ಜ್ಞಾನವಾಪಿ ಮಸೀದಿ ಮರು ಸರ್ವೆ ಆರಂಭ: ಮೇ 17ಕ್ಕೆ ವರದಿ ಸಲ್ಲಿಕೆಗೆ ಸೂಚನೆ

ಸರ್ವೆ ನಡೆಸಿ ಮೇ 17ರಂದು ವರದಿ ಸಲ್ಲಿಸುವಂತೆ ವಾರಾಣಸಿ ನ್ಯಾಯಾಲಯವು ಸೂಚನೆ ನೀಡಿತ್ತು.

ಜ್ಞಾನವಾಪಿ ಮಸೀದಿ ಮರು ಸರ್ವೆ ಆರಂಭ: ಮೇ 17ಕ್ಕೆ ವರದಿ ಸಲ್ಲಿಕೆಗೆ ಸೂಚನೆ
ಕಾಶಿಯ ಜ್ಞಾನವಾಪಿ ಮಸೀದಿ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 13, 2022 | 8:34 AM

ಲಖನೌ: ನ್ಯಾಯಾಲಯದ ಸೂಚನೆಯಂತೆ ಕಾಶಿಯ ಜ್ಞಾನವಾಪಿ ಮಸೀದಿಯ (Gyanvapi Mosque) ಮರು ಸರ್ವೆ ಶುಕ್ರವಾರದಿಂದ (ಮೇ 13) ಆರಂಭವಾಗಲಿದೆ. ಸರ್ವೆ ನಡೆಸಿ ಮೇ 17ರಂದು ವರದಿ ಸಲ್ಲಿಸುವಂತೆ ವಾರಾಣಸಿ ನ್ಯಾಯಾಲಯವು ಸೂಚನೆ ನೀಡಿತ್ತು. ಸರ್ವೆಯನ್ನು ಸಂಪೂರ್ಣವಾಗಿ ವಿಡಿಯೊ ಚಿತ್ರೀಕರಣ ಮಾಡಬೇಕು. ಸರ್ವೆ ನಡೆಯುವಾಗ ಮಸೀದಿಗೆ ಸಂಬಂಧಿಸಿದ ಧಾರ್ಮಿಕ ಮುಖಂಡರು, ವಕೀಲರು ಮತ್ತು ಸಮಿತಿಗೆ ಸಂಬಂಧಿಸಿದ ವ್ಯಕ್ತಿಗಳು ಮಾತ್ರವೇ ಹಾಜರಿರಬೇಕು. ಇತರರು ಸ್ಥಳಕ್ಕೆ ಬರುವ ಅಗತ್ಯವಿಲ್ಲ ಎಂದು ಕೋರ್ಟ್​ ಕಮಿಷನರ್​ ಅಜಯ್ ಮಿಶ್ರಾಗೆ ನೀಡಿದ್ದ ಸೂಚನೆಯಲ್ಲಿ ಕೋರ್ಟ್ ಹೇಳಿತ್ತು. ವಾರಾಣಸಿ ಕೋರ್ಟ್​ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮಸೀದಿ ಸಮಿತಿ ಸಿದ್ಧತೆ ನಡೆಸಿದೆ.

ಅರ್ಜಿದಾರರು ಕೇಳಿದ ಎಲ್ಲಾ ಸ್ಥಳಗಳಲ್ಲಿ ವೀಡಿಯೊಗ್ರಫಿ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರ ಪರ ವಕೀಲರು ಮಸೀದಿಯ ನೆಲಮಾಳಿಗೆ ಸೇರಿದಂತೆ ಒಳಗೆ ಚಿತ್ರೀಕರಣ ನಡೆಸುವಂತೆ ಕೋರಿದ್ದರು. ಗ್ಯಾನವಾಪಿ ಮಸೀದಿ ವಿಡಿಯೋ ಸರ್ವೆಗೆ ಕೋರ್ಟ್‌ ಅನುಮತಿ ನೀಡಿದ್ದು, ಮೇ 17ರೊಳಗೆ ಈ ಸರ್ವೆ ನಡೆಸಲು ಆದೇಶ ನೀಡಿದೆ. ಗ್ಯಾನವಾಪಿ ಮಸೀದಿಯೊಳಗೆ ಹಿಂದೂ ದೇವರ ವಿಗ್ರಹ ಇದ್ದು, ಅವುಗಳ ಪೂಜೆಗೆ ಅವಕಾಶ ನೀಡಬೇಕು ಎಂದು ಅರ್ಜಿ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್​ನ ಈ ಹಿಂದಿನ ಆದೇಶದಂತೆ ಮೇ 6ರಂದು ಅಧಿಕಾರಿಗಳ ತಂಡ ಮಸೀದಿಯ ವಿಡಿಯೋ ವಿಡಿಯೋ ಸಮೀಕ್ಷೆಗೆ ತೆರಳಿತ್ತು. ಆದರೆ ಮಸೀದಿ ಒಳಗೆ ವಿಡಿಯೋ ಮಾಡಲು ಆಡಳಿತ ಮಂಡಳಿ ತಡೆಯೊಡ್ಡಿತ್ತು. ಜೊತೆಗೆ ಮೇಲುಸ್ತುವಾರಿ ಅಧಿಕಾರಿಯನ್ನು ಬದಲಾಯಿಸಬೇಕು ಎಂದು ಕೋರ್ಟ್​ಗೆ ಮನವಿ ಮಾಡಿತ್ತು.

ಮಸೀದಿಯ ಪಶ್ಚಿಮ ಗೋಡೆಯ ಮೇಲಿರುವ ಕೆಲವು ದೇವತೆಗಳ ವಿಗ್ರಹಗಳಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲು ನ್ಯಾಯಾಲಯದ ಅನುಮತಿ ಕೋರಿ ಐವರು ಮಹಿಳೆಯರು ಸಲ್ಲಿಸಿದ ಅರ್ಜಿಯ ಮೇರೆಗೆ ನ್ಯಾಯಾಲಯವು ಈ ಹಿಂದೆ ಸಮೀಕ್ಷೆಗೆ ಆದೇಶಿಸಿತ್ತು. ಇದಕ್ಕಾಗಿ ನ್ಯಾಯಾಲಯ ಅಜಯ್ ಕುಮಾರ್ ಮಿಶ್ರಾ ಅವರನ್ನು ಕೋರ್ಟ್ ಕಮಿಷನರ್ ಆಗಿ ನೇಮಿಸಿತ್ತು.

ಇದಾದ ಬಳಿಕ ಮಸೀದಿ ಆಡಳಿತ ಸಮಿತಿ ಕೂಡ ನ್ಯಾಯಾಲಯದ ಮೆಟ್ಟಿಲೇರಿದ್ದು, ಅಜಯ್ ಕುಮಾರ್ ಮಿಶ್ರಾ ಬದಲಿಗೆ ಬೇರೆಯವರನ್ನು ಕೋರ್ಟ್ ಕಮಿಷನರ್ ಮಾಡುವಂತೆ ಮನವಿ ಮಾಡಿತ್ತು. ನ್ಯಾಯಾಲಯವು ನಿಯೋಜಿಸಿದ ಈ ಕಡ್ಡಾಯ ಕಾರ್ಯದಲ್ಲಿ ಅಜಯ್ ಕುಮಾರ್ ಮಿಶ್ರಾ ಹಿಂದೂ ಅರ್ಜಿದಾರರ ಪರವಾಗಿದ್ದಾರೆ ಎಂದು ಅದು ಆರೋಪಿಸಿತ್ತು.

ಸುದ್ದಿಯನ್ನು ಹಿಂದಿಯಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:31 am, Fri, 13 May 22