ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ, 3 ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಊಟದ ಖರ್ಚು ಬರೋಬ್ಬರಿ 27 ಲಕ್ಷ ರೂ.

ರಾಜ್‌ಕೋಟ್‌ನಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ವೇಳೆ, ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರಿಗೆ 3 ದಿನಗಳಲ್ಲಿ 27 ಲಕ್ಷ ರೂ. ಊಟದ ಬಿಲ್ ಬಂದಿದ್ದು ಮಹಾ ಹಗರಣದ ಸಂಶಯ ಹುಟ್ಟುಹಾಕಿದೆ. ದುಬಾರಿ ತಿಂಡಿ, ಚಹಾ, ನಿಂಬೆ ಪಾನಕದ ಭಾರೀ ವೆಚ್ಚದ ಬಗ್ಗೆ ಕಾಂಗ್ರೆಸ್ ತನಿಖೆಗೆ ಒತ್ತಾಯಿಸಿದೆ. ಸ್ಥಾಯಿ ಸಮಿತಿ ಬಿಲ್ ತಡೆಹಿಡಿದಿದ್ದು, ಭ್ರಷ್ಟಾಚಾರದ ಆರೋಪಗಳು ಗಂಭೀರವಾಗಿವೆ.

ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ, 3 ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಊಟದ ಖರ್ಚು ಬರೋಬ್ಬರಿ 27 ಲಕ್ಷ ರೂ.
ಆಹಾರ

Updated on: Jun 26, 2026 | 1:01 PM

ಮುಖ್ಯಾಂಶಗಳು

  • ಕಟ್ಟಡ ತೆರವು ಕಾರ್ಯಾಚರಣೆ, ಮೂರೇ ದಿನಕ್ಕೆ ಅಧಿಕಾರಿಗಳ ಊಟದ ಬಿಲ್ ಇಪ್ಪತ್ತೇಳು ಲಕ್ಷ
  • ಸಾವಿರಾರು ಕಪ್ ಚಹಾ ಹಾಗೂ ದುಬಾರಿ ಕಾಜು ಕಟ್ಲಿ ತಿಂದಿರುವ ಸಿಬ್ಬಂದಿ
  • ಭ್ರಷ್ಟಾಚಾರದ ಶಂಕೆ, ಇನ್‌ವಾಯ್ಸ್ ಬಿಲ್ ಅನ್ನು ತಡೆಹಿಡಿದ ಮುನ್ಸಿಪಲ್ ಕಾರ್ಪೊರೇಷನ್

ರಾಜ್‌ಕೋಟ್, ಜೂನ್ 26: ಮೂರು ದಿನಗಳ ಅಕ್ರಮ ಕಟ್ಟಡಗಳ(Illegal Building) ತೆರವು ಕಾರ್ಯಾಚರಣೆಯೊಂದರಲ್ಲಿ ಕರ್ತವ್ಯದಲ್ಲಿದ್ದ ಸರ್ಕಾರಿ ನೌಕರರು ಮತ್ತು ಪೊಲೀಸ್ ಸಿಬ್ಬಂದಿಯ ಆಹಾರ ಹಾಗೂ ಪಾನೀಯಗಳ ಬಿಲ್ ಕೇಳಿದರೆ ನೀವೇ ಬೆಚ್ಚಿಬೀಳುತ್ತೀರಿ. ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (RMC) ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯಲ್ಲಿ, ಕೇವಲ ಮೂರೇ ದಿನಕ್ಕೆ ಬರೋಬ್ಬರಿ 27.20 ಲಕ್ಷ ರೂಪಾಯಿಗಳ ಉಪಹಾರದ ಬಿಲ್ ಸೃಷ್ಟಿಯಾಗಿದ್ದು, ಮಹಾ ಹಗರಣದ ಸಂಶಯ ಹುಟ್ಟುಹಾಕಿದೆ.

ಮೆನುವಿನಲ್ಲಿತ್ತು ಗೋಡಂಬಿ, ಖರ್ಜೂರ, ಕಾಜು ಕಟ್ಲಿ
ಜಂಗ್ಲೇಶ್ವರ ಪ್ರದೇಶದ 8 ವಲಯಗಳಲ್ಲಿ ಇತ್ತೀಚೆಗೆ ಈ ಧ್ವಂಸ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಸಿಬ್ಬಂದಿಗೆ ಆರ್ಡರ್ ಮಾಡಲಾದ ತಿಂಡಿಗಳ ಬೆಲೆ ಕೇಳಿದರೆ ಭ್ರಷ್ಟಾಚಾರದ ವಾಸನೆ ಎದ್ದುಕಾಣುತ್ತದೆ.

ದುಬಾರಿ ಸ್ವೀಟ್ಸ್: ಕೇವಲ 150 ತಿಂಡಿ ತಟ್ಟೆಗಳಿಗೆ ಬರೋಬ್ಬರಿ 34,650 ರೂ. ಬಿಲ್ ಮಾಡಲಾಗಿದೆ. ಇನ್‌ವಾಯ್ಸ್‌ನಲ್ಲಿ ಕೇವಲ ಒಂದು ‘ಕಾಜು ಕಟ್ಲಿ’ಗೆ ತಲಾ 231ರೂ. ದರ ನಿಗದಿಪಡಿಸಲಾಗಿದೆ.

ರೆಸ್ಟೋರೆಂಟ್ ಬಿಲ್: ಕಾರ್ಯಾಚರಣೆ ವೇಳೆ ನೌಕರರು ಗೋಡಂಬಿ, ಖರ್ಜೂರ, ಸಮೋಸಾ, ಜಿಲೇಬಿ ಮತ್ತು ಗಂಥಿಯಾದಂತಹ ದುಬಾರಿ ಸಿಹಿತಿಂಡಿಗಳನ್ನು ಸವಿದಿದ್ದಾರೆ. ಇದರಲ್ಲಿ ಕೇವಲ ಒಂದು ಪ್ರಸಿದ್ಧ ರೆಸ್ಟೋರೆಂಟ್‌ನ ಬಿಲ್ ಮಾತ್ರ ಸುಮಾರು 20 ಲಕ್ಷ ರೂಪಾಯಿ ಬಂದಿದೆ.

ಮತ್ತಷ್ಟು ಓದಿ: ಜೆಸಿಬಿಯಿಂದ ಕಟ್ಟಡಗಳ ನೆಲಸಮ: ಕರಾವಳಿಯಲ್ಲಿ ಬುಲ್ಡೋಜರ್ ಬಾಬಾ ಆದ ಕಾಂಗ್ರೆಸ್ ಶಾಸಕ

21 ಸಾವಿರ ಕಪ್ ಚಹಾ, 4 ಸಾವಿರ ಲೆಮನ್ ಜ್ಯೂಸ್
ಬಿಸಿಲಿನಲ್ಲಿ ಕೆಲಸ ಮಾಡಿದ ನೌಕರರು ಹಾಗೂ ಪೊಲೀಸರು ಕೇವಲ 3 ದಿನಗಳಲ್ಲಿ ‘ಆರಾಧನಾ ಟೀ ಸ್ಟಾಲ್’ ನಿಂದ ಬರೋಬ್ಬರಿ 21,000 ಕಪ್ ಚಹಾ-ಕಾಫಿ ಮತ್ತು 4,000 ಕ್ಕೂ ಹೆಚ್ಚು ಬಾಟಲಿ ನಿಂಬೆ ಪಾನಕ ಹಾಗೂ ಬಿಸ್ಕತ್ತುಗಳನ್ನು ತಿಂದಿದ್ದಾರೆ ಎಂದು ಬಿಲ್‌ನಲ್ಲಿ ತೋರಿಸಲಾಗಿದೆ. ಈ ಚಹಾ ಮತ್ತು ಕಾಫಿಯ ಒಟ್ಟು ವೆಚ್ಚವೇ ಸುಮಾರು 6 ಲಕ್ಷ ರೂಪಾಯಿಗಳಾಗಿದೆ.

ಬಿಲ್ ತಡೆಹಿಡಿದ ಸ್ಥಾಯಿ ಸಮಿತಿ, ತನಿಖೆಗೆ ಆದೇಶ
ಮಾಜಿ ಪದಾಧಿಕಾರಿಗಳ ತಂಡವು ಮಂಜೂರಾತಿಗಾಗಿ ಸಲ್ಲಿಸಿದ ಈ 27.20 ರೂ. ಲಕ್ಷದ ಬೃಹತ್ ಇನ್‌ವಾಯ್ಸ್ ನಾಗರಿಕ ಆಡಳಿತದಲ್ಲಿ ತಲ್ಲಣ ಸೃಷ್ಟಿಸಿದೆ. ಇದರಲ್ಲಿ ಮೇಲ್ನೋಟಕ್ಕೇ ಭಾರಿ ವ್ಯತ್ಯಾಸಗಳು ಮತ್ತು ಅಕ್ರಮಗಳು ಕಂಡುಬಂದ ಹಿನ್ನೆಲೆಯಲ್ಲಿ, ರಾಜ್‌ಕೋಟ್ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಈ ಪ್ರಸ್ತಾವನೆಯನ್ನು ತಕ್ಷಣವೇ ತಡೆಹಿಡಿದಿದ್ದಾರೆ. ಈ ವೆಚ್ಚಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮತ್ತು ಬಿಲ್ಲಿಂಗ್‌ನ ನಿಖರತೆಯ ಬಗ್ಗೆ ಅಧಿಕೃತ ವಿವರಣೆ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಇದು ಹಗಲು ದರೋಡೆ ಎಂದು ಕಾಂಗ್ರೆಸ್ ಆಕ್ರೋಶ
ಮತ್ತೊಂದೆಡೆ, ಈ ಬೃಹತ್ ಆಹಾರ ಮಸೂದೆಯ ಹಿಂದೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿ ಭಾರಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಕೆಡವುವಿಕೆಯ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ವಿರೋಧ ಪಕ್ಷಗಳು ತೀವ್ರ ಆಕ್ರೋಶ ಹೊರಹಾಕಿದ್ದು, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us