Omicron Variant: ಮುಂದೆ ಯಾವುದೇ ಪರಿಸ್ಥಿತಿ ಬರಬಹುದು, ಎದುರಿಸಲು ಸಿದ್ಧರಾಗಿರಿ: ಏಮ್ಸ್​ ನಿರ್ದೇಶಕರಿಂದ ಎಚ್ಚರಿಕೆ

| Updated By: Lakshmi Hegde

Updated on: Dec 20, 2021 | 9:00 AM

ಕೊರೊನಾದ ಹೊಸ ತಳಿ ಒಮಿಕ್ರಾನ್​ ಮೊದಲು ಪತ್ತೆಯಾಗಿದ್ದು ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್​ 25ರಂದು. ನಂತರ ಒಂದೊಂದೇ ದೇಶಗಳಿಗೆ ವ್ಯಾಪಿಸುತ್ತಿದೆ. ಇದೀಗ ಭಾರತಕ್ಕೂ ಕಾಲಿಟ್ಟಿದ್ದು ಮೂರನೇ ಅಲೆಯ ಸಾಧ್ಯತೆಯನ್ನು ಸೃಷ್ಟಿಸಿದೆ.

Omicron Variant: ಮುಂದೆ ಯಾವುದೇ ಪರಿಸ್ಥಿತಿ ಬರಬಹುದು, ಎದುರಿಸಲು ಸಿದ್ಧರಾಗಿರಿ: ಏಮ್ಸ್​ ನಿರ್ದೇಶಕರಿಂದ ಎಚ್ಚರಿಕೆ
ಸಾಂಕೇತಿಕ ಚಿತ್ರ
Follow us on

ದೆಹಲಿ: ದೇಶದಲ್ಲಿ ಒಮಿಕ್ರಾನ್​ (Omicron) ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಕೊವಿಡ್​ 19 ಮೂರನೇ ಅಲೆಯ ಆತಂಕ ಎದುರಾಗಿದೆ. ಈ ಮಧ್ಯೆ ಏಮ್ಸ್​ ನಿರ್ದೇಶಕ ಡಾ. ರಣದೀಪ್​ ಗುಲೇರಿಯಾ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಹೀಗೆ ಮುಂದುವರಿದೆ ಶೀಘ್ರದಲ್ಲಿಯೇ ಯಾವುದೇ ಪರಿಸ್ಥಿತಿಯಾದರೂ ಎದುರಾಗಬಹುದು. ಹಾಗಾಗಿ ಆಡಳಿತಗಳು ಎಲ್ಲದಕ್ಕೂ ಸಿದ್ಧರಾಗಬೇಕು ಎಂದಿದ್ದಾರೆ. ಬ್ರಿಟನ್​​ನಲ್ಲಿ ಈಗ ಆಗುತ್ತಿರುವಂತೆ ಭಾರತದಲ್ಲೂ ಅಂಥ ಕೆಟ್ಟ ಪರಿಸ್ಥಿತಿ ಬರುವುದು ಬೇಡ ಎಂಬ ಆಶಯ ವ್ಯಕ್ತಪಡಿಸೋಣ. ಆದರೆ ಏನೇ ಬಂದರೂ ಎದುರಿಸಲು ಈಗಿನಿಂದಲೇ ನಾವು ಸಿದ್ಧರಾಗಬೇಕು. ಪ್ರಪಂಚದ ಯಾವುದೇ ದೇಶಗಳಲ್ಲಿ ವೈರಸ್​ ಕೇಸ್​ಗಳಲ್ಲಿ ಏರಿಕೆ ಕಂಡುಬಂದಾಗ ನಾವೂ ಅದನ್ನು ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಅಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಹೆಚ್ಚಿನ ಡೇಟಾ ಸಂಗ್ರಹ ಮಾಡಬೇಕು ಎಂದೂ ಅವರು  ಹೇಳಿದ್ದಾಗಿ ಎಎನ್​ಐ ವರದಿ ಮಾಡಿದೆ.

ಇನ್ನು ದೇಶದಲ್ಲಿ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 153ಕ್ಕೆ ಏರಿಕೆಯಾಗಿದ್ದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ನಿನ್ನೆ ಮಹಾರಾಷ್ಟ್ರದಲ್ಲಿ 6 ಮತ್ತು ಗುಜರಾತ್​​ನಲ್ಲಿ ನಾಲ್ಕು ಒಮಿಕ್ರಾನ್​ ಸೋಂಕಿತರು ಪತ್ತೆಯಾಗಿದ್ದಾರೆ.  ಈಗಾಗಲೇ ಭಾರತದಲ್ಲಿ 11 ರಾಜ್ಯಗಳಿಗೆ ಒಮಿಕ್ರಾನ್ ವ್ಯಾಪಿಸಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಎಂದರೆ ಒಟ್ಟು 54 ಕೇಸ್​ಗಳಿದ್ದು, ಅದು ಬಿಟ್ಟರೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ 22 ಒಮಿಕ್ರಾನ್​ ಪ್ರಕರಣಗಳು ದಾಖಲಾಗಿವೆ.  ಅದರ ಹೊರತಾಗಿ ರಾಜಸ್ಥಾನದಲ್ಲಿ 17, ಕರ್ನಾಟಕ 14, ತೆಲಂಗಾಣ 20, ಗುಜರಾತ್​ 11, ಕೇರಳ 11, ಆಂಧ್ರಪ್ರದೇಶ 1, ಚಂಡಿಗಢ್, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಪ್ರಕರಣಗಳು ಇವೆ.

ಕೊರೊನಾದ ಹೊಸ ತಳಿ ಒಮಿಕ್ರಾನ್​ ಮೊದಲು ಪತ್ತೆಯಾಗಿದ್ದು ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್​ 25ರಂದು. ನಂತರ ಒಂದೊಂದೇ ದೇಶಗಳಿಗೆ ವ್ಯಾಪಿಸುತ್ತಿದೆ. ಇದೀಗ ಭಾರತಕ್ಕೂ ಕಾಲಿಟ್ಟಿದ್ದು ಮೂರನೇ ಅಲೆಯ ಸಾಧ್ಯತೆಯನ್ನು ಸೃಷ್ಟಿಸಿದೆ. ಕೊರೊನಾದ ಈ ಹೊಸ ತಳಿ, ಈ ಹಿಂದಿನ ಉಳಿದ ತಳಿಗಳಿಗಿಂತ ವೇಗವಾಗಿ ಹಬ್ಬುತ್ತಿರುವುದು ಆರೋಗ್ಯ ತಜ್ಞರಿಗೆ, ಆಡಳಿತಗಳಿಗೆ ದೊಡ್ಡ ತಲೆನೋವು ಸೃಷ್ಟಿಸಿದೆ. ಅದರಲ್ಲೂ ಲಸಿಕೆಯ ದಕ್ಷತೆಯನ್ನೂ ಇದು ಕುಗ್ಗಿಸುತ್ತದೆ ಎಂದು ಹೇಳಲಾಗಿದ್ದು, ಮೂರನೇ ಡೋಸ್ ಕೊಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ.

ಇದನ್ನೂ ಓದಿ: ದೆಹಲಿ ರೋಹಿಣಿ ಕೋರ್ಟ್ ಸ್ಫೋಟ ಪ್ರಕರಣ; ಹ್ಯಾಂಡ್​ವಾಶ್​ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಜೈಲಲ್ಲಿರುವ ಆರೋಪಿ ವಿಜ್ಞಾನಿ