AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಗೆ ನರೇಂದ್ರ ಮೋದಿ ಭೇಟಿ ಸಾಧ್ಯತೆ: ಸುವೇಂದು ಅಧಿಕಾರಿ

ನರೇಂದ್ರ ಮೋದಿಯವರು ಪಶ್ಚಿಮ ಬಂಗಾದ ಸಂದೇಶ್​​ಖಾಲಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸೋಮವಾರ ಹೇಳಿದ್ದಾರೆ. ಇಂಡಿಯಾ ಟುಡೆ ಟಿವಿಗೆ ನೀಡಿದ ಸಂದರ್ಶನದಲ್ಲಿ ಸುವೇಂದು, ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ಮೋದಿ ಅವರ ಭೇಟಿಯ ದಿನಾಂಕಗಳನ್ನು ಪಿಎಂಒ ಅಂತಿಮಗೊಳಿಸಲಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಗೆ ನರೇಂದ್ರ ಮೋದಿ ಭೇಟಿ ಸಾಧ್ಯತೆ: ಸುವೇಂದು ಅಧಿಕಾರಿ
ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ
|

Updated on: Feb 19, 2024 | 8:36 PM

Share

ದೆಹಲಿ ಫೆಬ್ರುವರಿ 19: ತೃಣಮೂಲ ಕಾಂಗ್ರೆಸ್‌ನ ಪ್ರಮುಖ ನಾಯಕ ಮತ್ತು ಅವರ ಸಹಾಯಕರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಪಶ್ಚಿಮ ಬಂಗಾಳದ (West Bengal) ಸಂದೇಶ್‌ಖಾಲಿಯ (Sandeshkhali) ಹಲವಾರು ಮಹಿಳೆಯರು ಆರೋಪ ಮಾಡಿದ್ದಾರೆ. ಸಂದೇಶಖಾಲಿ ಈಗ ಸುದ್ದಿಯಲ್ಲಿದ್ದು ಟಿಎಂಸಿ- ಬಿಜೆಪಿ ಪರಸ್ಪರ ವಾಕ್ಸಮರದಲ್ಲಿ ತೊಡಗಿದೆ. ಇದೆಲ್ಲದರ ನಡುವೆ ಪ್ರಧಾನಿ ನರೇಂದ್ರ ಮೋದಿ (Narendra modi) ಸಂದೇಶ್‌ಖಾಲಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸೋಮವಾರ ಹೇಳಿದ್ದಾರೆ. ಇಂಡಿಯಾ ಟುಡೆ ಟಿವಿಗೆ ನೀಡಿದ ಸಂದರ್ಶನದಲ್ಲಿ ಸುವೇಂದು, ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ಮೋದಿ ಅವರ ಭೇಟಿಯ ದಿನಾಂಕಗಳನ್ನು ಪಿಎಂಒ ಅಂತಿಮಗೊಳಿಸಲಿದೆ ಎಂದು ಹೇಳಿದರು.

2020 ರಲ್ಲಿ ಬಿಜೆಪಿ ಸೇರಿದ  ಈ ಸುವೇಂದು ಅಧಿಕಾರಿ ಒಂದು ಕಾಲದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಆಪ್ತ ಸಹಾಯಕರಾಗಿದ್ದವರು. ಸುವೇಂದು ಕಲ್ಕತ್ತಾ ಹೈಕೋರ್ಟ್‌ನಿಂದ ಅನುಮತಿ ಪಡೆದ ನಂತರ ಉತ್ತರ 24 ಪರಗಣ ಗ್ರಾಮಕ್ಕೆ ಭೇಟಿ ನೀಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. “ಫೆಬ್ರವರಿ 12 ರಂದು ನನಗೆ ಅನುಮತಿಯನ್ನು ನೀಡಲಾಯಿತು. ಆದರೆ ಅವರು ಸೆಕ್ಷನ್ 144 ಅನ್ನು ವಿಧಿಸಿದರು. ಇಂದು ನಾನು ನಿರ್ದಿಷ್ಟ ಆದೇಶವನ್ನು ಸ್ವೀಕರಿಸಿದ್ದೇನೆ. ನಾನು ನಾಳೆ ಅಲ್ಲಿಗೆ ಹೋಗಿ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡುತ್ತೇನೆ. ಅನೇಕ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ, ನಾನು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡುತ್ತೇನೆ ಎಂದು ಎಎನ್ಐ ಜತೆ ಮಾತನಾಡಿದ ಸುವೇಂದು ಹೇಳಿದ್ದಾರೆ.

“ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಸೋಲುತ್ತಾರೆ. ಅದಕ್ಕಾಗಿಯೇ ಅವರು ಇಷ್ಟೆಲ್ಲ ಮಾಡುತ್ತಿದ್ದಾರೆ. ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ.ಅವರು (ಶೇಖ್ ಷಹಜಹಾನ್) ಅವರನ್ನು ಬಂಧಿಸುವುದಿಲ್. ಏಕೆಂದರೆ ಅವರಿಗೆ ಚುನಾವಣೆಯ ಸಮಯದಲ್ಲಿ ಗೂಂಡಾಗಳು ಬೇಕಾಗಿದ್ದಾರೆ. ಅವರು ಅವರಿಗೆ ರಕ್ಷಣೆ ನೀಡಿದ್ದಾರೆ ”ಎಂದು ಸುವೇಂದು ಹೇಳಿದ್ದಾರೆ.

ಸಂದೇಶ್‌ಖಾಲಿಯ ಹಲವಾರು ಮಹಿಳೆಯರು ಸ್ಥಳೀಯ ಟಿಎಂಸಿ ನಾಯಕ ಶಹಜಹಾನ್ ಶೇಖ್ ಮತ್ತು ಅವರ ಬೆಂಬಲಿಗರ ಮೇಲೆ ಭೂಹಗರಣ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಪಡಿತರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಖ್ ಅವರ ನಿವೇಶನಗಳನ್ನು ಶೋಧಿಸಲು ತೆರಳಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಗುಂಪೊಂದು ದಾಳಿ ನಡೆಸಿದ ಬಳಿಕ ಶೇಖ್ ತಲೆಮರೆಸಿಕೊಂಡಿದ್ದಾನೆ.

ಮಮತಾ ರಾಜೀನಾಮೆ, ರಾಷ್ಟ್ರಪತಿ ಆಳ್ವಿಕೆ ಹೇರಲು ಎನ್‌ಸಿಡಬ್ಲ್ಯೂ ಮುಖ್ಯಸ್ಥರ ಕರೆ

ಸೋಮವಾರ ಅಧ್ಯಕ್ಷೆ ರೇಖಾ ಶರ್ಮಾ ನೇತೃತ್ವದ ರಾಷ್ಟ್ರೀಯ ಮಹಿಳಾ ಆಯೋಗದ ನಿಯೋಗ ಸಂತ್ರಸ್ತರನ್ನು ಭೇಟಿ ಮಾಡಲು ಸಂದೇಶ್‌ಖಾಲಿಗೆ ಭೇಟಿ ನೀಡಿತ್ತು. ಎನ್‌ಸಿಡಬ್ಲ್ಯೂ ಮುಖ್ಯಸ್ಥರು ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕು , ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕು ಎಂದು ಕರೆ ನೀಡಿದರು.  “ಸಂದೇಶಖಾಲಿಯಲ್ಲಿ ಮಹಿಳೆಯರೊಂದಿಗೆ ಮಾತನಾಡಿದ ನಂತರ, ಪರಿಸ್ಥಿತಿಯು ಭೀಕರವಾಗಿದೆ ಎಂಬುದು ಸ್ಪಷ್ಟವಾಗಿದೆ. ಹಲವಾರು ಮಹಿಳೆಯರು ತಮ್ಮ ನೋವಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಬ್ಬರು ಟಿಎಂಸಿ ಪಕ್ಷದ ಕಚೇರಿಯೊಳಗೆ ಅತ್ಯಾಚಾರವೆಸಗಿರುವುದಾಗಿ ಹೇಳಿದ್ದಾರೆ. ನಾವು ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸುತ್ತೇವೆ, ಅದನ್ನು ನಾವು ನಮ್ಮ ವರದಿಯಲ್ಲಿ ಸೇರಿಸುತ್ತೇವೆ.”ಎಂದು ಶರ್ಮಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: ಇಂದು ಸುದಾಮ ಕೃಷ್ಣನಿಗೆ ಚೀಲದಲ್ಲಿ ಅಕ್ಕಿ ನೀಡುತ್ತಿದ್ದರೆ ಅದು ಭ್ರಷ್ಟಾಚಾರ ಆಗುತ್ತಿತ್ತು: ಮೋದಿ

ಶರ್ಮಾಗೆ ತಿರುಗೇಟು ನೀಡಿದ ಪಶ್ಚಿಮ ಬಂಗಾಳದ ಸಚಿವ ಶಶಿ ಪಂಜಾ ಅವರು , “ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಬೆಂಕಿ ಹಚ್ಚಿದ ಮಧ್ಯಪ್ರದೇಶದ ಮೊರೆನಾಕ್ಕೆ ಅವರು ಏಕೆ ಭೇಟಿ ನೀಡಲಿಲ್ಲ? ಬಿಜೆಪಿ ಸಂಸದರ ಆರೋಪದ ವಿರುದ್ಧ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದಾಗ ಎನ್‌ಸಿಡಬ್ಲ್ಯೂ ಏಕೆ ಪ್ರತಿಕ್ರಿಯಿಸಲಿಲ್ಲ. ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ದೂರುಗಳನ್ನು ಆಯೋಗ ಏಕೆ ನಿರ್ಲಕ್ಷಿಸಿದೆ? ಎಂದು ಕೇಳಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ