ವಿಧಾನಸಭೆ ಚುನಾವಣೆಯಲ್ಲಿ ಸೋಲು; ಗೆದ್ದ ಕ್ಷೇತ್ರ ಕರ್ಹಾಲ್​ ತೊರೆದು, ಸಂಸದರಾಗಿಯೇ ಮುಂದುವರಿಯಲಿದ್ದಾರಂತೆ ಅಖಿಲೇಶ್ ಯಾದವ್​

. ಈ ಕರ್ಹಾಲ್​​ ಕ್ಷೇತ್ರದಿಂದ 2002, 2007, 2012 ಮತ್ತು 2017ರ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದಿಂದ ಸೊಬರನ್ ಸಿಂಗ್ ಯಾದವ್ ಸ್ಪರ್ಧಿಸಿ, ಗೆದ್ದಿದ್ದಾರೆ. ಆದರೆ ಈ ಬಾರಿ ಅಖಿಲೇಶ್ ಯಾದವ್​ಗೋಸ್ಕರ ತಮ್ಮ ಕ್ಷೇತ್ರ ಬಿಟ್ಟುಕೊಟ್ಟಿದ್ದರು.

ವಿಧಾನಸಭೆ ಚುನಾವಣೆಯಲ್ಲಿ ಸೋಲು; ಗೆದ್ದ ಕ್ಷೇತ್ರ ಕರ್ಹಾಲ್​ ತೊರೆದು, ಸಂಸದರಾಗಿಯೇ ಮುಂದುವರಿಯಲಿದ್ದಾರಂತೆ ಅಖಿಲೇಶ್ ಯಾದವ್​
ಅಖಿಲೇಶ್​ ಯಾದವ್​
Updated By: Lakshmi Hegde

Updated on: Mar 12, 2022 | 2:49 PM

ಉತ್ತರ ಪ್ರದೇಶದ ಗದ್ದುಗೆ ಮೇಲೆ ಅಖಿಲೇಶ್ ಯಾದವ್ (Akhilesh Yadav)​ ನೇತೃತ್ವದ ಸಮಾಜವಾದಿ ಪಕ್ಷ ಈ ಬಾರಿ ತುಂಬ ನಿರೀಕ್ಷೆ ಇಟ್ಟುಕೊಂಡಿತ್ತು. ಹಾಗೇ, ಆ ರಾಜ್ಯದಲ್ಲಿ ಸ್ಪರ್ಧೆ ಇದ್ದಿದ್ದೂ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆಯೇ ಆಗಿತ್ತು. ಹಾಗೇ, ಸಂಸದರಾಗಿದ್ದ ಅಖಿಲೇಶ್​ ಯಾದವ್​ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕರ್ಹಾಲ್​ ಕ್ಷೇತ್ರದಿಂದ ಕಣಕ್ಕೆ ಇಳಿದು, ಗೆದ್ದಿದ್ದರು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತ ಹಿನ್ನೆಲೆಯಲ್ಲಿ ಅವರೀಗ ಆ ಕ್ಷೇತ್ರದ ಶಾಸಕನ ಸ್ಥಾನಕ್ಕೆ ರಾಜೀನಾಮೆ ನೀಡಿ, ಇಷ್ಟು ದಿನದಂತೆ ಅಜಂಗಢ್​​ನ ಸಂಸದರಾಗಿಯೇ ಮುಂದುವರಿಯುತ್ತಾರೆ ಎಂದು ವರದಿಯಾಗಿದೆ.

ನಾವೀಗ ಉತ್ತರ ಪ್ರದೇಶದ ಚುನಾವಣೆಯಲ್ಲಿ ಸೋತಿದ್ದೇವೆ. ಹೀಗಾಗಿ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಪಕ್ಷದ ಅಧ್ಯಕ್ಷರು ತಾವು ಗೆದ್ದ ಕರ್ಹಾಲ್​ ಕ್ಷೇತ್ರವನ್ನು ತೊರೆದು, ಸಂಸದರಾಗಿಯೇ ಮುಂದುವರಿಯುವುದು ಸ್ಪಷ್ಟವಾಗಿದೆ. ಅದು ಸರಿಯಾದ ನಿರ್ಧಾರವೂ ಹೌದು. ಆ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಶೀಘ್ರದಲ್ಲೇ ಪ್ರಕಟಣೆ ಹೊರಬೀಳಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್​ ಮಾಧ್ಯಮ ವರದಿ ಮಾಡಿದೆ.

ಹಾಗೊಮ್ಮೆ ಅಖಿಲೇಶ್ ಯಾದವ್​ ತಮ್ಮ ಶಾಸಕನ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅವರು ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕನಾಗಲು ಸಾಧ್ಯವಿಲ್ಲ. ಈಗ ಎರಡನೇ ದೊಡ್ಡ ಪಕ್ಷ ಸಮಾಜವಾದಿ ಪಾರ್ಟಿ ಆಗಿದ್ದರಿಂದ ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನ ತುಂಬುವುದು ಅದೇ ಪಕ್ಷ. ಅಖಿಲೇಶ್ ಯಾದವ್ ಬದಲಿಗೆ ಇನ್ನೊಬ್ಬರನ್ನು ಆಯ್ಕೆ ಮಾಡಲೇಬೇಕು. ಈ ಕರ್ಹಾಲ್​​ ಕ್ಷೇತ್ರದಿಂದ 2002, 2007, 2012 ಮತ್ತು 2017ರ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದಿಂದ ಸೊಬರನ್ ಸಿಂಗ್ ಯಾದವ್ ಸ್ಪರ್ಧಿಸಿ, ಗೆದ್ದಿದ್ದಾರೆ. ಆದರೆ ಈ ಬಾರಿ ಅಖಿಲೇಶ್ ಯಾದವ್​ಗೋಸ್ಕರ ತಮ್ಮ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಅಖಿಲೇಶ್ ಯಾದವ್ ಕೂಡ ಗೆದ್ದಿದ್ದಾರೆ. ಈಗವರು ಲೋಕಸಭಾ ಸದಸ್ಯರಾಗಿ ಮುಂದುವರಿಯಲು ಈ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇ ಆದಲ್ಲಿ, ಮತ್ತೆ ಇಲ್ಲಿ ಉಪಚುನಾವಣೆ ನಡೆಯಲೇಬೇಕಾಗುತ್ತದೆ.

ಇದನ್ನೂ ಓದಿ: ಉಕ್ರೇನ್​​​ನಿಂದ ಮೊಬೈಲ್‌ನಲ್ಲಿ ಟಿಕೆಟ್ ಬುಕ್ ಮಾಡಿ ಬಂದ್ರಾ? ಈ ರೀತಿ ಸುಳ್ಳು ಹೇಳಬಾರದು;ಕೆಲ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಸಂಸದ ತೇಜಸ್ವಿ ಸೂರ್ಯ

Published On - 2:41 pm, Sat, 12 March 22