AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದಿ ನಾಯಿ ಕಚ್ಚಿದ್ದರಿಂದ ಕಾನ್ಪುರದ ಕಾಲೇಜು ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ!

ಕಾನ್ಪುರದಲ್ಲಿ ಭಯಾನಕ ಘಟನೆ ನಡೆದಿದೆ. ಬೀದಿ ನಾಯಿಗಳು 21 ವರ್ಷದ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಆಕೆಯ ಮುಖಕ್ಕೆ 17 ಹೊಲಿಗೆಗಳು ಬಿದ್ದಿವೆ. ಮೈ ತುಂಬ ಹಲವು ಗಾಯಗಳಾಗಿವೆ. 21 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಬೀದಿ ನಾಯಿಗಳು ಅವಳ ಮುಖದ ಮೇಲೆ ತೀವ್ರವಾದ ದಾಳಿ ನಡೆಸಿವೆ. ಇದರಿಂದ ಆಕೆಯ ಮುಖಕ್ಕೆ 17 ಹೊಲಿಗೆಗಳನ್ನು ಹಾಕಲಾಗಿದೆ.

ಬೀದಿ ನಾಯಿ ಕಚ್ಚಿದ್ದರಿಂದ ಕಾನ್ಪುರದ ಕಾಲೇಜು ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ!
Stray Dog Attack
ಸುಷ್ಮಾ ಚಕ್ರೆ
|

Updated on: Aug 23, 2025 | 4:42 PM

Share

ಕಾನ್ಪುರ, ಆಗಸ್ಟ್ 23: ಕಾನ್ಪುರದಲ್ಲಿ (Kanpur) 21 ವರ್ಷದ ಬಿಬಿಎ ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿಗಳು ಕ್ರೂರವಾಗಿ ದಾಳಿ ಮಾಡಿವೆ. ಆಕೆಯ ಮುಖಕ್ಕೆ ತೀವ್ರ ಗಾಯಗಳು ಉಂಟಾಗಿದ್ದು, 17 ಹೊಲಿಗೆಗಳನ್ನು ಹಾಕಲಾಗಿದೆ. ಕಾಲೇಜಿನಿಂದ ಮನೆಗೆ ಮರಳುತ್ತಿದ್ದ 21 ವರ್ಷದ ಯುವತಿಯ ಮೇಲೆ ಬೀದಿ ನಾಯಿಗಳು (Stray Dog Attack) ಕ್ರೂರವಾಗಿ ದಾಳಿ ಮಾಡಿವೆ. ಈ ದಾಳಿಯಿಂದ ಆಕೆಯ ಮುಖದ ಮೇಲೆ ಆಳವಾದ ಗಾಯಗಳಾಗಿದ್ದು, ವೈದ್ಯರು ಆಕೆಯ ಕೆನ್ನೆಗೆ 17 ಹೊಲಿಗೆಗಳನ್ನು ಹಾಕಿದ್ದಾರೆ. ಬೀದಿ ನಾಯಿಗಳು ಅವಳನ್ನು ನೆಲಕ್ಕೆ ಎಳೆದುಕೊಂಡು ಮುಖ ಮತ್ತು ದೇಹದ ಮೇಲೆ ಕ್ರೂರವಾಗಿ ದಾಳಿ ಮಾಡಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ನಾಯಿ ಕಚ್ಚಿ ಎಳೆದಿದ್ದರಿಂದ ಆಕೆಯ ಬಲ ಕೆನ್ನೆ ಎರಡು ಭಾಗವಾಗಿದ್ದು, ಆಕೆಯ ಮೂಗಿನ ಮೇಲೆ, ದೇಹದ ಇತರ ಭಾಗಗಳ ಮೇಲೆ ಗಂಭೀರವಾದ ಗಾಯಗಳಾಗಿವೆ. ಆಗಸ್ಟ್ 20ರಂದು ಆಕೆ ಮನೆಗೆ ಹಿಂದಿರುಗುತ್ತಿದ್ದಾಗ ಬೀದಿ ನಾಯಿಗಳು ಆ 21 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ದಾಳಿ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ: ಬೀದಿ ನಾಯಿಗಳಿಗೆ ಲಸಿಕೆ, ಸಂತಾನಹರಣ ಚಿಕಿತ್ಸೆ ಮಾಡಿಸಿ ಹೊರಗೆ ಬಿಡಬಹುದು: ಸುಪ್ರೀಂಕೋರ್ಟ್​

ಈ ದಾಳಿಯಲ್ಲಿ ಆಕೆಗೆ ಹಲವು ಬಾರಿ ಕಚ್ಚಿದ ಗಾಯಗಳಾಗಿದ್ದು, ವೈದ್ಯರು ಆಕೆಯ ಕೆನ್ನೆ ಮತ್ತು ಮೂಗಿನ ಮೇಲೆ 17 ಹೊಲಿಗೆಗಳನ್ನು ಹಾಕಬೇಕಾಯಿತು. ಅಲೆನ್ ಹೌಸ್ ರುಮಾ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿನಿ ವೈಷ್ಣವಿ ಸಾಹು ಎಂದು ಗುರುತಿಸಲ್ಪಟ್ಟ ಯುವತಿ ಶ್ಯಾಮ್ ನಗರದ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ ಬೀದಿ ನಾಯಿಗಳು ಮತ್ತು ಕೋತಿಗಳ ನಡುವೆ ಜಗಳ ನಡೆದಿತ್ತು. ಈ ವೇಳೆ ಅವುಗಳ ಜಗಳದಲ್ಲಿ ಕೋಪಗೊಂಡಿದ್ದ ಮೂರು ನಾಯಿಗಳು ಇದ್ದಕ್ಕಿದ್ದಂತೆ ಆಕೆಯ ಮೇಲೆ ದಾಳಿ ಮಾಡಿದವು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರಾಣಿಗಳು ಆಕೆಯನ್ನು ನೆಲಕ್ಕೆ ಎಳೆದುಕೊಂಡು ಹೋಗಿ, ಆಕೆಯ ಮುಖ ಮತ್ತು ದೇಹವನ್ನು ಕಚ್ಚಿದವು. ಆಕೆಯ ಬಲ ಕೆನ್ನೆ ಎರಡು ಭಾಗಗಳಾಗಿ ಹರಿದುಹೋಗಿತ್ತು.

ಇದನ್ನೂ ಓದಿ: ಬೀದಿ ನಾಯಿಗಳನ್ನು ಸ್ಥಳಾಂತರಿಸಿ: ಸುಪ್ರೀಂಕೋರ್ಟ್​ನಿಂದ ಎಲ್ಲ ರಾಜ್ಯಗಳಿಗೆ ಖಡಕ್​ ಸೂಚನೆ

ಆಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಆವೇಶದಲ್ಲಿದ್ದ ಬೀದಿ ನಾಯಿಗಳು ಮತ್ತೆ ಆಕೆಯ ಮೇಲೆ ದಾಳಿ ಮಾಡಿ ರಸ್ತೆಗೆ ಎಳೆದುಕೊಂಡು ಹೋದವು. ಆಕೆಯ ಕೂಗು ಕೇಳಿ, ಸ್ಥಳೀಯರು ಕೋಲುಳಿಂದ ಹೊಡೆದು ನಾಯಿಗಳನ್ನು ಓಡಿಸಿದರು. ಅಷ್ಟರಲ್ಲಿ ಆ ಯುವತಿಯ ದೇಹದಿಂದ ರಕ್ತಸ್ರಾವವಾಗುತ್ತಿತ್ತು. ವಿಷಯ ತಿಳಿದ ಕೂಡಲೆ ಆಕೆಯ ಕುಟುಂಬ ಸದಸ್ಯರು ತಕ್ಷಣ ಆಕೆಯನ್ನು ಕಾನ್ಶಿರಾಮ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಆಕೆಯ ಗಾಯಗಳನ್ನು ಹೊಲಿದರು.

ಸುಪ್ರೀಂ ಕೋರ್ಟ್ ಇತ್ತೀಚೆಗೆ ದೆಹಲಿಯ ಬೀದಿ ನಾಯಿಗಳನ್ನು ಸಂತಾನಹರಣ ಚಿಕಿತ್ಸೆ ನಡೆಸಬೇಕು ಮತ್ತು ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು ಎಂಬ ಕುರಿತು ನೀಡಿದ ತೀರ್ಪಿನ ಕುರಿತು ದೇಶಾದ್ಯಂತ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿರುವ ನಡುವೆಯೇ ಈ ದಾಳಿ ನಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ