ರಾಹುಲ್ ಗಾಂಧಿ ರಾಮನಲ್ಲದಿರಬಹುದು, ಆದರೆ ಬಿಜೆಪಿ ರಾವಣನ ಹಾದಿಯಲ್ಲಿದೆ; ಸಲ್ಮಾನ್ ಖುರ್ಷಿದ್

ಸೋಮವಾರ ಸಲ್ಮಾನ್ ಖುರ್ಷಿದ್ ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಸಿ ಮಾತನಾಡಿದ್ದರು. ಇದಕ್ಕೆ ಬಿಜೆಪಿ ನಾಯಕರಿಂದ ತೀಕ್ಷ್ಣವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ರಾಹುಲ್ ಗಾಂಧಿ ರಾಮನಲ್ಲದಿರಬಹುದು, ಆದರೆ ಬಿಜೆಪಿ ರಾವಣನ ಹಾದಿಯಲ್ಲಿದೆ; ಸಲ್ಮಾನ್ ಖುರ್ಷಿದ್
ಸಲ್ಮಾನ್ ಖುರ್ಷಿದ್ Image Credit source: Hindustan Times
Follow us
| Updated By: ಸುಷ್ಮಾ ಚಕ್ರೆ

Updated on:Dec 28, 2022 | 12:23 PM

ನವದೆಹಲಿ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ (Salman Khurshid) ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಸಿ ವಿವಾದಕ್ಕೆ ಕಾರಣರಾಗಿದ್ದರು. ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿರುವ ಅವರು, ರಾಹುಲ್ ಗಾಂಧಿ (Rahul Gandhi) ರಾಮನಲ್ಲ, ಆದರೆ ಬಿಜೆಪಿ (BJP) ರಾವಣನ ಹಾದಿಯಲ್ಲಿ ಸಾಗುತ್ತಿದೆ ಎಂದು ಕಿಡಿಕಾರಿದ್ದಾರೆ. “ರಾಹುಲ್ ಗಾಂಧಿ ಭಗವಾನ್ ರಾಮನಲ್ಲ, ಆದರೆ ಅವರು ಭಗವಾನ್ ರಾಮ ತೋರಿಸಿದ ಮಾರ್ಗವನ್ನು ಅನುಸರಿಸಬಹುದು. ಬಿಜೆಪಿ ರಾಹುಲ್ ಗಾಂಧಿಗೆ ರಾಮನ ಹಾದಿಯಲ್ಲಿ ನಡೆಯುವ ಹಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ಬಿಜೆಪಿಯವರು ರಾಮನ ಬದಲು ರಾವಣನ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂಬುದಕ್ಕೆ ನಮ್ಮ ಆಕ್ಷೇಪವಿದೆ ಎಂದು ಸಲ್ಮಾನ್ ಖುರ್ಷಿದ್ ಇಂದು ಟೀಕಿಸಿದ್ದಾರೆ.

ದೆಹಲಿಯಲ್ಲಿ ರಾಹುಲ್ ಗಾಂಧಿ ಆ ಚಳಿಯ ಮಧ್ಯೆಯೂ ಜಾಕೆಟ್, ಸ್ವೆಟರ್ ಧರಿಸದೆ ಕೇವಲ ಟಿ-ಶರ್ಟ್​ ಹಾಕಿಕೊಂಡು ಓಡಾಡಿದ್ದರ ಬಗ್ಗೆ ಚರ್ಚೆಗಳು ಆರಂಭವಾಯಿತು. “ರಾಹುಲ್ ಗಾಂಧಿ ಅತಿಮಾನುಷ ವ್ಯಕ್ತಿ. ನಾವು ಚಳಿಯಲ್ಲಿ ಹೆಪ್ಪುಗಟ್ಟುತ್ತಾ ಮತ್ತು ಜಾಕೆಟ್‌ಗಳನ್ನು ಧರಿಸಿರುವಾಗ, ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಟಿ- ಶರ್ಟ್‌ಗಳಲ್ಲಿ ಹೋಗುತ್ತಿದ್ದಾರೆ. ಅವರು ಯೋಗಿಯಂತೆ ತಮ್ಮ ‘ತಪಸ್ಸನ್ನು’ ಮಾತ್ರ ಗಮನದಲ್ಲಿಟ್ಟುಕೊಂಡಿದ್ದಾರೆ” ಎಂದು ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಸಿದ ಖುರ್ಷಿದ್ ವಿರುದ್ಧ ಬಿಜೆಪಿ ವಾಗ್ದಾಳಿ; ರಾಮನ ಸೇನೆ ಬಟ್ಟೆ ಬಿಚ್ಚಿ ಓಡಾಡಬೇಕು ಎಂದ ಬಿಜೆಪಿ ನಾಯಕ

ಸೋಮವಾರ ಸಲ್ಮಾನ್ ಖುರ್ಷಿದ್ ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಸಿ ಮಾತನಾಡಿದ್ದರು. ಇದಕ್ಕೆ ಬಿಜೆಪಿ ನಾಯಕರಿಂದ ತೀಕ್ಷ್ಣವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗಾಂಧಿ ಕುಟುಂಬದ ಮನವೊಲಿಸಲು ಕಾಂಗ್ರೆಸ್ ನಾಯಕರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದರು. ಈ ಭ್ರಷ್ಟನನ್ನು ರಾಮನಿಗೆ ಹೋಲಿಸುವ ಮೂಲಕ ರಾಹುಲ್ ಗಾಂಧಿಯನ್ನು ಸಮಾಧಾನಪಡಿಸಲು ಕಾಂಗ್ರೆಸ್ ಯಾವುದೇ ಹಂತಕ್ಕೂ ಹೋಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿದ್ದರು.

ರಾಮನನ್ನು ಕಾಲ್ಪನಿಕ ವ್ಯಕ್ತಿ ಎಂದು ಹೇಳುತ್ತಿದ್ದ ಇದೇ ಕಾಂಗ್ರೆಸ್ ಈ ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಸುತ್ತಿದೆ. ಅದೇ ವ್ಯಕ್ತಿ ಪುರುಷರು ಮಹಿಳೆಯರನ್ನು ಚುಡಾಯಿಸಲು ಮತ್ತು ಕಿರುಕುಳ ನೀಡಲು ದೇವಸ್ಥಾನಗಳಿಗೆ ಹೋಗುತ್ತಾರೆ ಎಂದು ಕೂಡ ಹೇಳಿದ್ದರು ಎಂದು ಬಿಜೆಪಿ ನಾಯಕ ಟೀಕಿಸಿದ್ದರು.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯ ಭಾಷಣಗಳು ಭಾರತದಲ್ಲಿ ನಡುಕ ಹುಟ್ಟಿಸುತ್ತಿವೆ: ಎಂಕೆ ಸ್ಟಾಲಿನ್ ಶ್ಲಾಘನೆ

ಈ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಸಲ್ಮಾನ್ ಖುರ್ಷಿದ್, ರಾಹುಲ್ ಗಾಂಧಿ ರಾಮನಂತಿದ್ದಾರೆ ಎಂದು ನಾನು ಎಂದಿಗೂ ಹೇಳಲಿಲ್ಲ. ದೇವರನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಆದರೆ ಅವರು ತೋರಿಸಿದ ಹಾದಿಯಲ್ಲಿ ನಡೆಯಲು ಎಲ್ಲರೂ ಪ್ರಯತ್ನಿಸಬಹುದು. ರಾಹುಲ್ ಗಾಂಧಿ ಆ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂದು ನಾನು ಹೇಳಿದರೆ ಅದಕ್ಕೆ ಏಕೆ ವಿರೋಧಿಸಬೇಕು? ಎಂದು ಪ್ರಶ್ನಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:23 pm, Wed, 28 December 22