AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ತಿಂಗಳ ಮಗುವಿನ ಪ್ರಾಣ ಉಳಿಸಲು ‘ಸಾವಿನ ಹಾದಿ’ಯಲ್ಲಿ ಓಡಿದ ಹೀರೋ: ಹಿಮಾಚಲದಲ್ಲಿ ಆಂಬ್ಯುಲೆನ್ಸ್ ಸಿಬ್ಬಂದಿಯ ಸಾಹಸ

ಹಿಮಾಚಲದ ಚಂಬಾದಲ್ಲಿ ಭೂಕುಸಿತದ ನಡುವೆ, ಆಂಬ್ಯುಲೆನ್ಸ್ ಸಿಬ್ಬಂದಿಯೊಬ್ಬರು ತಮ್ಮ ಪ್ರಾಣದ ಹಂಗು ತೊರೆದು 7 ತಿಂಗಳ ಮಗುವಿನ ಜೀವ ಉಳಿಸಿದ ಸಾಹಸ ಎಲ್ಲೆಡೆ ವೈರಲ್ ಆಗಿದೆ. ಕಲ್ಲುಗಳು ಬೀಳುತ್ತಿದ್ದ ಅಪಾಯಕಾರಿ ಹಾದಿಯಲ್ಲಿ ಮಗುವನ್ನು ಎದೆಗೆ ಅಪ್ಪಿಕೊಂಡು ರಕ್ಷಿಸಿದ ಈ ಹೀರೋಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಇಂತಹ ವಿಕೋಪಗಳ ನಡುವೆಯೂ ಮಾನವೀಯತೆ ಮೆರೆದ ಈ ಘಟನೆ ಪ್ರೇರಣದಾಯಕವಾಗಿದೆ.

7 ತಿಂಗಳ ಮಗುವಿನ ಪ್ರಾಣ ಉಳಿಸಲು 'ಸಾವಿನ ಹಾದಿ'ಯಲ್ಲಿ ಓಡಿದ ಹೀರೋ: ಹಿಮಾಚಲದಲ್ಲಿ ಆಂಬ್ಯುಲೆನ್ಸ್ ಸಿಬ್ಬಂದಿಯ ಸಾಹಸ
ಆಂಬ್ಯುಲೆನ್ಸ್​ ಚಾಲಕ
ನಯನಾ ರಾಜೀವ್
|

Updated on: Jul 24, 2026 | 11:40 AM

Share

ಚಂಬಾ, ಜುಲೈ 24: ಹಿಮಾಚಲ ಪ್ರದೇಶದ ಪರ್ವತ ಸಾಲುಗಳಲ್ಲಿ ನಿರಂತರ ಮಳೆಯಿಂದಾಗಿ ಬೆಟ್ಟಗಳು ಕುಸಿದು ಬೀಳುತ್ತಿದ್ದರೆ, ಮತ್ತೊಂದೆಡೆ ಮಾನವೀಯತೆ ಹಾಗೂ ಸಾಹಸದ ಅಪರೂಪದ ಘಟನೆಯೊಂದು ಇಡೀ ದೇಶದ ಗಮನ ಸೆಳೆದಿದೆ. ಭೂಕುಸಿತ(Landslide)ದಿಂದ ರಸ್ತೆ ಸಂಪೂರ್ಣ ಧ್ವಂಸಗೊಂಡು ಬಂಡೆಗಳು ಬೀಳುತ್ತಿದ್ದ ಅಪಾಯಕಾರಿ ಹಾದಿಯಲ್ಲೇ, 7 ತಿಂಗಳ ಪುಟ್ಟ ಮಗುವನ್ನು ಎದೆಗೆ ಅಪ್ಪಿಕೊಂಡು ಕಂದಮ್ಮನ ಪ್ರಾಣ ಉಳಿಸಿದ ಆಂಬ್ಯುಲೆನ್ಸ್ ಸಿಬ್ಬಂದಿಯೊಬ್ಬರ ಸಾಹಸೀ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಧಾರಾಕಾರ ಮಳೆಯಿಂದಾಗಿ ಚಂಬಾ ಜಿಲ್ಲೆಯ ಪರ್ವತ ರಸ್ತೆಯ ಮೇಲೆ ದೊಡ್ಡ ದೊಡ್ಡ ಬಂಡೆಗಳು, ಕಲ್ಲುಗಳು ಮತ್ತು ಮಣ್ಣು ಕುಸಿದುಬಿದ್ದು ಸಾರಿಗೆ ಸಂಪೂರ್ಣ ಸ್ತಬ್ಧವಾಗಿತ್ತು. ಮೇಲಿನ ಬೆಟ್ಟದ ಇಳಿಜಾರಿನಿಂದ ಯಾವುದೇ ಕ್ಷಣದಲ್ಲಾದರೂ ಮತ್ತಷ್ಟು ಕಲ್ಲುಗಳು ಉರುಳಿಬೀಳುವ ಪರಿಸ್ಥಿತಿ ಇತ್ತು.

ಈ ಸಂದರ್ಭದಲ್ಲಿ ಆಂಬ್ಯುಲೆನ್ಸ್ ವಾಹನ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಆದರೆ ಮಗುವಿಗೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದಿದ್ದರಿಂದ, ರಸ್ತೆ ಸರಿಹೋಗುವವರೆಗೆ ಕಾಯದೇ ಆಂಬ್ಯುಲೆನ್ಸ್ ಸಿಬ್ಬಂದಿ ತಕ್ಷಣವೇ ನಿರ್ಧಾರ ಕೈಗೊಂಡರು. 7 ತಿಂಗಳ ಮಗುವನ್ನು ತಮ್ಮ ಎದೆಗೆ ಭದ್ರವಾಗಿ ಅಪ್ಪಿಕೊಂಡು, ಪ್ರಾಣದ ಹಂಗು ತೊರೆದು ಬಂಡೆಗಳು ಬೀಳುತ್ತಿದ್ದ ಹಾದಿಯಲ್ಲೇ ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡುತ್ತಾ ಸುರಕ್ಷಿತವಾಗಿ ರಸ್ತೆಯ ಇನ್ನೊಂದು ಬದಿಗೆ ದಾಟಿಸಿದರು.

ಮತ್ತಷ್ಟು ಓದಿ: ಸಿಕ್ಕಿಂ: ಜಲವಿದ್ಯುತ್ ಯೋಜನೆ ಸುರಂಗದಲ್ಲಿ ಭೂಕುಸಿತ, ಅನಿಲ ಸೋರಿಕೆ, 7 ಶವಗಳು ಪತ್ತೆ, ಹಲವರು ಸಿಲುಕಿರುವ ಶಂಕೆ

ನಿಖಿಲ್ ಸೈನಿ ಎಂಬುವವರು ಈ ವೀಡಿಯೊವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದು, “ಅವರು ಎಲ್ಲಾ ಖ್ಯಾತಿ ಮತ್ತು ಚಪ್ಪಾಳೆಗಳಿಗೆ ಅರ್ಹರು. ಚಂಬಾದಲ್ಲಿ ಆಂಬ್ಯುಲೆನ್ಸ್ ಸಿಬ್ಬಂದಿಯೊಬ್ಬರು ತನ್ನ ಸ್ವಂತ ಜೀವವನ್ನು ಪಣಕ್ಕಿಟ್ಟು, 7 ತಿಂಗಳ ಮಗು ಸುರಕ್ಷಿತವಾಗಿ ತಲುಪಲು ಬೀಳುವ ಕಲ್ಲುಗಳ ಮಧ್ಯೆಯೇ ಹೊತ್ತೊಯ್ದಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಹಿಮಾಚಲ ಪ್ರದೇಶದ ಚಂಬಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆಯಿಂದಾಗಿ ಭೂಕುಸಿತಗಳು ದಿನನಿತ್ಯದ ಸವಾಲಾಗಿ ಪರಿಣಮಿಸಿವೆ. ವಾಹನ ಸಂಚಾರ ಬಂದ್ ಆದಾಗಲೆಲ್ಲಾ ಇಂತಹ ತುರ್ತು ಸೇವಾ ಸಿಬ್ಬಂದಿಗಳು ಹಾಗೂ ರಕ್ಷಣಾ ಪಡೆಗಳು ತಮ್ಮ ಜೀವದ ಹಂಗು ತೊರೆದು ಕಾಲ್ನಡಿಗೆಯಲ್ಲೇ ರೋಗಿಗಳನ್ನು ಮತ್ತು ಸಂತ್ರಸ್ತರನ್ನು ತಲುಪಿಸುವ ಕಾರ್ಯ ಮಾಡುತ್ತಿರುವುದು ಈ ಭಾಗದ ಕಠಿಣ ಪರಿಸ್ಥಿತಿಗೆ ಸಾಕ್ಷಿಯಾಗಿದೆ.

ವಿಡಿಯೋ

ಪ್ರಕೃತಿ ವಿಕೋಪದ ನಡುವೆ ನಿರಂತರ ರಕ್ಷಣೆ ಹಿಮಾಚಲ ಪ್ರದೇಶದ ಚಂಬಾ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಗಾಲದ ಭಾರಿ ಮಳೆಯಿಂದಾಗಿ ಭೂಕುಸಿತಗಳು ಸಂಭವಿಸಿವೆ. ರಸ್ತೆಗಳು ಮುಚ್ಚಿಹೋಗಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿರುವ ಸಂದರ್ಭದಲ್ಲಿ, ಆಂಬ್ಯುಲೆನ್ಸ್ ಸಿಬ್ಬಂದಿ ಹಾಗೂ ರಕ್ಷಣಾ ಪಡೆಗಳು ಕಾಲ್ನಡಿಗೆಯಲ್ಲೇ ಕಿಲೋಮೀಟರ್‌ಗಟ್ಟಲೆ ಸಾಗಿ ರೋಗಿಗಳನ್ನು ಮತ್ತು ಮಕ್ಕಳನ್ನು ಆಸ್ಪತ್ರೆಗೆ ತಲುಪಿಸುತ್ತಿದ್ದಾರೆ.

ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರ ವೀಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಂಬ್ಯುಲೆನ್ಸ್ ಸಿಬ್ಬಂದಿಯ ಅಪಾರ ಧೈರ್ಯ ಮತ್ತು ಕರುಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ತನ್ನ ಜೀವಕ್ಕಿಂತ ಅಪರಿಚಿತ ಮಗುವಿನ ಪ್ರಾಣ ಮುಖ್ಯ ಎಂದು ಭಾವಿಸಿದ ಈತ ನಿಜವಾದ ಸೂಪರ್ ಹೀರೋ ಎಂದು ಜನ ಕೊಂಡಾಡಿದ್ದಾರೆ.

ಅದೇ ಸಮಯದಲ್ಲಿ, ಮಳೆಗಾಲದ ಸಂದರ್ಭದಲ್ಲಿ ಇಂತಹ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸರ್ಕಾರ ಹಾಗೂ ಆಡಳಿತ ಮಂಡಳಿಗಳು ಕಡ್ಡಾಯವಾಗಿ ಸೂಕ್ತ ಮೂಲಸೌಕರ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us