ಬರ್ಲಿನ್​​ನಲ್ಲಿ ಭಾಷಣ ಮಾಡಿ, ಕಾಂಗ್ರೆಸ್​​ನ್ನು ಟೀಕಿಸಿದ ಪ್ರಧಾನಿ ಮೋದಿ; 1 ರೂಪಾಯಿ, 15 ಪೈಸೆ ಹೇಳಿಕೆ ಬಗ್ಗೆ ಟೀಕೆ

ಭಾರತದ ಆಡಳಿತದಲ್ಲಿ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ನವ ಭಾರತ ನಿರ್ಮಾಣಕ್ಕೆ ಬುನಾದಿ ಹಾಕಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬರ್ಲಿನ್​​ನಲ್ಲಿ ಭಾಷಣ ಮಾಡಿ, ಕಾಂಗ್ರೆಸ್​​ನ್ನು ಟೀಕಿಸಿದ ಪ್ರಧಾನಿ ಮೋದಿ; 1 ರೂಪಾಯಿ, 15 ಪೈಸೆ ಹೇಳಿಕೆ ಬಗ್ಗೆ ಟೀಕೆ
ಪ್ರಧಾನಿ ನರೇಂದ್ರ ಮೋದಿ
Edited By:

Updated on: May 03, 2022 | 12:34 PM

ಮೂರು ದಿನಗಳ ಯುರೋಪ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಮೊದಲು ಜರ್ಮನಿಗೆ ಭೇಟಿ ಕೊಟ್ಟಿದ್ದಾರೆ. ನಿನ್ನೆ ಬರ್ಲಿನ್​​ನಲ್ಲಿ ಭಾರತೀಯ ಮೂಲದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆಯೂ ಅವರು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಲ್ಲಿ ಈ ದೇಶದ ಪ್ರತಿಯೊಬ್ಬ ಪ್ರಜೆಗೂ, ಅವರಿಗೆ ಸಲ್ಲಬೇಕಾದ ಅಗತ್ಯಗಳನ್ನು ಪೂರೈಸಲಾಗುತ್ತಿದೆ ಎಂದೂ ಹೇಳಿದರು. ಇದೇ ವೇಳೆ ಮಾಜಿ ಪ್ರಧಾನಮಂತ್ರಿ ರಾಜೀವ್​ ಗಾಂಧಿಯವರು ಹಿಂದೊಮ್ಮೆ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಈ ಹಿಂದೆ ರಾಜೀವ್​ ಗಾಂಧಿ ಒಮ್ಮೆ ಮಾತನಾಡುವಾಗ, ದೇಶಕ್ಕೆ ಎಷ್ಟೇ ಲಾಭ ಬಂದರೂ ಜನರಿಗೆ ಮಾತ್ರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ತಲುಪುತ್ತದೆ. ನಾವಿಲ್ಲಿ ದೆಹಲಿಯಿಂದ 1 ರೂಪಾಯಿ ಬಿಡುಗಡೆ ಮಾಡಿದರೂ, ಕೇವಲ 15 ಪೈಸೆಯಷ್ಟು ಮಾತ್ರ ಜನರಿಗೆ ಸಿಗುತ್ತದೆ ಎಂದು ಹೇಳಿದ್ದರು. ಅದೇ ವಿಚಾರಕ್ಕೆ ಪಿಎಂ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ಅಭಿವೃದ್ಧಿಯಾಗುತ್ತಿದೆ. ಜನರಿಗೆ ಗರಿಷ್ಠ ಮಟ್ಟದ ಅನುಕೂಲ ಸಿಗುತ್ತಿದೆ. ಆಗ 85 ಪೈಸೆ ಎಲ್ಲಿ ಹೋಗುತ್ತಿತ್ತು ಎಂಬುದೇ ಅರ್ಥವಾಗುತ್ತಿಲ್ಲ. ಭಾರತದಲ್ಲಿ ಇಂಟರ್​ನೆಟ್​ ಡಾಟಾ ತುಂಬ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ. ಇದು ಹಲವು ರಾಷ್ಟ್ರಗಳಿಗೆ ಅಚ್ಚರಿಯನ್ನುಂಟುಮಾಡಿದೆ.  ಕಳೆದ ವರ್ಷ, ರಿಯಲ್​ ಟೈಮ್​ ಗ್ಲೋಬಲ್​ ಡಿಜಿಟಲ್​ ಪೇಮೆಂಟ್​ ಪಾಲು ಶೇ.40ರಷ್ಟು ಆಗಿತ್ತು. ಭಾರತದಲ್ಲಿ ಈಗ ನಾನು 1 ರೂಪಾಯಿ ಕಳಿಸಿದ್ದೇನೆ..15 ಪೈಸೆ ಮಾತ್ರ ತಲುಪಿದೆ ಎಂದು ಹೇಳುವ ಯಾವುದೇ ಪ್ರಧಾನಿಯೂ ಇಲ್ಲ ಎಂದು ಹೇಳಿದರು.

ಕಳೆದ ಎಂಟು ವರ್ಷಗಳಲ್ಲಿ ನಮ್ಮ ಕೇಂದ್ರ ಸರ್ಕಾರವು, ನೇರ ಲಾಭ ವರ್ಗಾವಣೆಯ ಮೂಲಕ 22 ಲಕ್ಷ ಕೋಟಿ ರೂಪಾಯಿಯನ್ನು ಫಲಾನುಭವಿಗಳಿಗೆ ವರ್ಗಾವಣೆ ಮಾಡಿದೆ. ಭಾರತದ ಆಡಳಿತದಲ್ಲಿ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ನವ ಭಾರತ ನಿರ್ಮಾಣಕ್ಕೆ ಬುನಾದಿ ಹಾಕಲಾಗಿದೆ. ಹಾಗೇ, ಒಂದು ಪ್ರಜಾಪ್ರಭುತ್ವ ರಾಷ್ಟ್ರ ತನ್ನ ಪ್ರಜೆಗಳಿಗೆ ಅನುಕೂಲ, ಅಗತ್ಯಗಳನ್ನು ಎಷ್ಟರ ಮಟ್ಟಿಗೆ ಪೂರೈಸಬಹುದು ಎಂಬುದಕ್ಕೆ ಇದು ಸಾಕ್ಷಿ ಎಂದೂ ಪ್ರಧಾನಿ ಹೇಳಿದರು. ಅಷ್ಟೇ ಅಲ್ಲ, ದೇಶವೀಗ ನವೋದ್ಯಮದಲ್ಲಿ ದಾಪುಗಾಲುಹಾಕುತ್ತಿದೆ. 2014ರ ಹೊತ್ತಿಗೆ ಭಾರತದಲ್ಲಿ ಕೇವಲ 200-400ರಷ್ಟು ನವೋದ್ಯಮಗಳು ಇದ್ದವು. ಆ ಸಂಖ್ಯೆ ಈಗ 68 ಸಾವಿರಕ್ಕೇರಿದೆ. ಯುನಿಕ್ರಾನ್​​ಗಳ ಸಂಖ್ಯೆಯೂ ಹೆಚ್ಚಿದೆ ಎಂದು ತಿಳಿಸಿದರು.

ಹಿಂದೆ ದೇಶ ಒಂದೇ ಆಗಿದ್ದರೂ ಸಂವಿಧಾನ ಎರಡು ಆಗಿತ್ತು. ನಾವೀಗ ಅದನ್ನು ಸರಿಪಡಿಸಿದ್ದೇವೆ. ಇಡೀ ದೇಶಕ್ಕೆ ಸಂವಿಧಾನ ಒಂದೇ. 2014ಕ್ಕೂ ಮೊದಲು ನೀವು ಎಲ್ಲೇ ನೋಡಿ, ಏನೇ ನೋಡಿ, ಯಾವ ಅಭಿವೃದ್ಧಿ ಕೆಲಸಗಳೂ ಪೂರ್ತಿಯಾಗಿರಲಿಲ್ಲ. ಆದರೆ ಈಗ ಹಾಗಲ್ಲ. ನಮ್ಮ ಸರ್ಕಾರ ರಾಷ್ಟ್ರದಲ್ಲಿ ಹೆದ್ದಾರಿ, ರಸ್ತೆಗಳನ್ನು ನಿರ್ಮಿಸಿದೆ. ನೀರು, ವಿದ್ಯುತ್​​ ಸಮಸ್ಯೆ ಹೋಗಲಾಡಿಸಿದೆ. ಅದೆಷ್ಟೋ ಪ್ರದೇಶಗಳಿ ನೀರು-ವಿದ್ಯುತ್ ಸಂಪರ್ಕ ಕಲ್ಪಿಸಿದೆ ಎಂದೂ ಹೇಳಿದರು.

ಇದನ್ನೂ ಓದಿ: Mohammad Rizwan: ಸ್ಲಿಪ್​ನಲ್ಲಿ ನಿಂತ ಮೊಹಮ್ಮದ್ ರಿಜ್ವಾನ್​ರಿಂದ ರೋಚಕ ಕ್ಯಾಚ್: ಇಲ್ಲಿದೆ ನೋಡಿ ವಿಡಿಯೋ

Published On - 11:59 am, Tue, 3 May 22

Web contact

TV9 Kannada

Read More
Follow Us