ಮುಂಬೈ, ಅಕ್ಟೋಬರ್ 12: ದೇಶದಲ್ಲಿ ವಿನಾಕಾರಣ ಮೂಲಭೂತವಾದವನ್ನು ಪ್ರಚೋದಿಸುವ ಘಟನೆಗಳು ಅಚಾನಕ್ ಆಗಿ ವೃದ್ಧಿಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ಪರಿಸ್ಥಿತಿ ಮತ್ತು ನೀತಿಗಳ ಕುರಿತು ಮನದಲ್ಲಿ ಅತೃಪ್ತಿ ಇರಬಹುದು. ಆದರೆ ಅದನ್ನು ವ್ಯಕ್ತಪಡಿಸುವುದಕ್ಕೆ ಮತ್ತು ವಿರೋಧಿಸುವುದಕ್ಕೆ ಪ್ರಜಾತಾಂತ್ರಿಕ ಮಾರ್ಗವಿದೆ. ಅದರ ಅವಲಂಬನೆಯನ್ನು ಮಾಡದೆ ಹಿಂಸೆಯನ್ನು ಆಶ್ರಯಿಸುವುದು, ಸಮಾಜದ ಕೆಲವು ವಿಶಿಷ್ಟ ವರ್ಗದ ಮೇಲೆ ಆಕ್ರಮಣ ಮಾಡುವುದು, ವಿನಾಕಾರಣ ಹಿಂಸೆಯ ಹಿಂದೆ ಹೋಗುವುದು, ಭಯ ಹುಟ್ಟಿಸುವುದಕ್ಕೆ ಪ್ರಯತ್ನಿಸುವುದು ಇದು ಗೂಂಡಾಗಿರಿ ಎನಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಮಹಾರಾಷ್ಟ್ರದ ನಾಗಪುರದಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ಆಯುಧ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಹಿಳೆಯರ ಕುರಿತು ನಮ್ಮ ದೃಷ್ಟಿ ‘ಮಾತೃವತ್ ಪರದಾರೇಷು’ ಎಂಬುದು ನಮ್ಮ ಸಾಂಸ್ಕೃತಿಕ ಕೊಡುಗೆಯಾಗಿ ನಮ್ಮ ಸಂಸ್ಕಾರ ಪರಂಪರೆಯಿಂದ ಪ್ರಾಪ್ತವಾಗಿದೆ. ನಮ್ಮ ಮನೆಗಳಲ್ಲಿ, ಸಮಾಜ ಯಾವುದರಿಂದ ಮನೋರಂಜನೆಯ ಜೊತೆಗೆ ತಿಳಿದೋ ತಿಳಿಯದೆಯೋ ಅನೇಕ ಸಂಗತಿಗಳು ಒಳನುಸುಳಿವೆ. ಮೌಲ್ಯಗಳನ್ನು ನಿರ್ಲಕ್ಷಿಸಿರುವುದು ಅಥವಾ ತಿರಸ್ಕರಿಸುವುದು ತುಂಬಾ ದುಬಾರಿಯಾಗಿ ಪರಿಣಮಿಸುತ್ತಿದೆ. ಕುಟುಂಬ, ಸಮಾಜ ಮತ್ತು ಸಮೂಹ ಮಾಧ್ಯಮಗಳ ಮೂಲಕ ಸಾಂಸ್ಕೃತಿಕ ಮೌಲ್ಯಗಳನ್ನು ನೀಡುವ ವ್ಯವಸ್ಥೆಯನ್ನು ನಾವು ಮತ್ತೆ ಜಾಗೃತಗೊಳಿಸಬೇಕಾಗಿದೆ. ನಮ್ಮ ರಾಷ್ಟ್ರೀಯ ಜೀವನವು ಸಾಂಸ್ಕೃತಿಕ ಏಕಾತ್ಮತೆ ಮತ್ತು ಶ್ರೇಷ್ಠ ನಾಗರಿಕತೆಯ ಸುದೃಢ ಅಡಿಪಾಯದ ಮೇಲೆ ನಿಂತಿದೆ. ನಮ್ಮ ಸಾಮಾಜಿಕ ಜೀವನವು ಉದಾತ್ತ ಜೀವನ ಮೌಲ್ಯಗಳಿಂದ ಪ್ರೇರಿತವಾದದ್ದು ಮತ್ತು ಪೋಷಣೆಯಾದದ್ದು. ನಮ್ಮ ಇಂತಹ ರಾಷ್ಟ್ರೀಯ ಜೀವನಕ್ಕೆ ಹಾನಿ ಮಾಡುವ ಮತ್ತು ನಾಶಗೊಳಿಸುವ ದುಷ್ಟ ಪ್ರಯತ್ನಗಳನ್ನು ಬಹುಮುಂಚಿತವಾಗಿಯೇ ನಿಲ್ಲಿಸುವ ಅವಶ್ಯಕತೆ ಇದೆ. ಇದಕ್ಕಾಗಿ ಜಾಗೃತ ಸಮಾಜವೇ ಪ್ರಯತ್ನ ನಡೆಸಬೇಕಿದೆ ಎಂದು ಭಾಗವತ್ ಹೇಳಿದರು.
ಸಮಾಜದ ಎಲ್ಲಾ ವರ್ಗ ಮತ್ತು ಸ್ತರಗಳಲ್ಲಿ ವ್ಯಕ್ತಿಗಳ ಮತ್ತು ಕುಟುಂಬಗಳ ಮಿತ್ರತ್ವ ಇರಬೇಕು. ಇದನ್ನು ನಾವು ಮೊದಲು ವ್ಯಕ್ತಿಗತ ಮತ್ತು ಕುಟುಂಬದ ಹಂತದಲ್ಲಿ ಮಾಡಬೇಕು. ಸಮಾಜದ ಸ್ವಸ್ಥ ಮತ್ತು ಸಬಲ ಸ್ಥಿತಿಯ ಮೊದಲ ಷರತ್ತು ಎಂದರೆ ಸಾಮಾಜಿಕ ಸಾಮರಸ್ಯ ಮತ್ತು ಸಮಾಜದ ವಿವಿಧ ವರ್ಗಗಳ ನಡುವಣ ಪರಸ್ಪರ ಸದ್ಭಾವನೆ. ಕೆಲವು ಸಂಕೇತಾತ್ಮಕ ಕಾರ್ಯಕ್ರಮಗಳನ್ನು ಮಾತ್ರ ಮಾಡುವುದರಿಂದ ಈ ಕಾರ್ಯ ಸಾಧ್ಯವಾಗುವುದಿಲ್ಲ ಎಂದು ಭಾಗವತ್ ಹೇಳಿದರು.
ಪರಿಸರ ಸಂರಕ್ಷಣೆ ದೃಷ್ಟಿಯಿಂದ ನಮ್ಮ ಮನೆಯಿಂದಲೇ ಮೂರು ಸಣ್ಣ ಸರಳ ಕೆಲಸಗಳನ್ನು ಮಾಡುವ ಮೂಲಕ ಪ್ರಾರಂಭಿಸಬಹುದು. ಮೊದಲನೆಯದು ನೀರಿನ ಕನಿಷ್ಠ ಅವಶ್ಯಕ ಬಳಕೆ ಮತ್ತು ಮಳೆ ನೀರಿನ ಕೊಯ್ಲು. ಎರಡನೆಯದು ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಿರುವುದು. ಇಂಗ್ಲಿಷಿನಲ್ಲಿ Single Use Plastics ಎಂದು ಕರೆಯುವ ಪ್ಲಾಸ್ಟಿಕ್ನ ಬಳಕೆಯನ್ನು ಸಂಪೂರ್ಣವಾಗಿ ಕೈಬಿಡುವುದು. ಮೂರನೆಯ ವಿಷಯವೆಂದರೆ ನಿಮ್ಮ ಮನೆಯ ಹೊರಗೆ ಹೆಚ್ಚು ಹಸಿರನ್ನು ಬೆಳೆಯುವಂತೆ ನೋಡಿಕೊಳ್ಳುವುದು, ಗಿಡಗಳನ್ನು ನೆಡುವುದು ಎಂದು ಭಾಗವತ್ ಕರೆ ನೀಡಿದರು.
ಸಂವಿಧಾನದ ಪೀಠಿಕೆಯ ವಾಕ್ಯವನ್ನು ಮನಸ್ಸಿನಲ್ಲಿರಿಸಿಕೊಂಡು ಸಂವಿಧಾನ ಸೂಚಿಸಿದ ಕರ್ತವ್ಯಗಳು ಹಾಗೂ ಕಾನೂನಿನ ಸೂಕ್ತ ಪಾಲನೆಯನ್ನು ಎಲ್ಲರೂ ಮಾಡಬೇಕು. ಸಣ್ಣದು ದೊಡ್ಡದು ಎಂಬ ಭೇದವಿಲ್ಲದೆ ಎಲ್ಲ ವಿಚಾರಗಳಲ್ಲೂ ನಾವು ಈ ನಿಯಮಗಳ ಪಾಲನೆ ಮಾಡಬೇಕು. ಅನೇಕ ಪ್ರಕಾರದ ನಿಯಮಗಳನ್ನು ಕರ್ತವ್ಯ ಬುದ್ಧಿಯಿಂದ ಪೂರ್ಣಪಾಲನೆ ಮಾಡಬೇಕು. ನಿಯಮ ಹಾಗೂ ಕಾನೂನುಗಳ ಪಾಲನೆಯನ್ನು ಅಕ್ಷರಶಃ ಹಾಗೂ ಭಾವಶಃ ಕೈಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸ್ವಗೌರವದ ಕುರಿತು ಪ್ರೇರಣೆಯ ಬಲವೇ ಜಗತ್ತಿನಲ್ಲಿ ನಮ್ಮ ಉನ್ನತಿ ಹಾಗೂ ಸ್ವಾವಲಂಬನೆಯ ಕಾರಣವಾಗುವ ನಡವಳಿಕೆಯನ್ನು ರೂಪಿಸುತ್ತದೆ. ಇದನ್ನೇ ನಾವು ‘ಸ್ವದೇಶಿ’ ಎನ್ನುತ್ತೇವೆ. ದೈನಂದಿನ ಸಮಾಜಜೀವನದಲ್ಲಿ ವ್ಯಕ್ತಿಗಳು ಕೈಗೊಳ್ಳುವ ಸ್ವದೇಶಿ ನಡವಳಿಕೆಯ ಆಧಾರದಲ್ಲಿ ರಾಷ್ಟ್ರೀಯ ನೀತಿಯಲ್ಲಿ ಸ್ವದೇಶಿಯ ಅಭಿವ್ಯಕ್ತಿ ಸಾಧ್ಯವಾಗುತ್ತದೆ. ಇದನ್ನೇ ಸ್ವದೇಶಿ ಆಚರಣೆ ಎನ್ನಲಾಗುತ್ತದೆ ಎಂದು ಭಾಗವತ್ ಹೇಳಿದರು.
ಇದನ್ನೂ ಓದಿ: ಅರ್ಬನ್ ನಕ್ಸಲ್, ಕಲ್ಚರಲ್ ಮಾರ್ಕ್ಸಿಸ್ಟ್ಗಳೇ ದೇಶಕ್ಕೆ ಮಾರಕ: ಮೋಹನ್ ಭಾಗವತ್
ಸದ್ಭಾವ ಹಾಗೂ ಸಂಯಮಪೂರ್ಣ ವಾತಾರಣದ ಸ್ಥಾಪನೆಗಾಗಿ ಸಜ್ಜನರು ಶಕ್ತಿಸಂಪನ್ನರಾಗಬೇಕು. ಶಕ್ತಿಯು ಯಾವಾಗ ಶೀಲಸಂಪನ್ನವಾಗುತ್ತದೆಯೋ ಆಗ ಅದು ಶಾಂತಿಯ ಆಧಾರವಾಗುತ್ತದೆ. ದುರ್ಜನರು ಸ್ಚಾರ್ಥಕ್ಕಾಗಿ ಸಂಘಟಿತರಾಗಿರುತ್ತಾರೆ. ಅವರ ನಿಯಂತ್ರಣವನ್ನು ಶಕ್ತಿಶಾಲಿಗಳು ಮಾತ್ರವೇ ಮಾಡಬಲ್ಲರು. ಸಜ್ಜನರು ಎಲ್ಲರಲ್ಲೂ ಸದ್ಭಾವನೆಯನ್ನು ಹೊಂದಿರುತ್ತಾರಾದರೂ ಸಂಘಟಿತರಾಗುವುದನ್ನು ತಿಳಿದಿಲ್ಲ. ಆದ್ದರಿಂದಲೇ ಅವರು ದುರ್ಬಲರಂತೆ ಕಾಣುತ್ತಾರೆ. ಸಜ್ಜನರು ಈ ಸಂಘಟಿತ ಸಾಮರ್ಥ್ಯ ನಿರ್ಮಾಣದ ಕಲೆಯನ್ನು ಕಲಿಯಬೇಕಾಗಿದೆ ಎಂದು ಭಾಗವತ್ ಕರೆ ನೀಡಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:19 am, Sat, 12 October 24