ನಾಗಪುರದಲ್ಲಿ ಆರ್​ಎಸ್​ಎಸ್​ ವಿಜಯದಶಮಿ ಉತ್ಸವ ಆರಂಭ: ಮೋಹನ್ ಭಾಗವತ್ ಭಾಷಣದತ್ತ ಎಲ್ಲರ ಕಣ್ಣು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 05, 2022 | 7:59 AM

ಸಂಘ ಪರಿವಾರದ ಮುಂದಿನ ಕಾರ್ಯಯೋಜನೆ, ಚಿಂತನೆಯ ಬಗ್ಗೆ ಈ ಉತ್ಸವದಲ್ಲಿ ಇಣುಕುನೋಟ ಇರುತ್ತದೆ.

ನಾಗಪುರದಲ್ಲಿ ಆರ್​ಎಸ್​ಎಸ್​ ವಿಜಯದಶಮಿ ಉತ್ಸವ ಆರಂಭ: ಮೋಹನ್ ಭಾಗವತ್ ಭಾಷಣದತ್ತ ಎಲ್ಲರ ಕಣ್ಣು
ನಾಗಪುರದಲ್ಲಿ ನಡೆಯುತ್ತಿರುವ ಆರ್​ಎಸ್​ಎಸ್​ ವಿಜಯದಶಮಿ ಉತ್ಸವದಲ್ಲಿ ಸರಸಂಘಚಾಲಕ ಮೋಹನ್ ಭಾಗವತ್ ಹಾಗೂ ಮುಖ್ಯ ಅತಿಥಿ ಸಂತೋಷಾ ಯಾದವ್ ಉಪಸ್ಥಿತರಿದ್ದರು.
Follow us on

ನಾಗಪುರ: ರಾಷ್ಟ್ರೀಯ ಸ್ವಯಂ ಸೇವಕದ (Rashtriya Swayamsevak Sangh – RSS) ಸಂಸ್ಥಾಪನಾ ದಿನಾಚರಣೆಯೂ ಆಗಿರುವ ವಾರ್ಷಿಕ ವಿಜಯದಶಮಿ ಉತ್ಸವಕ್ಕೆ ಮಹತ್ವವಿದೆ. ಒಂದು ವರ್ಷದಲ್ಲಿ ದೇಶದಲ್ಲಿ ನಡೆದ ಪ್ರಮುಖ ವಿದ್ಯಮಾನಗಳು ಹಾಗೂ ಸಂಘ ಪರಿವಾರದ ಮುಂದಿನ ಕಾರ್ಯಯೋಜನೆ, ಚಿಂತನೆಯ ಬಗ್ಗೆ ಈ ಉತ್ಸವದಲ್ಲಿ ಇಣುಕುನೋಟ ಇರುತ್ತದೆ. ಉತ್ಸವದ ಭಾಗವಾಗಿರುವ ಸರಸಂಘಚಾಲಕರ ಉದ್ಬೋಧನೆಯನ್ನು (ಆರ್​ಎಸ್​ಎಸ್​ ಮುಖ್ಯಸ್ಥರ ಭಾಷಣ) ಎಲ್ಲ ಮಾಧ್ಯಮಗಳು ಸೂಕ್ಷ್ಮವಾಗಿ ಗಮನಿಸುತ್ತವೆ. ವಿಜಯದಶಮಿ ಉತ್ಸವಕ್ಕೆ ಕೆಲವೇ ದಿನಗಳ ಮೊದಲು ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಅವರು ಬಡತನ ಮತ್ತು ಅಸಮಾನತೆಯ ಬಗ್ಗೆ ಮಾತನಾಡಿದ್ದರು. ಸರಸಂಘಚಾಲಕರ ಚಿಂತನೆಯ ಬಗ್ಗೆ ಇರುವ ಕುತೂಹಲ ಇದರಿಂದ ಹೆಚ್ಚಾಗಿತ್ತು.

ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ಮಹಿಳಾ ಸಮಾನತೆ ಮತ್ತು ಮಹಿಳೆಯರಿಗೆ ಸಮಾನ ಅವಕಾಶ, ಆಯ್ಕೆಯ ಹಕ್ಕಿನ ಬಗ್ಗೆ ಮಾತನಾಡುತ್ತಿರುವ ಸಂಘ ಪರಿವಾರದ ನಾಯಕರು ಈ ಬಾರಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ವಿಜಯದಶಮಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪರ್ವತಾರೋಹಿ ಸಂತೋಷ ಯಾದವ್ ಅವರನ್ನು ಆಹ್ವಾನಿಸಲಾಗಿದೆ. ಇವರು ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವೆರೆಸ್ಟ್​ ಅನ್ನು ಎರಡು ಬಾರಿ ಹತ್ತಿಳಿದ ಮೊದಲ ಮಹಿಳೆ ಎನಿಸಿದ್ದಾರೆ. ಮೇ 1992 ಮತ್ತು ಮೇ 1993ರಲ್ಲಿ ಸಂತೋಷಾ ಯಾದವ್ ಎವೆರೆಸ್ಟ್​ ಹತ್ತಿದ್ದರು. ಮಹಿಳೆಯೊಬ್ಬರನ್ನು ವಿಜಯದಶಮಿ ಉತ್ಸವಕ್ಕೆ ಆರ್​ಎಸ್​ಎಸ್​​ ಆಹ್ವಾನಿಸಿರುವುದು ಸಹ ಇದೇ ಮೊದಲು.

‘ಮಹಿಳೆಯರನ್ನು ನಾವು ಜಗದ ತಾಯಿ ಎಂದು ಕೊಂಡಾಡುತ್ತೇವೆ. ಆದರೆ ಮನೆಗಳಲ್ಲಿ ಗುಲಾಮರಂತೆ ನಡೆಸಿಕೊಳ್ಳುತ್ತೇವೆ. ಮಹಿಳಾ ಸಬಲೀಕರಣದ ಪ್ರಯತ್ನಗಳು ನಮ್ಮ ಮನೆಗಳಿಂದಲೇ ಆರಂಭವಾಗಬೇಕಿದೆ. ಮಹಿಳೆಯರು ಸಶಕ್ತರಾದರೆ ಮಾತ್ರ ಭಾರತವು ವಿಶ್ವಗುರು ಆಗಲು ಸಾಧ್ಯ’ ಎಂದು ಸರಸಂಘಚಾಲಕ ಮೋಹನ್ ಭಾಗವತ್ ಇತ್ತೀಚೆಗಷ್ಟೇ ಪ್ರತಿಪಾದಿಸಿದ್ದರು. ಅವರ ಆಶಯಕ್ಕೆ ಒತ್ತು ಕೊಡುವಂತೆ ಸಂಘ ಪರಿವಾರದ ಹಿರಿಯರು ಈ ಬಾರಿಯ ವಿಜಯದಶಮಿ ಉತ್ಸವದ ಮುಖ್ಯ ಅತಿಥಿಯಾಗಿ ಮಹಿಳೆಯನ್ನೇ ಆಹ್ವಾನಿಸಿರುವುದು ವಿಶೇಷ ಎನಿಸಿದೆ.

ಲೈವ್ ವಿಡಿಯೊ

ನಾಗಪುರದಲ್ಲಿ ನಡೆಯುತ್ತಿರುವ ವಿಜಯದಶಮಿ ಉತ್ಸವದ ಲೈವ್ ಸ್ಟ್ರೀಮ್​ಗೆ ಆರ್​ಎಸ್​ಎಸ್​ ವ್ಯವಸ್ಥೆ ಮಾಡಿದೆ. ಆರ್​ಎಸ್​ಎಸ್​ನ ಯುಟ್ಯೂಬ್ ಚಾನೆಲ್ ಮತ್ತು ಎಲ್ಲ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸಮಾರಂಭವನ್ನು ನೋಡಬಹುದಾಗಿದೆ.

ಬಡತನ, ನಿರುದ್ಯೋಗ ದೇಶದ ದೈತ್ಯ ಸವಾಲು: ದತ್ತಾತ್ರೇಯ ಹೊಸಬಾಳೆ

ಭಾರತದ ಸುಮಾರು 20 ಕೋಟಿ ಜನರು ಬಡತನದಲ್ಲಿದ್ದಾರೆ. ಇದಕ್ಕೆ ಹಲವು ದಶಕಗಳಿಂದ ಅಸ್ತಿತ್ವದಲ್ಲಿದ್ದ ಆರ್ಥಿಕ ನೀತಿಗಳೇ ಕಾರಣ. ಕಳೆದ ಕೆಲ ವರ್ಷಗಳಲ್ಲಿ ಪರಿಸ್ಥಿತಿ ಬದಲಿಸಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ ಎಂದು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಿ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದರು. ಪ್ರತಿವರ್ಷ ವಿಜಯದಶಮಿಯಂದು ಆರ್​ಎಸ್​ಎಸ್​ನ ಸರಸಂಘಚಾಲಕರು ದೇಶವನ್ನು ಉದ್ದೇಶಿಸಿ ಭಾಷಣ ಮಾಡುವುದು ವಾಡಿಕೆ. ಅದಕ್ಕೆ ಕೇವಲ ಮೂರು ದಿನ ಮೊದಲ ಸರಕಾರ್ಯವಾಹ ಹುದ್ದೆಯಲ್ಲಿರುವ ದತ್ತಾತ್ರೇಯ ಹೊಸಬಾಳೆ ಅವರು ಬಡತನದ ಕುರಿತು ಪ್ರಸ್ತಾಪಿಸಿರುವುದು ಮಹತ್ವ ಪಡೆದಿತ್ತು.

ಆರ್​ಎಸ್​ಎಸ್​ನ ಪರಿವಾರ ಸಂಘಟನೆ ಸ್ವದೇಶಿ ಜಾಗರಣ ಮಂಚ್ ಆಯೋಜಿಸಿದ್ದ ‘ಸ್ವಾವಲಂಬಿ ಭಾರತ್ ಅಭಿಯಾನ’ದಲ್ಲಿ ಮಾತನಾಡಿದ ಅವರು, ಹಲವು ವಿಚಾರಗಳಲ್ಲಿ ದೇಶವು ಪ್ರಗತಿ ಸಾಧಿಸಿದೆಯಾದರೂ ಎಷ್ಟೋ ಕ್ಷೇತ್ರಗಳಲ್ಲಿ ಸವಾಲು ಹಾಗೆಯೇ ಉಳಿದಿದೆ ಎಂದು ಅಭಿಪ್ರಾಯಪಟ್ಟರು. ‘ಬಡತನ ಎನ್ನುವುದು ನಮ್ಮೆದುರು ಇರುವ ದೈತ್ಯ ಸವಾಲಾಗಿದೆ. ಬಡತನದ ರಾಕ್ಷಸನನ್ನು ಮಣಿಸುವುದು ನಮ್ಮ ಆದ್ಯತೆಯಾಗಬೇಕು. ದೇಶದ 20 ಕೋಟಿಗಿಂತಲೂ ಹೆಚ್ಚಿನ ಜನರು ಬಡತನ ರೇಖೆಗಿಂತಲೂ ಕೆಳಗೆ ಬದುಕುತ್ತಿದ್ದಾರೆ ಎನ್ನುವುದು ನೋವಿನ ಸಂಗತಿ. ಮತ್ತೊಂದು ಅಂಕಿಅಂಶದ ಪ್ರಕಾರ ದೇಶದ 23 ಕೋಟಿಗೂ ಹೆಚ್ಚು ಜನರು ದಿನಕ್ಕೆ ₹ 275ಕ್ಕೂ ಕಡಿಮೆ ಆದಾಯದಲ್ಲಿ ದಿನದೂಡುತ್ತಿದ್ದಾರೆ ಎಂದು ಹೇಳಿದರು. ಭಾರತದಲ್ಲಿ 4 ಕೋಟಿ ಉದ್ಯೋಗಸ್ಥರಿದ್ದಾರೆ. ಆದರೂ ನಮ್ಮಲ್ಲಿ ನಿರುದ್ಯೋಗಿಗಳ ಪ್ರಮಾಣ ಶೇ 7.6ರಷ್ಟು ಇದೆ ಎಂದು ವಿವರಿಸಿದ್ದರು.