ತೆಲಂಗಾಣ ಸರ್ಕಾರಿ ಅಧಿಕಾರಿ ನರಹರಿ ಮನೆ ಮೇಲೆ ಎಸಿಬಿ ದಾಳಿ, ಹಾಸಿಗೆಯ ಕೆಳಗಿತ್ತು ಕೋಟಿ ಕೋಟಿ ಹಣ

ACB Raid: ತೆಲಂಗಾಣದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಎಸಿಬಿ ಸರಣಿ ದಾಳಿ ನಡೆಸುತ್ತಿದೆ. ಭೂಮಾಪನ ಇಲಾಖೆಯ ಉಪ ನಿರ್ದೇಶಕ ಸುಂಕರಿ ನರಹರಿ ಮನೆಯಲ್ಲಿ 1.10 ಕೋಟಿ ನಗದು, ಚಿನ್ನಾಭರಣ, ನೂರಾರು ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಹಾಸಿಗೆ ಕೆಳಗೆ ಕೋಟಿಗಟ್ಟಲೆ ಹಣ ಸಿಕ್ಕಿದ್ದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಕಳೆದ ಎರಡು ವರ್ಷಗಳಲ್ಲಿ 441 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.

ತೆಲಂಗಾಣ ಸರ್ಕಾರಿ ಅಧಿಕಾರಿ ನರಹರಿ ಮನೆ ಮೇಲೆ ಎಸಿಬಿ ದಾಳಿ, ಹಾಸಿಗೆಯ ಕೆಳಗಿತ್ತು ಕೋಟಿ ಕೋಟಿ ಹಣ
ಹಣ
Image Credit source: Coreena Enet Suares

Updated on: Jun 17, 2026 | 7:43 AM

ಹೈದರಾಬಾದ್, ಜೂನ್ 17: ತೆಲಂಗಾಣ ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಹಾವಳಿ ಮಿತಿಮೀರಿದ್ದು, ಭ್ರಷ್ಟಾಚಾರ ನಿಗ್ರಹ ದಳ (ACB) ನಡೆಸುತ್ತಿರುವ ಸರಣಿ ದಾಳಿಗಳು ಅಲ್ಲಿನ ಆಡಳಿತ ವ್ಯವಸ್ಥೆಯಲ್ಲಿರುವ ಕರಾಳ ಮುಖವನ್ನು ಬಯಲಿಗೆಳೆಯುತ್ತಿವೆ. ಇತ್ತೀಚೆಗೆ ಭೂಮಾಪನ ಇಲಾಖೆಯ ಉಪ ನಿರ್ದೇಶಕರಾದ ಸುಂಕರಿ ನರಹರಿ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ನಡೆದ ಎಸಿಬಿ ದಾಳಿ ನಡೆದಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದಾರೆಂಬ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ಹೈದರಾಬಾದ್‌ನ ಹಳೇ ನಗರದ ಚತ್ರಿನಕ ಪ್ರದೇಶದಲ್ಲಿರುವ ಸುಂಕರಿ ನರಹರಿ ಅವರ ನಿವಾಸ, ಕಚೇರಿ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದರು.
ಅವರ ಮನೆಯ ಹಾಸಿಗೆ ಕೆಳಗೆ ಕೋಟಿ ಕೋಟಿ ನಗದು ಪತ್ತೆಯಾಗಿದೆ.

ನರಹರಿ ಅವರ ಮನೆಯಲ್ಲಿ ಬರೋಬ್ಬರಿ 1.10 ಕೋಟಿ ರೂಪಾಯಿ ನಗದು ಹಾಗೂ ಕೆಜಿಗಟ್ಟಲೆ ಚಿನ್ನಾಭರಣಗಳು ಪತ್ತೆಯಾಗಿವೆ. ಹೈದರಾಬಾದ್ ನಗರದ ಅತ್ಯಂತ ದುಬಾರಿ ಪ್ರದೇಶಗಳಲ್ಲಿ ಹಲವು ಮುಕ್ತ ಪ್ಲಾಟ್‌ಗಳು ಹಾಗೂ ರಂಗಾರೆಡ್ಡಿ ಜಿಲ್ಲೆಯಲ್ಲಿ ವಿಶಾಲವಾದ ಕೃಷಿ ಭೂಮಿ ಇರುವುದು ಪತ್ತೆಯಾಗಿದೆ. ಇವುಗಳ ಇಂದಿನ ಮಾರುಕಟ್ಟೆ ಮೌಲ್ಯ ನೂರಾರು ಕೋಟಿ ರೂಪಾಯಿಗಳಿಗಿಂತ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.

ಎರಡು ವರ್ಷಗಳಲ್ಲಿ 441 ಪ್ರಕರಣಗಳು
ತೆಲಂಗಾಣದಲ್ಲಿ 2024 ರಿಂದ ಇಂದಿನವರೆಗೆ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಎಸಿಬಿ ಅಧಿಕಾರಿಗಳು ಬರೋಬ್ಬರಿ 441 ಭ್ರಷ್ಟಾಚಾರದ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅನೇಕ ಅಧಿಕಾರಿಗಳು ಲಂಚ ಪಡೆಯುವಾಗಲೇ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇತ್ತೀಚೆಗೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಇತರರ ಹೆಸರಿಗೆ ವರ್ಗಾಯಿಸಲು ಕೋಟಿಗಟ್ಟಲೆ ಲಂಚ ಪಡೆದಿದ್ದ ಡೆಪ್ಯೂಟಿ ಕಲೆಕ್ಟರ್ ರಾಮು ನಾಯಕ್ ಅವರನ್ನು ಸರ್ಕಾರ ಸೇವೆಯಿಂದ ವಜಾಗೊಳಿಸಿದೆ.

ಮತ್ತಷ್ಟು ಓದಿ: ACB Raid ಟಿಪಿಒ ಜಯರಾಜ್ ಮನೆಯಲ್ಲಿ ಭಾರೀ ಆಸ್ತಿ ಪತ್ತೆ, ಕೇರಳದಲ್ಲಿರುವ ಪತ್ನಿಯ ಕ್ವಾರ್ಟರ್ಸ್‌ ಮೇಲೂ ದಾಳಿ

ಮತ್ತೊಬ್ಬ ಅಧಿಕಾರಿ ಮೋಹನ್ ನಾಯಕ್ ಅವರ ಬಳಿ 100 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ವಿಡಿಯೋ

ಭ್ರಷ್ಟ ಅಧಿಕಾರಿಗಳ ಲೂಟಿಯಿಂದ ಬೇಸತ್ತ ಜನತೆ ಈಗ ಎಸಿಬಿ ದಾಳಿಗಳನ್ನು ಸಂಭ್ರಮಿಸುತ್ತಿದ್ದಾರೆ. ಇತ್ತೀಚೆಗೆ ವಾರಂಗಲ್ ಜಿಲ್ಲೆಯ ನರಸಿಂಹುಲಪೇಟೆ ಮಂಡಲದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಮಹಿಳಾ ಎಂಪಿಡಿಒ (MPDO) ಮತ್ತು ಎಂಪಿಒ (MPO) ಅವರನ್ನು ಎಸಿಬಿ ಬಂಧಿಸಿದಾಗ, ಅಲ್ಲಿನ ಸ್ಥಳೀಯ ನಿವಾಸಿಗಳು ರಸ್ತೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದ್ದು ಅಧಿಕಾರಿಗಳ ಮೇಲಿರುವ ಸಾರ್ವಜನಿಕರ ಆಕ್ರೋಶಕ್ಕೆ ಸಾಕ್ಷಿಯಾಗಿದೆ. ಆ ಮಹಿಳಾ ಅಧಿಕಾರಿಯು ಲಂಚದ ಹಣ ವಸೂಲಿ ಮಾಡಲೆಂದೇ ವಿಶೇಷವಾಗಿ ತನ್ನ ಮಗನನ್ನು ನೇಮಿಸಿಕೊಂಡಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತೆಲಂಗಾಣದಲ್ಲಿ ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳು ಸಾಮಾನ್ಯ ಜನರನ್ನು ತೀವ್ರವಾಗಿ ಲೂಟಿ ಮಾಡುತ್ತಿದ್ದಾರೆ. ಎಸಿಬಿ ಅಧಿಕಾರಿಗಳು ನಿರಂತರವಾಗಿ ಇಂತಹ ಭ್ರಷ್ಟ ತಿಮಿಂಗಿಲಗಳನ್ನು ಬಲೆಗೆ ಬೀಳಿಸಿ ಜೈಲಿಗಟ್ಟುತ್ತಿದ್ದರೂ, ಅಧಿಕಾರಿಗಳ ಲಂಚದ ಹಪಾಹಪಿ ಮಾತ್ರ ಕಮ್ಮಿಯಾಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಇಂತಹವರ ವಿರುದ್ಧ ಸರ್ಕಾರ ಇನ್ನು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:42 am, Wed, 17 June 26

Follow Us