ನಿಮ್ಮದು ಪ್ರತಿಭಟನೆಯಾ? ಪ್ರವಾಸವಾ?; ಗಾಂಧಿ ಪ್ರತಿಮೆ ಮುಂದೆ ಚಿಕನ್ ತಿಂದ ಸಂಸದರಿಗೆ ಬಿಜೆಪಿ ಲೇವಡಿ

ಗಾಂಧಿ ಪ್ರತಿಮೆಯ ಕೆಳಗೆ ಕುಳಿತು ಚಿಕನ್ ಮತ್ತು ಫಿಶ್ ತಿಂದಿರುವ ಪ್ರತಿಭಟನಾಕಾರರ ವಿರುದ್ಧ ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ. ನೀವು ಪ್ರತಿಭಟನೆ ಮಾಡುತ್ತಿದ್ದೀರೋ? ಪಿಕ್​ನಿಕ್ ಬಂದಿದ್ದೀರೋ? ಎಂದು ಬಿಜೆಪಿ ನಾಯಕರು ವಿಪಕ್ಷಗಳ ಸಂಸದರಿಗೆ ಟೀಕಿಸಿದ್ದಾರೆ.

ನಿಮ್ಮದು ಪ್ರತಿಭಟನೆಯಾ? ಪ್ರವಾಸವಾ?; ಗಾಂಧಿ ಪ್ರತಿಮೆ ಮುಂದೆ ಚಿಕನ್ ತಿಂದ ಸಂಸದರಿಗೆ ಬಿಜೆಪಿ ಲೇವಡಿ
ಸಂಸತ್ ಹೊರಗೆ ಸಂಸದರ ಪ್ರತಿಭಟನೆ
Updated By: ಸುಷ್ಮಾ ಚಕ್ರೆ

Updated on: Jul 29, 2022 | 10:42 AM

ನವದೆಹಲಿ: ರಾಜ್ಯಸಭಾ ಅಧಿವೇಶನದಿಂದ (Rajya Sabha Session) ಅಮಾನತುಗೊಂಡಿರುವ ವಿರೋಧಪಕ್ಷದ ಸಂಸದರು ಸಂಸತ್​ನ ಹೊರಗೆ 2 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ಬೆಳಗ್ಗೆ ಪ್ರತಿಭಟನಾನಿರತ ಸಂಸದರಿಗೆ ಡಿಎಂಕೆ (DMK) ಇಡ್ಲಿ ತಿಂಡಿಯ ವ್ಯವಸ್ಥೆ ಮಾಡಿತ್ತು. ಹಾಗೇ, ಮಧ್ಯಾಹ್ನ ಟಿಎಂಸಿ (TMC) ಫಿಶ್​ ಕರಿ ಮತ್ತು ಚಿಕನ್ ತಂದೂರಿ (Tandoori Chicken) ವ್ಯವಸ್ಥೆ ಮಾಡಿತ್ತು. ಸಂಸತ್ ಭವನದ ಹೊರಗಿರುವ ಗಾಂಧಿ ಪ್ರತಿಮೆಯ ಕೆಳಗೆ ಕುಳಿತು ಚಿಕನ್ ಮತ್ತು ಫಿಶ್ ತಿಂದಿರುವ ಪ್ರತಿಭಟನಾಕಾರರ ವಿರುದ್ಧ ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ. ನೀವು ಪ್ರತಿಭಟನೆ ಮಾಡುತ್ತಿದ್ದೀರೋ? ಅಥವಾ ಪಿಕ್​ನಿಕ್ ಬಂದಿದ್ದೀರೋ? ಎಂದು ಬಿಜೆಪಿ ನಾಯಕರು ವಿಪಕ್ಷಗಳ ಸಂಸದರಿಗೆ ಟೀಕಿಸಿದ್ದಾರೆ.

ಮಹಾತ್ಮ ಗಾಂಧಿ ಪ್ರಾಣಿ ಹಿಂಸೆಯನ್ನು ವಿರೋಧಿಸುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದ ಕೆಲವು ಅಮಾನತುಗೊಂಡ ಸಂಸದರು ತಂದೂರಿ ಚಿಕನ್ ತಿಂದಿದ್ದಾರೆ ಎಂದು ಬಿಜೆಪಿ ನಾಯಕರಾದ ಶೆಹಜಾದ್ ಪೂನವಾಲ ಆರೋಪಿಸಿದ್ದಾರೆ. ಇದು ಪ್ರತಿಭಟನೆಯೋ? ಅಥವಾ ಮತ್ತು ಪ್ರವಾಸವೋ? ಎಂದು ಅವರು ಪ್ರಶ್ನಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಆರ್​ಎಸ್​ಎಸ್​ನ ಜನರು ಮತ್ತು ಸಚಿವರು ಬಾಗಿಲು ಹಾಕಿಕೊಂಡು ಎಲ್ಲವನ್ನೂ ತಿನ್ನುತ್ತಾರೆ. ನಮ್ಮ ಆಹಾರದ ಬಗ್ಗೆ ಕಮೆಂಟ್ ಮಾಡಬೇಡಿ. ಇದೆಲ್ಲವೂ ಸುಳ್ಳು ಸುದ್ದಿ. ನಮಗೆ ಬೇರೆ ಸಂಸದರು ಮನೆಯಿಂದ ಆಹಾರ ತಂದುಕೊಡುತ್ತಿರುವುದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಮ್ಮ ಒಗ್ಗಟ್ಟು ನೋಡಿ ಹೊಟ್ಟೆಕಿಚ್ಚಿನಿಂದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಳೆ, ಇಡ್ಲಿ, ಸೊಳ್ಳೆ ಪರದೆ; ಸಂಸತ್ ಹೊರಗೆ 2ನೇ ದಿನ ಕಳೆದ ಅಮಾನತುಗೊಂಡ ಸಂಸದರು

ಸಂಸತ್ತಿನಿಂದ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದಂತೆ ವಿರೋಧ ಪಕ್ಷಗಳು ಸರದಿಯಂತೆ ಊಟದ ವ್ಯವಸ್ಥೆ ಮಾಡಿದ್ದರು. ತೃಣಮೂಲ ಕಾಂಗ್ರೆಸ್ ವತಿಯಿಂದ ಭೋಜನವನ್ನು ಆಯೋಜಿಸಲಾಗಿತ್ತು. ಮತ್ತು ರೊಟ್ಟಿ, ದಾಲ್, ಪನೀರ್ ಮತ್ತು ಚಿಕನ್ ತಂದೂರಿ ಮೆನುವಿನಲ್ಲಿತ್ತು.

ದೆಹಲಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಮಾನತುಗೊಂಡ ಸಂಸದರ 50 ಗಂಟೆಗಳ ಧರಣಿ ಗಾಂಧಿ ಪ್ರತಿಮೆಯಿಂದ ಸಂಸತ್ತಿನ ಮುಖ್ಯ ದ್ವಾರಕ್ಕೆ ಸ್ಥಳಾಂತರಗೊಂಡಿತು. ಮುಂದಿನ 21 ಗಂಟೆಗಳ ಕಾಲ ಅವರು ಸಂಸತ್ ಪ್ರವೇಶ ದ್ವಾರದಲ್ಲೇ ಪ್ರತಿಭಟನೆ ನಡೆಸಲಿದ್ದಾರೆ.

ಗಾಂಧಿ ಪ್ರತಿಮೆ ಎದುರು ಚಿಕನ್ ತಂದೂರಿ ತಿನ್ನುತ್ತಿರುವ ಸಂಸದರು

ಮಳೆ ಬರಬಹುದೆಂಬ ಭಯದಿಂದ ಪ್ರತಿಭಟನಾ ನಿರತ ಸಂಸದರು ಟೆಂಟ್‌ಗಾಗಿ ಮನವಿ ಮಾಡಿದರೂ ಆವರಣದೊಳಗೆ ಯಾವುದೇ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ನಿರಾಕರಿಸಿದ್ದರು. ಹೀಗಾಗಿ, ಹೊರಾಂಗಣದಲ್ಲೇ ಸಂಸದರು 2 ರಾತ್ರಿ ಕಳೆದಿದ್ದಾರೆ.

ಇದನ್ನೂ ಓದಿ: ಸಂಸತ್ ಎದುರು 50 ಗಂಟೆಗಳ ಪ್ರತಿಭಟನೆಯಲ್ಲಿ ಮೊದಲ ರಾತ್ರಿ ಕಳೆದ​ ಸಂಸದರು; ಇಂದು ಬೆಳಗ್ಗೆ ಡಿಎಂಕೆಯಿಂದ ತಿಂಡಿ ವ್ಯವಸ್ಥೆ

ರಾಜ್ಯಸಭಾ ಕಲಾಪದಿಂದ ಸೋಮವಾರ ಮತ್ತು ಮಂಗಳವಾರ ಅಮಾನತುಗೊಂಡಿರುವ 20 ಸಂಸದರಲ್ಲಿ ಟಿಎಂಸಿಯಿಂದ 7, ಡಿಎಂಕೆಯಿಂದ 6, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) 3, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) 2 ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ)ದ ತಲಾ ಒಬ್ಬರು ಸೇರಿದ್ದಾರೆ.