Sitaram Yechury Death: ಸೀತಾರಾಂ ಯೆಚೂರಿ ಮೃತದೇಹವನ್ನು ಏಮ್ಸ್​ಗೆ ಸಂಶೋಧನೆಗಾಗಿ ದಾನ ಮಾಡಿದ ಕುಟುಂಬಸ್ಥರು

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಏಮ್ಸ್​ನಲ್ಲಿ ನಿಧನರಾಗಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಎಡಪಂಥೀಯ ನಾಯಕ ಸೀತಾರಾಂ ಯೆಚೂರಿ ಅವರಿಗೆ 72 ವರ್ಷವಾಗಿತ್ತು.

Sitaram Yechury Death: ಸೀತಾರಾಂ ಯೆಚೂರಿ ಮೃತದೇಹವನ್ನು ಏಮ್ಸ್​ಗೆ ಸಂಶೋಧನೆಗಾಗಿ ದಾನ ಮಾಡಿದ ಕುಟುಂಬಸ್ಥರು
ಸೀತಾರಾಂ ಯೆಚೂರಿ
Follow us
|

Updated on: Sep 12, 2024 | 8:06 PM

ನವದೆಹಲಿ: ಹಿರಿಯ ಕಮ್ಯುನಿಸ್ಟ್ ಪಾರ್ಟಿ (ಸಿಪಿಐಎಂ) ನಾಯಕ ಸೀತಾರಾಂ ಯೆಚೂರಿ ಅವರ ಕುಟುಂಬಸ್ಥರು ಇಂದು ಮಧ್ಯಾಹ್ನ ಅವರ ನಿಧನದ ನಂತರ ಸೀತಾರಾಂ ಯೆಚೂರಿ ಅವರ ಮೃತದೇಹವನ್ನು ಬೋಧನೆ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS)ಗೆ ದಾನ ಮಾಡಿದ್ದಾರೆ.

72 ವರ್ಷದ ಸೀತಾರಾಂ ಯೆಚೂರಿ ಅವರು ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದರು. ಇಂದು ಮಧ್ಯಾಹ್ನ 3.05ಕ್ಕೆ ಅವರು ನಿಧನರಾದರು ಎಂದು ಏಮ್ಸ್ ದೃಢಪಡಿಸಿದೆ. ಟೀಚಿಂಗ್ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಸೀತಾರಾಂ ಯೆಚೂರಿ ಅವರ ಕುಟುಂಬವು ಮೃತದೇಹವನ್ನು ನವದೆಹಲಿಯ AIIMSಗೆ ದಾನ ಮಾಡಿದೆ ಎಂದು ಏಮ್ಸ್​ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆಗಸ್ಟ್ 19ರಿಂದ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಅವರಿಗೆ ನ್ಯುಮೋನಿಯಾ ಸೋಂಕು ಉಂಟಾಗಿತ್ತು. ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿದ್ದರೂ ಮತ್ತು ವೈದ್ಯರ ತಂಡವು ಮೇಲ್ವಿಚಾರಣೆ ಮಾಡಿದ್ದರೂ ಇತ್ತೀಚಿನ ದಿನಗಳಲ್ಲಿ ಸೀತಾರಾಂ ಯೆಚೂರಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು.

ಇದನ್ನೂ ಓದಿ: Sitaram Yechury Death: ತೀವ್ರ ಅನಾರೋಗ್ಯದಿಂದ ಹಿರಿಯ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ನಿಧನ

ದೇಹದಾನವು ನಿಸ್ವಾರ್ಥ ಕಾರ್ಯವಾಗಿದ್ದು, ಅದು ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಪ್ರಗತಿಯ ಭವಿಷ್ಯಕ್ಕೆ ಪ್ರಯೋಜನಕಾರಿಯಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಮಾನವ ಅಂಗರಚನಾಶಾಸ್ತ್ರವನ್ನು ವಿವರವಾಗಿ ಅಧ್ಯಯನ ಮಾಡಲು ದಾನ ಮಾಡಿದ ಮೃತದೇಹಗಳನ್ನು ಬಳಸುತ್ತಾರೆ. ಹಾಗೇ, ಸರ್ಜನ್​ಗಳು ಮತ್ತು ವೈದ್ಯರು ಹೊಸ ತಂತ್ರಗಳನ್ನು ಅಭ್ಯಾಸ ಮಾಡಲು, ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳನ್ನು ಪರಿಷ್ಕರಿಸಲು ಮತ್ತು ಸುರಕ್ಷಿತ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸಲು ದಾನ ಮಾಡಿದ ದೇಹಗಳನ್ನು ಬಳಸುತ್ತಾರೆ.

ರೋಗಗಳನ್ನು ಅನ್ವೇಷಿಸಲು, ವಿವಿಧ ಅಂಗಗಳ ಮೇಲೆ ವೈದ್ಯಕೀಯ ಪರಿಸ್ಥಿತಿಗಳ ಪರಿಣಾಮಗಳನ್ನು ಅಧ್ಯಯನ ಮಾಡಲು ಮತ್ತು ಹೊಸ ಚಿಕಿತ್ಸೆಗಳು ಅಥವಾ ಔಷಧಿಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಮತ್ತು ಸಂಶೋಧಕರು ದಾನ ಮಾಡಿದ ಮೃತದೇಹಗಳನ್ನು ಬಳಸುತ್ತಾರೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನಿವಾಸದಲ್ಲಿ ಗಣಪತಿ ಪೂಜೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೇರಳ ಸಿಎಂ ಪಿಣರಾಯಿ ವಿಜಯನ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಸಿಎಂ ಚಂದ್ರಬಾಬು ನಾಯ್ಡು ಮುಂತಾದವರು ಸೀತಾರಾಂ ಯೆಚೂರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಸೀತಾರಾಂ ಯೆಚೂರಿ ಅವರು 2005ರಿಂದ 2017ರವರೆಗೆ 12 ವರ್ಷಗಳ ಕಾಲ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದರು. ಅವರು ಏಪ್ರಿಲ್ 19, 2015ರಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ