ಫಲಿತಾಂಶ ಪ್ರಕಟಕ್ಕೂ ಮುನ್ನವೇ ಅಭ್ಯರ್ಥಿಯನ್ನು ಭೇಟಿ ಮಾಡಿದ ಡಿಜಿ ಐಜಿಪಿ; ಅಂಜನಿ ಕುಮಾರ್ ಅಮಾನತುಗೊಳಿಸಿದ ಚುನಾವಣಾ ಆಯೋಗ

|

Updated on: Dec 03, 2023 | 7:59 PM

Telangana DGP Anjani Kumar Suspended: ಚುನಾವಣಾ ಪ್ರಕ್ರಿಯೆ ಮುಗಿಯದಿದ್ದರೂ ಮತ್ತು ಫಲಿತಾಂಶ ಇನ್ನೂ ಪ್ರಕಟವಾಗದಿದ್ದರೂ ಒಂದು ಪಕ್ಷದ ವ್ಯಕ್ತಿಯನ್ನು ಭೇಟಿ ಮಾಡಿ ಶುಭ ಕೋರಿದ ಡಿಜಿಪಿ ಅಂಜನಿ ಕುಮಾರ್ ಅವರನ್ನು ಚುನಾವಣಾ ಆಯೋಗ ಆಮಾನತು ಮಾಡಿದೆ. ಅಂಜನಿ ಕುಮಾರ್ ಹಾಗೂ ಇತರ ಇಬ್ಬರು ಅಧಿಕಾರಿಗಳು ಇಂದು ಕಾಂಗ್ರೆಸ್ ಪಕ್ಷದ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದರು. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗಿದೆ ಎಂಬುದು ಆರೋಪ.

ಫಲಿತಾಂಶ ಪ್ರಕಟಕ್ಕೂ ಮುನ್ನವೇ ಅಭ್ಯರ್ಥಿಯನ್ನು ಭೇಟಿ ಮಾಡಿದ ಡಿಜಿ ಐಜಿಪಿ; ಅಂಜನಿ ಕುಮಾರ್ ಅಮಾನತುಗೊಳಿಸಿದ ಚುನಾವಣಾ ಆಯೋಗ
ಅಂಜನಿ ಕುಮಾರ್
Follow us on

ಹೈದರಾಬಾದ್, ಡಿಸೆಂಬರ್ 3: ಚುನಾವಣಾ ನೀತಿ ಸಂಹಿತೆಯ (election code of conduct) ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ತೆಲಂಗಾಣದ ಪೊಲೀಸ್ ಮಹಾ ನಿರ್ದೇಶಕ ಅಂಜನಿ ಕುಮಾರ್ (Telangana DG & IGP Anjani Kumar) ಅವರನ್ನು ಚುನಾವಣಾ ಆಯೋಗ ಇಂದು ಭಾನುವಾರ (ಡಿ. 3) ಅಮಾನತುಗೊಳಿಸಿದೆ ಎಂದು ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ. ತೆಲಂಗಾಣದ ಡಿಜಿ ಮತ್ತು ಐಜಿ ಆಗಿರುವ ಅಂಜನಿ ಕುಮಾರ್ ಹಾಗು ಪೊಲೀಸ್ ಅಧಿಕಾರಿಗಳಾದ ಸಂಜಯ್ ಜೈನ್ ಮತ್ತು ಮಹೇಶ್ ಭಗವತ್ ಈ ಮೂವರುಗಳು ತೆಲಂಗಾಣ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹಾಗೂ ಚುನಾವಣೆ ಅಭ್ಯರ್ಥಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ಶುಭಾಶಯ ಹೇಳಿದ್ದರು. ರೆಡ್ಡಿ ಮನೆಗೆ ಹೋಗಿ ಹೂಗುಚ್ಛ ನೀಡಿ ಶುಭಕೋರಿದ್ದರು. ಇನ್ನೂ ಕೂಡ ಚುನಾವಣಾ ಫಲಿತಾಂಶ ಪ್ರಕಟವಾಗದಿದ್ದರೂ ಅಭ್ಯರ್ಥಿಯನ್ನು ಡಿಜಿ ಐಜಿಪಿ ಭೇಟಿ ಮಾಡಿ ಶುಭ ಕೋರಿದ್ದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಹೇಳಲಾಗುತ್ತಿದೆ. ಸದ್ಯ ಅಂಜನಿ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಯಾಕೆ ಇದು ನೀತಿ ಸಂಹಿತೆ ಉಲ್ಲಂಘನೆ?

ಚುನಾವಣೆಯಲ್ಲಿ 2,290 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅವರ ಪೈಕಿ ಒಬ್ಬ ಅಭ್ಯರ್ಥಿಯನ್ನು ಮಾತ್ರವೇ ಡಿಜಿಪಿ ಭೇಟಿ ಮಾಡಿದ್ದಾರೆ. 16 ರಾಜಕೀಯ ಪಕ್ಷಗಳ ಪೈಕಿ ಒಂದು ಪಕ್ಷದ ಸ್ಟಾರ್ ಪ್ರಚಾರಕನನ್ನು ಮಾತ್ರ ಅವರು ಭೇಟಿ ಮಾಡಿದ್ದಾರೆ. ಇದು ಯಾವುದೋ ದುರುದ್ದೇಶಕ್ಕೆ ಮಾಡಿದಂತಹ ಕೆಲಸದಂತಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಭಾವಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ಕೂಡ ವರದಿ ಮಾಡಿದೆ.

ಇದನ್ನೂ ಓದಿ: Telangana Election 2023 Results: ತೆಲಂಗಾಣದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್; ಮುಖಭಂಗ ಅನುಭವಿಸಿದ ಕೆಸಿಆರ್ ಅಂಡ್ ಟೀಮ್

‘ಡಿಜಿಪಿಯಾದವರು ರಾಜ್ಯದಲ್ಲಿ ಇಡೀ ಪೊಲೀಸ್ ಪಡೆಯನ್ನು ಮುನ್ನಡೆಸುತ್ತಾರೆ. ತಾರತಮ್ಯತೆ ಇಲ್ಲದ ತಮ್ಮ ವೈಯಕ್ತಿಕ ನಡವಳಿಕೆಯಿಂದ ಅವರು ಇನ್ನೊಬ್ಬರಿಗೆ ಮಾದರಿಯಾಗಿರಬೇಕು. ಅವರಿಂದ ತಪ್ಪು ನಡತೆ ಬಂದರೆ ಚುನಾವಣಾ ಪ್ರಕ್ರಿಯೆಯಲ್ಲಿರುವ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿರುವ ಕೆಳಗಿನ ಪೊಲೀಸ್ ಅಧಿಕಾರಿಗಳು ತಮ್ಮ ಹಿರಿಯರ ಹಾದಿಯನ್ನು ಅನುಸರಿಸಲು ತೊಡಗುತ್ತಾರೆ. ಮತ ಎಣಿಕೆ ಕಾರ್ಯದಲ್ಲಿ ಭದ್ರತೆ ಒದಗಿಸುವುದನ್ನು ಬಿಟ್ಟು ಅಭ್ಯರ್ಥಿಗಳನ್ನು ಅಭಿನಂದಿಸಲು ಮುಂದಾಗಬಹುದು. ಇದರ ಪರಿಣಾಮ ನಿಜಕ್ಕೂ ಊಹಾತೀತವಾದುದು,’ ಎಂದು ಚುನಾವಣಾ ಆಯೋಗ ಅಭಿಪ್ರಾಯಪಟ್ಟಿದೆ ಎಂದು ಮೂಲಗಳು ಹೇಳಿವೆ.

ಸದ್ಯ, ಡಿಜಿ ಐಜಿಪಿ ಅಂಜನಿ ಕುಮಾರ್ ಅವರನ್ನು ಚುನಾವಣಾ ಆಯೋಗ ಅಮಾನತು ಮಾಡಿದೆ. ಅವರ ಜೊತೆ ರೇವಂತ್ ರೆಡ್ಡಿ ಅವರನ್ನು ಭೇಟಿಯಾದ ಸಂಜಯ್ ಕುಮಾರ್ ಜೈನ್ ಮತ್ತು ಮಹೇಶ್ ಭಗವತ್ ಅವರಿಂದ ಆಯೋಗ ವಿವರಣೆ ಕೋರಿದೆ.

ಇದನ್ನೂ ಓದಿ: ತೆಲಂಗಾಣ: ಕೆಸಿಆರ್, ರೇವಂತ್ ರೆಡ್ಡಿಯನ್ನು ಸೋಲಿಸಿದ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ! ಯಾರಿವರು?

ಈಗ ಅಂಜನಿ ಕುಮಾರ್ ಅಮಾನತುಗೊಂಡ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಇನ್ನೊಬ್ಬ ಹಿರಿಯ ಅಧಿಕಾರಿಯನ್ನು ಕೂರಿಸಲಾಗುತ್ತದೆ. ಸೇವೆಯಲ್ಲಿರುವ ಅತ್ಯಂತ ಹಿರಿಯ ವ್ಯಕ್ತಿ ಡಿಜಿ ಐಜಿಪಿ ಆಗಲಿದ್ದಾರೆ.

ತೆಲಂಗಾಣದಲ್ಲಿ ಇಷ್ಟು ವರ್ಷ ಅಧಿಕಾರದಲ್ಲಿದ್ದ ಕೆ ಚಂದ್ರಶೇಖರ್ ರಾವ್ ಸರ್ಕಾರ ಸೋಲುಂಡು ಕಾಂಗ್ರೆಸ್ ಮೊದಲ ಬಾರಿಗೆ ಅಧಿಕಾರ ಹಿಡಿದಿದೆ. ರೇವಂತ್ ರೆಡ್ಡಿ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರಾಗಿದ್ದವರು.

ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:55 pm, Sun, 3 December 23