಮ್ಮೇಳನದಲ್ಲಿ ಕೇರಳ ಬಿಜೆಪಿ ಕಾರ್ಯಕರ್ತರ ಸಾಮರ್ಥ್ಯವನ್ನು ನಾವು ನೋಡಿದ್ದೇವೆ. ನನ್ನ ಸ್ವಂತ ಅನುಭವದಿಂದ ನಾನು ಹೇಳಬಲ್ಲೆ, ಬಲಿಷ್ಠ ಸಂಘಟನೆ ಮಾತ್ರ ಇಂತಹ ಬೃಹತ್ ಸಮಾವೇಶವನ್ನು ಮಾಡಬಹುದು. ಎಲ್ಲರೂ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ವೇಗದ ಅಭಿವೃದ್ಧಿ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಹೊಂದಿರುವ ಏಕೈಕ ರಾಜಕೀಯ ಪಕ್ಷ ಬಿಜೆಪಿ ಎಂದು ಹೇಳಿದ್ದಾರೆ.

ಕೇರಳ: ಶಕ್ತಿ ಕೇಂದ್ರ ಸಮ್ಮೇಳನದಲ್ಲಿ ಮೋದಿ ಭಾಗಿ; ಬಿಲ್ಲು ಬಾಣ ಉಡುಗೊರೆ ನೀಡಿದ ಬಿಜೆಪಿ
ಶಕ್ತಿಕೇಂದ್ರ್ ಇನ್ ಚಾರ್ಜ್ ಸಮ್ಮೇಳನದಲ್ಲಿ ಮೋದಿ

Updated on: Jan 17, 2024 | 3:00 PM

ಕೊಚ್ಚಿ ಜನವರಿ 17: ಕೇರಳ ಪ್ರವಾಸದಲ್ಲಿರುವ  ಪ್ರಧಾನಿ ನರೇಂದ್ರ ಮೋದಿ (Narendra Modi) ಬೆಳಗ್ಗೆ ಗುರುವಾಯೂರು (Guruvayur) ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ನಟ, ಬಿಜೆಪಿ ನಾಯಕ  ಸುರೇಶ್ ಗೋಪಿ ಮಗಳು ಭಾಗ್ಯಾ ಸುರೇಶ್ ವಿವಾಹದಲ್ಲಿ ಭಾಗವಹಿಸಿದ್ದಾರೆ. ಇದಾದ ನಂತರ ಕೊಚ್ಚಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಮೋದಿ ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮ ಮುಗಿಸಿದ ನಂತರ ಪ್ರಧಾನಿ ಮೋದಿ, ಎರ್ನಾಕುಳಂ ಮರೀನ್ ಡ್ರೈವ್ ನಲ್ಲಿ ನಡೆದ ಬಿಜೆಪಿಯ ‘ಶಕ್ತಿಕೇಂದ್ರ್ ಇನ್ ಚಾರ್ಜ್ ಸಮ್ಮೇಳನ’ದಲ್ಲಿ(Shaktikendra in-charge Sammelan) ಭಾಗಿಯಾಗಿದ್ದಾರೆ.

ಬಿಜೆಪಿ ಕಾರ್ಯಕರ್ತರು, ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಮೋದಿ, ದೇಶದ ಜನರ ಆದಾಯ ಹಾಗೂ ಉಳಿತಾಯವನ್ನು ಹೆಚ್ಚಿಸುವುದು ಬಿಜೆಪಿಯ ಆದ್ಯತೆಯಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ದೇಶದ ಸುಮಾರು 1 ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಲಾಗಿದೆ. ಜನೌಷಧಿ ಕೇಂದ್ರಗಳಿಂದಾಗಿ ಜನರು 25,000 ಕೋಟಿ ರೂಪಾಯಿಗಳನ್ನು ಉಳಿಸಿದ್ದಾರೆ ಎಂದು ಹೇಳಿದ್ದಾರೆ.


“ಇತ್ತೀಚಿನ ವರದಿಯ ಪ್ರಕಾರ, ಕಳೆದ 9 ವರ್ಷಗಳಲ್ಲಿ ಸುಮಾರು 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಆದರೆ ಐದು ದಶಕಗಳಿಂದ ಕಾಂಗ್ರೆಸ್ ಕೇವಲ ‘ಗರೀಬಿ ಹಠಾವೋ’ ಘೋಷಣೆಯನ್ನು ನೀಡಿತು. ಇದು ವಿಕಸಿತ ಭಾರತಕ್ಕಾಗಿ ನಾವು ಆರಿಸಿಕೊಂಡ ಮಾರ್ಗ ಸರಿಯಾಗಿದೆ ಎಂಬುದನ್ನು ತೋರಿಸುತ್ತದೆ. ಲೋಕಸಭಾ ಚುನಾವಣೆಗಳು ದೇಶದ ಸರ್ಕಾರವನ್ನು ಆಯ್ಕೆ ಮಾಡುವುದಾಗಿದೆ. 10 ವರ್ಷಗಳ ಹಿಂದೆ, ಪ್ರತಿ ದಿನವೂ ಭಯೋತ್ಪಾದಕ ದಾಳಿಗಳು ನಮ್ಮ ಹೂಡಿಕೆಗಳು ಮತ್ತು ವಿದೇಶಗಳಲ್ಲಿ ವಾಸಿಸುವ ಜನರ ಮೇಲೆ ಪರಿಣಾಮ ಬೀರುತ್ತವೆ ಎಂದು ನಾವು ನಮ್ಮ ಮತದಾರರಿಗೆ ತಿಳಿಸಬೇಕಾಗಿದೆ. ಎಲ್​​ಡಿಎಫ್ ಮತ್ತು ಯುಡಿಎಫ್ ಭ್ರಷ್ಟಾಚಾರ ಮತ್ತು ಹಗರಣಗಳ ಇತಿಹಾಸವನ್ನು ಹೊಂದಿದೆ ಎಂದಿದ್ದಾರೆ.

ತ್ರಿಶ್ಶೂರ್‌ನಲ್ಲಿ ನಡೆದ ನಾರಿ ಶಕ್ತಿ ಸಮ್ಮೇಳನದಲ್ಲಿ ಕೇರಳ ಬಿಜೆಪಿ ಕಾರ್ಯಕರ್ತರ ಸಾಮರ್ಥ್ಯವನ್ನು ನಾವು ನೋಡಿದ್ದೇವೆ. ನನ್ನ ಸ್ವಂತ ಅನುಭವದಿಂದ ನಾನು ಹೇಳಬಲ್ಲೆ, ಬಲಿಷ್ಠ ಸಂಘಟನೆ ಮಾತ್ರ ಇಂತಹ ಬೃಹತ್ ಸಮಾವೇಶವನ್ನು ಮಾಡಬಹುದು. ಎಲ್ಲರೂ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ವೇಗದ ಅಭಿವೃದ್ಧಿ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಹೊಂದಿರುವ ಏಕೈಕ ರಾಜಕೀಯ ಪಕ್ಷ ಬಿಜೆಪಿ.

ರಾಜ್ಯದಲ್ಲಿ ಬಿಜೆಪಿಯನ್ನು ಬಲಪಡಿಸಲು ಶ್ರಮಿಸುತ್ತಿರುವ ಬಿಜೆಪಿ ಬೆಂಬಲಿಗರೊಂದಿಗೆ ಸೇರುವುದು ನನಗೆ ಸದಾ ಸಂತಸದ ಕ್ಷಣ. ಪ್ರತಿಕೂಲ ಪರಿಸ್ಥಿತಿಗಳ ಜೊತೆಗೆ ನಮ್ಮ ಪಕ್ಷದ ಕಾರ್ಯಕರ್ತರು ಬಿಜೆಪಿಯನ್ನು ಬೆಳಗುವಂತೆ ಮಾಡಿದ್ದಾರೆ. ತಮ್ಮ ಸಿದ್ದಾಂತದೊಂದಿಗೆ ನಿಂತು ತಮ್ಮ ದೇಶಪ್ರೇಮಕ್ಕೆ ಬದ್ಧರಾಗಿರುವ ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ನಾನು ವಂದಿಸಲು ಬಯಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಕೊಚ್ಚಿ: ₹4,000 ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ

ಈ ಸಮಾರಂಭದಲ್ಲಿ ಕೇಂದ್ರ ರಾಜ್ಯ ಸಚಿವ ವಿ.ಮುರಳೀಧರನ್, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ.ಅಬ್ದುಲ್ಲಕುಟ್ಟಿ ಭಾಗವಹಿಸಿದ್ದಾರೆ. ರಾಜ್ಯ ಸಮಿತಿಯ ವತಿಯಿಂದ ಕೆ.ಸುರೇಂದ್ರನ್ ಅವರು ತೇಗದಿಂದ ಮಾಡಿದ ಬಿಲ್ಲು ಬಾಣದ ಮಾದರಿಯನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿದ್ದಾರೆ.


ಕೇರಳದಲ್ಲಿ ‘ಶಕ್ತಿಕೇಂದ್ರ ಇನ್ ಚಾರ್ಜ್’ ಸಮಾವೇಶದಲ್ಲಿ ಮೋದಿ ಭಾಗವಹಿಸುತ್ತಿರುವುದು ಇದೇ ಮೊದಲು. ಬೇರೆ ಯಾವ ರಾಜ್ಯದಲ್ಲೂ ಮೋದಿ ಈ ಸಭೆಯಲ್ಲಿ ಭಾಗವಹಿಸಿಲ್ಲ. ಶಕ್ತಿಕೇಂದ್ರ ಅಂದರೆ ಚುನಾವಣಾ ತಯಾರಿಗಾಗಿ ಬಿಜೆಪಿ ಹೆಚ್ಚು ಅವಲಂಬಿಸಿರುವ ಸಂಘಟನಾ ರಚನೆಯಾಗಿದೆ. ರಾಜ್ಯದಲ್ಲಿ ಚುನಾವಣಾ ಚಟುವಟಿಕೆಗಳನ್ನು ಆರಂಭಿಸಲು ಕೇರಳದ 7000 ಶಕ್ತಿ ಕೇಂದ್ರಗಳ ಸಭೆಯಲ್ಲಿ ಪ್ರಧಾನಿ ಭಾಗವಹಿಸುತ್ತಿದ್ದಾರೆ.

ಶಕ್ತಿ ಕೇಂದ್ರದ ಮುಖಂಡರ ಸಭೆಯಲ್ಲಿ 60 ದಿನಗಳ ಕ್ರಿಯಾ ಯೋಜನೆ ನೀಡಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ಎಲ್ಲ ಮನೆಗಳಿಗೆ ಆಡಳಿತ ಸಾಧನೆಯ ಕಿರುಪುಸ್ತಕ ವಿತರಣೆ, ಅಭಿವೃದ್ಧಿ ಸಾಧನೆಗಳ ವಿವರ ನೀಡುವ ರಥಯಾತ್ರೆ ಇತ್ಯಾದಿಗಳನ್ನು ಮಾಡಲಾಗುವುದು. ಪ್ರತಿ ವಾರ ಮತಗಟ್ಟೆ ಲೆಕ್ಕ ಪರಿಶೋಧನೆ ನಡೆಸಿ ಕಾರ್ಯನಿರ್ವಹಣೆಯ ಮೌಲ್ಯಮಾಪನ ಮಾಡಲಾಗುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ