ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಬಗ್ಗೆ ಪ್ರಧಾನಿ ಮಾತಾಡಲೇ ಇಲ್ಲ: ಮಲ್ಲಿಕಾರ್ಜುನ ಖರ್ಗೆ ಅಸಮಧಾನ

ಪ್ರಧಾನಿ ನರೇಂದ್ರ ಮೋದಿ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ರೈತರನ್ನು ಒಡೆದು ಆಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಬಗ್ಗೆ ಪ್ರಧಾನಿ ಮಾತಾಡಲೇ ಇಲ್ಲ: ಮಲ್ಲಿಕಾರ್ಜುನ ಖರ್ಗೆ ಅಸಮಧಾನ
ಮಲ್ಲಿಕಾರ್ಜುನ ಖರ್ಗೆ
Edited By:

Updated on: Apr 06, 2022 | 8:10 PM

ದೆಹಲಿ: ನೂತನ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಿಂಪಡೆಯುವ ನಿರೀಕ್ಷೆ ಇತ್ತು. ಆದರೆ, ಕಾಯ್ದೆ ಹಿಂಪಡೆಯುವ ಬಗ್ಗೆ ಪ್ರಧಾನಿ ಮಾತನಾಡಲೇ ಇಲ್ಲ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ವಿಚಾರವಾಗಿ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ರೈತರೊಂದಿಗೆ ಚರ್ಚೆಗೆ ಸಿದ್ಧ ಎನ್ನುತ್ತಿರುವ ಸರ್ಕಾರ ವಾಸ್ತವದಲ್ಲಿ ಏನೂ ಚರ್ಚಿಸುತ್ತಿಲ್ಲ. ಕೃಷಿ ತಿದ್ದುಪಡಿ ಕಾಯ್ದೆಗಳಿಂದ ರೈತರಿಗೆ ತೊಂದರೆ ಇದೆ. ರೈತರ ಜತೆ ಕೇಂದ್ರ ಸರ್ಕಾರ 12 ಸಭೆಗಳನ್ನು ಮಾಡಿದೆ. ಆದರೆ, ಇದುವರೆಗೆ ಒಂದು ಸಭೆ ಕೂಡ ಸಫಲವಾಗಿಲ್ಲ ಎಂದು ಖರ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇಂದು ತಮ್ಮ ಭಾಷಣದಲ್ಲಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಬಗ್ಗೆ ಹೇಳಿಕೆ ನೀಡುವ ನಿರೀಕ್ಷೆ ಇತ್ತು. 75 ದಿನದಿಂದ ರಸ್ತೆ ಮೇಲಿರುವ ರೈತರಿಗೂ ಈ ನಿರೀಕ್ಷೆ ಇತ್ತು. ಸದನದ ಮೂಲಕ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವ ಆಶ್ವಾಸನೆಯನ್ನು ಮೋದಿ ನೀಡಬೇಕಿತ್ತು. ಆದರೆ ಪ್ರಧಾನಿ ದುರಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ಮೋದಿ ಭಾಷಣವನ್ನು ಖರ್ಗೆ ಖಂಡಿಸಿದ್ದಾರೆ.

ಪ್ರಧಾನಿ ರೈತರನ್ನು ಒಡೆದು ಆಳುವ ಪ್ರಯತ್ನ ಮಾಡುತ್ತಿದ್ದಾರೆ. ಇವರು ಯಾವುದೇ ಸಭೆಗಳನ್ನು ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಕೊರೊನಾ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಆಸ್ಟ್ರೇಲಿಯಾದ ಖಾಸಗಿ ಸಂಸ್ಥೆಯೊಂದು ಮಾಡಿರುವ ಸರ್ವೆಯಲ್ಲಿ, ಏಷ್ಯಾದಲ್ಲಿಯೇ ಭಾರತದಲ್ಲಿ ಕೆಟ್ಟದಾಗಿ ಪರಿಸ್ಥಿತಿ ನಿಭಾಯಿಸಲಾಗಿದೆ ಎಂದು ಹೇಳಲಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಬಹಳಷ್ಟು ಹಿಂದಿದೆ. ಈಗ ಮೋದಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದು ಖರ್ಗೆ ಮೋದಿ ನಡೆಯ ವಿರುದ್ಧ ಹರಿಹಾಯ್ದಿದ್ದಾರೆ.

ಚೀನಾದವರು ಹಳ್ಳಿ ನಿರ್ಮಿಸಿದ್ದಾರೆ, ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ. ಚೀನಾ ಬಗ್ಗೆ ಪ್ರಧಾನಿ ಏನೂ ಮಾತನಾಡಿಲ್ಲ ಎಂದು ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

MSP ಇತ್ತು, MSP ಇದೆ ಮತ್ತು MSP ಮುಂದೆಯೂ ಇರಲಿದೆ: ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ

Published On - 7:53 pm, Mon, 8 February 21