Ratan Tata: ರತನ್ ಟಾಟಾ ಜೀವನ ಯಾನ; ಅವಮಾನಿಸಿದ್ದ ಕಂಪನಿಯನ್ನೇ ಉಳಿಸಿ ಮನಸು ಗೆದ್ದಿದ್ದ ಟಾಟಾ!

|

Updated on: Oct 10, 2024 | 7:03 AM

ರತನ್ ಟಾಟಾ ಬಯಸಿದರೆ ಭಾರತದ ನಂಬರ್‌ ಒನ್‌ ಶ್ರೀಮಂತ ಸ್ಥಾನದಲ್ಲಿ ಅಲುಗಾಡದೇ ಕುಳಿತಿರುತ್ತಿದ್ದರು. ಆದರೆ, ಅವರ ಉದ್ಯಮದ ಲಾಭಾಂಶದ ಬಹುತೇಕ ಪಾಲು ಸಮಾಜ ಸುಧಾರಣೆಗೆ ಮೀಸಲು. ರಾಷ್ಟ್ರೀಯವಾದಿ ಉದ್ಯಮಿ ರತನ್‌ ಟಾಟಾ ದೇಶದ ಅಭಿವೃದ್ಧಿಗೆ ಅನುಕೂಲವಾಗುವ ಕೆಲಸಗಳಿಗೆ ಸದಾ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿತ್ವ. ಅಷ್ಟರಮಟ್ಟಿಗೆ ಭಾರತದಲ್ಲಿ ಬೇರೂರಿರುವ ಉದ್ಯಮ. ರತನ್‌ ಟಾಟಾ ಹೃದಯವಂತಿಕೆಗೆ ಹೆಸರಾಗಿದ್ದರೂ, ಟಾಟಾ ಗ್ರೂಪ್ ಅನ್ನು ವಿಶ್ವದೆಲ್ಲೆಡೆ ವ್ಯಾಪಿಸುವಂತೆ ಮಾಡಿದ ಛಾತಿ ಮಾತ್ರ ರಣರೋಚಕ. ಅವರ ಬದುಕಿನ ಹಿನ್ನೋಟ ಇಲ್ಲಿದೆ.

Ratan Tata: ರತನ್ ಟಾಟಾ ಜೀವನ ಯಾನ; ಅವಮಾನಿಸಿದ್ದ ಕಂಪನಿಯನ್ನೇ ಉಳಿಸಿ ಮನಸು ಗೆದ್ದಿದ್ದ ಟಾಟಾ!
ರತನ್ ಟಾಟಾ
Image Credit source: Getty Images
Follow us on

‘‘ಅವಕಾಶಗಳು ನಿಮ್ಮ ಬಳಿಗೆ ಬರಲಿ ಎಂದು ಕಾಯಬೇಡಿ, ನಿಮ್ಮ ಅವಕಾಶಗಳನ್ನ ನೀವೇ ಸೃಷ್ಟಿಸಿಕೊಳ್ಳಿ’’ ಟಾಟಾ ಗ್ರೂಪ್‌ ಮುಖ್ಯಸ್ಥ ರತನ್ ಟಾಟಾ ಹೇಳಿದ್ದ ಮಾತಿದು. ರತನ್‌ ಟಾಟಾ ಎಂತಹ ಛಲವಾದಿ ಅಂತಾ ತಿಳಿಯಲು ಅವರ ಬಾಯಲ್ಲೇ ಬಂದ ಇದೊಂದು ಮಾತು ಸಾಕು. 1937ರ ಡಿಸೆಂಬರ್‌ 28 ರಂದು ಮುಂಬೈನಲ್ಲಿ ನೇವಲ್‌ ಟಾಟಾ ಮತ್ತು ಸೂನಿ ಪುತ್ರನಾಗಿ, ಟಾಟಾ ಸಮೂಹದ ಸ್ಥಾಪಕ ಜೆಮ್‌ ಶೆಡ್‌ ಜೀ ಟಾಟಾ ಮೊಮ್ಮಗನಾಗಿ ರತನ್ ಟಾಟಾ ಜನಿಸಿದರು. 10ನೇ ವಯಸ್ಸಿನಲ್ಲಿ (1948 ರಲ್ಲಿ) ತಂದೆ ತಾಯಿ ವಿಚ್ಛೇದನ ಪಡೆದ ಕಾರಣ ರತನ್‌ ಅಜ್ಜಿ ನವಜಬಾಯಿ ಆಶ್ರಯದಲ್ಲೇ ಬೆಳೆದರು.

ಮುಂಬೈನಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ, ನಂತರ ಅಮೆರಿಕದಲ್ಲಿ ವಾಸ

ಮುಂಬೈ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದ ರತನ್‌ ಟಾಟಾ, ನಂತರ ಅಮೆರಿಕಕ್ಕೆ ತೆರಳಬೇಕಾಗಿ ಬಂತು. ನ್ಯೂಯಾರ್ಕ್ ನಗರದ ರಿವರ್ಡೇಲ್ ಕಂಟ್ರಿ ಸ್ಕೂಲ್​​ನಲ್ಲಿ ತಮ್ಮ 12ನೇ ತರಗತಿವರೆಗಿನ ವ್ಯಾಸಂಗ ಪೂರ್ಣಗೊಳಿಸಿ, ಕಾರ್ನೆಲ್ ವಿವಿಯಿಂದ ಆರ್ಕಿಟೆಕ್ಟ್‌ ಇಂಜಿನಿಯರ್‌ ಪದವಿ ಪಡೆದುಕೊಂಡರು. 1955ರಿಂದ 1962ರವರೆಗೆ ಅಮೆರಿಕದಲ್ಲೇ ಇದ್ದ ರತನ್‌ ಟಾಟಾ, ಪದವಿ ಬಳಿಕ 1959ರಲ್ಲಿ ಅಮೆರಿಕದಲ್ಲೇ ಒಂದು ಕೆಲಸಕ್ಕೆ ಸೇರಿದರು. 2 ವರ್ಷ ಅಮೆರಿಕದಲ್ಲಿ ಕೆಲಸ ಮಾಡಿದರು. ಮೊದಲ ಬಾರಿಗೆ ತಾವು ದುಡಿದ ದುಡ್ಡಿನಲ್ಲೇ ಸ್ವಂತದ್ದೋಂದು ಕಾರು ಖರೀದಿಸಿದರು. ಆ ಸಮಯದಲ್ಲೇ ಟಾಟಾಗೆ ಅಲ್ಲಿನ ಯುವತಿಯೊಂದಿಗೆ ಪ್ರೇಮಾಂಕುರವಾಗಿತ್ತು. ಸಂದರ್ಶನ ಒಂದರಲ್ಲಿ ಮಾತಾಡಿದ್ದ ರತನ್‌ ಟಾಟಾ, ನನ್ನ ಜೀವನದಲ್ಲಿ ಆ 2 ವರ್ಷಗಳು ತುಂಬ ಕಲರ್‌ಫುಲ್‌ ಆಗಿದ್ದವು ಎಂದಿದ್ದರು.

ಮತ್ತೆ ಭಾರತಕ್ಕೆ ಟಾಟಾ ಪಯಣ

1962ರಲ್ಲಿ ಅಮೆರಿಕದಿಂದ ತಮ್ಮ ಅಜ್ಜಿಯ ಅನಾರೋಗ್ಯದ ಕಾರಣ ಭಾರತಕ್ಕೆ ವಾಪಸ್‌ ಬರಬೇಕಾಯಿತು. ಹಾಗೇ ಬಂದವರು ಐಬಿಎಂನಲ್ಲಿ ಕೆಲಸಕ್ಕೆ ಸೇರಿದರು. ರತನ್‌ ಟಾಟಾ ಕೆಲಸಕ್ಕೆ ಸೇರಿದ ವಿಚಾರ ಗೊತ್ತಾಗಿ ಟಾಟಾ ಗ್ರೂಪ್‌ನ ಚೇರ್ಮನ್‌ ಆಗಿದ್ದ ಜೆಆರ್‌ಡಿ ಟಾಟಾ, ಕೆಲಸ ಬಿಟ್ಟು ಟಾಟಾ ಗ್ರೂಪ್‌ಗೆ ಜಾಯಿನ್‌ ಆಗುವಂತೆ ಸೂಚಿಸುತ್ತಾರೆ. ಅದು ಕೂಡ ರೆಸ್ಯೂಮ್‌ ಟೈಪ್‌ ಮಾಡಿ ಜತೆಯಲ್ಲಿ ತರಲು ಹೇಳಿದ್ದರಂತೆ! ಬಳಿಕ ಐಬಿಎಂ ಸೇರಿದ ಕೇವಲ 15 ದಿನಗಳಲ್ಲೇ ಆ ಕಂಪನಿಯನ್ನು ಬಿಟ್ಟು ರತನ್‌, ಟಾಟಾ ಕಂಪನಿಗೆ ಸೇರಿದರು.

ಶಾಪ್‌ ಫ್ಲೋರ್‌ನಲ್ಲೇ ಕೆಲಸ ಆರಂಭ

ರತನ್‌ ಟಾಟಾ ಮೊದಲಿಗೆ TELCO ಅಂದರೆ TATA ENGINEERING AND LOCOMOTIVE COMPANY LIMITED, ಈಗಿನ TATA MOTORS ಕಂಪನಿಗೆ ಸೇರಿದರು. ಅಲ್ಲಿ 6 ತಿಂಗಳು ಕೆಲಸ ಮಾಡಿದ ಬಳಿಕ TISCO ಅಂದರೆ ಈಗಿನ TATA STEELಗೆ ಸೇರಿದರು. ರತನ್‌ ಟಾಟಾ ಆ ಯಾವ ಹಮ್ಮು ಬಿಮ್ಮು ಇಲ್ಲದೇ ಟೆಲ್ಕೋ ಮತ್ತು ಟಾಟಾ ಸ್ಟೀಲ್‌ ಕಂಪನಿಗಳಲ್ಲಿ ಅವರು ಶಾಪ್‌ ಫ್ಲೋರ್‌ನಲ್ಲೇ ಕೆಲಸ ಆರಂಭಿಸಿದರು. ಎಲ್ಲಾ ಕಾರ್ಮಿಕರೊಂದಿಗೆ ತಾವೂ ಕೆಲಸಕ್ಕೆ ತೆರಳುತ್ತಿದ್ದರು. ಕ್ಯೂನಲ್ಲಿ ನಿಂತು ಎಲ್ಲಾ ಕಾರ್ಮಿಕರಂತೆ ಊಟ ಮಾಡುತ್ತಿದ್ದರು. ಇತರೆ ಕೆಲಸಗಾರರಂತೆ ಹಾಸ್ಟೆಲ್‌ನಲ್ಲೀ ಉಳಿದು ತಮ್ಮ ಬಟ್ಟೆಗಳನ್ನ ತಾವೇ ತೊಳೆದುಕೊಳ್ಳುತ್ತಿದ್ದರು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದ ರತನ್‌ ಟಾಟಾ ಅವರಿಗೆ 1971ರಲ್ಲಿ NELCO (National Radio & Electronics Company) ಜವಾಬ್ದಾರಿಯನ್ನು ವಹಿಸಲಾಯಿತು. ಇದರ ಮಧ್ಯೆಯೇ ಹಾರ್ವರ್ಡ್​ ವಿವಿಯಿಂದ ಅಡ್ವಾನ್ಸ್​ ಮ್ಯಾನೇಜ್ಮೆಂಟ್​ ಪ್ರೊಗ್ರ್ಯಾಮ್ ಮುಗಿಸಿದರು. ಮುಂದೆ 1974ರಲ್ಲಿ ಟಾಟಾ ಸನ್ಸ್​ ಡೈರೆಕ್ಟರ್ ಆಗಿ ನೇಮಕಗೊಂಡರು.

ಇದನ್ನೂ ಓದಿ: ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿ, ಪದ್ಮವಿಭೂಷಣ ರತನ್ ಟಾಟಾ ನಿಧನ

ಹೀಗೆ ಟಾಟಾ ಇಂಡಸ್ಟ್ರೀಸ್​ನ ವಿವಿಧ ಘಟಕಗಳಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಬಳಿಕ 1991ರಲ್ಲಿ ರತನ್‌ ಅವರು ಟಾಟಾ ಗ್ರೂಪ್‌ನ ಚೇರ್ಮನ್‌ ಆಗಿ ಆಯ್ಕೆಯಾದರು. 1991ರಲ್ಲಿ ರತನ್‌ ಟಾಟಾ ಅವರ ಕೈಗೆ ಹಸ್ತಾಂತರವಾದಾಗ ಆ ಕಂಪನಿಯ ಆಸ್ತಿ ಒಟ್ಟು 10 ಸಾವಿರ ಕೋಟಿ ರೂಪಾಯಿಯಷ್ಟು ಮೌಲ್ಯ ಹೊಂದಿತ್ತು. ಆಗಷ್ಟೇ ಉದಾರೀಕರಣಕ್ಕೆ ಭಾರತದ ಉದ್ಯಮ ವಲಯದ ಹೆಬ್ಬಾಗಿಲು ಕೂಡ ತೆರೆದುಕೊಂಡಿತ್ತು. ಅಂತಹ ಹೊತ್ತಲ್ಲಿ ಟಾಟಾ ಕಂಪನಿಯ ಜವಾಬ್ದಾರಿ ಹೊತ್ತ ರತನ್ ಟಾಟಾ ಮುಂದಿನ 21 ವರ್ಷ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರು. 1991ರಿಂದ 2000ರವರೆಗೆ ರತನ್ ಟಾಟಾ ಉಸ್ತುವಾರಿಯಲ್ಲಿ ಟಾಟಾ ಸಮೂಹ ಜಾಗತಿಕವಾಗಿ ಬೆಳವಣಿಗೆಯಲ್ಲಿ ಭಾರಿ ವೇಗ ಪಡೆದುಕೊಂಡಿತು.

ಅವಮಾನಿಸಿದ್ದ ಕಂಪನಿಯನ್ನೇ ಉಳಿಸಿ ಮನಸು ‘ಗೆದ್ದ’ ಟಾಟಾ!

1998ರಲ್ಲಿ ಟಾಟಾ ಮೋಟಾರ್ಸ್‌ ‘ಟಾಟಾ ಇಂಡಿಕಾ’ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇದು ರತನ್ ಟಾಟಾ ಅವರ ಕನಸಿನ ಯೋಜನೆಯಾಗಿತ್ತು. ಆದರೆ, ಕಾರು ಸರಿಯಾಗಿ ಮಾರಾಟವಾಗದೆ ಸಂಸ್ಥೆ ನಷ್ಟದಲ್ಲಿತ್ತು. ಇದೇ ಕಂಪನಿಯನ್ನ ಮಾರಲು ಪ್ರಸಿದ್ಧ ಫೋರ್ಡ್‌ ಕಂಪನಿ ಮೊರೆ ಹೋಗಿದ್ದರು. ಆದರೆ, ಕಾರಿನ ಸಹವಾಸ ನಿಮಗ್ಯಾಕೆ ಬೇಕಿತ್ತು ಅಂತಾ ಅವಮಾನಿಸಿದ್ದ ಕಂಪನಿ, ಖರೀದಿಸೋದಾಗಿ ಹೇಳಿ ಮತ್ತೆ ಇತ್ತ ತಿರುಗಿಯೇ ನೋಡಿರಲಿಲ್ಲವಂತೆ. ಇದೇ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ್ದ ರತನ್ ಟಾಟಾ, ಇಂಡಿಕಾ ಕಾರು ಮತ್ತು ಟಾಟಾ ಮೋಟರ್ಸ್‌ ಕಂಪನಿಯನ್ನ ಲಾಭದ ಉತ್ತುಂಗಕ್ಕೆ ತಂದು ನಿಲ್ಲಿಸಿದರು. ಎಷ್ಟರಮಟ್ಟಿಗೆ ಅಂದ್ರೆ, 2008 ರಲ್ಲಿ ದಿವಾಳಿಯಾಗಿದ್ದ ಫೋರ್ಡ್‌ ಗ್ರೂಪ್‌ನ ಜಾಗ್ವಾರ್‌ ಲ್ಯಾಂಡ್‌ ರೋವರ್‌ ಕಂಪನಿಯನ್ನ ಖರೀದಿಸಿದರು. ಫೋರ್ಡ್‌ ಕಂಪನಿ ರತನ್‌ ಟಾಟಾ ಅವರಿಗೆ ‘‘ನಮ್ಮ ಮಾನ ಉಳಿಸಿದ್ರಿ’’ ಅಂತಾ ಧನ್ಯವಾದ ಅರ್ಪಿಸಿತ್ತು. ಈ ಕಥೆಯನ್ನ ಭಾರತದ ಉದ್ಯಮ ವಲಯದಲ್ಲಿ ಹಲವು ಉದ್ಯಮಿಗಳು ಸ್ಫೂರ್ತಿಯಂತೆ ಆಗಾಗ ನೆನಪಿಸಿಕೊಳ್ಳುತ್ತಿರುತ್ತಾರೆ.

ಮಧ್ಯಮವರ್ಗದ ಕಾರು ಕನಸು ನನಸು ಮಾಡಿದ ಟಾಟಾ

ಕೇವಲ ಶ್ರೀಮಂತ ಮತ್ತು ಮೇಲ್ಮಧ್ಯಮ ವರ್ಗಕ್ಕೆ ಸೀಮಿತವಾಗಿದ್ದ ಕಾರುಗಳು ಮಧ್ಯಮವರ್ಗಕ್ಕೂ ಸಿಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ರತನ್‌ ಟಾಟಾ ಆರಂಭಿಸಿದ್ದೇ ಟಾಟಾ ನ್ಯಾನೋ ಕಾರು. ಒಂದು ಲಕ್ಷದ ಕಾರು ಅಂತಲೇ ಹೆಸರುವಾಸಿಯಾದ ನ್ಯಾನೋ ಕಾರು ಮಾರುಕಟ್ಟೆಗೆ ಬರ್ತಿದ್ದಂತೆ ಮಧ್ಯಮ ವರ್ಗ ಮುಗಿಬಿದ್ದು ಖರೀದಿಸಿತ್ತು. ಈಗಲೂ ಟಾಟಾ ಕಂಪನಿಯ ಕಾರುಗಳು ಗುಣಮಟ್ಟದಿಂದಾಗಿಯೇ ಮನೆ ಮಾತಾಗಿದೆ.

ಇದನ್ನೂ ಓದಿ: ರತನ್ ಟಾಟಾ ಸರಳತೆಗೆ ಕನ್ನಡಿಯಾಯ್ತು ಅಂತಿಮ ದಿನಗಳ ಕಳೆದ ನಿವಾಸ!

2012ರಲ್ಲಿ ಟಾಟಾ ಸನ್ಸ್‌ನಿಂದ ಹೊರಬಂದಿದ್ದ ರತನ್‌ ಟಾಟಾ ಯುವ ಸಮೂಹದ ಸ್ಟಾರ್ಟಪ್‌ಗಳಿಗೆ ಹೂಡಿಕೆ ಮಾಡಲು ಶುರು ಮಾಡಿದ್ದರು. ಇದೇ ಟಾಟಾ ನೆರಳಲ್ಲೇ ಪೇಟಿಎಂ, ಓಲಾ ಎಲೆಕ್ಟ್ರಿಕ್, ಅರ್ಬನ್ ಕಂಪನಿ ಹೀಗೆ, ಹತ್ತು ಹಲವು ಸ್ಟಾರ್ಟಪ್‌ ಕಂಪನಿಗಳಿಗೆ ಹೂಡಿಕೆ ಮಾಡಿದ್ದರು.

ಏರ್‌ ಇಂಡಿಯಾ ಸೇರಿದಂತೆ ಹಲವು ಸಂಸ್ಥೆಗಳ ಒಡೆತನ

ಜೆಆರ್‌ಡಿ ಟಾಟಾ ಸ್ಥಾಪಿಸಿದ್ದ ಏರ್‌ ಇಂಡಿಯಾ ಕಂಪನಿ ಬಳಿಕ 1953ರಿಂದ ಭಾರತ ಸರ್ಕಾರದ ಅಧೀನದಲ್ಲಿತ್ತು. 2022ರಲ್ಲಿ 18 ಸಾವಿರ ಕೋಟಿ ಮೊತ್ತದ ಡೀಲ್‌ನಲ್ಲಿ ಏರ್‌ ಇಂಡಿಯಾ ಕಂಪನಿಯನ್ನ ಟಾಟಾ ಗ್ರೂಪ್‌ ಮರಳಿ ಖರೀದಿಸಿತ್ತು. ಟೆಟ್ಲಿ ಟೀ, ಬಿಗ್‌ ಬ್ಯಾಸ್ಕೆಟ್, ಸ್ಟಾರ್‌ ಬಕ್ಸ್‌, ಹೀಗೆ ಒಂದಾ ಎರಡಾ ನೂರಾರು ಕಂಪನಿಗಳನ್ನ ಖರೀದಿಸಿ, ಕೋಟ್ಯಂತರ ನೌಕರರ ಜೀವನಕ್ಕೆ ಆಧಾರ ಸ್ತಂಭವಾಗಿದ್ದರು. ಈಗ ಇಂತಹ ದೈತ್ಯ ಉದ್ಯಮಿಯನ್ನ ಕಳೆದುಕೊಂಡು ಟಾಟಾ ಗ್ರೂಪ್‌ ಅನಾಥವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ