ಮಾರ್ಚ್ 6 ರಂದು ಪಶ್ಚಿಮ ಬಂಗಾಳಕ್ಕೆ ಮೋದಿ; ಸಂದೇಶ್‌ಖಾಲಿ ಸಂತ್ರಸ್ತರನ್ನು ಭೇಟಿ ಮಾಡುವ ಸಾಧ್ಯತೆ

|

Updated on: Feb 22, 2024 | 6:16 PM

ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ , ಸಂದೇಶ್‌ಖಾಲಿ ದ್ವೀಪದ ಮಹಿಳೆಯರನ್ನು ಭೇಟಿ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಜುಂದಾರ್ "ಸಂದೇಶ್‌ಖಾಲಿಯ ಸಹೋದರಿಯರು ಮತ್ತು ತಾಯಂದಿರು ಪ್ರಧಾನಿ ಮೋದಿಯನ್ನು ಭೇಟಿ ಮಾಡಲು ಬಯಸಿದರೆ, ನಾವು ಖಂಡಿತವಾಗಿಯೂ ಅದನ್ನು ವ್ಯವಸ್ಥೆ ಮಾಡುತ್ತೇವೆ" ಎಂದಿದ್ದಾರೆ.

ಮಾರ್ಚ್ 6 ರಂದು ಪಶ್ಚಿಮ ಬಂಗಾಳಕ್ಕೆ ಮೋದಿ; ಸಂದೇಶ್‌ಖಾಲಿ ಸಂತ್ರಸ್ತರನ್ನು ಭೇಟಿ ಮಾಡುವ ಸಾಧ್ಯತೆ
ನರೇಂದ್ರ ಮೋದಿ
Follow us on

ದೆಹಲಿ ಫೆಬ್ರುವರಿ 22: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾರ್ಚ್ 6 ರಂದು ಪಶ್ಚಿಮ ಬಂಗಾಳಕ್ಕೆ (West Bengal) ಭೇಟಿ ನೀಡಲಿದ್ದಾರೆ. ಅವರು ಉತ್ತರ 24 ಪರಗಣ ಜಿಲ್ಲೆಯ ಬರಾಸತ್‌ನಲ್ಲಿ ಮಹಿಳಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ. ಸಂದೇಶ್‌ಖಾಲಿಯಲ್ಲಿ (Sandeshkhali) ಸಂತ್ರಸ್ತರನ್ನೂ ಪ್ರಧಾನಿಯವರು ಭೇಟಿ ಮಾಡಬಹುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ (Sukanta Majumdar) ಗುರುವಾರ ಹೇಳಿದ್ದಾರೆ. “ಪ್ರಧಾನಿ ಮಾರ್ಚ್ 6 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಬರಾಸತ್‌ನಲ್ಲಿ ಮಹಿಳಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಇಂದು ನಮಗೆ ತಿಳಿದು ಬಂದಿದೆ” ಎಂದು ಮಜುಂದಾರ್ ಸುದ್ದಿಗಾರರಿಗೆ ತಿಳಿಸಿದರು.

ಸಂದೇಶ್‌ಖಾಲಿ ದ್ವೀಪದ ಮಹಿಳೆಯರನ್ನು ಪ್ರಧಾನಿ ಭೇಟಿ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ, ಮಜುಂದಾರ್ “ಸಂದೇಶ್‌ಖಾಲಿಯ ಸಹೋದರಿಯರು ಮತ್ತು ತಾಯಂದಿರು ಪ್ರಧಾನಿ ಮೋದಿಯನ್ನು ಭೇಟಿ ಮಾಡಲು ಬಯಸಿದರೆ, ನಾವು ಖಂಡಿತವಾಗಿಯೂ ಅದನ್ನು ವ್ಯವಸ್ಥೆ ಮಾಡುತ್ತೇವೆ” ಎಂದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆಬ್ರವರಿ 28 ರಂದು ಪಶ್ಚಿಮ ಬಂಗಾಳಕ್ಕೆ ಎರಡು ದಿನಗಳ ಭೇಟಿ ನೀಡುವ ಸಾಧ್ಯತೆ ಇದೆ. ಸಂದೇಶ್‌ಖಾಲಿಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ತೃಣಮೂಲ ಕಾಂಗ್ರೆಸ್‌ನ ಪ್ರಬಲ ವ್ಯಕ್ತಿ ಶಾಜಹಾನ್ ಶೇಖ್ ಮತ್ತು ಅವರ ಬೆಂಬಲಿಗರು ತಮ್ಮ ಮೇಲೆ ಬಲವಂತ ಮಾಡಿ “ಭೂ ಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯ” ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಸಂದೇಶ್​​ಖಾಲಿ ಪ್ರಕರಣದಲ್ಲಿ ಷಹಜಹಾನ್‌ನನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಡಿಜಿಪಿ ಹೇಳಿದ್ದಾರೆ: ಎನ್‌ಸಿಡಬ್ಲ್ಯೂ ಅಧ್ಯಕ್ಷೆ

ಈ ಆರೋಪಗಳು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ತನಿಖೆಗೆ ಪ್ರೇರೇಪಿಸಿವೆ. ಪರಿಶಿಷ್ಟ ಪಂಗಡಗಳ ಸಮಿತಿಯು ಇಂದು ದ್ವೀಪಕ್ಕೆ ಭೇಟಿ ನೀಡಿದಾಗ, NHRC ಸತ್ಯಗಳನ್ನು ಖಚಿತಪಡಿಸಿಕೊಳ್ಳಲು ತಂಡವನ್ನು ನಿಯೋಜಿಸುವುದಾಗಿ ಹೇಳಿದೆ.

ಆರೋಪದ ಹಿನ್ನೆಲೆಯಲ್ಲಿ ಒಟ್ಟು 17 ಮಂದಿಯನ್ನು ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ. ಷಹಜಹಾನ್‌ನ ಆಪ್ತ ಸಹಾಯಕರಾದ ಉತ್ತಮ್ ಸರ್ದಾರ್ ಮತ್ತು ಶಿಬು ಹಜ್ರಾ ಅವರನ್ನು ಬಂಧಿಸಲಾಗಿದ್ದು, ಷಹಜಹಾನ್ ಪರಾರಿಯಾಗಿದ್ದಾನೆ. ಸ್ಥಳೀಯ ನಿವಾಸಿಗಳು ಭೂಕಬಳಿಕೆ ಮತ್ತು ಸುಲಿಗೆ ದೂರುಗಳನ್ನು ಸಲ್ಲಿಸಲು ಅವರು ದ್ವೀಪದಲ್ಲಿ ಶಿಬಿರಗಳನ್ನು ನಡೆಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮಂಗಳವಾರ, ಕಲ್ಕತ್ತಾ ಹೈಕೋರ್ಟ್ ಕೂಡ ಆರೋಪಿಗಳಿಗೆ “ಆಶ್ರಯ” ನೀಡಲಾಗುತ್ತಿದೆಯೇ ಎಂದು ಆಶ್ಚರ್ಯಪಟ್ಟಿತ್ತು. ಸಂದೇಶ್‌ಖಾಲಿ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 26 ರಂದು ಹೈಕೋರ್ಟ್ ಸೋಮವಾರ ನಿಗದಿಪಡಿಸಿದ್ದು, ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ವಕೀಲರು ಸಹ ಹಾಜರಾಗಲು ಸೂಚನೆ ನೀಡಲಾಗಿದೆ.

ಬಂಗಾಳದ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ, ಮಮತಾ ಬ್ಯಾನರ್ಜಿ ಸರ್ಕಾರವು ಈ ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. ಬಿಜೆಪಿ ದ್ವೀಪದಲ್ಲಿ ಅಶಾಂತಿಯನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿ ತೃಣಮೂಲ ಮುಖ್ಯಸ್ಥರು ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:08 pm, Thu, 22 February 24