ಸರ್ಕಾರಿ ಕೆಲಸ ಸಿಕ್ಕ ಕೂಡಲೆ ಗಂಡನಿಗೆ ಕೈ ಕೊಟ್ಟ ಮಹಿಳೆ; ಜಾಣತನದಿಂದ ಹೆಂಡತಿ ಮೇಲೆ ಸೇಡು ತೀರಿಸಿಕೊಂಡ ಪತಿ!

ತನಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಕ್ಕ ಮೇಲೆ ಗಂಡನನ್ನು ಬಿಟ್ಟ ಮಹಿಳೆಯ ವಿರುದ್ಧ ಆಕೆಯ ಗಂಡ ಬಹಳ ಜಾಣತನದಿಂದ ಸೇಡು ತೀರಿಸಿಕೊಂಡಿದ್ದಾನೆ. ತನ್ನ ಹೆಂಡತಿ 15 ಲಕ್ಷ ರೂ. ವಂಚನೆ ಮಾಡಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ ಎಂಬ ವಿಚಾರವನ್ನು ಬಯಲು ಮಾಡಿದ ಆತ ತನ್ನ ಹೆಂಡತಿಯ ಕೆಲಸ ಹೋಗುವಂತೆ ಮಾಡಿದ್ದಾನೆ. ರಾಜಸ್ಥಾನದಲ್ಲಿ ಈ ಘಟನೆ ನಡೆದಿದೆ. ರಾಜಸ್ಥಾನದಲ್ಲಿ ಒಬ್ಬ ರೈಲ್ವೆ ಉದ್ಯೋಗಿಯ ಬದಲು ಪ್ರಾಕ್ಸಿ ಅಭ್ಯರ್ಥಿಯೊಬ್ಬರು ನೇಮಕಾತಿ ಪರೀಕ್ಷೆ ಬರೆದಿದ್ದಾರೆ ಎಂದು ಆಕೆಯ ಪತಿ ಆರೋಪಿಸಿದ ನಂತರ ಆಕೆಯನ್ನು ಅಮಾನತುಗೊಳಿಸಲಾಗಿದೆ. ಅಧಿಕಾರಿಗಳು ವಂಚನೆಯ ತನಿಖೆ ನಡೆಸುತ್ತಿದ್ದಾರೆ. ಸಿಬಿಐ ಆಕೆಯ ಮತ್ತು ಆರೋಪಿ ಪ್ರಾಕ್ಸಿ ಅಭ್ಯರ್ಥಿಯ ವಿರುದ್ಧ ಪ್ರಕರಣ ದಾಖಲಿಸಿದೆ.

ಸರ್ಕಾರಿ ಕೆಲಸ ಸಿಕ್ಕ ಕೂಡಲೆ ಗಂಡನಿಗೆ ಕೈ ಕೊಟ್ಟ ಮಹಿಳೆ; ಜಾಣತನದಿಂದ ಹೆಂಡತಿ ಮೇಲೆ ಸೇಡು ತೀರಿಸಿಕೊಂಡ ಪತಿ!
Sapna Meena Manish Meena

Updated on: Feb 12, 2025 | 6:35 PM

ಕರೌಲಿ: ರಾಜಸ್ಥಾನದ ಕರೌಲಿ ಜಿಲ್ಲೆಯ ವ್ಯಕ್ತಿಯೊಬ್ಬ ಅಕ್ರಮ ಮಾರ್ಗಗಳ ಮೂಲಕ ತನ್ನ ಹೆಂಡತಿಗೆ ಸರ್ಕಾರಿ ಉದ್ಯೋಗ ಪಡೆಯಲು ಸಹಾಯ ಮಾಡಿದ್ದ. ಆದರೆ, ಅದಾದ ನಂತರ ಆತನಿಗೆ ಆತನ ಹೆಂಡತಿ ದ್ರೋಹ ಎಸಗಿದ್ದಾಳೆ. ಪತಿಯ ಆರ್ಥಿಕ ಮತ್ತು ಭಾವನಾತ್ಮಕ ಬೆಂಬಲದಿಂದ ಲಾಭ ಪಡೆದ ಪತ್ನಿ ನಂತರ ಅವನನ್ನು ಬಿಟ್ಟು ಹೋಗಿದ್ದು, ಆತ ನಿರುದ್ಯೋಗಿ ಎಂದು ಹೀಯಾಳಿಸಿದ್ದಾಳೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಆಕೆಯ ಪತಿ ಆಕೆ ಹೇಗೆ ಉದ್ಯೋಗವನ್ನು ದ್ರೋಹದಿಂದ ಗಿಟ್ಟಿಸಿಕೊಂಡಿದ್ದಾಳೆ ಎಂಬುದನ್ನು ಬಯಲು ಮಾಡಿದ್ದಾನೆ.

ಈ ಘಟನೆ ಕರೌಲಿಯ ನಡೋಟಿಯ ರೊನಾಸಿ ಗ್ರಾಮದ ನಿವಾಸಿ ಮನೀಶ್ ಮೀನಾ ಸುತ್ತ ಸುತ್ತುತ್ತದೆ. 2022ರ ಜನವರಿ 22ರಂದು ಸವಾಯಿ ಮಾಧೋಪುರದ ಟಿಗ್ರಿಯಾ ಗ್ರಾಮದ ಸಪ್ನಾ ಮೀನಾ ಅವರನ್ನು ಮನೀಶ್ ವಿವಾಹವಾಗಿದ್ದ. ಮನೀಶ್ ಪ್ರಕಾರ, ಅವರು ತಮ್ಮ ಪತ್ನಿಯ ಶಿಕ್ಷಣಕ್ಕೆ ಬೆಂಬಲ ನೀಡಿದರು. ಕೋಟಾದ ಕೋಚಿಂಗ್ ಸಂಸ್ಥೆಯಲ್ಲಿ ಸೇರಲು ಸಹಾಯ ಮಾಡಲು ಸಾಲವನ್ನು ಸಹ ತೆಗೆದುಕೊಂಡಿದ್ದರು. ಪತ್ನಿಯ ಕೆಲಸಕ್ಕಾಗಿ ಹಣ ಖರ್ಚು ಮಾಡಿರುವುದಾಗಿ ಪತಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಮದುವೆಯಾಗಲು ನಿರಾಕರಿಸುತ್ತಿರುವ ಚೀನಿ ಯುವಕರು, ವಿಚ್ಛೇದನ ಪಡೆಯುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ

ಬಳಿಕ ತನ್ನ ಪತ್ನಿ ರೈಲ್ವೆ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಾಳೆಂದು ಮನೀಶ್ ಹೇಳಿಕೊಂಡಿದ್ದು, ಆಕೆಯ ಚಿಕ್ಕಪ್ಪ ಚೇತನ್‌ರಾಮ್ 15 ಲಕ್ಷ ರೂ.ಗೆ ವಂಚನೆಯ ಮೂಲಕ ಉದ್ಯೋಗ ಪಡೆಯಲು ಸಹಾಯ ಮಾಡಿದ್ದಾರೆ. ಮಧ್ಯವರ್ತಿ, ರೈಲ್ವೆ ಗಾರ್ಡ್ ರಾಜೇಂದ್ರ ಮತ್ತು ಲಕ್ಷ್ಮಿ ಮೀನಾ ಎಂಬ ನಕಲಿ ಅಭ್ಯರ್ಥಿಯ ಸಹಾಯದಿಂದ ಸಪ್ನಾ ನಕಲಿ ದಾಖಲೆಗಳು ಮತ್ತು ಗುರುತಿನ ಮೂಲಕ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮನೀಶ್ ತನ್ನ ಜಮೀನನ್ನು ಅಡವಿಟ್ಟು ಚೇತನ್‌ರಾಮ್ ಮತ್ತು ರಾಜೇಂದ್ರ ಅವರಿಗೆ 15 ಲಕ್ಷ ರೂ. ಲಂಚ ನೀಡಿದ್ದರು ಎಂದು ಅವರೇ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬ್ಯಾಂಕ್​ಗೆ ವಂಚನೆ ಪ್ರಕರಣ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ 3 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್

ಕೆಲಸ ಪಡೆದ ನಂತರ, ಸಪ್ನಾ ಕೋಟಾದ ಸೊಗರಿಯಾ ರೈಲ್ವೆ ನಿಲ್ದಾಣದಲ್ಲಿ ಪಾಯಿಂಟ್‌ಮ್ಯಾನ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಆದರೆ, ಅದಾದ ಕೇವಲ 6 ತಿಂಗಳ ನಂತರ ಆಕೆ ತನ್ನ ಗಂಡ ಮನೀಶ್​ನನ್ನು ನಿರುದ್ಯೋಗಿ ಎಂದು ಹೇಳಿ ಬಿಟ್ಟು ಹೋಗಿದ್ದಾರೆ. ದ್ರೋಹ ಬಗೆದ ಮನೀಶ್ ಈ ಇಡೀ ಘಟನೆಯ ಬಗ್ಗೆ ಪಶ್ಚಿಮ ಮಧ್ಯ ರೈಲ್ವೆ ವಿಜಿಲೆನ್ಸ್ ಇಲಾಖೆ ಮತ್ತು ಕೇಂದ್ರ ತನಿಖಾ ದಳ (ಸಿಬಿಐ)ಗೆ ತಿಳಿಸಿದರು. ಸಪ್ನಾ ಮತ್ತು ಆಪಾದಿತ ಪ್ರಾಕ್ಸಿ ಅಭ್ಯರ್ಥಿಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ತನಿಖೆ ಮುಂದುವರೆದಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us