AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್​ರನ್ನು ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ದೆಹಲಿಗೆ ಶಿಫ್ಟ್ ಮಾಡಿ: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ

Kerala Journalist Siddique Kappan: ಉತ್ತರ ಪ್ರದೇಶದ ಜೈಲಿನಲ್ಲಿರುವ ಕಪ್ಪನ್ ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ದೆಹಲಿಗೆ ಶಿಫ್ಟ್ ಮಾಡುವಂತೆ ಸುಪ್ರೀಂಕೋರ್ಟ್ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದ್ದಾರೆ.

ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್​ರನ್ನು ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ದೆಹಲಿಗೆ ಶಿಫ್ಟ್ ಮಾಡಿ: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ
ಸಿದ್ದಿಕ್ ಕಪ್ಪನ್
ರಶ್ಮಿ ಕಲ್ಲಕಟ್ಟ
|

Updated on: Apr 28, 2021 | 4:30 PM

Share

ದೆಹಲಿ: ಕಳೆದ ವರ್ಷ ಉತ್ತರ ಪ್ರದೇಶದ ಹಾಥರಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ದಲಿತ ಯುವತಿಯ ಮೃತದೇಹವನ್ನು ಕುಟುಂಬದವರಿಗೆ ನೀಡದೆ ಪೊಲೀಸರೇ ರಾತ್ರೋರಾತ್ರಿ ಅಂತ್ಯ ಸಂಸ್ಕಾರ ಮಾಡಿದ್ದರು. ದೇಶದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಈ ಘಟನೆ ಬಗ್ಗೆ ವರದಿ ಮಾಡಲು ಹೋಗುತ್ತಿದ್ದಾಗ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಉತ್ತರ ಪ್ರದೇಶದ ಜೈಲಿನಲ್ಲಿರುವ ಕಪ್ಪನ್ ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ದೆಹಲಿಗೆ ಶಿಫ್ಟ್ ಮಾಡುವಂತೆ ಸುಪ್ರೀಂಕೋರ್ಟ್ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದ್ದಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ನೇತೃತ್ವದ ನ್ಯಾಯಪೀಠ ಬುಧವಾರ ಈ ಆದೇಶ ನೀಡಿದ್ದು, ಕಪ್ಪನ್ ಅವರು ಗುಣಮುಖರಾದ ನಂತರವೇ ಮಥುರಾ ಜೈಲಿಗೆ ಕರೆದುಕೊಂಡು ಹೋದರೆ ಸಾಕು ಎಂದಿದೆ.

ಆತನ ಬಂಧನ ಪಶ್ನಿಸಿ ಅಥವಾ ಇನ್ನಾವುದೇ ಪರಿಹಾರಕ್ಕಾಗಿ ಸೂಕ್ತ ವೇದಿಕೆಯನ್ನು ಸಂಪರ್ಕಿಸಲು ಸುಪ್ರೀಂ ಕೋರ್ಟ್ ಕಪ್ಪನ್ ಅವರಿಗೆ ಸ್ವಾತಂತ್ರ್ಯ ನೀಡಿದ್ದು, ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (KUWJ) ಸಲ್ಲಿಸಿದ್ದ ಮನವಿಯನ್ನು ಇತ್ಯರ್ಥಗೊಳಿಸಿದೆ.

ಪ್ರಕರಣದಲ್ಲಿನ ಸತ್ಯಗಳನ್ನು ಗಣನೆಗೆ ತೆಗೆದುಕೊಂಡು ನಾವು ರಿಟ್ ಅರ್ಜಿಯನ್ನು ವಿಲೇವಾರಿ ಮಾಡುತ್ತೇವೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಬಹಳ ಗಂಭೀರವಾಗಿ ವಿರೋಧಿಸಿದ್ದರೂ, ಆರೋಪಿಯನ್ನು ಆರ್‌ಎಂಎಲ್ ಅಥವಾ ಏಮ್ಸ್ ಗೆ ಸ್ಥಳಾಂತರಿಸಲು ಅಥವಾ ಎಲ್ಲೆಲ್ಲಿ ಚಿಕಿತ್ಸೆ ನೀಡಬಹುದೆಂದು ನಾವು ರಾಜ್ಯಕ್ಕೆ ನಿರ್ದೇಶಿಸುತ್ತಿದ್ದೇವೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎ ಎಸ್ ಬೋಪಣ್ಣ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

42 ವರ್ಷದ ಕಪ್ಪನ್ ಅವರಿಗೆ ಕೊವಿಡ್ ಇಲ್ಲ, ಅವರಿಗೆ ಮಥುರಾದ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು  ನ್ಯಾಯಾಲಯದ ಸಲಹೆಯನ್ನು ಮೆಹ್ತಾ ತೀವ್ರವಾಗಿ ವಿರೋಧಿಸಿದರು.

ಆರೋಗ್ಯ ಸೌಲಭ್ಯಗಳು ಈಗಾಗಲೇ ರೋಗಿಗಳಿಂದ ತುಂಬಿರುವುದರಿಂದ ಕಪ್ಪನ್‌ಗಾಗಿ ದೆಹಲಿಯಲ್ಲಿ ಆಸ್ಪತ್ರೆಯ ಹಾಸಿಗೆಯನ್ನು ಖಾಲಿ ಮಾಡುವಂತೆ ಆದೇಶದಲ್ಲಿ ಉಲ್ಲೇಖಿಸುವಂತೆ ಅವರು ನ್ಯಾಯಪೀಠವನ್ನು ಕೇಳಿದರು. ಆದಾಗ್ಯೂ, ಮೆಹ್ತಾ ಅವರ ವಾದವನ್ನು ಕೋರ್ಟ್ ತಿರಸ್ಕರಿಸಿದೆ.

ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾದ ಮೆಹ್ತಾ, ಈ ಹಿಂದೆಯೇ ಉನ್ನತ ನ್ಯಾಯಾಲಯದ ಸಲಹೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಇದೇ ರೀತಿಯ ಹಲವಾರು ಆರೋಪಿಗಳು ರಾಜ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತ್ರಿಕೋದ್ಯಮ ಮಂಡಳಿಯು ಇಲ್ಲಿ ಅರ್ಜಿದಾರರಾಗಿರುವ ಕಾರಣ ಕಪ್ಪನ್ ಅವರಿಗೆ ವಿಶೇಷ ಚಿಕಿತ್ಸೆ ನೀಡಬಾರದು ಎಂದು ಮೆಹ್ತಾ ವಾದಿಸಿದ್ದಾರೆ. ಬಹು ಅಂಗಾಂಗ ವೈಫಲ್ಯದ ಜನರಿಗೆ ಕೂಡಾ ಮಥುರಾದ ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ ಮೆಹ್ತಾ.

ಕಪ್ಪನ್‌ಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ನೀಡುವ ಮತ್ತು ಪ್ರಾರ್ಥನೆಗೆ ಮಾತ್ರ ಈ ಆದೇಶ ಸೀಮಿತವಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಕಳೆದ ವರ್ಷ ನವೆಂಬರ್ 16 ರಂದು ಪತ್ರಕರ್ತನ ಬಂಧನವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರದಿಂದ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೋರಿತ್ತು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಥವಾ ಪಿಎಫ್‌ಐ ಜೊತೆ ಸಂಪರ್ಕ ಹೊಂದಿದ್ದ ನಾಲ್ಕು ಜನರ ವಿರುದ್ಧ ಐಪಿಸಿ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಯ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಇದನ್ನೂ ಓದಿ:  ಪ್ರಾಣಿಗಳಂತೆ ಆಸ್ಪತ್ರೆಯ ಮಂಚಕ್ಕೆ ಕಟ್ಟಿಹಾಕಿರುವ ಪತಿಯನ್ನು ಬಿಡಿಸುವಂತೆ ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದ ಕಪ್ಪನ್ ಪತ್ನಿ