ಸುಪ್ರೀಂ ಕೋರ್ಟ್‌ಗೆ ಮತ್ತಷ್ಟು ಶಕ್ತಿ: ನ್ಯಾಯಮೂರ್ತಿಗಳ ಸಂಖ್ಯೆ 38ಕ್ಕೆ ಹೆಚ್ಚಿಸಲು ಲೋಕಸಭೆಯಲ್ಲಿ ಮಸೂದೆ ಮಂಡನೆ

Parliament Monsoon Session: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 34 ರಿಂದ 38ಕ್ಕೆ ಹೆಚ್ಚಿಸುವ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದೆ. ಇದು ಪ್ರಕರಣಗಳ ವಿಲೇವಾರಿಗೆ ವೇಗ ನೀಡಲಿದೆ. ಇದರಿಂದ ನ್ಯಾಯಾಂಗದ ಮೇಲಿನ ಹೊರೆ ಕಡಿಮೆಯಾಗಿ, ಬಾಕಿ ಇರುವ ಲಕ್ಷಾಂತರ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸಹಕಾರಿಯಾಗಲಿದೆ. ಸಾಮಾನ್ಯ ಜನರಿಗೆ ತ್ವರಿತ ನ್ಯಾಯ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಸಂವಿಧಾನದ 124ನೇ ವಿಧಿಯಡಿ ಸಂಸತ್ತಿಗೆ ಈ ಅಧಿಕಾರವಿದೆ.

ಸುಪ್ರೀಂ ಕೋರ್ಟ್‌ಗೆ ಮತ್ತಷ್ಟು ಶಕ್ತಿ: ನ್ಯಾಯಮೂರ್ತಿಗಳ ಸಂಖ್ಯೆ 38ಕ್ಕೆ ಹೆಚ್ಚಿಸಲು ಲೋಕಸಭೆಯಲ್ಲಿ ಮಸೂದೆ ಮಂಡನೆ
ಸುಪ್ರೀಂಕೋರ್ಟ್​

Updated on: Jul 20, 2026 | 1:25 PM

ನವದೆಹಲಿ, ಜುಲೈ 20: ಸಂಸತ್ತಿನ ಮುಂಗಾರು ಅಧಿವೇಶನ(Parliament Monsoon Session)ದ ಮೊದಲ ದಿನವಾದ ಇಂದು, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಲೋಕಸಭೆಯಲ್ಲಿ ‘ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ತಿದ್ದುಪಡಿ ಮಸೂದೆ, 2026’ ಅನ್ನು ಯಶಸ್ವಿಯಾಗಿ ಮಂಡಿಸಿದರು. ಈ ಮಸೂದೆಯು 1956 ರ ಸುಪ್ರೀಂ ಕೋರ್ಟ್ ಕಾಯ್ದೆಗೆ ತಿದ್ದುಪಡಿ ತರಲಿದ್ದು, ಭಾರತದ ಮುಖ್ಯ ನ್ಯಾಯಮೂರ್ತಿಗಳು (CJI) ಸೇರಿದಂತೆ ಸುಪ್ರೀಂ ಕೋರ್ಟ್‌ನ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 34 ರಿಂದ 38 ಕ್ಕೆ ಹೆಚ್ಚಿಸಲಿದೆ.

ಸುಗ್ರೀವಾಜ್ಞೆಯ ಬದಲಿಗೆ ಶಾಶ್ವತ ಕಾಯ್ದೆ
ಕಳೆದ ಮೇ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟವು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿತ್ತು. ನಂತರ  ರಾಷ್ಟ್ರಪತಿ ಈ ಕುರಿತು ವಿಶೇಷ ಸುಗ್ರೀವಾಜ್ಞೆಯನ್ನು ಹೊರಡಿಸಿದ್ದರು. ಈಗ ಆ ತಾತ್ಕಾಲಿಕ ಸುಗ್ರೀವಾಜ್ಞೆಯ ಜಾಗದಲ್ಲಿ ಸಂಸತ್ತಿನ ಶಾಶ್ವತ ಕಾಯ್ದೆಯನ್ನು ತರಲು ಈ ಮಸೂದೆಯನ್ನು ಪರಿಚಯಿಸಲಾಗಿದೆ.

ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಸಿಜೆಐ ಸೇರಿದಂತೆ 32 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹೊಸ ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಂಡರೆ, ಪೂರ್ಣಪ್ರಮಾಣದ ಕಾರ್ಯನಿರ್ವಾಹಕ ಬಲ 38 ಕ್ಕೆ ಏರಿಕೆಯಾಗಲಿದೆ.

ಸಂವಿಧಾನದ ನಿಯಮ ಮತ್ತು ಇತಿಹಾಸ

ಭಾರತೀಯ ಸಂವಿಧಾನದ 124 ನೇ ವಿಧಿಯ ಪ್ರಕಾರ, ಸುಪ್ರೀಂ ಕೋರ್ಟ್‌ಗೆ ಅಗತ್ಯವಿರುವ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಕಾನೂನಿನ ಮೂಲಕ ಹೆಚ್ಚಿಸುವ ಸಂಪೂರ್ಣ ಅಧಿಕಾರ ಸಂಸತ್ತಿಗೆ ಇದೆ. ಈ ಹಿಂದೆ 2019 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂತರ್ತಗಳ ಸಂಖ್ಯೆಯನ್ನು 31 ರಿಂದ 34 ಕ್ಕೆ  ಹೆಚ್ಚಿಸಲಾಗಿತ್ತು. ಇದೀಗ 7 ವರ್ಷಗಳ ನಂತರ ಮತ್ತೆ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ.

ಮತ್ತಷ್ಟು ಓದಿ: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ, ಮಸೂದೆಗಳ ಮಂಡನೆ,ನೀಟ್ ಪೇಪರ್ ಸೋರಿಕೆ ಕುರಿತು ಗದ್ದಲ ಸಾಧ್ಯತೆ

ಈ ಮಸೂದೆಯನ್ನು ಜಾರಿಗೆ ತರಲು ಸಂವಿಧಾನಕ್ಕೆ ಯಾವುದೇ ತಿದ್ದುಪಡಿ ಮಾಡುವ ಅಗತ್ಯವಿಲ್ಲ. ಸಂಸತ್ತಿನಲ್ಲಿ ‘ಸರಳ ಬಹುಮತ’ ದೊರೆತರೆ ಸಾಕು ಇದು ಕಾಯ್ದೆಯಾಗಿ ರೂಪುಗೊಳ್ಳುತ್ತದೆ.

ಸಾಮಾನ್ಯ ಜನರಿಗೆ ಇದರಿಂದ ಏನು ಲಾಭ?

ಸಾಮಾನ್ಯವಾಗಿ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಲಕ್ಷಾಂತರ ಪ್ರಕರಣಗಳು ವಿಚಾರಣೆಗೆ ಕಾಯುತ್ತಾ ವರ್ಷಗಟ್ಟಲೆ ಬಾಕಿ ಉಳಿಯುವುದು ದೊಡ್ಡ ಸಮಸ್ಯೆಯಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಾಗುವುದರಿಂದ ಹೆಚ್ಚಿನ ಸಂಖ್ಯೆಯ ಪೀಠಗಳನ್ನು ರಚಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸಾಮಾನ್ಯ ನಾಗರಿಕರ ಅರ್ಜಿಗಳು ಮತ್ತು ಪ್ರಮುಖ ಸಂವಿಧಾನಾತ್ಮಕ ಪ್ರಕರಣಗಳು ಶೀಘ್ರವಾಗಿ ಇತ್ಯರ್ಥಗೊಳ್ಳಲಿವೆ.

ಸಾಲು ಸಾಲು ಪ್ರಕರಣಗಳ ವಿಚಾರಣೆಯಿಂದ ಜಜ್ಜಡುತ್ತಿರುವ ನ್ಯಾಯಮೂರ್ತಿಗಳ ಮೇಲಿನ ಭಾರಿ ಕೆಲಸದ ಒತ್ತಡ ಕಡಿಮೆಯಾಗಿ, ಮತ್ತಷ್ಟು ಗುಣಮಟ್ಟದ ಹಾಗೂ ಆಳವಾದ ತೀರ್ಪುಗಳನ್ನು ನೀಡಲು ಸಹಕಾರಿಯಾಗಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us