
ನವದೆಹಲಿ, ಜೂನ್ 6: ಜಾಗತಿಕ ಮಟ್ಟದ ತಲ್ಲಣಗಳು ಮತ್ತು ಪ್ರಾದೇಶಿಕ ರಾಜಕೀಯ ಸವಾಲುಗಳ ಮಧ್ಯೆಯೂ ಭಾರತದ ಆರ್ಥಿಕ ಪ್ರಗತಿಯ ವೇಗವನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಭರ್ಜರಿ ಮಾಸ್ಟರ್ ಪ್ಲಾನ್ ರೂಪಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಶನಿವಾರ ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ (EAC) ಸದಸ್ಯರೊಂದಿಗೆ ದೆಹಲಿಯಲ್ಲಿ ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದರು. ಅಸ್ಥಿರ ಜಾಗತಿಕ ವಾತಾವರಣದಲ್ಲಿ ಭಾರತದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ದೇಶದ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವ ಕಾರ್ಯತಂತ್ರಗಳ ಕುರಿತು ಈ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ.
ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತದ ಆರ್ಥಿಕ ಪ್ರಗತಿಯ ವೇಗವನ್ನು ಹೇಗೆ ಸ್ಥಿರವಾಗಿ ಇರುವಂತೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಹತ್ತಾರು ವಿನೂತನ ಐಡಿಯಾಗಳು ಹಾಗೂ ನೀತಿ ಕ್ರಮಗಳ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು. ದೇಶದ ಮ್ಯಾಕ್ರೋ-ಎಕನಾಮಿಕ್ (ಸ್ಥೂಲ ಆರ್ಥಿಕ) ಸ್ಥಿರತೆಯನ್ನು ಕಾಪಾಡುವ ಜೊತೆಗೆ ವಿವಿಧ ವಲಯಗಳಲ್ಲಿ ಹೂಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಸುಧಾರಣೆಗಳತ್ತ ಗಮನ ಹರಿಸಲಾಯಿತು. ಮುಖ್ಯವಾಗಿ ದೇಶದ ನಾಗರಿಕರ ಸುಗಮ ಜೀವನ ನಿರ್ವಹಣೆ (Ease of Living) ಮತ್ತು ಉದ್ಯಮ ರಂಗದಲ್ಲಿ ವ್ಯವಹಾರ ಸುಲಭಗೊಳಿಸುವಿಕೆ (Ease of Doing Business) ಪ್ರಕ್ರಿಯೆಗಳನ್ನು ಇನ್ನಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ವಿವಿಧ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲಾಯಿತು.
ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ ಜತೆ ಮೋದಿ ಸಭೆ
ಪ್ರಸ್ತುತ ಜಾಗತಿಕವಾಗಿ ತಲ್ಲಣ ಸೃಷ್ಟಿಸಿರುವ ಮಧ್ಯಪ್ರಾಚ್ಯ (Middle East) ಸಂಘರ್ಷದ ಕುರಿತು ಸಭೆಯಲ್ಲಿ ತೀವ್ರ ಆತಂಕ ವ್ಯಕ್ತವಾಯಿತು. ಈ ಸಂಘರ್ಷದಿಂದ ಭಾರತ ಮತ್ತು ಜಾಗತಿಕ ಆರ್ಥಿಕತೆಯ ಮೇಲಾಗಬಹುದಾದ ಸಂಭಾವ್ಯ ಪರಿಣಾಮಗಳ ಕುರಿತು ಆರ್ಥಿಕ ಸಲಹಾ ಮಂಡಳಿಯ ಸದಸ್ಯರು ನಿಖರ ವಿಶ್ಲೇಷಣಾ ವರದಿಯನ್ನು ಪ್ರಧಾನಿ ಜತೆ ಹಂಚಿಕೊಂಡರು. ಪ್ರಮುಖವಾಗಿ ಈ ಯುದ್ಧದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆ (ತೈಲ ಬೆಲೆ), ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಒಟ್ಟಾರೆ ಆರ್ಥಿಕ ಸ್ಥಿರತೆಯ ಮೇಲಾಗುವ ಪರಿಣಾಮಗಳನ್ನು ಎದುರಿಸಲು ಭಾರತವು ಮುನ್ನೆಚ್ಚರಿಕೆಯಾಗಿ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ಇದನ್ನೂ ಓದಿ: ಇಂಧನ ಬಿಕ್ಕಟ್ಟಿನ ಮಧ್ಯೆ ಭಾರತಕ್ಕೆ ಗುಡ್ ನ್ಯೂಸ್: ಅಂಡಮಾನ್ ಸಮುದ್ರದಲ್ಲಿ ಬೃಹತ್ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ
ಜಾಗತಿಕ ಸನ್ನಿವೇಶದಲ್ಲಿ ಎಷ್ಟೇ ಏರಿಳಿತಗಳಿದ್ದರೂ ಪ್ರಮುಖ ಯೋಜನೆಗಳು ಮತ್ತು ದೀರ್ಘಕಾಲೀನ ಆರ್ಥಿಕ ಸುಧಾರಣೆಗಳ ಮೂಲಕ ಭಾರತದ ಸದೃಢ ಪ್ರಗತಿಯನ್ನು ಮುಂದುವರಿಸುವ ಬಗ್ಗೆ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ