ದೇಶದ ವಿರುದ್ಧದ ಪಿತೂರಿಗಳನ್ನು ಗೆಲ್ಲಲು ಬಿಡುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

ಮೋದಿಯವರು ಇಂದು ಬಿಸ್ವನಾಥ್ ಮತ್ತು ಚರೈಡೊದಲ್ಲಿ ಎರಡು ವೈದ್ಯಕೀಯ ಕಾಲೇಜಿಗೆ ಶಂಕು ಸ್ಥಾಪನೆ ಮಾಡಿದ್ದು ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಯೋಜನೆ ಅಸೋಮ್ ಮಾಲಾಗೆ ಚಾಲನೆ ನೀಡಿದ್ದಾರೆ

ದೇಶದ ವಿರುದ್ಧದ ಪಿತೂರಿಗಳನ್ನು ಗೆಲ್ಲಲು ಬಿಡುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ Edited By:

Updated on: Feb 07, 2021 | 2:57 PM

ಗುವಾಹಟಿ: ನಮ್ಮ ದೇಶದ ವಿರುದ್ಧ ಪಿತೂರಿಗಳು ನಡೆಯುತ್ತಿವೆ. ಭಾರತದ ಚಹಾ ಮತ್ತು ದೇಶದ ಪ್ರತಿಷ್ಠೆಗೆ ಸಂಬಂಧಿತ ವಿಷಯಗಳ ಬಗ್ಗೆ ಪಿತೂರಿ ನಡೆಸಲು ಭಾರತದಿಂದ ಹೊರಗಿನವರು ಪ್ರಯತ್ನಿಸುತ್ತಿದ್ದಾರೆ ಎಂದು ಮಾಹಿತಿಯಿರುವ ಕೆಲವು ದಾಖಲೆಗಳು ಸಿಕ್ಕಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾನುವಾರ ಅಸ್ಸಾಂನ ಸೋನಿತ್ಪು​ರ್ ಜಿಲ್ಲೆಯಲ್ಲಿ ಮಾತನಾಡಿದ ಮೋದಿ, ಈ ರೀತಿ ಪಿತೂರಿ ನಡೆಸುವ ರಾಜಕೀಯ ಪಕ್ಷಗಳಿಂದ ಪ್ರತಿ ಚಹಾ ತೋಟದ ಕಾರ್ಮಿಕರು ಉತ್ತರ ಕೇಳಬೇಕು ಎಂದಿದ್ದಾರೆ. ಚಹಾ ತೋಟದ ಕಾರ್ಮಿಕರ ಕಲ್ಯಾಣಕ್ಕಾಗಿ ₹1,000 ಕೋಟಿ ಬಜೆಟ್ ಅನುದಾನಕ್ಕೆ ಸಂಬಂಧಿಸಿ ಪಿತೂರಿ ನಡೆಯುತ್ತಿದೆ ಎಂದು ಮೋದಿ ಉಲ್ಲೇಖಿಸಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಶಾನ್ಯ ರಾಜ್ಯಗಳಲ್ಲಿ ರಸ್ತೆ ಯೋಜನೆಗಾಗಿ ₹ 34,000 ಕೋಟಿ ಅನುದಾನ ನೀಡಿದ್ದರು.

ಮೋದಿಯವರು ಇಂದು ಬಿಸ್ವನಾಥ್ ಮತ್ತು ಚರೈಡೊದಲ್ಲಿ ಎರಡು ವೈದ್ಯಕೀಯ ಕಾಲೇಜಿಗೆ ಶಂಕು ಸ್ಥಾಪನೆ ಮಾಡಿದ್ದು ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಯೋಜನೆ ಅಸೋಮ್ ಮಾಲಾಗೆ ಚಾಲನೆ ನೀಡಿದ್ದಾರೆ. ದೇಶದ 500ಕ್ಕೂ ಹೆಚ್ಚು ಜಿಲ್ಲೆಗಳನ್ನು ನಾಲ್ಕು ಪಥದ ಹೆದ್ದಾರಿಗಳೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಭಾರತಮಾಲಾ ಯೋಜನೆಯೊಂದಿಗೆ ಅಸೋಮ್ ಮಾಲಾ ಕೂಡಾ ಸೇರಲಿದೆ.

ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳಲ್ಲಿ ಅಸ್ಸಾಂನಲ್ಲಿ 6 ವೈದ್ಯಕೀಯ ಕಾಲೇಜುಗಳಷ್ಟೇ ಇದ್ದಿದ್ದು. ಆದರೆ ಕಳೆದ 5 ವರ್ಷಗಳಲ್ಲಿ ನಾವು 6 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದ್ದೇವೆ. ಪ್ರತಿವರ್ಷ ಅಸ್ಸಾಂನಿಂದ 1,600 ಎಂಬಿಬಿಎಸ್ ಪದವಿ ಪಡೆದ ವೈದ್ಯರು ಸಿಗುತ್ತಾರೆ  ಎಂದಿದ್ದಾರೆ.

‘ಸೋನಿತ್‌ಪುರದ ಧೇಕಿಯಾಜುಲಿಯಲ್ಲಿ ಇಂದಿನ ಸಭೆ ನಡೆದಿದ್ದು ಈ ಸ್ಥಳವು ಐತಿಹಾಸಿಕ ಹಿನ್ನೆಲೆಯುಳ್ಳದ್ದಾಗಿದೆ. ಯಾವುದೇ ಪ್ರಧಾನ ಮಂತ್ರಿಗಳು ಇಲ್ಲಿಯವರಿಗೆ ಈ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿಲ್ಲ, ಬ್ರಿಟಿಷ್ ಆಡಳಿತದ ವಿರುದ್ಧ ನಡೆದ, ಕ್ವಿಟ್ ಇಂಡಿಯಾ ಚಳವಳಿಯ ವೇಳೆ ಇಲ್ಲಿ 13 ಜನರು ಹುತಾತ್ಮರಾಗಿದ್ದರು. ಅವರ ತ್ಯಾಗವನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ‘ಈ ಭೂಮಿಯಲ್ಲಿ, ಅಸ್ಸಾಂನ ಜನರು ಆಕ್ರಮಣಕಾರರನ್ನು ಸೋಲಿಸಿದರು. ಇಂದು ಈ ಐತಿಹಾಸಿಕ ಧೇಕಿಯಾಜುಲಿ ಭೂಮಿಗೆ ಗೌರವ ಸಲ್ಲಿಸಲು ನನಗೆ ಅವಕಾಶ ಸಿಕ್ಕಿತು’ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಖ್ಯಾತ ಅಸ್ಸಾಮಿ ಸಂಯೋಜಕ ಮತ್ತು ಗಾಯಕ ಭೂಪೆನ್ ಹಜಾರಿಕಾ ಅವರನ್ನು ನೆನಪಿಸಿಕೊಂಡ ಅವರು ‘ಇಂದು ಭಾರತದ ಸಿಂಹಗಳು ಜಾಗೃತಗೊಳ್ಳುತ್ತಿವೆ’ ಎಂದಿದ್ದಾರೆ.

ದೇಶವನ್ನು ಮಾರುವುದು ನಿಮ್ಮ ಕೆಲಸವಲ್ಲ: ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us