Gyanvapi Mosque: ವಾರಾಣಸಿ ಜ್ಞಾನವಾಪಿ ಮಸೀದಿ ಪ್ರಕರಣ; ಇಂದು ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 17, 2022 | 8:36 AM

ವಿಡಿಯೊ ಸಮೀಕ್ಷೆ ವಿರೋಧಿಸಿ ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿಯು ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದೆ.

Gyanvapi Mosque: ವಾರಾಣಸಿ ಜ್ಞಾನವಾಪಿ ಮಸೀದಿ ಪ್ರಕರಣ; ಇಂದು ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ
ಕಾಶಿಯ ಜ್ಞಾನವಾಪಿ ಮಸೀದಿ
Follow us on

ದೆಹಲಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಜ್ಞಾನವಾಪಿ-ಶೃಂಗಾರ್ ಗೌರಿ (Varanasi Gyanvapi Mosque) ಸಮುಚ್ಚಯದ ವಿಡಿಯೊ ಸಮೀಕ್ಷೆ ಕುರಿತಂತೆ ಅರ್ಜಿದಾರರ ಮನವಿಯನ್ನು ಸುಪ್ರೀಂಕೋರ್ಟ್ ಇಂದು (ಮೇ 17) ವಿಚಾರಣೆ ನಡೆಸಲಿದೆ. ವಿಡಿಯೊ ಸಮೀಕ್ಷೆ ವಿರೋಧಿಸಿ ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿಯು ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದೆ. ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎನ್ನಲಾಗುವ ಕೊಳವನ್ನು ನಿರ್ಬಂಧಿಸುವಂತೆ ವಾರಾಣಸಿ ನ್ಯಾಯಾಲಯವು ಸೋಮವಾರ (ಮೇ 16) ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಇಂದು ನಡೆಸುವ ವಿಚಾರಣೆ ಮಹತ್ವ ಪಡೆದುಕೊಂಡಿದೆ. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಮತ್ತು ಪಿ.ಎಸ್.ನರಸಿಂಹ ಅವರಿರುವ ನ್ಯಾಯಪೀಠವು ಈ ಸಂಬಂಧ ಅಂಜುಮನ್ ಇಂತೆಜಾಮಿಯಾ ಮಸೀದಿ ಆಡಳಿತ ಮಂಡಳಿಯು ಮನವಿಯ ವಿಚಾರಣೆ ನಡೆಸಲಿದೆ.

ಜ್ಞಾನವಾಪಿ ಮಸೀದಿ ಸಮೀಕ್ಷೆ ಕುರಿತು ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಈ ಸಂಬಂಧ ಕಳೆದ ಶುಕ್ರವಾರವೇ ಲಿಖಿತ ಆದೇಶ ಹೊರಡಿಸಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ಮಸೀದಿ ಆಡಳಿತ ಮಂಡಳಿಯ ಅರ್ಜಿಯನ್ನು ವಿಚಾರಣೆ ನಡೆಸುವಂತೆ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾಯಪೀಠಕ್ಕೆ ಸೂಚಿಸಿದ್ದರು. ಮಸೀದಿ ಆವರಣದಲ್ಲಿ ನಡೆಯುತ್ತಿರುವ ವಿಡಿಯೊ ಸಮೀಕ್ಷೆ ಕುರಿತು ಕಳೆದ ಶುಕ್ರವಾರ ಯಾವುದೇ ಆದೇಶ ಹೊರಡಿಸಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ವಿಡಿಯೊ ಸಮೀಕ್ಷೆಗೆ ತಡೆಯಾಜ್ಞೆ ನೀಡಬೇಕು ಎನ್ನುವ ಮಸೀದಿ ಆಡಳಿತ ಮಂಡಳಿಯ ಮನವಿಯನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿರಲಿಲ್ಲ.

ಆದರೆ ಮಸೀದಿ ಸಮೀತಿಯ ವಾದವನ್ನು ಆಲಿಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿತ್ತು. ಮಸೀದಿ ಪರವಾಗಿ ಅರ್ಜಿ ಸಲ್ಲಿಸಿದ್ದ ವಕೀಲರು, ಶ್ರದ್ಧಾಕೇಂದ್ರಗಳ (ವಿಶೇಷ ಸ್ಥಾನಮಾನ) ಕಾಯ್ದೆ 1991ರ 4ನೇ ವಿಧಿಯನ್ನು ಉಲ್ಲೇಖಿಸಿದ್ದರು. ಆಗಸ್ಟ್ 15, 1947ಕ್ಕೆ ಮೊದಲು ಇದ್ದ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು ಎಂಬ ಸೂಚನೆಯನ್ನು ಸುಪ್ರೀಂಕೋರ್ಟ್ ಗಮನಕ್ಕೆ ತಂದಿದ್ದರು.

ವಿಡಿಯೊ ಸಮೀಕ್ಷೆ ಮುಕ್ತಾಯ

ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೊಗ್ರಫಿ ಸಮೀಕ್ಷೆಯು ಬಿಗಿ ಭದ್ರತೆಯ ನಡುವೆ ಮೂರನೇ ದಿನವಾದ ಸೋಮವಾರ (ಮೇ 16) ಮುಕ್ತಾಯವಾಯಿತು. ಬೆಳಗ್ಗೆ 8 ಗಂಟೆಗೆ ಆರಂಭವಾದ ಮಸೀದಿ ಸಂಕೀರ್ಣದ ಸಮೀಕ್ಷೆಯು 10:15 ರ ಸುಮಾರಿಗೆ ಮುಕ್ತಾಯವಾಗಿದೆ. ಮಸೀದಿಯು ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲಿದೆ. ಸ್ಥಳೀಯ ನ್ಯಾಯಾಲಯವು ಅದರ ಹೊರ ಗೋಡೆಗಳ ಮೇಲಿನ ವಿಗ್ರಹಗಳ ಮುಂದೆ ದೈನಂದಿನ ಪ್ರಾರ್ಥನೆಗೆ ಅನುಮತಿ ಕೋರಿ ಮಹಿಳೆಯರ ಗುಂಪಿನ ಮನವಿಯನ್ನು ಆಲಿಸುತ್ತಿದೆ. ಏತನ್ಮಧ್ಯೆ, ವಾರಣಾಸಿಯ ನ್ಯಾಯಾಲಯವು ಸಂಕೀರ್ಣದಲ್ಲಿರುವ ಕೊಳದಲ್ಲಿ ಶಿವಲಿಂಗ ಕಂಡು ಬಂದಿದೆ ಎಂಬ ವರದಿ ಹಿನ್ನಲೆಯಲ್ಲಿ ಪ್ರಸ್ತುತ ಸ್ಥಳವನ್ನು ನಿರ್ಬಂಧಿಸುವಂತೆ ಆದೇಶಿಸಿದೆ. “ಪ್ರದೇಶವನ್ನು ಸೀಲ್ ಮಾಡಲು ಮತ್ತು ಪ್ರದೇಶಕ್ಕೆ ಪ್ರವೇಶವನ್ನು ನಿಷೇಧಿಸುವಂತೆ ವಾರಣಾಸಿ ನ್ಯಾಯಾಲಯವು ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ಅವರಿಗೆ ಹೇಳಿದೆ. ಪೊಲೀಸ್ ಕಮಿಷನರ್ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಕಮಾಂಡೆಂಟ್ ನಿರ್ಬಂಧಿತ ಪ್ರದೇಶದ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ತಾಜಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ