‘ನನ್ನ ಕೊಂದುಬಿಡುತ್ತಾರಮ್ಮ’; ಡೆಲಿವರಿಗೂ ಮುನ್ನ ಆಸ್ಪತ್ರೆಯಲ್ಲಿ ಗೋಗರೆದಿದ್ದ ತಾಯಿ-ಶಿಶು ಸಾವು

ಮಧ್ಯಪ್ರದೇಶದ ರೇವಾ ಜಿಲ್ಲೆಯ ಸರ್ಕಾರಿ ಗಾಂಧಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ 25 ವರ್ಷದ ಕಲ್ಪನಾ ಮಿಶ್ರಾ ಹಾಗೂ ಆಕೆಯ ನವಜಾತ ಶಿಶು ಮೃತಪಟ್ಟ ಆಘಾತಕಾರಿ ಘಟನೆ ಸಂಭವಿಸಿದೆ. ಹೆರಿಗೆಗೂ ಮುನ್ನ ಮಹಿಳೆ ಆಸ್ಪತ್ರೆಯ ಸಿಬ್ಬಂದಿ ಮತ್ತು ಚಿಕಿತ್ಸೆಯ ಬಗ್ಗೆ ಭೀತಿ ವ್ಯಕ್ತಪಡಿಸಿ, ತನ್ನನ್ನು ಬೇರೆಡೆಗೆ ಕರೆದೊಯ್ಯುವಂತೆ ತಾಯಿಯ ಬಳಿ ಗೋಗರೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೂ ಆಕೆಯ ಮಾತನ್ನು ಕೇಳದೆ ಅದೇ ಆಸ್ಪತ್ರೆಯಲ್ಲಿ ಡೆಲಿವರಿ ಮಾಡಿಸಲಾಗಿತ್ತು.

ನನ್ನ ಕೊಂದುಬಿಡುತ್ತಾರಮ್ಮ; ಡೆಲಿವರಿಗೂ ಮುನ್ನ ಆಸ್ಪತ್ರೆಯಲ್ಲಿ ಗೋಗರೆದಿದ್ದ ತಾಯಿ-ಶಿಶು ಸಾವು
Madhya Pradesh Woman Video
Image Credit source: x

Updated on: Aug 29, 2026 | 10:16 PM

ರೇವಾ, ಆಗಸ್ಟ್ 29: ಮಧ್ಯಪ್ರದೇಶದ ರೇವಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 25 ವರ್ಷದ ಮಹಿಳೆ ಮತ್ತು ಆಕೆಯ ನವಜಾತ ಶಿಶು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕುಟುಂಬಸ್ಥರ ತೀವ್ರ ಪ್ರತಿಭಟನೆ ಹಾಗೂ ವೈದ್ಯಕೀಯ ನಿರ್ಲಕ್ಷ್ಯದ ಆರೋಪದ ಮೇಲೆ ತನಿಖೆಗೆ ಆದೇಶಿಸಲಾಗಿದೆ. ಹಟವಾ ಗ್ರಾಮದ ನಿವಾಸಿ ಕಲ್ಪನಾ ಮಿಶ್ರಾ ಅವರನ್ನು ಹೆರಿಗೆಗಾಗಿ ಆಗಸ್ಟ್ 26ರಂದು ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡೆಲಿವರಿ ಬಳಿಕ ಆಕೆ ಮತ್ತು ನವಜಾತ ಶಿಶು ಇಬ್ಬರೂ ಕೊನೆಯುಸಿರೆಳೆದಿದ್ದಾರೆ.

ಡೆಲಿವರಿಗೂ ಮುನ್ನ ಮಹಿಳೆ ಹೇಳಿದ್ದೇನು?:

ಹೆರಿಗೆಗೆ ಕೆಲವು ಗಂಟೆಗಳ ಮೊದಲು ಕಲ್ಪನಾ ಅವರು ತಮ್ಮ ತಾಯಿಯ ಬಳಿ ಆಸ್ಪತ್ರೆಯಿಂದ ಕರೆದೊಯ್ಯುವಂತೆ ಗೋಗರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ಇದೇ ರೀತಿ ಚಿಕಿತ್ಸೆ ಮುಂದುವರಿದರೆ ಈ ಆಸ್ಪತ್ರೆಯವರು ನನ್ನನ್ನು ಕೊಂದುಹಾಕುತ್ತಾರೆ, ನನ್ನ ಜೀವಕ್ಕೆ ಅಪಾಯವಿದೆ, ದಯವಿಟ್ಟು ನನ್ನನ್ನು ಕಾಪಾಡಿ” ಎಂದು ಕಲ್ಪನಾ ಮಿಶ್ರಾ ಗೋಗರೆಯುತ್ತಾ ತನ್ನ ತಾಯಿಯ ಬಳಿ ಬೇಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.


ಇದನ್ನೂ ಓದಿ: ಸಾಕುನಾಯಿಯ ಬಾಯಿಗೆ ಟೇಪ್ ಅಂಟಿಸಿ, ಮನೆಯೊಳಗೆ ನುಗ್ಗಿ ಹಣ, ಚಿನ್ನಾಭರಣ ದೋಚಿದ ಕಳ್ಳರು!

ಏನಿದು ಘಟನೆ?:

ಆಗಸ್ಟ್ 26ರಂದು ಆಸ್ಪತ್ರೆಗೆ ದಾಖಲಾಗಿದ್ದ ಕಲ್ಪನಾ ಮಿಶ್ರಾ ಅವರಿಗೆ ರಾತ್ರಿ 8.30ರ ಸುಮಾರಿಗೆ ಸಿಸೇರಿಯನ್ ಆಪರೇಷನ್ ನಡೆಸಲಾಗಿತ್ತು. ಆದರೆ, ರಾತ್ರಿ 11.55ರ ವೇಳೆಗೆ ತಾಯಿ ಮತ್ತು ಮಗು ಇಬ್ಬರೂ ಕೊನೆಯುಸಿರೆಳೆದಿದ್ದಾರೆ. ವೈದ್ಯಕೀಯ ದಾಖಲೆಗಳ ಪ್ರಕಾರ, ಆಕೆಯ ಪ್ಲೇಟ್‌ಲೆಟ್ ಪ್ರಮಾಣ ತೀವ್ರವಾಗಿ ಕುಸಿದಿತ್ತು ಹಾಗೂ ತೀವ್ರ ಅಧಿಕ ರಕ್ತದೊತ್ತಡದ ಸಮಸ್ಯೆ ಇತ್ತು ಎನ್ನಲಾಗಿದೆ. ಆಕೆಯ ಕುಟುಂಬಸ್ಥರು ವೈದ್ಯಕೀಯ ನಿರ್ಲಕ್ಷ್ಯ ಮತ್ತು ಆಸ್ಪತ್ರೆ ಸಿಬ್ಬಂದಿಯ ದುರ್ವರ್ತನೆಯೇ ಈ ಸಾವಿಗೆ ಕಾರಣ ಎಂದು ಆರೋಪಿಸಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ 10ನೇ ಮಹಡಿಯಿಂದ ಜಿಗಿದ ಮಹಿಳೆಯ ಜೀವ ಕಾಪಾಡಿತು ಮರದ ಕೊಂಬೆ!

ಸೇವೆಯಿಂದ ಅಮಾನತು:

ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮಧ್ಯಪ್ರದೇಶ ಆರೋಗ್ಯ ಸಚಿವ ರಾಜೇಂದ್ರ ಶುಕ್ಲಾ ಅವರ ಆದೇಶದಂತೆ, ಕರ್ತವ್ಯದಲ್ಲಿದ್ದ ಸ್ತ್ರೀರೋಗ ತಜ್ಞೆ ಡಾ. ಸೋನಲ್ ಅಗರ್‌ವಾಲ್, ಅರಿವಳಿಕೆ ತಜ್ಞೆ ಡಾ. ನಿಧಿ ಪಾಂಡೆ ಹಾಗೂ ಇಬ್ಬರು ನರ್ಸ್​ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಈ ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸಿ 3 ದಿನಗಳೊಳಗೆ ವರದಿ ಸಲ್ಲಿಸಲು 5 ಸದಸ್ಯರ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us