Puducherry Assembly Elections 2021: ಪುದುಚೇರಿ ಚುನಾವಣೆಯಲ್ಲಿ10 ಸೀಟುಗಳಲ್ಲಿ ಸ್ಪರ್ಧಿಸಲಿದೆ ಬಿಜೆಪಿ

Puducherry Elections: ಮಂಗಳವಾರ ಸೀಟು ಹಂಚಿಕೆ ಬಗ್ಗೆ ನಡೆದ ಚರ್ಚೆಯಲ್ಲಿ  ಎಐಎನ್​​ಆರ್ ಕಾಂಗ್ರೆಸ್ (AINRC) 18 ಸೀಟುಗಳಿಗೆ ಬೇಡಿಕೆಯೊಡ್ಡಿ ಕೊನೆಗೆ 16 ಸೀಟುಗಳಿಗೆ ತೃಪ್ತವಾಗಿತ್ತು. ಅದೇ ವೇಳೆ ಉಳಿದ 14 ಸೀಟುಗಳಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಸ್ಪರ್ಧಿಸಲಿದೆ.

Puducherry Assembly Elections 2021: ಪುದುಚೇರಿ ಚುನಾವಣೆಯಲ್ಲಿ10 ಸೀಟುಗಳಲ್ಲಿ ಸ್ಪರ್ಧಿಸಲಿದೆ ಬಿಜೆಪಿ
ಪುದುಚೇರಿಯಲ್ಲಿ ಸೀಟು ಹಂಚಿಕೆ
ರಶ್ಮಿ ಕಲ್ಲಕಟ್ಟ

Updated on: Mar 10, 2021 | 6:50 PM

ಪುದುಚೇರಿ: ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ 10 ಸೀಟುಗಳಲ್ಲಿ ಬಿಜೆಪಿ (BJP), 4 ಸೀಟುಗಳಲ್ಲಿ ಎಐಎಡಿಎಂಕೆ (AIADMK) ಸ್ಪರ್ಧಿಸಲಿದೆ. ಮಂಗಳವಾರ ಸೀಟು ಹಂಚಿಕೆ ಬಗ್ಗೆ ನಡೆದ ಚರ್ಚೆಯಲ್ಲಿ  ಎಐಎನ್​​ಆರ್ ಕಾಂಗ್ರೆಸ್ (AINRC) 18 ಸೀಟುಗಳಿಗೆ ಬೇಡಿಕೆಯೊಡ್ಡಿ ಕೊನೆಗೆ 16 ಸೀಟುಗಳಿಗೆ ತೃಪ್ತವಾಗಿತ್ತು. ಅದೇ ವೇಳೆ ಉಳಿದ 14 ಸೀಟುಗಳಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಸ್ಪರ್ಧಿಸಲಿದೆ. ಸೀಟು ಹಂಚಿಕೆ ಬಗ್ಗೆ ಮಂಗಳವಾರ ನಿರ್ಧಾರ ಪ್ರಕಟಿಸಿದ ಪುದುಚೇರಿ ಬಿಜೆಪಿ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನಾ ಎನ್​​ಆರ್ ಕಾಂಗ್ರೆಸ್ ಮತ್ತು ಎಐಎಡಿಎಂಕೆ ಜತೆಗೆ ಸೀಟು ಹಂಚಿಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಎಐಎನ್​​ಆರ್​ಸಿ, ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಕೂಟ ಪುದುಚೇರಿ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕಣಕ್ಕಿಳಿಯಲಿದೆ. ಎನ್​ಆರ್​ಸಿ 16 ಸೀಟುಗಳಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿ ಮತ್ತು ಎಐಎಡಿಎಂಕೆ 14 ಸೀಟು ಗಳಲ್ಲಿ ಸ್ಪರ್ಧಿಸಲಿದೆ. ಎನ್.ರಂಗಸ್ವಾಮಿ ನೇತೃತ್ವದಲ್ಲಿ ನಾವು ಈ ಚುನಾವಣೆ ಸ್ಪರ್ಧಿಸಲಿದ್ದೇವೆ ಎಂದಿದ್ದಾರೆ .

ಅದೇ ವೇಳೆ ಪಿಎಂಕೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿದೆ. ಎಐಎಡಿಎಂಕೆ,ಬಿಜೆಪಿ, ಎಐಎನ್​ಆರ್​ಸಿ ಯಾವುದೇ ಪಕ್ಷ ಸೀಟು ಹಂಚಿಕೆ ಮಾಡಿಕೊಳ್ಳುತ್ತಿರುವುದರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಪಿಎಂಕೆ ಪುದುಚೇರಿ ಘಟಕದ ಸಂಚಾಲಕ ಕೆ.ಧನರಾಜು ಮಂಗಳವಾರ ಹೇಳಿದ್ದರು . ಎನ್ ಡಿಎ ಮೈತ್ರಿಕೂಟದ ಅಂಗವಾದರೆ ಪಿಎಂಕೆ ಪಕ್ಷಕ್ಕೆ 5 ಸೀಟುಗಳನ್ನು ನೀಡಬೇಕು ಎಂದು ತಾನು ಸೋಮವಾರ ಬಿಜೆಪಿಗೆ ಪತ್ರ ಬರೆದಿದ್ದೆ. ಆದರೆ ಎಐಎನ್ಆರ್​ಸಿ, ಬಿಜೆಪಿ ಮತ್ತು ಎಐಎಡಿಎಂಕೆ ನಡುವೆ ಸೀಟು ಹಂಚಿಕೆ ಮಾತುಕತೆಗಳು ನಡೆದಿರುವ ಬಗ್ಗೆ ನಮಗೆ ತಿಳಿದಿರಲಿಲ್ಲ ಎಂದು ಧನರಾಜು ಹೇಳಿದ್ದಾರೆ.

ಇಡೀ ಪ್ರಕ್ರಿಯೆ ಬಗ್ಗೆ ತಮ್ಮ ಪಕ್ಷಕ್ಕೆ ಏನೂ ಹೇಳದಿರುವುದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಅವರು, ಪಿಎಂಕೆ ಅಧಿಕೃತವಾಗಿ ಗುರುತಿಸಲ್ಪಟ್ಟ ಪಕ್ಷ, ನಾವು ಈ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ. ಪುದುಚೇರಿಯಲ್ಲಿ 30 ವಿಧಾನಸಭಾ ಸೀಟುಗಳಿವೆ. ಈ ಎಲ್ಲ ಸೀಟುಗಳಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದಿದ್ದಾರೆ.


ಈ ಹಿಂದೆ ಎನ್ ರಂಗಸ್ವಾಮಿ ನೇತೃತ್ವದ ಎನ್ ಆರ್ ಕಾಂಗ್ರಸ್ ಈ ಬಾರಿ ಏಕಾಂಗಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿತ್ತು. ಪುದುಚೇರಿಯಲ್ಲಿ ಏಪ್ರಿಲ್ 6ರ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೇರಲಿದೆ ಎಂದು ಅಮಿತ್ ಶಾ ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು. ಬಿಜೆಪಿ ಅಧಿಕಾರಕ್ಕೇರುತ್ತದೆ, ಬಿಜೆಪಿಯವರೇ ಮುಖ್ಯಮಂತ್ರಿ ಆಗುತ್ತಾರೆ ಎಂಬ ಅಮಿತ್ ಶಾ ಅವರ ಮಾತು ಎನ್ ಆರ್ ಕಾಂಗ್ರೆಸ್ ಗೆ ಹಿಡಿಸಿರಲಿಲ್ಲ. ಆದರೆ ಈಗ ರಂಗಸ್ವಾಮಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿರುವುದರಿಂದ ಆ ಅಸಮಧಾನ ದೂರವಾಗಿದೆ. ಎನ್. ರಂಗಸ್ವಾಮಿ ಎರಡು ಬಾರಿ ಪುದುಚೇರಿ ಮುಖ್ಯಮಂತ್ರಿ ಆಗಿದ್ದರು. ಒಂದು ಬಾರಿ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಪದವಿಗೇರಿದ್ದು, ಎರಡನೇ ಬಾರಿ ತಮ್ಮದೇ ಆದ ಪಕ್ಷ ಎನ್​ಆರ್ ಕಾಂಗ್ರೆಸ್ ನಿಂದ ಅಧಿಕಾರಕ್ಕೇರಿದ್ದರು.

ಪುದುಚೇರಿಯಲ್ಲಿ ಏಪ್ರಿಲ್ 6ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಪುದುಚೇರಿಯಲ್ಲಿ ಅಮಿತ್​ ಶಾ ಉದ್ಯೋಗ ಮಂತ್ರ: ನಿರುದ್ಯೋಗ ನಿವಾರಣೆಗೆ ಬಿಜೆಪಿಗೆ ಮತ ನೀಡಿ ಎಂದ ‘ಚಾಣಕ್ಯ’

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us