ಅತ್ಯಾಚಾರದಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದೆ; ವಿಧಾನಸಭೆಯಲ್ಲೇ ಹೇಳಿಕೆ ನೀಡಿದ ಸಚಿವ​ ರಾಜೇಂದ್ರ ಸಿಂಗ್ ವಜಾ

|

Updated on: Jul 22, 2023 | 11:03 AM

ನನ್ನ ಹೇಳಿಕೆಗೆ ಈಗಲೂ ಬದ್ಧ. ಮಹಿಳಾ ಅತ್ಯಾಚಾರ ಪ್ರಕರಣಗಳಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದೆ. ಲೋಪಗಳನ್ನು ಸರಿಪಡಿಸುವ ಬದಲು ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಹಿಳಾ ದೌರ್ಜನ್ಯಗಳಲ್ಲಿ ರಾಜಸ್ಥಾನ ನಂಬರ್ ಒನ್ ಆಗಿದೆ ಎಂಬುದನ್ನು ಎಲ್ಲಾ ದಾಖಲೆಗಳು ಹೇಳುತ್ತವೆ ಎಂದು ರಾಜೇಂದ್ರ ಸಿಂಗ್ ಗುಢಾ ಪುನರುಚ್ಚರಿಸಿದ್ದಾರೆ.

ಅತ್ಯಾಚಾರದಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದೆ; ವಿಧಾನಸಭೆಯಲ್ಲೇ ಹೇಳಿಕೆ ನೀಡಿದ ಸಚಿವ​ ರಾಜೇಂದ್ರ ಸಿಂಗ್ ವಜಾ
ರಾಜೇಂದ್ರ ಸಿಂಗ್ ಗುಢಾ
Follow us on

ಜೈಪುರ, ಜುಲೈ 22: ಮಹಿಳಾ ಸುರಕ್ಷತೆಯಲ್ಲಿ ನಮ್ಮ ಸರ್ಕಾರ ವಿಫಲವಾಗಿದೆ ಎಂದು ರಾಜಸ್ಥಾನ (Rajasthan) ವಿಧಾನಸಭೆಯಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಧ್ವನಿಯೆತ್ತಿದ್ದ ಸಚಿವ ರಾಜೇಂದ್ರ ಸಿಂಗ್ ಗುಢಾ (Rajendra Singh Gudha) ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿದೆ. ಸರ್ಕಾರದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ನನಗೆ ಸರಿ ಎನಿಸಿದ್ದನ್ನು ಹೇಳಿದ್ದೇನೆ. ಇರುವ ವಿಷಯವನ್ನು ಮಾತನಾಡುವುದು ಅಪರಾಧವಲ್ಲ. ನನಗೆ ಸರಿ ಎನಿಸಿದ್ದನ್ನು ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಸರ್ಕಾರಕ್ಕೆ ಯಾವುದೇ ಬಿಕ್ಕಟ್ಟು ಬಂದಾಗಲೆಲ್ಲಾ, ಯಾವುದೇ ಸಮಸ್ಯೆ ಬಂದಾಗ ನಾವು ಪೂರ್ಣ ಬೆಂಬಲ ನೀಡಿದ ಗಟ್ಟಿಯಾಗಿ ಸರ್ಕಾರದ ಪರ ನಿಂತಿದ್ದೇವೆ. ಸತ್ಯ ಹೇಳಿದ್ದಕ್ಕೆ ನನಗೆ ಶಿಕ್ಷೆಯಾಗಿದೆ ಎಂದು ಗುಢಾ ಕಿಡಿಕಾರಿದ್ದಾರೆ.

ಹೇಳಿಕೆಗೆ ಬದ್ಧ ಎಂದ ರಾಜೇಂದ್ರ ಸಿಂಗ್ ಗುಢಾ

ನನ್ನ ಹೇಳಿಕೆಗೆ ಈಗಲೂ ಬದ್ಧ. ಮಹಿಳಾ ಅತ್ಯಾಚಾರ ಪ್ರಕರಣಗಳಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದೆ. ಲೋಪಗಳನ್ನು ಸರಿಪಡಿಸುವ ಬದಲು ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಹಿಳಾ ದೌರ್ಜನ್ಯಗಳಲ್ಲಿ ರಾಜಸ್ಥಾನ ನಂಬರ್ ಒನ್ ಆಗಿದೆ ಎಂಬುದನ್ನು ಎಲ್ಲಾ ದಾಖಲೆಗಳು ಹೇಳುತ್ತವೆ ಎಂದು ರಾಜೇಂದ್ರ ಸಿಂಗ್ ಗುಢಾ ಪುನರುಚ್ಚರಿಸಿದ್ದಾರೆ.

ಮಣಿಪುರದಲ್ಲಿ ನಡೆದಿದ್ದು ನಾಚಿಕೆಗೇಡಿನ ಘಟನೆಯಾಗಿದ್ದು, ಇದನ್ನು ಖಂಡಿಸಬೇಕು. ಹಾಗೆಂದು ನಮ್ಮಲ್ಲಿ ಏನಾಗುತ್ತಿದೆ ಎಂಬುದನ್ನೂ ನಾವು ಗಮನಿಸಬೇಕು. ನಾಲ್ಕು ತಿಂಗಳ ನಂತರ ನಾವು ಸಾರ್ವಜನಿಕರ ಬಳಿ ಹೋಗುತ್ತೇವೆ. ನಾವು ಅವರನ್ನು ಹೇಗೆ ಎದುರಿಸಬೇಕಾಗುತ್ತದೆ? ವಾಸ್ತವವನ್ನು ಹೇಳಿದ್ದೇನಷ್ಟೆ. ಸತ್ಯ ಹೇಳಿದ್ದಕ್ಕೆ ನನಗೆ ಶಿಕ್ಷೆಯಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಮಣಿಪುರ ಸ್ಥಿತಿ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧ, ವಿಪಕ್ಷ ಪ್ರತಿಭಟನೆ ಬಿಟ್ಟು ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಲಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ವಿಧಾನಸಭೆಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುವಾಗ, ಸ್ತ್ರೀಯರ ಸುರಕ್ಷತೆಯಲ್ಲಿ ನಾವು ವಿಫಲರಾಗಿದ್ದೇವೆ ಎಂದು ಗುಢಾ ಅವರು ಹೇಳಿದ್ದರು. ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವ ರೀತಿಯನ್ನು ನೋಡಿದ ನಂತರ, ಮಣಿಪುರದ ಬದಲಿಗೆ ನಾವು ನಮ್ಮಲ್ಲಿ ಏನಾಗುತ್ತಿದೆ ನೋಡಬೇಕು ಎಂದು ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರನ್ನು ವಜಾಗೊಳಿಸಲಾಯಿತು. ಗುಢಾ ವಜಾ ಬಳಿಕ ರಾಜಸ್ಥಾನದ ರಾಜಕೀಯ ಚಟುವಟಿಕೆ ಕಾವೇರಿದೆ. ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆಯೂ ಇದ್ದು ಕುತೂಹಲ ಮೂಡಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:59 am, Sat, 22 July 23