ಸರ್​ನೇಮ್ ಕದಿಯಬಹುದು, ಸಂಸ್ಕಾರ ಕದಿಯೋಕಾಗಲ್ಲ: ರಾಹುಲ್ ವಿರುದ್ಧ ಸ್ಮೃತಿ, ಪ್ರಲ್ಹಾದ್ ಜೋಶಿ, ಗಜೇಂದ್ರ ಶೇಖಾವತ್ ಕಿಡಿ

ಮಧ್ಯಪ್ರದೇಶದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಿಮಿಕ್ರಿ ವೀಡಿಯೋ ನೋಡಿ ರಾಹುಲ್ ಗಾಂಧಿ ನಕ್ಕ ಘಟನೆ ರಾಜಕೀಯ ವಿವಾದ ಸೃಷ್ಟಿಸಿದೆ. ಪ್ರಧಾನಿಯ ದಿವಂಗತ ತಾಯಿಯನ್ನು ಅಪಹಾಸ್ಯ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಮೃತಿ ಇರಾನಿ, ಪ್ರಲ್ಹಾದ್ ಜೋಶಿ ಸೇರಿದಂತೆ ಹಲವರು ರಾಹುಲ್ ನಡವಳಿಕೆಯನ್ನು ಖಂಡಿಸಿ, ಇದು ನೈತಿಕ ದಿವಾಳಿತನ ಎಂದಿದ್ದಾರೆ. ಈ ವಿವಾದ ಮುಂಬರುವ ಚುನಾವಣೆಗಳಲ್ಲಿ ಪ್ರಮುಖ ಅಸ್ತ್ರವಾಗುವ ನಿರೀಕ್ಷೆಯಿದೆ.

ಸರ್​ನೇಮ್ ಕದಿಯಬಹುದು, ಸಂಸ್ಕಾರ ಕದಿಯೋಕಾಗಲ್ಲ: ರಾಹುಲ್ ವಿರುದ್ಧ ಸ್ಮೃತಿ, ಪ್ರಲ್ಹಾದ್ ಜೋಶಿ, ಗಜೇಂದ್ರ ಶೇಖಾವತ್ ಕಿಡಿ
ರಾಹುಲ್ ಗಾಂಧಿ
Image Credit source: Screen shot from X Video

Updated on: Sep 20, 2026 | 2:08 PM

ನವದೆಹಲಿ, ಸೆಪ್ಟೆಂಬರ್ 20:ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಡೆ-ನುಡಿಯನ್ನು ಅಣಕಿಸಿದ ಮಿಮಿಕ್ರಿ ವಿಡಿಯೋ ಭಾರೀ ರಾಜಕೀಯ ಕೋಲಾಹಲ ಸೃಷ್ಟಿಸಿದೆ. ವೇದಿಕೆಯಲ್ಲಿದ್ದ ಸ್ಟ್ಯಾಂಡಪ್ ಕಾಮೆಡಿಯನ್ ಪುಲ್ಕಿತ್ ಮಣಿ ಎಂಬಾತ ಪ್ರಧಾನಿ ಮೋದಿಯವರನ್ನು ಅನುಕರಿಸುವಾಗ ರಾಹುಲ್ ಗಾಂಧಿ ಗಹಗಹಿಸಿ ನಕ್ಕಿರುವ ದೃಶ್ಯಗಳನ್ನು ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಈ ನಡೆ ಪ್ರಧಾನಿ ಅವರ ದಿವಂಗತ ತಾಯಿಗೆ ಮಾಡಿದ ಘೋರ ಅಪಮಾನ ಎಂದು ಬಿಜೆಪಿ ನಾಯಕರು ದೇಶಾದ್ಯಂತ ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.

ವೇದಿಕೆಯಲ್ಲಿ ಮಿಮಿಕ್ರಿ ವಿವಾದ: ವಿದ್ಯಾರ್ಥಿ ಸಮಾವೇಶದ ವೇದಿಕೆಯಲ್ಲಿ ಪುಲ್ಕಿತ್ ಮಣಿ, ಪ್ರಧಾನಿ ಮೋದಿ ಕುರ್ಚಿ ಕೇಳಿದ ವೃದ್ಧ ಮಹಿಳೆಯೊಬ್ಬರಿಗೆ ಕುರ್ಚಿ ನೀಡುವ ಸಂದರ್ಭವನ್ನು ವ್ಯಂಗ್ಯವಾಗಿ ಅನುಕರಿಸಿದರು. ಇದನ್ನು ರಾಹುಲ್ ಗಾಂಧಿ ಎಂಜಾಯ್ ಮಾಡುತ್ತಾ ನಕ್ಕಿರುವುದು ವಿವಾದದ ಕಿಡಿ ಹೊತ್ತಿಸಿದೆ.

ಸ್ಮೃತಿ ಇರಾನಿ: “ಮಾನವೀಯತೆಯ ಮೇಲೆ ವಿನಾಶ ಆವರಿಸಿದಾಗ ಮೊದಲು ಸಾಯುವುದೇ ಆತ್ಮಸಾಕ್ಷಿ” ಎಂದು ತೀಕ್ಷ್ಣವಾಗಿ ಟೀಕಿಸಿದ್ದಾರೆ.

ಪ್ರಲ್ಹಾದ್ ಜೋಶಿ: “ಪ್ರಧಾನಿಯವರ ದಿವಂಗತ ತಾಯಿಯನ್ನು ಅಪಹಾಸ್ಯ ಮಾಡಲು ವಿದ್ಯಾರ್ಥಿ ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿರುವುದು ಕಾಂಗ್ರೆಸ್‌ನ ನೈತಿಕ ದಿವಾಳಿತನವನ್ನು ತೋರಿಸುತ್ತದೆ” ಎಂದು ಕಿಡಿಕಾರಿದ್ದಾರೆ.

ಪೋಸ್ಟ್​

 

ಕಿರಣ್ ರಿಜಿಜು: “ಕಾಂಗ್ರೆಸ್ ಪಕ್ಷ ಈಗ ಪೂರ್ಣಪ್ರಮಾಣದ ಹಾಸ್ಯನಟರು ಮತ್ತು ಜೋಕರ್‌ಗಳ ಪಕ್ಷವಾಗಿ ಬದಲಾಗಿದೆ; ಕಾಂಗ್ರೆಸ್‌ಗೆ RIP” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

ಗಜೇಂದ್ರ ಸಿಂಗ್ ಶೇಖಾವತ್: “ಯಾರದ್ದೋ ಸರ್‌ನೇಮ್ (ಉಪನಾಮ) ಕದಿಯಬಹುದು, ಆದರೆ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕದಿಯಲು ಸಾಧ್ಯವಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿಗಳ ಆಕ್ರೋಶ: ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಹಾಗೂ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಇದನ್ನು ನಾಚಿಕೆಗೇಡಿನ ಕೃತ್ಯ ಎಂದು ಕರೆದಿದ್ದು, ರಾಜಕೀಯದಲ್ಲಿ ಸೈದ್ಧಾಂತಿಕ ವಿರೋಧವಿರಬಹುದು ಆದರೆ ತಾಯಂದಿರ ಅಪಹಾಸ್ಯವನ್ನು ಭಾರತೀಯ ಸಮಾಜ ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ.

ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಚಾಟಿ: “ದುರ್ಬಲ ತಾಯಿಯನ್ನು ಅಪಹಾಸ್ಯ ಮಾಡುವ ರಾಹುಲ್ ಗಾಂಧಿಯವರ ಈ  ಅಸಭ್ಯ ಸಂಸ್ಕೃತಿಯಿಂದಾಗಿಯೇ ಯುವಜನತೆ ಕಾಂಗ್ರೆಸ್‌ನಿಂದ ದೂರವಾಗಿದ್ದಾರೆ. ಅದಕ್ಕಾಗಿಯೇ ದೆಹಲಿ ವಿಶ್ವವಿದ್ಯಾಲಯದ (DUSU) ಚುನಾವಣೆಯಲ್ಲಿ ಎನ್‌ಎಸ್‌ಯುಐ ನೆಲಕಚ್ಚಿದೆ” ಎಂದು ಟಾಂಗ್ ನೀಡಿದ್ದಾರೆ.

ಮಿಮಿಕ್ರಿ ವಿವಾದಗಳ ಇತಿಹಾಸ: ಸಂಸತ್ತಿನ ಮಕರ ದ್ವಾರದ ಬಳಿ ಈ ಹಿಂದೆ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಮಿಮಿಕ್ರಿ ಮಾಡಿ ಅಪಹಾಸ್ಯ ಮಾಡಿದಾಗಲೂ, ರಾಹುಲ್ ಗಾಂಧಿ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ನಕ್ಕಿದ್ದು ದೇಶವ್ಯಾಪಿ ದೊಡ್ಡ ವಿವಾದಕ್ಕೆ ನಾಂದಿ ಹಾಡಿತ್ತು.

ಭಾರತೀಯ ರಾಜಕೀಯ ಸಂಸ್ಕೃತಿಯಲ್ಲಿ ನಾಯಕರ ವೈಯಕ್ತಿಕ ಕುಟುಂಬ, ಅದರಲ್ಲೂ ಹಿರಿಯರು ಮತ್ತು ದಿವಂಗತ ತಾಯಂದಿರ ಬಗ್ಗೆ ಮಾಡುವ ಲಘು ಟೀಕೆಗಳು ತೀವ್ರ ಸಾರ್ವಜನಿಕ ಪ್ರತಿರೋಧಕ್ಕೆ ಕಾರಣವಾಗುತ್ತವೆ. ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಅವರ ನಿಧನದ ನಂತರವೂ ಅವರನ್ನು ರಾಜಕೀಯ ಸಂಭಾಷಣೆಗೆ ಎಳೆದುತಂದಿರುವುದನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸುತ್ತಿದ್ದಾರೆ.

ಚುನಾವಣಾ ಅಸ್ತ್ರ: ಮುಂಬರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಈ ವರ್ತನೆಯನ್ನು ಮಹಿಳೆಯರಿಗೆ ಮತ್ತು ಹಿರಿಯರಿಗೆ ಮಾಡಿದ ಅವಮಾನ ಎಂದು ಬಿಂಬಿಸಲು ಬಿಜೆಪಿ ಮುಂದಾಗಿದ್ದು, ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಆರಂಭಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us