AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​​ನ ಪೊಲೀಸ್ ಠಾಣೆ ಮೇಲೆ ರಾಕೆಟ್ ದಾಳಿ; ಪಾಕಿಸ್ತಾನಿ ಉಗ್ರರ ಕೈವಾಡದ ಶಂಕೆ

ಅಪರಿಚಿತ ದಾಳಿಕೋರರು ರಾಕೆಟ್ ಲಾಂಚರ್ ತರಹದ ಸಾಧನವನ್ನು ರಾಷ್ಟ್ರೀಯ ಹೆದ್ದಾರಿ 54ರಿಂದ ಸರ್ಹಾಲಿಯ ಪೊಲೀಸ್ ಠಾಣೆಗೆ ಹಾರಿಸಿದ್ದಾರೆ. ಈ ರಾಕೆಟ್ ದಾಳಿಯಿಂದಾಗಿ ಪೊಲೀಸ್ ಠಾಣೆಯ ಗೋಡೆಗಳು, ಬಾಗಿಲುಗಳ ಗ್ಲಾಸ್​ಗಳು ಒಡೆದು ಹೋಗಿವೆ.

ಪಂಜಾಬ್​​ನ ಪೊಲೀಸ್ ಠಾಣೆ ಮೇಲೆ ರಾಕೆಟ್ ದಾಳಿ; ಪಾಕಿಸ್ತಾನಿ ಉಗ್ರರ ಕೈವಾಡದ ಶಂಕೆ
ಪಂಜಾಬ್​ ಪೊಲೀಸ್ ಠಾಣೆಯಲ್ಲಿ ಉಗ್ರರ ದಾಳಿImage Credit source: India Today
TV9 Web
| Updated By: ಸುಷ್ಮಾ ಚಕ್ರೆ|

Updated on: Dec 10, 2022 | 11:50 AM

Share

ಅಮೃತಸರ: ಪಂಜಾಬ್​ನ (Punjab) ತರ್ನ್ ತರನ್​ನ ಗಡಿ ಪ್ರದೇಶದಲ್ಲಿ ಶುಕ್ರವಾರ ಮಧ್ಯರಾತ್ರಿ ಪೊಲೀಸ್ ಠಾಣೆಯ ಮೇಲೆ ಶಂಕಿತ ರಾಕೆಟ್ (Rocket Attack) ಗ್ರೆನೇಡ್ ದಾಳಿ ನಡೆಸಲಾಗಿದೆ. ತರ್ನ್ ತರನ್ ಜಿಲ್ಲೆಯ ಅಮೃತಸರ-ಭಟಿಂಡಾ ಹೆದ್ದಾರಿಯಲ್ಲಿರುವ ಸರ್ಹಾಲಿ ಪೊಲೀಸ್ ಠಾಣೆಗೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸ್ಪೋಟಕ ಅಪ್ಪಳಿಸಿತ್ತು. ಈ ದಾಳಿಯ ಹಿಂದೆ ಪಾಕಿಸ್ತಾನಿ ಉಗ್ರರ (Pakistani Terrorists) ಕೈವಾಡವಿದೆ ಎಂದು ಶಂಕಿಸಲಾಗಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಪೊಲೀಸರ ಪ್ರಕಾರ, ಅಪರಿಚಿತ ದಾಳಿಕೋರರು ರಾಕೆಟ್ ಲಾಂಚರ್ ತರಹದ ಸಾಧನವನ್ನು ರಾಷ್ಟ್ರೀಯ ಹೆದ್ದಾರಿ 54ರಿಂದ ಸರ್ಹಾಲಿಯ ಪೊಲೀಸ್ ಠಾಣೆಗೆ ಹಾರಿಸಿದ್ದಾರೆ. ಈ ರಾಕೆಟ್ ದಾಳಿಯಿಂದಾಗಿ ಪೊಲೀಸ್ ಠಾಣೆಯ ಗೋಡೆಗಳು, ಬಾಗಿಲುಗಳ ಗ್ಲಾಸ್​ಗಳು ಒಡೆದು ಹೋಗಿವೆ. ಈ ದಾಳಿಯ ನಂತರ, ತರ್ನ್ ತರನ್​ನ ಎಸ್‌ಎಸ್‌ಪಿ ದಾಳಿ ನಡೆದ ಸ್ಥಳಕ್ಕೆ ಆಗಮಿಸಿ, ದಾಳಿಗೆ ಬಳಸಿದ ರಾಕೆಟ್ ಅನ್ನು ಪೊಲೀಸ್ ಠಾಣೆಯ ಒಳಗಿನಿಂದ ವಶಪಡಿಸಿಕೊಳ್ಳಲಾಯಿತು. ರಾಕೆಟ್ ಜೊತೆಗೆ ಪೈಪ್ ತರಹದ ವಸ್ತು ಕೂಡ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಸರ್ಹಾಲಿಯು ಕುಖ್ಯಾತ ದರೋಡೆಕೋರ ಹರ್ವಿಂದರ್ ಸಿಂಗ್ ಅಲಿಯಾಸ್ ರಿಂಡಾನ ಊರಾಗಿದೆ. ಆತ ಕೆಲವು ದಿನಗಳ ಹಿಂದೆ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದ ಎಂದು ಶಂಕಿಸಲಾಗಿದೆ. ಹರ್ವಿಂದರ್ ಸಿಂಗ್ ರಿಂಡಾ ಮೂತ್ರಪಿಂಡ ವೈಫಲ್ಯದಿಂದ 15 ದಿನಗಳ ಕಾಲ ಲಾಹೋರ್‌ನ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲಿ ಆತ ನಿಧನನಾಗಿದ್ದಾನೆ ಎಂದು ರಾಜ್ಯ ಪೊಲೀಸ್ ಮೂಲಗಳು ಹೇಳಿಕೊಂಡಿವೆ. ಪಾಕಿಸ್ತಾನದ ಐಎಸ್‌ಐ ಆಶ್ರಯದಲ್ಲಿ ಖಲಿಸ್ತಾನ್ ಬೆಂಬಲಿತ ಭಯೋತ್ಪಾದಕರು ಈ ದಾಳಿಯನ್ನು ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: Rocket Attack: ಉಕ್ರೇನ್ ಅಪಾರ್ಟ್​ಮೆಂಟ್ ಮೇಲೆ ರಷ್ಯಾ ರಾಕೆಟ್ ದಾಳಿ, 15 ಮಂದಿ ಸಾವು

ಇದಕ್ಕೂ ಮುನ್ನ ಮೇ 9ರಂದು ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ ಗುಪ್ತಚರ ಕೇಂದ್ರ ಕಚೇರಿ ಮೇಲೆ ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್ (ಆರ್‌ಪಿಜಿ) ಬಳಸಿ ದಾಳಿ ನಡೆಸಲಾಗಿತ್ತು. ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸರ ಗುಪ್ತಚರ ಕಚೇರಿಯ 3ನೇ ಮಹಡಿಯಲ್ಲಿ ಸೋಮವಾರ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು 6 ಜನರನ್ನು ಬಂಧಿಸಿದ ಬೆನ್ನಲ್ಲೇ ಈ ಘಟನೆ ನಡೆದಿತ್ತು.

ಮೊಹಾಲಿ ಸ್ಫೋಟ ಪ್ರಕರಣದಲ್ಲಿ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಭಾಗಿಯಾಗಿರುವುದನ್ನು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ವಿಕೆ ಭಾವ್ರಾ ಬಹಿರಂಗಪಡಿಸಿದ್ದರು. ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐನ ಸೂಚನೆ ಮೇರೆಗೆ ನಡೆದ ಬಾಂಬ್ ಸ್ಫೋಟದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುಂಪು ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ) ಮತ್ತು ಸ್ಥಳೀಯ ದರೋಡೆಕೋರರು ಭಾಗಿಯಾಗಿದ್ದಾರೆ ಎಂದು ಪಂಜಾಬ್ ಡಿಜಿಪಿ ಹೇಳಿದ್ದರು.

ಇದನ್ನೂ ಓದಿ: ಉಗ್ರರನ್ನು ಟಾರ್ಗೆಟ್ ಮಾಡುವಂತೆ ನಾವು ಹೇಳಿದೆವು, ಅವರು ಮೋದಿಯನ್ನು ಟಾರ್ಗೆಟ್ ಮಾಡಿದರು: ಪ್ರಧಾನಿ ಮೋದಿ

ಎರಡು ದಿನಗಳ ಹಿಂದೆಯಷ್ಟೇ ಭಯೋತ್ಪಾದನಾ ದಾಳಿಯ ಬಗ್ಗೆ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ವರದಿಗಳ ಪ್ರಕಾರ, ಪಂಜಾಬ್‌ನ ಪೊಲೀಸ್ ಠಾಣೆಗಳು ಮತ್ತು ಇತರ ಸರ್ಕಾರಿ ಕಟ್ಟಡಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲು ಸೂಚಿಸಲಾಗಿತ್ತು. ಇದೀಗ ಪೊಲೀಸ್ ಠಾಣೆಗಳಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಪಿಟಿಸಿ ಸುದ್ದಿಗಳ ಪ್ರಕಾರ, ಸಿಪಿ ಲುಧಿಯಾನಾ ಅವರು ಎಲ್ಲಾ ಪೊಲೀಸ್ ಠಾಣೆಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಉನ್ನತ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅಂತಹ ಪೊಲೀಸ್ ಠಾಣೆಗಳು ಅಥವಾ ಕಟ್ಟಡಗಳು ದಾಳಿ ಮತ್ತು ಪಲಾಯನ ಮಾಡಲು ಸುಲಭವಾದ ಕಾರಣ ನಗರದ ಹೊರಗೆ ಅಥವಾ ಹೆದ್ದಾರಿಗಳಲ್ಲಿ ಇರುವ ಪೊಲೀಸ್ ಠಾಣೆಗಳಲ್ಲಿ ಹೆಚ್ಚಿನ ಜಾಗರೂಕತೆಗೆ ಆದೇಶಿಸಲಾಗಿದೆ ಎಂದು ಮೂಲಗಳು ಹೇಳುತ್ತವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ