ತಮಿಳುನಾಡಿನ 9 ಪೊಲೀಸರಿಗೆ ಗಲ್ಲು ಶಿಕ್ಷೆಯಾಗಲು ಈ ಮಹಿಳಾ ಕಾನ್​ಸ್ಟೆಬಲ್ ಕೂಡ ಕಾರಣ!

ತಮಿಳುನಾಡಿನ ಸಾಥನ್​ಕುಲಂನಲ್ಲಿ ನಡೆದ ಲಾಕಪ್ ಡೆತ್ ಪ್ರಕರಣದಲ್ಲಿ 9 ಪೊಲೀಸರಿಗೆ ಗಲ್ಲು ಶಿಕ್ಷೆಯಾಗಿದೆ. ಕೊವಿಡ್-19 ಸಂದರ್ಭದಲ್ಲಿ ವ್ಯಾಪಾರಿಗಳಾಗಿದ್ದ ಅಪ್ಪ-ಮಗ ರಾತ್ರಿ ವೇಳೆಯೂ ಅಂಗಡಿ ತೆರೆದಿದ್ದರಿಂದ ಅವರನ್ನು ಬಂಧಿಸಲಾಗಿತ್ತು. ಈ ವೇಳೆ ಕಸ್ಟಡಿಯಲ್ಲಿ ಅವರಿಗೆ ಹೊಡೆದು, ಚಿತ್ರಹಿಂಸೆ ನೀಡಿ ಸಾಯಿಸಿದ ಆರೋಪ ಎದುರಿಸುತ್ತಿರುವ 9 ಪೊಲೀಸರಿಗೆ ಮರಣದಂಡನೆ ವಿಧಿಸಲಾಗಿದೆ. ಇದು ಅತ್ಯಂತ ಅಪರೂಪದ ಘಟನೆಯಾಗಿದೆ. ಆದರೆ, ಆ ದಿನ ಪೊಲೀಸ್ ಸ್ಟೇಷನ್​​ನಲ್ಲಿ ನಡೆದ ಘಟನೆಯನ್ನು ಕಂಡಿದ್ದ ಪ್ರತ್ಯಕ್ಷದರ್ಶಿಯಾದ ಮಹಿಳಾ ಕಾನ್ಸ್​ಟೆಬಲ್ ಈ ಪ್ರಕರಣದಲ್ಲಿ ಎಷ್ಟು ಮುಖ್ಯ ಪಾತ್ರ ವಹಿಸಿದ್ದಾರೆ ಗೊತ್ತಾ?

ತಮಿಳುನಾಡಿನ 9 ಪೊಲೀಸರಿಗೆ ಗಲ್ಲು ಶಿಕ್ಷೆಯಾಗಲು ಈ ಮಹಿಳಾ ಕಾನ್​ಸ್ಟೆಬಲ್ ಕೂಡ ಕಾರಣ!
Revathi
Image Credit source: x

Updated on: Apr 08, 2026 | 3:42 PM

ಚೆನ್ನೈ, ಏಪ್ರಿಲ್ 8: ತಮಿಳುನಾಡಿನ 9 ಪೊಲೀಸ್ ಸಿಬ್ಬಂದಿಯನ್ನು ಅಪರಾಧಿಗಳು ಎಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗಿದೆ. ತಂದೆ ಮತ್ತು ಮಗ ಕಸ್ಟಡಿಯಲ್ಲಿ ಸಾವನ್ನಪ್ಪಿದ 5 ವರ್ಷಗಳ ನಂತರ ಆ 9 ಪೊಲೀಸರಿಗೆ ಮರಣದಂಡನೆ (Death Sentence) ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ರೇವತಿ ಬಹಳ ಮುಖ್ಯ ಪಾತ್ರ ವಹಿಸಿದ್ದಾರೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರು ಧೈರ್ಯ ವಹಿಸಿ ಮುಂದೆ ಬಂದು ಆ ದಿನ ನಡೆದ ಘಟನೆಯನ್ನು ಹೇಳದಿದ್ದರೆ ಈ ಪ್ರಕರಣ ಖಂಡಿತ ಈ ಹಂತವನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ.

ಕೊವಿಡ್-19 ಮಾನದಂಡಗಳನ್ನು ಉಲ್ಲಂಘಿಸಿ ತಮ್ಮ ಮೊಬೈಲ್ ಅಂಗಡಿಯನ್ನು ತೆರೆದಿದ್ದಕ್ಕಾಗಿ 2020ರಲ್ಲಿ ಬಂಧಿಸಲ್ಪಟ್ಟಿದ್ದ ಪಿ. ಜಯರಾಜ್ ಮತ್ತು ಅವರ ಮಗ ಜೆ. ಬೆನ್ನಿಕ್ಸ್ ಮೇಲೆ ಅಧಿಕಾರಿಗಳು ಕ್ರೂರವಾಗಿ ಹಲ್ಲೆ ನಡೆಸಿದಾಗ ರೇವತಿ ತೂತುಕುಡಿಯ ಸಾಥನ್‌ಕುಲಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ಈ ಪ್ರಕರಣದಲ್ಲಿ ಅಪ್ರೂವರ್ ಆಗಿ ತನ್ನ ಸುರಕ್ಷತೆ, ತನ್ನ ಕುಟುಂಬ ಅಥವಾ ತನ್ನ ಕೆಲಸದ ಬಗ್ಗೆ ಯೋಚನೆ ಮಾಡದೆ ಅವರು ಮ್ಯಾಜಿಸ್ಟ್ರೇಟ್‌ಗೆ ಆ ಘಟನೆ ನಡೆದ ದಿನ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಗಳನ್ನು ವಿವರಿಸಿದರು. ಈ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾಗಿರುವ ಅಧಿಕಾರಿಗಳು ಸೀನಿಯರ್ಸ್ ಮತ್ತು ಪ್ರಭಾವಶಾಲಿಗಳಾಗಿದ್ದರೆ ರೇವತಿ ಜೂನಿಯರ್ ಕಾನ್‌ಸ್ಟೆಬಲ್ ಆಗಿದ್ದರು. ಆದರೂ ಆಕೆ ದೃಢನಿಶ್ಚಯದಿಂದ ನ್ಯಾಯದ ಪರ ನಿಲ್ಲಲು ನಿರ್ಧರಿಸಿದ್ದರು.

ಆ ದಿನ ಜಯರಾಜ್ ಮತ್ತು ಬೆನ್ನಿಕ್ಸ್​ ಮೇಲೆ ತನ್ನದೇ ಪೊಲೀಸ್ ಠಾಣೆಯ ಸಿಬ್ಬಂದಿ ಹಲ್ಲೆ ನಡೆಸುವಾಗ ರೇವತಿ ಅಲ್ಲಿಯೇ ಇದ್ದರು. ಆ ದಿನ ಅವರು ನೈಟ್​ಡ್ಯೂಟಿಯಲ್ಲಿದ್ದರು. ಆಕೆ ರಕ್ತಸಿಕ್ತವಾದ ಅವರಿಬ್ಬರ ಬಟ್ಟೆಗಳನ್ನು ನೋಡಿದ್ದರು, ರಕ್ತ ಅಂಟಿದ ಲಾಠಿಯನ್ನು ನೋಡಿದ್ದರು, ರಕ್ತ ಅಂಟಿದ್ದ ಟೇಬಲ್ ಅನ್ನು ನೋಡಿ ಹೆದರಿದ್ದರು. ನೋವು ತಡೆಯಲಾರದೆ ಜಯರಾಜ್ ನೀರು ಕೇಳಿದಾಗ ರೇವತಿ ನೀರು ಕೊಟ್ಟಿದ್ದರು. ಆ ರಾತ್ರಿ ತನ್ನ ಗಂಡನಿಗೆ ಫೋನ್ ಮಾಡಿ ಠಾಣೆಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದರು.

ಇದನ್ನೂ ಓದಿ: ತಂದೆ-ಮಗನ ಲಾಕಪ್ ಡೆತ್ ಪ್ರಕರಣ; ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ

ಈ ಘಟನೆಯ ವಿಚಾರಣೆಗಾಗಿ ಮ್ಯಾಜಿಸ್ಟ್ರೇಟ್​ ಆಕೆಯನ್ನು ಕರೆಸಿದಾಗ ಆಕೆಯ ಮೇಲೆ ಹಿರಿಯ ಅಧಿಕಾರಿಗಳಿಂದ ಬಹಳ ಒತ್ತಡವಿತ್ತು. ಆದರೂ ತನ್ನನ್ನು ಕೆಲಸದಿಂದ ವಜಾಗೊಳಿಸಿದರೂ ಪರವಾಗಿಲ್ಲ ಎಂದು ಆಕೆ ನಡೆದ ಘಟನೆಯನ್ನು ಧೈರ್ಯವಾಗಿ ವಿವರಿಸಿದ್ದರು. 2020ರಲ್ಲಿ ರೇವತಿ ಧೈರ್ಯವಾಗಿ ಪ್ರತ್ಯಕ್ಷದರ್ಶಿಯಾಗಿ ಹೇಳಿಕೆ ದಾಖಲಿಸದಿದ್ದರೆ ಆ 9 ಅಪರಾಧಿಗಳಿಗೆ ಶಿಕ್ಷೆಯಾಗುತ್ತಿರಲಿಲ್ಲ. ಹೀಗಾಗಿ, ತಂದೆ-ಮಗನ ಲಾಕಪ್ ಡೆತ್ ಪ್ರಕರಣದ ಪ್ರತ್ಯಕ್ಷದರ್ಶಿಯಾದ ರೇವತಿ ಈ ಪ್ರಕರಣದಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದ್ದಾರೆ.

ಏನಿದು ಪ್ರಕರಣ?:

2020ರಲ್ಲಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ತಮಿಳುನಾಡಿನ ಸಾಥನ್‌ಕುಲಂ ಲಾಕಪ್ ಡೆತ್ ಪ್ರಕರಣದಲ್ಲಿ ಸೋಮವಾರ ಮಧುರೈ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ಈ ಘಟನೆಯ ಅಪರಾಧಿಗಳಾದ 9 ಪೊಲೀಸ್ ಸಿಬ್ಬಂದಿಗೆ ಮರಣದಂಡನೆ ವಿಧಿಸಿತ್ತು. ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾಥನ್‌ಕುಲಂನಲ್ಲಿ ಕೊವಿಡ್-19 ಮಾನದಂಡಗಳನ್ನು ಉಲ್ಲಂಘಿಸಿ ರಾತ್ರಿ ವೇಳೆಯಲ್ಲೂ ತಮ್ಮ ಮೊಬೈಲ್ ಅಂಗಡಿಯನ್ನು ತೆರೆದಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದ ಅಪ್ಪ-ಮಗನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ತಂದೆ-ಮಗನಾದ ಪಿ. ಜಯರಾಜ್ ಮತ್ತು ಜೆ. ಬೆನ್ನಿಕ್ಸ್ ಸಾವನ್ನಪ್ಪಿದ್ದರು. ಈ ಸಾವಿಗೆ ತಮಿಳುನಾಡಿನಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

2020ರ ಜೂನ್ 19ರಂದು ನಡೆದಿದ್ದ ಈ ಘಟನೆಯಲ್ಲಿ ಸಾಥನ್​ಕುಲಂ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಪಿ. ಜಯರಾಜ್ ಅವರನ್ನು ಬಂಧಿಸಿದ್ದರು. ತನ್ನ ತಂದೆ ಏನೂ ತಪ್ಪು ಮಾಡದಿದ್ದರೂ ಅವರನ್ನೇಕೆ ಬಂಧಿಸಿದ್ದೀರಿ? ಎಂದು ವಿಚಾರಿಸಲು ಪೊಲೀಸ್ ಠಾಣೆಗೆ ಹೋದ ಅವರ ಮಗ ಬೆನ್ನಿಕ್ಸ್ ಅವರ ಜೊತೆಯೂ ವಾಗ್ವಾದ ನಡೆಸಿದ ಪೊಲೀಸರು ಅವರನ್ನೂ ಬಂಧಿಸಿದ್ದರು ಎಂದು ಈ ಪ್ರಕರಣದ ತನಿಖೆ ನಡೆಸಿದ ಸಿಬಿಐ ತಿಳಿಸಿದೆ.

ಇದನ್ನೂ ಓದಿ: ಉಚಿತ ಫ್ರಿಡ್ಜ್, ಪುರುಷರಿಗೂ ಫ್ರೀ ಬಸ್, ಮಹಿಳೆಯರಿಗೆ 2,000 ರೂ.; ತಮಿಳುನಾಡಿಗೆ ಎಐಎಡಿಎಂಕೆ ಬಂಪರ್ ಆಫರ್

ಜೂನ್ 19 ಮತ್ತು 20ರ ಮಧ್ಯರಾತ್ರಿ ಪೊಲೀಸ್ ಅಧಿಕಾರಿಗಳು ಆ ತಂದೆ ಮತ್ತು ಮಗನನ್ನು ಥಳಿಸಿ, ಕ್ರೂರವಾಗಿ ಚಿತ್ರಹಿಂಸೆ ನೀಡಿದರು. ತೀವ್ರವಾದ ಗಾಯಗಳಿಂದ ಬೆನ್ನಿಕ್ಸ್ ಜೂನ್ 22ರಂದು ಮತ್ತು ಜೈರಾಜ್ ಜೂನ್ 23ರಂದು ಸಾವನ್ನಪ್ಪಿದರು. ತಮಿಳುನಾಡು ಸರ್ಕಾರವು ನ್ಯಾಯಯುತ ತನಿಖೆಗಾಗಿ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತು. ಸಂಪೂರ್ಣ ತನಿಖೆಯ ನಂತರ ಸಿಬಿಐ 90 ದಿನಗಳಲ್ಲಿ 9 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು.

ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು 5 ವರ್ಷಗಳಲ್ಲಿ ಒಟ್ಟು 105 ಸಾಕ್ಷಿಗಳನ್ನು ವಿಚಾರಣೆ ನಡೆಸಿತು. ಈ ಪ್ರಕರಣದ 10 ಆರೋಪಿಗಳಲ್ಲಿ ಒಬ್ಬರಾದ ವಿಶೇಷ ಸಬ್-ಇನ್ಸ್‌ಪೆಕ್ಟರ್ ಪೌಲ್‌ದುರೈ ಆರೋಗ್ಯ ಸಮಸ್ಯೆಗಳಿಂದಾಗಿ ವಿಚಾರಣೆಯ ಸಮಯದಲ್ಲಿ ನಿಧನರಾದರು. ಉಳಿದ 9 ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಮರಣದಂಡನೆಯ ಜೊತೆಗೆ ನ್ಯಾಯಾಲಯವು ಅಪರಾಧಿಗಳಿಗೆ ಒಟ್ಟು 1.40 ಕೋಟಿ ರೂ. ದಂಡವನ್ನು ವಿಧಿಸಿ, ಸಂತ್ರಸ್ತರ ಕುಟುಂಬಕ್ಕೆ ಪರಿಹಾರವಾಗಿ ನೀಡಿದೆ.

ಗಲ್ಲು ಶಿಕ್ಷೆಗೆ ಒಳಗಾಗಿರುವ 9 ಅಪರಾಧಿಗಳು ಕ್ಷಮಾದಾನವನ್ನು ಕೋರಬಹುದು. ಅವರು ತಮಿಳುನಾಡು ರಾಜ್ಯಪಾಲರು (ಲೇಖನ 161) ಮತ್ತು ಭಾರತದ ರಾಷ್ಟ್ರಪತಿಗಳು (ಲೇಖನ 72) ಅವರ ಮುಂದೆ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:41 pm, Wed, 8 April 26

Follow Us