ತಮಿಳುನಾಡು ಮೈತ್ರಿಕೂಟದಲ್ಲಿ ಪಿಎಂ ಗಾದಿ ಜಟಾಪಟಿ, ಸಿಎಂ ವಿಜಯ್ ಪರ ಟಿವಿಕೆ ಬ್ಯಾಟಿಂಗ್, ಕಾಂಗ್ರೆಸ್‌ನಿಂದ ರಾಜೀನಾಮೆ ಅಸ್ತ್ರ

2029ರ ಪ್ರಧಾನಿ ಅಭ್ಯರ್ಥಿ ವಿಚಾರವಾಗಿ ತಮಿಳುನಾಡು ಮೈತ್ರಿಕೂಟದಲ್ಲಿ ಬಿಕ್ಕಟ್ಟು ತಲೆದೋರಿದೆ. ರಾಹುಲ್ ಗಾಂಧಿ ಅವರನ್ನು ಬೆಂಬಲಿಸದಿದ್ದರೆ ಟಿವಿಕೆ ಸರ್ಕಾರದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್ ಎಚ್ಚರಿಸಿದೆ. ಸಿಎಂ ವಿಜಯ್ ಅವರನ್ನು ಪಿಎಂ ಅಭ್ಯರ್ಥಿಯನ್ನಾಗಿ ಬಿಂಬಿಸುತ್ತಿರುವ ಟಿವಿಕೆ ವಿರುದ್ಧ ಕಾಂಗ್ರೆಸ್ ಈ ಕಠಿಣ ನಿಲುವು ತಳೆದಿದೆ.

ತಮಿಳುನಾಡು ಮೈತ್ರಿಕೂಟದಲ್ಲಿ ಪಿಎಂ ಗಾದಿ ಜಟಾಪಟಿ, ಸಿಎಂ ವಿಜಯ್ ಪರ ಟಿವಿಕೆ ಬ್ಯಾಟಿಂಗ್, ಕಾಂಗ್ರೆಸ್‌ನಿಂದ ರಾಜೀನಾಮೆ ಅಸ್ತ್ರ
ರಾಹುಲ್ ಗಾಂಧಿ

Updated on: Aug 31, 2026 | 1:02 PM

ಚೆನ್ನೈ, ಆಗಸ್ಟ್ 31: 2029ರ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ(Rahul Gandhi)ಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪಿಕೊಳ್ಳದಿದ್ದರೆ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರಕ್ಕೆ ನೀಡುತ್ತಿರುವ ಬೆಂಬಲವನ್ನು ವಾಪಸ್ ಪಡೆದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್ ಸಚಿವ ಎಸ್. ರಾಜೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಕನ್ಯಾಕುಮಾರಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ರಾಜೇಶ್ ಕುಮಾರ್, ಈ ವಿಷಯದಲ್ಲಿ ತಾವು ಮತ್ತು ಉನ್ನತ ಶಿಕ್ಷಣ ಸಚಿವ ಪಿ. ವಿಶ್ವನಾಥನ್ ಸಂಪುಟದಿಂದ ಹೊರಬರಲು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಹುಲ್ ಗಾಂಧಿಯೇ ಅಂತಿಮ ಆಯ್ಕೆ: “2029ರ ಲೋಕಸಭಾ ಚುನಾವಣೆಯ ನಂತರ ರಾಹುಲ್ ಗಾಂಧಿ ದೇಶದ ಮುಂದಿನ ಪ್ರಧಾನಿಯಾಗಲಿದ್ದಾರೆ. ಟಿವಿಕೆ ಇದನ್ನು ಒಪ್ಪದಿದ್ದರೆ, ಕಾಂಗ್ರೆಸ್‌ನ ಇಬ್ಬರೂ ಸಚಿವರು ತಕ್ಷಣ ಸಂಪುಟದಿಂದ ಹೊರಬರುತ್ತೇವೆ. ನಮಗೆ ಪಕ್ಷದ ನಿಲುವು ಮತ್ತು ಸಿದ್ಧಾಂತವೇ ಮೊದಲ ಆದ್ಯತೆ” ಎಂದು ಸಚಿವರು ಗುಡುಗಿದ್ದಾರೆ.

ಮತ್ತಷ್ಟು ಓದಿ: Nepal Flood: ನೇಪಾಳ-ಟಿಬೆಟ್ ಗಡಿಯಲ್ಲಿ ಜಲಪ್ರಳಯ; ಪ್ರವಾಹಕ್ಕೆ ಕೊಚ್ಚಿಹೋಯ್ತು ತ್ರಿಶೂಲಿ ನದಿಯ ಸೇತುವೆ

ವಿಜಯ್ ಪರ ಟಿವಿಕೆ ನಾಯಕರ ಬ್ಯಾಟಿಂಗ್: ಇತ್ತೀಚೆಗೆ ಟಿವಿಕೆ ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿ ವಿಜಯ್ ಅವರನ್ನು 2029ರ ಪ್ರಧಾನಿ ಹುದ್ದೆಯ ಪ್ರಬಲ ದಕ್ಷಿಣ ಭಾರತದ ಮುಖ ಎಂದು ಬಿಂಬಿಸಲು ಆರಂಭಿಸಿದ ಬೆನ್ನಲ್ಲೇ ಕಾಂಗ್ರೆಸ್ ಈ ಕಠಿಣ ನಿಲುವು ತಳೆದಿದೆ.

2026ರ ಫಲಿತಾಂಶದ ಬಳಿಕ ಮೈತ್ರಿ ಬದಲಾವಣೆ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಳಿಕ, ಕಾಂಗ್ರೆಸ್ (5 ಸ್ಥಾನಗಳು) ದಶಕಗಳ ಕಾಲದ ಡಿಎಂಕೆ (DMK) ಮೈತ್ರಿ ಕಡಿದುಕೊಂಡು ಟಿವಿಕೆ ಜತೆ ಸೇರಿ ಸರ್ಕಾರ ರಚಿಸಿತು.

ಡಿಎಂಕೆ-ಕಾಂಗ್ರೆಸ್ ನಡುವೆ ಮುಸುಕಿನ ಗುದ್ದಾಟ: ಕಾಂಗ್ರೆಸ್‌ನ ಈ ನಡೆಯಿಂದ ಆಕ್ರೋಶಗೊಂಡ ಡಿಎಂಕೆ ಬೆನ್ನಿಗೆ ಚೂರಿ ಹಾಕಿದೆ ಎಂದು ಆರೋಪಿಸಿ ‘ಇಂಡಿಯಾ’ (INDIA) ಬಣದ ಸಭೆಗಳಿಂದ ದೂರ ಉಳಿದಿದೆ.

ಸರ್ಕಾರಕ್ಕೆ 5 ಶಾಸಕರ ಬಲವೇ ಆಸರೆ: ವಿಧಾನಸಭೆಯಲ್ಲಿ ಬಹುಮತದ ಮ್ಯಾಜಿಕ್ ನಂಬರ್ ಕಾಯ್ದುಕೊಳ್ಳಲು ಟಿವಿಕೆಗೆ ಕಾಂಗ್ರೆಸ್‌ನ 5 ಶಾಸಕರ ಬೆಂಬಲ ಅತ್ಯಂತ ನಿರ್ಣಾಯಕವಾಗಿದೆ.

ಸಮೀಕ್ಷೆಯ ಕಿಡಿ: ಇತ್ತೀಚಿನ ರಾಷ್ಟ್ರೀಯ ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಂತರ ಮೂರನೇ ಅತಿ ಜನಪ್ರಿಯ ಪ್ರಧಾನಿ ಆಯ್ಕೆಯಾಗಿ ಸಿಎಂ ವಿಜಯ್ ಹೊರಹೊಮ್ಮಿದ್ದು, ಎರಡೂ ಪಕ್ಷಗಳ ನಾಯಕರ ನಡುವೆ ವಾಕ್ಸಮರಕ್ಕೆ ತುಪ್ಪ ಸುರಿದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us