
ಮುಂಬೈ, ಸೆಪ್ಟೆಂಬರ್ 02: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್(Devendra Fadnavis) ನೇತೃತ್ವದಲ್ಲಿ ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಗೆ ಉಪಮುಖ್ಯಮಂತ್ರಿ ಹಾಗೂ ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ ಗೈರುಹಾಜರಾಗಿ ದಿಢೀರನೆ ದೆಹಲಿಗೆ ತೆರಳಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಊಹಾಪೋಹಗಳಿಗೆ ಕಾರಣವಾಗಿದೆ.
ಫಡ್ನವಿಸ್ ಸರ್ಕಾರದ ಕಾರ್ಯವೈಖರಿ ಅಥವಾ ಬಿಜೆಪಿ ನಾಯಕತ್ವದ ಮೇಲೆ ಶಿಂಧೆ ಅಸಮಾಧಾನಗೊಂಡಿದ್ದಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ತೀವ್ರಗೊಂಡ ಬೆನ್ನಲ್ಲೇ, ಶಿಂಧೆ ಮತ್ತು ಬಿಜೆಪಿ ಇಬ್ಬರೂ ಈ ವರದಿಗಳನ್ನು ಕಟುವಾಗಿ ತಳ್ಳಿಹಾಕಿದ್ದಾರೆ.
ಪಕ್ಷ ಸಂಘಟನೆ ಹಾಗೂ ಸುಪ್ರೀಂ ಕೋರ್ಟ್ ಕೇಸ್: ತಮ್ಮ ದೆಹಲಿ ಭೇಟಿಯ ಕುರಿತು ಸ್ಪಷ್ಟನೆ ನೀಡಿದ ಉಪಮುಖ್ಯಮಂತ್ರಿ ಶಿಂಧೆ, “ವಿವಿಧ ರಾಜ್ಯಗಳ ಶಿವಸೇನಾ ಘಟಕಗಳ ಮುಖ್ಯಸ್ಥರನ್ನು ಭೇಟಿ ಮಾಡಲು ಮತ್ತು ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ ಪಕ್ಷದ ಚಿಹ್ನೆ ಹಾಗೂ ಆಂತರಿಕ ಹಕ್ಕುಗಳಿಗೆ ಸಂಬಂಧಿಸಿದ ಕಾನೂನು ಹೋರಾಟದ ಕುರಿತು ಹಿರಿಯ ವಕೀಲರೊಂದಿಗೆ ಸಮಾಲೋಚನೆ ನಡೆಸಲು ಬಂದಿದ್ದೇನೆ” ಎಂದು ತಿಳಿಸಿದ್ದಾರೆ.
ಅಸಮಾಧಾನದ ವದಂತಿ ನಿರಾಕರಣೆ: ಸಚಿವ ಸಂಪುಟ ಸಭೆಗೆ ಗೈರಾಗಿದ್ದಕ್ಕೂ ಸರ್ಕಾರದ ಆಂತರಿಕ ವಿಚಾರಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ಓದಿ: ಬ್ರಿಟಿಷರಿಗೆ ಪತ್ರ ಬರೆಯುವಂತೆ ಸಾವರ್ಕರ್ಗೆ ಹೇಳಿದ್ದು ಗಾಂಧೀಜಿ: ದೇವೇಂದ್ರ ಫಡ್ನವಿಸ್
ಪೂರ್ವನಿಯೋಜಿತ ಕಾರ್ಯಕ್ರಮ: ಶಿಂಧೆ ಅವರ ದೆಹಲಿ ಭೇಟಿ ಮೊದಲೇ ನಿಗದಿಯಾಗಿತ್ತು. ಹೀಗಾಗಿ ಅವರು ಮಧ್ಯಾಹ್ನದ ಸಂಪುಟ ಸಭೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ.
ಸರ್ಕಾರದಲ್ಲಿ ಎಲ್ಲವೂ ಆಲ್ರೈಟ್: ಮಹಾಯುತಿ ಮೈತ್ರಿಕೂಟದೊಳಗೆ ಯಾವುದೇ ಅಸಮಾಧಾನ ಅಥವಾ ಭಿನ್ನಾಭಿಪ್ರಾಯಗಳಿಲ್ಲ ಎಂದು ಎರಡೂ ಪಕ್ಷಗಳು ಜಂಟಿಯಾಗಿ ಸಮರ್ಥಿಸಿಕೊಂಡಿವೆ.
ಅಧಿಕಾರ ಹಂಚಿಕೆಯ ಸೂಕ್ಷ್ಮತೆ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಗಾದಿ ಬದಲಾವಣೆಯಾದ ನಂತರ, ಅಧಿಕಾರ ಹಂಚಿಕೆ, ಪ್ರಮುಖ ಖಾತೆಗಳ ಮೇಲಿನ ಹಿಡಿತ ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳ (BMC) ಚುನಾವಣಾ ಸ್ಥಾನ ಹಂಚಿಕೆಯ ಕುರಿತು ತೆರೆಮರೆಯಲ್ಲಿ ಚರ್ಚೆಗಳು ನಡೆಯುತ್ತಿರುವುದು ಇಂತಹ ದಿಢೀರ್ ಭೇಟಿಗಳಿಗೆ ರಾಜಕೀಯ ಮಹತ್ವ ತಂದುಕೊಡುತ್ತಿದೆ.
ದೆಹಲಿ ಭೇಟಿ ಸಂಚಲನ: ಶಿಂಧೆ ಅಥವಾ ಫಡ್ನವೀಸ್ ದೆಹಲಿಗೆ ತೆರಳಿ ಬಿಜೆಪಿ ವರಿಷ್ಠರಾದ ಅಮಿತ್ ಶಾ ಅಥವಾ ಜೆ.ಪಿ. ನಡ್ಡಾ ಅವರನ್ನು ಭೇಟಿಯಾದಾಗಲೆಲ್ಲಾ, ರಾಜ್ಯ ರಾಜಕೀಯದಲ್ಲಿ ಪ್ರಮುಖ ಬದಲಾವಣೆಗಳು ನಡೆಯಲಿವೆಯೇ ಎಂಬ ಕುತೂಹಲ ಸದಾ ಗರಿಗೆದರುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ