ಮರಾಠಿ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಿದ ಎನ್​​ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಬಂಧನ

ಚಿತ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವರು ಸೋಮವಾರ ರಾತ್ರಿ ಗದ್ದಲ ಸೃಷ್ಟಿಸಿದ್ದರು.

ಮರಾಠಿ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಿದ ಎನ್​​ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಬಂಧನ
ಜಿತೇಂದ್ರ ಅವ್ಹಾದ್
Updated By: ರಶ್ಮಿ ಕಲ್ಲಕಟ್ಟ

Updated on: Nov 11, 2022 | 5:10 PM

ಥಾಣೆ: ಮರಾಠಿ ಚಿತ್ರವೊಂದರ ಪ್ರದರ್ಶನವನ್ನು ತಡೆದಿದ್ದಕ್ಕಾಗಿ ಥಾಣೆ ಪೊಲೀಸರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ನಾಯಕ ಜಿತೇಂದ್ರ ಅವ್ಹಾದ್(Jitendra Awhad) ಅವರನ್ನು ಶುಕ್ರವಾರ ವರ್ತಕ್ ನಗರದಲ್ಲಿ ಬಂಧಿಸಿದ್ದಾರೆ.ಮರಾಠಿ ಚಲನಚಿತ್ರ ಹರ್ ಹರ್ ಮಹಾದೇವ್ ಪ್ರದರ್ಶನವನ್ನು ಬಲವಂತವಾಗಿ ನಿಲ್ಲಿಸುವ ಸಂದರ್ಭದಲ್ಲಿ ಅವ್ಹಾದ್ ವ್ಯಕ್ತಿಯೊಬ್ಬರಿಗೆ ಥಳಿಸಿದ್ದಾರೆ. ಚಿತ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವರು ಸೋಮವಾರ ರಾತ್ರಿ ಗದ್ದಲ ಸೃಷ್ಟಿಸಿದ್ದರು.
ಬಂಧನದ ನಂತರ, ಅವರ ಬೆಂಬಲಿಗರು ವರ್ತಕ್ ನಗರ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು. ಮಾಜಿ ಸಂಸದ ಆನಂದ್ ಪರಾಂಜ್ಪೆ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ವರದಿಗಳ ಪ್ರಕಾರ, ಅವ್ಹಾದ್ ಮತ್ತು ಆತನ ಬೆಂಬಲಿಗರು ಮರಾಠಿ ಸಿನಿಮಾ ವೀಕ್ಷಿಸಲು ಬಂದಿದ್ದ ಜನರ ಮೇಲೆ ಹಲ್ಲೆ ನಡೆಸಿದ್ದಾರೆ. ಎನ್‌ಸಿಪಿ ನಾಯಕನನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 141, 143, 146, 149 ಮತ್ತು 323 ಅಡಿಯಲ್ಲಿ ಬಂಧಿಸಲಾಗಿದೆ. ಇನ್ನು ಕೆಲವು ಎನ್‌ಸಿಪಿ ಕಾರ್ಯಕರ್ತರನ್ನೂ ಬಂಧಿಸಲಾಗಿದೆ.

ಅವ್ಹಾದ್ ಮತ್ತು ಅವರ ಬೆಂಬಲಿಗರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು ವಿಡಿಯೊದಲ್ಲಿ, ಮಲ್ಟಿಪ್ಲೆಕ್ಸ್‌ನಿಂದ ಹೊರಗೆ ಕರೆದೊಯ್ಯುವ ಮೊದಲು ಎನ್‌ಸಿಪಿ ನಾಯಕ ಮತ್ತು ಪಕ್ಷದ ಇತರ ಕಾರ್ಯಕರ್ತರು ಪ್ರೇಕ್ಷಕರನ್ನು ಥಳಿಸುತ್ತಿರುವುದನ್ನು ಕಾಣಬಹುದು

ವರದಿಗಳ ಪ್ರಕಾರ, ಅವ್ಹಾದ್ ಮತ್ತು ಅವರ ಬೆಂಬಲಿಗರು ಸೋಮವಾರ ಚಲನಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಿದರು. ಚಿತ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸವನ್ನು ತಿರುಚಲಾಗಿದೆ ಎಂಬುದು ಅವರ ಆರೋಪ. ನಗರದ ವಿವಿಯಾನ ಮಾಲ್‌ನಲ್ಲಿರುವ ಮಲ್ಟಿಪ್ಲೆಕ್ಸ್‌ನಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ, ಎನ್‌ಸಿಪಿ ನಾಯಕ ಮತ್ತು ಪಕ್ಷದ ಕೆಲವು ಕಾರ್ಯಕರ್ತರನ್ನು ವಿಚಾರಣೆಗಾಗಿ ವರ್ತಕ್ ನಗರ ಪೊಲೀಸ್ ಠಾಣೆಗೆ ಕರೆಸಲಾಯಿತು ಮತ್ತು ನಂತರ ಬಂಧಿಸಲಾಯಿತು.


ಈ ಬಗ್ಗೆ ಟ್ವೀಟ್ ಮಾಡಿದ ಅವ್ಹಾದ್, “ಇದು ಪೊಲೀಸ್ ಬಲವನ್ನು ದುರುಪಯೋಗ. ಈಗ ನಾನು ಹೋರಾಡಲು ಸಿದ್ಧನಿದ್ದೇನೆ. ನೀವು ನನ್ನನ್ನು ಗಲ್ಲಿಗೇರಿಸಿದರೂ ಸಹ, ನಾನು ಮಾಡದ ಅಪರಾಧವನ್ನು ನಾನು ಒಪ್ಪಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.  ತಮ್ಮ ಬಂಧನವನ್ನು ಅವರು “ಅಧಿಕಾರದ ದುರುಪಯೋಗ” ಎಂದು ಬಣ್ಣಿಸಿದರು.

ಅವ್ಹಾದ್ ಅವರು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದಲ್ಲಿ ಸೋಲಾಪುರದ ರಕ್ಷಕ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ಥಾಣೆ ನಗರದ ಮುಂಬ್ರಾ-ಕಲ್ವಾ ಕ್ಷೇತ್ರದಿಂದ ವಿಧಾನಸಭೆಯ ಸದಸ್ಯರಾಗಿದ್ದಾರೆ.

Published On - 5:08 pm, Fri, 11 November 22