ತಮಿಳುನಾಡು ರಾಜಕೀಯದಲ್ಲಿ ಹೈ-ಡ್ರಾಮಾ: ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್, ಸಿಪಿಐ ಅಚ್ಚರಿಯ ಬೆಂಬಲ

ತಮಿಳುನಾಡು ರಾಜಕೀಯದಲ್ಲಿ ಹೈ-ಡ್ರಾಮಾ ಮುಂದುವರಿದಿದೆ. ಟಿವಿಕೆ ಅಧ್ಯಕ್ಷ ವಿಜಯ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಅವರಿಗೆ ಕಾಂಗ್ರೆಸ್ ಜೊತೆಗೆ ಸಿಪಿಐ ಪಕ್ಷದ ಬೆಂಬಲವೂ ದೊರೆತಿದೆ. ಬಹುಮತಕ್ಕೆ ಕೊಂಚ ಕಡಿಮೆ ಸಂಖ್ಯೆಗಳಿದ್ದರೂ, ವಿಜಯ್ ಆಶಾವಾದಿಯಾಗಿದ್ದಾರೆ. ಆದರೆ ರಾಜ್ಯಪಾಲರು ಬಹುಮತದ ಸ್ಪಷ್ಟತೆ ಕೋರಿದ್ದು, ಪ್ರಮಾಣ ವಚನ ವಿಳಂಬವಾಗುತ್ತಿದೆ. ರಾಜಭವನದ ನಿರ್ಧಾರ ತಮಿಳುನಾಡಿನ ಭವಿಷ್ಯ ನಿರ್ಧರಿಸಲಿದೆ.

ತಮಿಳುನಾಡು ರಾಜಕೀಯದಲ್ಲಿ ಹೈ-ಡ್ರಾಮಾ: ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್, ಸಿಪಿಐ ಅಚ್ಚರಿಯ ಬೆಂಬಲ
ವಿಜಯ್
Image Credit source: India TV

Updated on: May 07, 2026 | 12:36 PM

ಚೆನ್ನೈ, ಮೇ 07: ತಮಿಳುನಾಡು(Tamil Nadu) ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ದಿನಗಳೇ ಕಳೆದರೂ ಸರ್ಕಾರ ರಚನೆಯ ಕಗ್ಗಂಟು ಮಾತ್ರ ಇನ್ನೂ ಮುಂದುವರಿದಿದೆ. ಈ ನಡುವೆ, ಟಿವಿಕೆ ಅಧ್ಯಕ್ಷ ವಿಜಯ್ ಅವರು ಗುರುವಾರ ಬೆಳಗ್ಗೆ ರಾಜ್ಯಪಾಲ ಆರ್‌ವಿ ಅರ್ಲೇಕರ್ ಅವರನ್ನು ಭೇಟಿಯಾಗಿ ಸರ್ಕಾರ ರಚಿಸಲು ತಮಗೆ ಅವಕಾಶ ನೀಡಬೇಕೆಂದು ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ. ಎರಡು ದಿನಗಳಲ್ಲಿ ಇದು ರಾಜ್ಯಪಾಲರೊಂದಿಗೆ ವಿಜಯ್ ನಡೆಸುತ್ತಿರುವ ಎರಡನೇ ಮಹತ್ವದ ಸಭೆಯಾಗಿದೆ.

ಸರ್ಕಾರ ರಚಿಸಲು 118 ಸದಸ್ಯರ ಬಲದ ಅಗತ್ಯವಿದ್ದು, ವಿಜಯ್ ಅವರ ಹಾದಿ ಸವಾಲಿನಿಂದ ಕೂಡಿದೆ.ವಿಜಯ್ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ ಬಳಿಕ ಟಿವಿಕೆ ಬಲ 107 ಆಗಲಿದೆ. ಕಾಂಗ್ರೆಸ್​ನ 5 ಶಾಸಕರು ಈಗಾಗಲೇ ಬೆಂಬಲ ಪತ್ರ ನೀಡಿದ್ದಾರೆ.

ಸಿಪಿಐ ಎಂಟ್ರಿ: ಈಗ ಭಾರತೀಯ ಕಮ್ಯುನಿಸ್ಟ್ ಪಕ್ಷ (CPI) ಕೂಡ ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಲು ಮುಂದಾಗಿದ್ದು, ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಹೊಸ ಬೆಂಬಲದೊಂದಿಗೆ ವಿಜಯ್ ಪಾಳಯದ ಬಲ ಮತ್ತಷ್ಟು ಹೆಚ್ಚಿದ್ದು, ಬಹುಮತದ ಗಡಿಯನ್ನು ತಲುಪಲು ಕೇವಲ ಕೆಲವೇ ಸ್ಥಾನಗಳ ಅವಶ್ಯಕತೆ ಇದೆ.

ರಾಜ್ಯಪಾಲರ ಕಠಿಣ ನಿಲುವು ಮತ್ತು ಪದಗ್ರಹಣ ವಿಳಂಬ
ಸಂಖ್ಯೆಗಳ ಲೆಕ್ಕಾಚಾರದಲ್ಲಿ ಸಣ್ಣ ವ್ಯತ್ಯಾಸವಿದ್ದರೂ, ವಿಜಯ್ ಅವರು ತಾವೇ ಅತಿದೊಡ್ಡ ಪಕ್ಷದ ನಾಯಕನಾಗಿರುವುದರಿಂದ ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ರಾಜ್ಯಪಾಲ ಆರ್‌ವಿ ಅರ್ಲೇಕರ್ ಅವರು ಅಧಿಕೃತ ಸಂಖ್ಯೆಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಕೋರಿದ್ದಾರೆ. ಶಾಸಕರ ಬೆಂಬಲದ ಬಗ್ಗೆ ಸಂಪೂರ್ಣ ಮನವರಿಕೆಯಾಗದ ಹೊರತು ಪ್ರಮಾಣ ವಚನಕ್ಕೆ ಅವಕಾಶ ನೀಡಲಾಗದು ಎಂದು ರಾಜ್ಯಪಾಲರು ಸೂಚಿಸಿರುವುದರಿಂದ ವಿಜಯ್ ಅವರ ಪದಗ್ರಹಣ ಸಮಾರಂಭ ವಿಳಂಬವಾಗುತ್ತಿದೆ.

ಮತ್ತಷ್ಟು ಓದಿ: ದಳಪತಿ ವಿಜಯ್ ಪಕ್ಷದಿಂದ ಗೆದ್ದು ಶಾಸಕರಾದ ತುಮಕೂರು ಮೂಲದ ಸುನೀಲ್ ಆನಂದ್ ಬಗ್ಗೆ ನಿಮಗೆ ಗೊತ್ತೇ!

ಒಂದೆಡೆ ಎಐಎಡಿಎಂಕೆ ನಾಯಕ ಕೆ.ಪಿ. ಮುನುಸ್ವಾಮಿ ಅವರು ಪರಿಸ್ಥಿತಿ ಏನೇ ಇರಲಿ, ನಾವು ವಿಜಯ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಇನ್ನೊಂದೆಡೆ, ಡಿಎಂಕೆ ಮೈತ್ರಿಕೂಟದಲ್ಲಿದ್ದ ಕಾಂಗ್ರೆಸ್ ಹಾಗೂ ಸಿಪಿಐ ಈಗ ವಿಜಯ್ ಅವರ ಬೆನ್ನಿಗೆ ನಿಂತಿರುವುದು ತಮಿಳುನಾಡು ರಾಜಕೀಯದ ಬದಲಾದ ಗಾಳಿಗೆ ಸಾಕ್ಷಿಯಾಗಿದೆ.

ಚಲನಚಿತ್ರೋದ್ಯಮದ ಜನಪ್ರಿಯತೆಯ ಬೆನ್ನಲ್ಲೇ ರಾಜಕೀಯಕ್ಕೆ ಬಂದ ವಿಜಯ್, ತಿರುಚಿರಾಪಳ್ಳಿ ಪೂರ್ವ ಮತ್ತು ಪೆರಂಬೂರು ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಈಗ ರಾಜಕೀಯದ ‘ಕ್ಲೈಮ್ಯಾಕ್ಸ್’ ಹಂತದಲ್ಲಿರುವ ಅವರು, ವಿರೋಧಿಗಳ ತಂತ್ರವನ್ನು ಮೆಟ್ಟಿ ನಿಂತು ಮುಖ್ಯಮಂತ್ರಿ ಪೀಠ ಅಲಂಕರಿಸುತ್ತಾರಾ ಎಂಬುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ. ರಾಜಭವನದಿಂದ ಸಿಗುವ ಮುಂದಿನ ಸೂಚನೆಯೇ ತಮಿಳುನಾಡಿನ ಮುಂದಿನ ಭವಿಷ್ಯವನ್ನು ನಿರ್ಧರಿಸಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us