Reasi Terror Attack: ರಿಯಾಸಿಯಲ್ಲಿ ಉಗ್ರರ ದಾಳಿ; ಜಮ್ಮು ಕಾಶ್ಮೀರದ ಪೊಲೀಸರಿಂದ ಮೊದಲ ಆರೋಪಿಯ ಬಂಧನ

|

Updated on: Jun 19, 2024 | 5:32 PM

ಕೆಲವು ದಿನಗಳ ಹಿಂದೆ ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ ಉಗ್ರರ ಗುಂಡಿನ ದಾಳಿಯಿಂದ ಚಾಲಕನ ನಿಯಂತ್ರಣ ತಪ್ಪಿ ಭಕ್ತಾದಿಗಳಿದ್ದ ಬಸ್ ಕಣಿವೆಗೆ ಬಿದ್ದಿತ್ತು. ಈ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮೊದಲ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಹಕೀಮ್ ಭಯೋತ್ಪಾದಕರಿಗೆ ಲಾಜಿಸ್ಟಿಕ್ಸ್ ಒದಗಿಸಿದ್ದ ಎನ್ನಲಾಗಿದೆ.

Reasi Terror Attack: ರಿಯಾಸಿಯಲ್ಲಿ ಉಗ್ರರ ದಾಳಿ; ಜಮ್ಮು ಕಾಶ್ಮೀರದ ಪೊಲೀಸರಿಂದ ಮೊದಲ ಆರೋಪಿಯ ಬಂಧನ
ರಿಯಾಸಿಯಲ್ಲಿ ಉಗ್ರರ ದಾಳಿ
Follow us on

ಶ್ರೀನಗರ: ರಿಯಾಸಿ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ (Reasi Terror Attack Case) ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಇಂದು ಮೊದಲ ಆರೋಪಿಯ ಬಂಧನ ಮಾಡಿದ್ದಾರೆ. “ರಿಯಾಸಿ ಭಯೋತ್ಪಾದನಾ ದಾಳಿಯಲ್ಲಿ ಔಪಚಾರಿಕವಾಗಿ ಒಬ್ಬನನ್ನು ಬಂಧಿಸಲಾಗಿದೆ. ಅವನು ಈ ದಾಳಿಯ ಮಾಸ್ಟರ್ ಮೈಂಡ್ ಅಲ್ಲ. ಆದರೆ, ಈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ” ಎಂದು ರಿಯಾಸಿಯ ಹಿರಿಯ ಪೊಲೀಸ್ ಅಧೀಕ್ಷಕ ಮೋಹಿತ್ ಶರ್ಮಾ ಹೇಳಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ ಹಕೀಮ್ ದಿನ್ ರಾಜೌರಿ ನಿವಾಸಿಯಾಗಿದ್ದು, ಈ ದಾಳಿಗೆ ಭಯೋತ್ಪಾದಕರಿಗೆ ಲಾಜಿಸ್ಟಿಕ್ಸ್ ಒದಗಿಸಿರುವ ಶಂಕೆ ಇದೆ.

ಜೂನ್ 9ರಂದು ಪೌನಿ ಪ್ರದೇಶದ ತೇರಿಯಾತ್ ಗ್ರಾಮದಲ್ಲಿ ಶಿವ ಖೋರಿ ಗುಹೆ ದೇಗುಲದಿಂದ ರಿಯಾಸಿ ಜಿಲ್ಲೆಯ ಕತ್ರಾಕ್ಕೆ ಯಾತ್ರಾರ್ಥಿಗಳನ್ನು ಸಾಗಿಸುತ್ತಿದ್ದ ಬಸ್ಸೊಂದು ಭಯೋತ್ಪಾದಕ ದಾಳಿಗೆ ಒಳಗಾದ ನಂತರ 9 ಜನರು ಸಾವನ್ನಪ್ಪಿದ್ದರು ಮತ್ತು 33 ಜನರು ಗಾಯಗೊಂಡಿದ್ದರು.

ಇದನ್ನೂ ಓದಿ: Jammu and Kashmir Terrorist Attack: ಜಮ್ಮುವಿನಲ್ಲಿ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ಉಗ್ರರಿಂದ ಗುಂಡಿನ ದಾಳಿ; 10 ಮಂದಿ ಸಾವು

ಜೂನ್ 17ರಂದು ಗೃಹ ಸಚಿವಾಲಯ (MHA) ಈ ಭಯೋತ್ಪಾದನಾ ದಾಳಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಹಸ್ತಾಂತರಿಸಿತು. ಭಯೋತ್ಪಾದನೆ ವಿರುದ್ಧ ಕಾಶ್ಮೀರ ಕಣಿವೆಯಲ್ಲಿ ಸಾಧಿಸಿದ ಯಶಸ್ಸನ್ನು ಜಮ್ಮು ಪ್ರದೇಶದಲ್ಲಿ ಪುನರಾವರ್ತಿಸುವಂತೆ ಭದ್ರತಾ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: Crime News: ಕುಕ್ಕರ್‌ನಿಂದ ಹೆಂಡತಿಗೆ ಹೊಡೆದು ಆತ್ಮಹತ್ಯೆಗೆ ಯತ್ನಿಸಿದ ಗಂಡ

ಪೌನಿ ಪ್ರದೇಶದ ತೇರ್ಯತ್ ಗ್ರಾಮದ ಬಳಿ ಶಿವ ಖೋರಿ ದೇಗುಲದಿಂದ ಹಿಂದಿರುಗುತ್ತಿದ್ದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದಾಗ ದಾಳಿಯಲ್ಲಿ ರಾಜಸ್ಥಾನ, ಉತ್ತರ ಪ್ರದೇಶ ಮತ್ತು ದೆಹಲಿಯ 7 ಯಾತ್ರಿಗಳು ಸೇರಿದಂತೆ 9 ಜನರು ಸಾವನ್ನಪ್ಪಿದ್ದರು. ಈ ಗುಂಡಿನ ದಾಳಿಯ ನಂತರ 53 ಆಸನಗಳ ಬಸ್ ರಸ್ತೆಯಿಂದ ಆಯತಪ್ಪಿ ಆಳವಾದ ಕಮರಿಗೆ ಬಿದ್ದಿತ್ತು.

ಪೊಲೀಸರು ಈಗಾಗಲೇ ಒಬ್ಬ ಉಗ್ರನ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಈ ಅಪರಾಧಿಯ ಸುಳಿವು ನೀಡಿದರೆ 20 ಲಕ್ಷ ರೂ. ನಗದು ಬಹುಮಾನವನ್ನು ನೀಡುವುದಾಗಿ ಘೋಷಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:30 pm, Wed, 19 June 24