
ಹೈದರಾಬಾದ್, ಜುಲೈ 26: ಭಾರತದಲ್ಲಿ ಶಾಸಕ(MLA) ಅಥವಾ ಸಂಸದ ಆಗಲು ಸ್ಪರ್ಧಿಸಲು ಪ್ರಸ್ತುತ ಇರುವ ಕನಿಷ್ಠ ವಯೋಮಿತಿಯನ್ನು 25 ರಿಂದ 21 ವರ್ಷಕ್ಕೆ ಇಳಿಸಲು ತೆಲಂಗಾಣ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹೈದರಾಬಾದ್ನಲ್ಲಿ ನಡೆದ ವಿದ್ಯಾರ್ಥಿಗಳ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ(Revant Reddy), ಆಗಸ್ಟ್ ಮೊದಲ ವಾರದಲ್ಲಿ ರಾಜ್ಯ ಶಾಸನಸಭೆ ಹಾಗೂ ವಿಧಾನ ಪರಿಷತ್ತಿನ ವಿಶೇಷ ಅಧಿವೇಶನ ಕರೆದು ಈ ಕುರಿತು ನಿರ್ಣಯ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.
ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೆ ಸ್ಪರ್ಧಿಸಲು ಕನಿಷ್ಠ ವಯಸ್ಸು 25 ವರ್ಷ ಹಾಗೂ ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿಗೆ 30 ವರ್ಷಗಳಾಗಿದೆ. ಆದರೆ, ಈ ವಯೋಮಿತಿಯನ್ನು 21 ವರ್ಷಕ್ಕೆ ಇಳಿಸಲು ತೆಲಂಗಾಣ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದೆ. ಜರ್ಮನಿ ಮತ್ತು ಗ್ರೇಟ್ ಬ್ರಿಟನ್ನಂತಹ ದೇಶಗಳಲ್ಲಿ 18 ವರ್ಷ ತುಂಬಿದವರು ಶಾಸನಸಭೆಗೆ ಆಯ್ಕೆಯಾಗುವುದಲ್ಲದೆ ಪ್ರಧಾನಿ ಹಾಗೂ ಅಧ್ಯಕ್ಷರಾಗಬಹುದು. ಸಿಂಗಾಪುರದಲ್ಲಿ 21 ವರ್ಷ ಮೇಲ್ಪಟ್ಟವರು ಪ್ರಧಾನಿಯಾಗಲು ಅರ್ಹತೆ ಪಡೆಯುತ್ತಾರೆ ಎಂದು ರೇವಂತ್ ರೆಡ್ಡಿ ಉಲ್ಲೇಖಿಸಿದರು.
ಆಗಸ್ಟ್ ಮೊದಲ ವಾರದಲ್ಲಿ ವಿಧಾನಮಂಡಲದ ಉಭಯ ಸೌಧಗಳಲ್ಲಿ ವಿಸ್ತೃತ ಚರ್ಚೆ ನಡೆಸಿ ನಿರ್ಣಯ ಅಂಗೀಕರಿಸಲಾಗುವುದು. ಈ ನಿರ್ಣಯವನ್ನು ಕೇಂದ್ರ ಪ್ರಧಾನಮಂತ್ರಿಗೆ ರವಾನಿಸಲಾಗುವುದು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ಈ ಕಾಯ್ದೆಗೆ ಸಂಸತ್ತಿನಲ್ಲಿ ಅನುಮೋದನೆ ಸಿಗುವಂತೆ ಶ್ರಮಿಸುವುದಾಗಿ ಅವರು ಭರವಸೆ ನೀಡಿದರು.
ರಾಹುಲ್ ಗಾಂಧಿಯೇ ದೇಶದ ಮುಂದಿನ ಪ್ರಧಾನಿಯಾಗಬೇಕು: ಸಿಎಂ ರೇವಂತ್ ರೆಡ್ಡಿ
21 ವರ್ಷದ ಯುವಕ ಸಿವಿಲ್ ಸೇವೆಗಳಿಗೆ (IAS/IPS) ಆಯ್ಕೆಯಾಗಬಹುದು, ಸ್ಥಳೀಯ ಸಂಸ್ಥೆಗಳ ಚುನಾವಣೆ ಸ್ಪರ್ಧಿಸಬಹುದಾದರೆ, ಶಾಸಕ ಅಥವಾ ಸಂಸದನಾಗಲು ಏಕೆ ಸಾಧ್ಯವಿಲ್ಲ?” ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಜೆನ್ ಜಿ ಪ್ರಮಾಣ ಶೇ. 30 ರಷ್ಟಿದ್ದರೂ, ಸಂಸತ್ತಿನಲ್ಲಿ ಅವರ ಪ್ರಾತಿನಿಧ್ಯ ಶೇ. 1 ಕ್ಕಿಂತ ಕಡಿಮೆಯಿದೆ.
ವಿಡಿಯೋ
CM Revanth Reddy emphasizes more Representation of GenZ in the Legislative Assembly
Telangana Government will soon convene a special session of the Assembly to pass a Resolution urging the Centre to Reduce the minimum age for contesting Lok Sabha and Assembly Elections to 21… pic.twitter.com/MXRcUe2AAP
— Karri P Rani (@RaniPadmaK) July 26, 2026
ಈ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು 61ನೇ ಸಂವಿಧಾನ ತಿದ್ದುಪಡಿಯ ಮೂಲಕ ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಿದ್ದರು. ಹಾಗೆಯೇ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳ ಮೂಲಕ 21 ವರ್ಷದ ಯುವಕರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದರು.
ಭಾರತೀಯ ಸಂವಿಧಾನದ ವಿಧಿ 84(b) (ಲೋಕಸಭೆಗೆ) ಮತ್ತು ವಿಧಿ 173(b) (ವಿಧಾನಸಭೆಗೆ) ಅಡಿಯಲ್ಲಿ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ಇದನ್ನು ಬದಲಾಯಿಸಲು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಬೇಕಾಗುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ