ಮಹಾರಾಷ್ಟ್ರದಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಲಿಯಲು 1 ವರ್ಷದ ಗಡುವು; ಸಿಎಂ ದೇವೇಂದ್ರ ಫಡ್ನವೀಸ್ ಘೋಷಣೆ
ಮಹಾರಾಷ್ಟ್ರದ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಮರಾಠಿ ಭಾಷೆ ಕಲಿಯಲು 1 ವರ್ಷದ ಗಡುವು ನೀಡಲಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘೋಷಿಸಿದ್ದಾರೆ. ಮಾಧ್ಯಮಗಳೊಂದಿಗೆ ಸಂವಹನ ನಡೆಸುವಾಗ ಅವರು ಈ ಘೋಷಣೆ ಮಾಡಿದರು. ಆಟೋ ಮತ್ತು ಟ್ಯಾಕ್ಸಿ ಚಾಲಕರ ನಿಯೋಗವು ಭೇಟಿಯಾಗಿ ಈ ಬಗ್ಗೆ ವಿನಂತಿಸಿತ್ತು. ಆದ್ದರಿಂದ, ಅವರಿಗೆ ಈ ವಿಸ್ತರಣೆಯನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಅಮರಥಿ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಈ ವರ್ಷ ಮರಾಠಿ ಕಲಿಯಬೇಕು ಎಂದು ಅವರು ಮನವಿ ಮಾಡಿದ್ದಾರೆ. ಆಟೋ ಚಾಲಕರಿಗೆ ಮರಾಠಿ ಕಲಿಯಲು 1 ವರ್ಷದ ವಿಸ್ತರಣೆಯನ್ನು ನೀಡಲಾಗಿರುವುದರಿಂದ, ಅವರ ವಿರುದ್ಧ ಇಡೀ ವರ್ಷ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ.

ಮುಂಬೈ, ಆಗಸ್ಟ್ 27: ಮಹಾರಾಷ್ಟ್ರ ಸರ್ಕಾರದ (Maharashtra Government) ಭಾಷಾ ನಿಯಮಾವಳಿಯ ಕುರಿತು ತೀವ್ರ ಪ್ರತಿಭಟನೆ ಹಾಗೂ ರಾಜಕೀಯ ವಾಗ್ವಾದಗಳು ಎದ್ದಿರುವ ಬೆನ್ನಲ್ಲೇ, ಆಟೋ ಮತ್ತು ಟ್ಯಾಕ್ಸಿ ಚಾಲಕರು ಮರಾಠಿ ಭಾಷೆಯನ್ನು ಕಲಿಯಲು 1 ವರ್ಷದ ಕಾಲಾವಕಾಶ ನೀಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (CM Devendra Fadnavis) ಘೋಷಿಸಿದ್ದಾರೆ. ಮುಂದಿನ 1 ವರ್ಷದವರೆಗೆ ಯಾವುದೇ ಚಾಲಕರ ವಿರುದ್ಧ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗುವುದಿಲ್ಲ, ಇದರಿಂದಾಗಿ ಅವರು ಮರಾಠಿ ಭಾಷೆಯ ಪ್ರಾಥಮಿಕ ಜ್ಞಾನವನ್ನು ಗಳಿಸಲು ಸಮಯ ಸಿಗಲಿದೆ ಎಂದು ಫಡ್ನವೀಸ್ ತಿಳಿಸಿದ್ದಾರೆ.
“ನಾನು ಕ್ಯಾಬ್ ಮತ್ತು ಆಟೋ ಚಾಲಕರನ್ನು ಭೇಟಿಯಾದೆ. ಪ್ರತಿಯೊಬ್ಬರೂ ಮರಾಠಿ ಕಲಿಯಬೇಕು ಎಂಬುದನ್ನು ಅವರೆಲ್ಲರೂ ಒಪ್ಪಿಕೊಂಡಿದ್ದಾರೆ. ಆದರೆ ಈ ವೃತ್ತಿಯಲ್ಲಿ ವಿವಿಧ ವಯೋಮಾನದ ಜನರಿದ್ದು ತಕ್ಷಣವೇ ಭಾಷೆ ಕಲಿಯುವುದು ಕಷ್ಟ ಎಂದು ಹೇಳಿದ್ದಾರೆ. ಅವರು ಪ್ಲಾನ್ ಒಂದನ್ನು ಸಿದ್ಧಪಡಿಸಿ ಒಂದು ವರ್ಷದ ಸಮಯ ಕೇಳಿದ್ದಾರೆ. ರಾಜ್ಯ ಸರ್ಕಾರವು ಈ ಬೇಡಿಕೆಯನ್ನು ಒಪ್ಪಿಕೊಂಡಿದೆ. ಆದ್ದರಿಂದ ಮುಂದಿನ ಒಂದು ವರ್ಷ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ” ಎಂದು ಫಡ್ನವೀಸ್ ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ದೇವೇಂದ್ರ ಫಡ್ನವೀಸ್ ನಿವಾಸದಲ್ಲಿ 3 ರಹಸ್ಯ ಸಭೆಗಳು, ಎನ್ಸಿಪಿಯಲ್ಲಿ ಮತ್ತೊಂದು ಒಡಕು
ಏನಿದು ಹೊಸ ಮರಾಠಿ ನಿಯಮ?:
ಕೆಲವು ದಿನಗಳ ಹಿಂದಷ್ಟೇ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು, ಮರಾಠಿ ಭಾಷೆಯ ಜ್ಞಾನವಿಲ್ಲದ ಚಾಲಕರ ಲೈಸೆನ್ಸ್ ಬ್ಯುಸಿನೆಸ್ ಬ್ಯಾಡ್ಜ್ಗಳನ್ನು ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಸಿದ್ದರು. ಮರಾಠಿ ಬರದಿದ್ದರೆ ಮೊದಲ ಹಂತದಲ್ಲಿ 1 ತಿಂಗಳ ಕಾಲ ಬ್ಯಾಡ್ಜ್ ಅಮಾನತುಗೊಳಿಸಲಾಗುವುದು. ಆ ಅವಧಿಯಲ್ಲೂ ಕಲಿಯದಿದ್ದರೆ ಹೆಚ್ಚುವರಿಯಾಗಿ 3 ತಿಂಗಳು ಕಾಲಾವಕಾಶ ನೀಡಲಾಗುವುದು. 4 ತಿಂಗಳ ನಂತರವೂ ಮರಾಠಿ ಕಲಿಯದಿದ್ದರೆ, ಅವರಿಗೆ ಭಾಷೆಯ ಮೇಲೆ ಪ್ರೀತಿಯಿಲ್ಲ ಎಂದು ಪರಿಗಣಿಸಿ ಅವರ ಬ್ಯಾಡ್ಜ್ ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು ಎಂದು ನಿಯಮ ತರಲಾಗಿತ್ತು.
ಇದನ್ನೂ ಓದಿ: ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಡ್ರಗ್ಸ್ ಫ್ಯಾಕ್ಟರಿಯೇ ಪತ್ತೆ: 1.13 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್, 7 ಜನರ ಬಂಧನ
ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ನಾಲ್ವರು ಟ್ಯಾಕ್ಸಿ ಚಾಲಕರು ಬಾಂಬೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಆಗಸ್ಟ್ ೧೨ ರಂದು ಹೊರಡಿಸಲಾದ ಸರ್ಕಾರಿ ಅಧಿಸೂಚನೆಯು ಲಕ್ಷಾಂತರ ಬಡ ಮತ್ತು ವಲಸಿಗ ಚಾಲಕರ ಜೀವನೋಪಾಯಕ್ಕೆ ಧಕ್ಕೆ ತರುತ್ತದೆ ಎಂದು ಅರ್ಜಿದಾರರು ವಾದಿಸಿದ್ದು, ನಿಯಮ ಜಾರಿಗೆ ತಡೆಯಾಜ್ಞೆ ನೀಡುವಂತೆ ಕೋರಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




