ಪಂಜಾಬ್​ನಲ್ಲಿ ಪ್ರಧಾನಿ ಭದ್ರತೆಯಲ್ಲಿ ಲೋಪ ವಿಚಾರ; ನರೇಂದ್ರ ಮೋದಿ ಕ್ಷಮೆ ಕೋರಿದ ಪಂಜಾಬ್ ಸಿಎಂ ಚನ್ನಿ

Punjab CM: ಪ್ರಧಾನಿ ಮೋದಿಗೆ ದೀರ್ಘಾಯುಷ್ಯ ಹಾರೈಸಿದ್ದಾರೆ ಎಂಬ ಬಗ್ಗೆ ಮೂಲಗಳು ಮಾಹಿತಿ ನೀಡಿವೆ. ಪ್ರಧಾನಿ ನರೇಂದ್ರ ಮೋದಿ ಜೊತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ವೇಳೆ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಈ ಬಗ್ಗೆ ಮಾತನಾಡಿರುವುದಾಗಿ ಹೇಳಲಾಗಿದೆ.

ಪಂಜಾಬ್​ನಲ್ಲಿ ಪ್ರಧಾನಿ ಭದ್ರತೆಯಲ್ಲಿ ಲೋಪ ವಿಚಾರ; ನರೇಂದ್ರ ಮೋದಿ ಕ್ಷಮೆ ಕೋರಿದ ಪಂಜಾಬ್ ಸಿಎಂ ಚನ್ನಿ
ಚರಣ್​​ಜಿತ್ ಸಿಂಗ್ ಚನ್ನಿ
Updated By: ganapathi bhat

Updated on: Jan 13, 2022 | 9:05 PM

ದೆಹಲಿ: ಪಂಜಾಬ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಭದ್ರತೆಯಲ್ಲಿ ಲೋಪ (PM Security Breach) ವಿಚಾರವಾಗಿ ಪಂಜಾಬ್ ಸಿಎಂ ಚರಣ್​ಜಿತ್ ಸಿಂಗ್ ಚನ್ನಿ (Charanjit Singh Channi) ಗುರುವಾರ ಕ್ಷಮೆ ಕೋರಿದ್ದಾರೆ. ಪಂಜಾಬ್​ನಲ್ಲಿ ಪ್ರಧಾನಿ ಮೋದಿ ಭೇಟಿ ವೇಳೆ ನಡೆದ ಭದ್ರತಾ ಲೋಪಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಗೆ ದೀರ್ಘಾಯುಷ್ಯ ಹಾರೈಸಿದ್ದಾರೆ ಎಂಬ ಬಗ್ಗೆ ಮೂಲಗಳು ಮಾಹಿತಿ ನೀಡಿವೆ. ಪ್ರಧಾನಿ ನರೇಂದ್ರ ಮೋದಿ ಜೊತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ವೇಳೆ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಈ ಬಗ್ಗೆ ಮಾತನಾಡಿರುವುದಾಗಿ ಹೇಳಲಾಗಿದೆ.

ಭದ್ರತಾ ಲೋಪ ಘಟನೆಗೆ ಪಂಜಾಬ್ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಈ ಮೊದಲು ಭಿನ್ನ ಪ್ರತಿಕ್ರಿಯೆ ನೀಡಿದ್ದರು. ನನ್ನ ಕಾರ್ಯದರ್ಶಿಗೆ ಕೊರೊನಾ ಆದ ಕಾರಣ ನಾನು ಖುದ್ದಾಗಿ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಹೋಗಿಲ್ಲ. ಮೋದಿಯವರನ್ನು ಸ್ವಾಗತಿಸಲು ಹಣಕಾಸು ಸಚಿವರನ್ನು ಕಳುಹಿಸಿದ್ದೆವು. ಪ್ರಧಾನಿಗೆ ರಾಜ್ಯದ ವತಿಯಿಂದ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದೆವು. ಪಂಜಾಬ್​​ನಲ್ಲಿ ನಡೆದ ಘಟನೆ ದುರದೃಷ್ಟಕರ. ರೈತರ ಪ್ರತಿಭಟನೆ ಬಗ್ಗೆ ಗೃಹಸಚಿವರು ಮಾಹಿತಿ ನೀಡಿದ್ದರು. ರೈತರ ಪ್ರತಿಭಟನೆ ತಡೆಯಲು ಪೊಲೀಸರು ಶ್ರಮ ವಹಿಸಿದ್ದರು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮತ್ತು ಪ್ರತಿಭಟನೆಗಳಿಂದಾಗಿ ಭೇಟಿಯನ್ನು ನಿಲ್ಲಿಸುವಂತೆ ನಾವು ಅವರಿಗೆ (PMO) ಕೇಳಿಕೊಂಡಿದ್ದೇವೆ. ಅವರ (ಪ್ರಧಾನಿ ನರೇಂದ್ರ ಮೋದಿ) ಹಠಾತ್ ಮಾರ್ಗ ಬದಲಾವಣೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಪ್ರಧಾನಿ ಭೇಟಿ ವೇಳೆ ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಚನ್ನಿ ಹೇಳಿದ್ದರು.

ಪ್ರಧಾನಿ ಮೋದಿ ಪಂಜಾಬ್ ಭೇಟಿ ವೇಳೆ ಹುಸ್ಸೇನಿವಾಲಾ ಫ್ಲೈಓವರ್​ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇದ್ದ ಕಾರು ಮತ್ತು ಅವರ ಬೆಂಗಾವಲು ವಾಹನಗಳು ಸಿಲುಕಿದ್ದವು. ಕಾರಣ ಅದೇ ಮಾರ್ಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತ, ರಸ್ತೆ ಬ್ಲಾಕ್​ ಮಾಡಿದ್ದರು. ಸುಮಾರು 20 ನಿಮಿಷ ಕಾದ ಬಳಿಕ ಪ್ರಧಾನಿ ಮೋದಿ ವಾಪಸ್ ಆಗಿದ್ದರು. ಬಳಿಕ, ದೆಹಲಿಗೆ ಹೊರಡುವುದಕ್ಕೂ ಮೊದಲು, ಭಟಿಂಡಾ ಏರ್​ಪೋರ್ಟ್​​ನಲ್ಲಿ ಪಂಜಾಬ್ ಪೊಲೀಸ್ ಅಧಿಕಾರಿಗಳೊಟ್ಟಿಗೆ ಮಾತನಾಡಿ, ನಾನು ಭಟಿಂಡಾವರೆಗೆ ಜೀವಂತವಾಗಿಯಾದರೂ ಬಂದೆನಲ್ಲ, ನಿಮ್ಮ ಮುಖ್ಯಮಂತ್ರಿಗೆ ಧನ್ಯವಾದ ಹೇಳಿದ್ದಾಗಿ ತಿಳಿಸಿ ಎಂದಿದ್ದರು ಎಂದು ತಿಳಿದುಬಂದಿತ್ತು.

ಇದನ್ನೂ ಓದಿ: ಪಿಎಂ ಭದ್ರತಾ ಲೋಪದ ವಿವರವನ್ನೇಕೆ ಪಂಜಾಬ್​ ಸಿಎಂ ಗಾಂಧಿ ಕುಟುಂಬಕ್ಕೆ ನೀಡಿದ್ದಾರೆ? -ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನೆ

ಇದನ್ನೂ ಓದಿ: ಪಂಜಾಬ್​​ನಲ್ಲಿ ಪ್ರಧಾನಿ ಮೋದಿ ಭದ್ರತೆ ಲೋಪ: ಇಂದು ಸಿಜೆಐ ಎನ್​ವಿ ರಮಣ ನೇತೃತ್ವದ ಪೀಠದಿಂದ ಅರ್ಜಿ ವಿಚಾರಣೆ

Published On - 8:36 pm, Thu, 13 January 22