ದೇವಸ್ಥಾನದೊಳಗೆ ಹಣ ಕದ್ದು ಅಲ್ಲೇ ನಿದ್ರೆಗೆ ಜಾರಿದ ಕಳ್ಳ

ಚೆನ್ನೈನ ಅಂಬೂರಿನ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಸೆಂಥಿಲ್, ಹಣ ಕದ್ದ ನಂತರ ಸುಸ್ತಾಗಿ ಅಲ್ಲೇ ನಿದ್ರೆಗೆ ಜಾರಿದ್ದಾನೆ. ಬೆಳಿಗ್ಗೆ ಬಂದ ದೇವಸ್ಥಾನದ ಸಿಬ್ಬಂದಿ ಕಳ್ಳತನ ಪತ್ತೆ ಹಚ್ಚಿ, ನಿದ್ರೆಯಲ್ಲಿದ್ದ ಕಳ್ಳನನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 8,500 ರೂ. ಹಣ ಕದ್ದು ಸಿಕ್ಕಿಬಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ಹಣ ವಶಪಡಿಸಿಕೊಂಡಿದ್ದಾರೆ. ಈ ವಿಚಿತ್ರ ಘಟನೆ ಈಗ ಅಂಬೂರಿನಲ್ಲಿ ಚರ್ಚೆಯ ವಿಷಯವಾಗಿದೆ.

ದೇವಸ್ಥಾನದೊಳಗೆ ಹಣ ಕದ್ದು ಅಲ್ಲೇ ನಿದ್ರೆಗೆ ಜಾರಿದ ಕಳ್ಳ
ಬಂಧನ
Image Credit source: ipleaders

Updated on: Apr 12, 2026 | 12:04 PM

ಚೆನ್ನೈ, ಏಪ್ರಿಲ್ 12: ತಮಿಳುನಾಡಿನ ಅಂಬೂರಿನ ಕುಡಪ್ಪನಮೂಡಿನಲ್ಲಿರುವ ಕುಳುವಲ್ವತ್ತಂ ಶ್ರೀ ಭಗತಿ ದೇವಸ್ಥಾನ(Temple)ದಲ್ಲಿ ಶನಿವಾರ ಬೆಳಗ್ಗೆ ಒಂದು ವಿಚಿತ್ರ ದೃಶ್ಯ ಕಂಡುಬಂದಿದೆ. ದೇವಸ್ಥಾನದ ಕಚೇರಿಗೆ ಕನ್ನ ಹಾಕಿ ಹಣ ಕದ್ದ ಕಳ್ಳನೊಬ್ಬ, ಅಲ್ಲಿಂದ ಪರಾರಿಯಾಗುವ ಬದಲು ಸುಸ್ತಾಗಿ ಅಲ್ಲೇ ಗಾಢ ನಿದ್ರೆಗೆ ಜಾರಿದ್ದ. ದಿನದಂತೆ ಶನಿವಾರ ಬೆಳಗ್ಗೆ 5.30ಕ್ಕೆ ದೇವಸ್ಥಾನದ ಸಮಿತಿ ಸದಸ್ಯರು ಕಚೇರಿಗೆ ಬಂದಾಗ, ಬಾಗಿಲು ಮುರಿದಿರುವುದನ್ನು ಕಂಡು ಆತಂಕಕ್ಕೊಳಗಾದರು. ಯಾವುದೋ ದೊಡ್ಡ ಕಳ್ಳತನವಾಗಿದೆ ಎಂದು ಒಳಗೆ ಹೋಗಿ ನೋಡಿದವರಿಗೆ ಆಶ್ಚರ್ಯ ಕಾದಿತ್ತು. ಕಚೇರಿಯ ಹಣದ ಪೆಟ್ಟಿಗೆಯಿಂದ ನಗದು ಮಾಯವಾಗಿತ್ತು, ಆದರೆ ಕಳ್ಳ ಮಾತ್ರ ಪಕ್ಕದಲ್ಲೇ ಅತ್ಯಂತ ಆರಾಮವಾಗಿ ಗೊರಕೆ ಹೊಡೆಯುತ್ತಾ ಮಲಗಿದ್ದ.

ಪೊಲೀಸರ ತನಿಖೆಯ ಪ್ರಕಾರ, ಬಂಧಿತ ಆರೋಪಿಯನ್ನು ತಮಿಳುನಾಡು ಮೂಲದ ಸೆಂಥಿಲ್ (40) ಎಂದು ಗುರುತಿಸಲಾಗಿದೆ. ಈತ ಹಳೇ ಕಳ್ಳನಾಗಿದ್ದು, ಈಗಾಗಲೇ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ನಡೆದಿದ್ದು ಹೇಗೆ?
ಶುಕ್ರವಾರ ತಡರಾತ್ರಿ ದೇವಸ್ಥಾನದ ಕಚೇರಿಯ ಬಾಗಿಲು ಒಡೆದು ಒಳನುಗ್ಗಿದ ಸೆಂಥಿಲ್, ಅಲ್ಲಿದ್ದ 8,500 ರೂಪಾಯಿ ನಗದನ್ನು ಕದ್ದಿದ್ದಾನೆ. ಕಳ್ಳತನದ ನಂತರ ಅಲ್ಲಿಂದ ಓಡಿಹೋಗುವ ಬದಲು, ಬಹುಶಃ ಹಗಲಿಡೀ ಅಲೆದಾಡಿ ಸುಸ್ತಾಗಿದ್ದ ಸೆಂಥಿಲ್‌ಗೆ ಆ ತಂಪಾದ ಕಚೇರಿಯ ಒಳಗೆ ಕಣ್ಣು ಮುಚ್ಚಿದ ತಕ್ಷಣ ನಿದ್ರೆ ಹತ್ತಿದೆ.

ಮತ್ತಷ್ಟು ಓದಿ: ಈ ದೇವಸ್ಥಾನದಲ್ಲಿ ಪ್ರಸಾದವಾಗಿ ನೂಡಲ್ಸ್, ಪಿಜ್ಜಾ ಕೊಡ್ತಾರೆ!

ಬೆಳಗ್ಗೆ ದೇವಸ್ಥಾನದ ಸಿಬ್ಬಂದಿ ಬರುವವರೆಗೂ ಈತ ತಾನು ಕದ್ದ ಹಣದ ಮೇಲೆ ಕೈಯಿಟ್ಟುಕೊಂಡು ಗಾಢ ನಿದ್ರೆಯಲ್ಲೇ ಇದ್ದ. ದೇವಸ್ಥಾನದ ಸಿಬ್ಬಂದಿ ತಕ್ಷಣ ವೆಲ್ಲರಡ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ನಿದ್ರೆಯಲ್ಲಿದ್ದ ಸೆಂಥಿಲ್‌ನನ್ನು ಎಬ್ಬಿಸಿ ಕೈಕೋಳ ತೊಡಿಸಿದ್ದಾರೆ. ಕದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

“ಮಾಡಿದ್ದುಣ್ಣೋ ಮಹಾರಾಯ” ಎನ್ನುವಂತೆ, ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಸೆಂಥಿಲ್ ತಾನು ಎಸ್ಕೇಪ್ ಆಗುವ ಪ್ಲಾನ್ ಮರೆತು ನಿದ್ರೆಗೆ ಜಾರಿದ್ದು ಈಗ ಅಂಬೂರಿನಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಪೊಲೀಸರ ಪಾಲಿಗೆ ಇದು ಅತ್ಯಂತ ಸುಲಭವಾದ ಇನ್ವೆಸ್ಟಿಗೇಷನ್ ಎನಿಸಿಕೊಂಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us