ಇಂದೋರ್: ಚರಂಡಿ ನೀರಿನ ಜತೆ ಮಿಶ್ರಣವಾಗಿದ್ದ ನೀರು ಕುಡಿದು 3 ಮಂದಿ ಸಾವು, ಹಲವರ ಸ್ಥಿತಿ ಗಂಭೀರ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲುಷಿತ ನೀರು ಸೇವಿಸಿ ಮೂವರು ಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಡಿಯುವ ನೀರಿನ ಪೈಪ್‌ಗೆ ಚರಂಡಿ ನೀರು ಮಿಶ್ರಣವಾಗಿದ್ದೇ ದುರಂತಕ್ಕೆ ಕಾರಣ. ಅಧಿಕಾರಿಗಳು ನೀರು ಸರಬರಾಜು ಸ್ಥಗಿತಗೊಳಿಸಿ, ತನಿಖೆಗೆ ಆದೇಶಿಸಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ಹಾಗೂ ಸಂತ್ರಸ್ತರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ.

ಇಂದೋರ್: ಚರಂಡಿ ನೀರಿನ ಜತೆ ಮಿಶ್ರಣವಾಗಿದ್ದ ನೀರು ಕುಡಿದು 3 ಮಂದಿ ಸಾವು, ಹಲವರ ಸ್ಥಿತಿ ಗಂಭೀರ
ನೀರು

Updated on: Dec 31, 2025 | 11:38 AM

ಇಂದೋರ್, ಡಿಸೆಂಬರ್ 31: ಕಲುಷಿತ ನೀರು ಸೇವಿಸಿ ಮೂವರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ. ಕುಡಿಯುವ ನೀರಿನ ಪೈಪ್​ ಒಡೆದು ಅದರೊಳಗೆ ಚರಂಡಿ(Sewage) ನೀರು ಮಿಶ್ರಣವಾಗಿತ್ತು. ಈ ಕುರಿತು ಎಷ್ಟೇ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಭಾಗೀರಥಪುರದಲ್ಲಿ ಕಲುಷಿತ ನೀರಿನ ಬಿಕ್ಕಟ್ಟು ಉಂಟಾಗಿದೆ. ನಗರದ ಆಸ್ಪತ್ರೆಗಳಲ್ಲಿ 100 ಕ್ಕೂ ಹೆಚ್ಚು ನಿವಾಸಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಚಿವ ಕೈಲಾಶ್ ವಿಜಯವರ್ಗಿಯಾ ಅವರ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.

ಪೊಲೀಸ್ ಹೊರಠಾಣೆ ಬಳಿಯ ಸಾರ್ವಜನಿಕ ಶೌಚಾಲಯದ ಕೆಳಗೆ ಸೋರಿಕೆ ಕಂಡುಬಂದಿದ್ದು, ಕುಡಿಯುವ ನೀರಿನ ಪೈಪ್‌ಲೈನ್‌ಗೆ ಕೊಳಚೆ ನೀರು ಪ್ರವೇಶಿಸಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಪುರಸಭೆ ಆಯುಕ್ತ ದಿಲೀಪ್ ಕುಮಾರ್ ಯಾದವ್ ತಕ್ಷಣ ದುರಸ್ತಿಗೆ ಆದೇಶಿಸಿದ್ದಾರೆ.

ಪ್ರದೇಶವನ್ನು ಸ್ವಚ್ಛಗೊಳಿಸಿ, ಕ್ಲೋರಿನೇಷನ್ ಮಾಡಿ ಮತ್ತು ಪ್ರಯೋಗಾಲಯದಲ್ಲಿ ಪರೀಕ್ಷಿಸುವವರೆಗೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಸುರಕ್ಷತಾ ಅನುಮತಿ ವರದಿಗಳು ಬಂದ ನಂತರವೇ ನೀರು ಸರಬರಾಜು ಪುನರಾರಂಭಗೊಳ್ಳುತ್ತದೆ ಎಂದು ಅಧಿಕಾರಿಗಳು ಪುನರುಚ್ಚರಿಸಿದ್ದಾರೆ.ತೀವ್ರ ವಾಂತಿ ಮತ್ತು ಅತಿಸಾರದಿಂದ ಆಸ್ಪತ್ರೆಗೆ ದಾಖಲಾಗಿದ್ದ 75 ವರ್ಷದ ನಂದಲಾಲ್ ಪಾಲ್ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಸಾವನ್ನಪ್ಪಿದ್ದು, ದೃಢಪಟ್ಟ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ. ನಲ್ಲಿ ನೀರು ಕುಡಿದ ನಂತರವೇ ಲಕ್ಷಣಗಳು ಕಾಣಿಸಿಕೊಂಡವು ಎಂದು ಕುಟುಂಬದವರು ತಿಳಿಸಿದ್ದಾರೆ.

ಕಳೆದ ವಾರದಲ್ಲಿ ಸುಮಾರು 150 ಜನರು ವಾಂತಿ ಮತ್ತು ಅತಿಸಾರದಿಂದ ಬಳಲುತ್ತಿದ್ದಾರೆ ಎಂದು ನಿವಾಸಿಗಳು ಹೇಳುತ್ತಿದ್ದಾರೆ, ಆದರೂ ಅಧಿಕಾರಿಗಳು ಇನ್ನೂ ಅಂಕಿಅಂಶಗಳನ್ನು ಪರಿಶೀಲಿಸುತ್ತಿದ್ದಾರೆ.
ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ.ಗಳ ಸಹಾಯವನ್ನು ಡಾ. ಯಾದವ್ ಘೋಷಿಸಿದರು. ಸಂತ್ರಸ್ತರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ. ಭಾಗೀರಥಪುರ ಘಟನೆಯಿಂದ ಬಾಧಿತರಾದ ಎಲ್ಲರಿಗೂ ತ್ವರಿತ ಮತ್ತು ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ನಿರ್ದೇಶನ ನೀಡಿದ್ದಾರೆ.

ಮತ್ತಷ್ಟು ಓದಿ: ಬ್ರ್ಯಾಂಡ್ ಬೆಂಗಳೂರು: ಒಳಚರಂಡಿ ನೀರಿನ ಸಂಸ್ಕರಣೆಗೆ ಸರ್ಕಾರದಿಂದ ಹೊಸ ಪ್ಲಾನ್​

ಪ್ರತಿಯೊಬ್ಬ ರೋಗಿಗೂ ಸರಿಯಾದ ಆರೈಕೆ ಒದಗಿಸುವಂತೆ ಜಿಲ್ಲಾಡಳಿತ ಮತ್ತು ಆರೋಗ್ಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಶಿವಂ ವರ್ಮಾ ಮಾತನಾಡಿ, ಆಡಳಿತವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಚಿಕಿತ್ಸೆಯನ್ನು ನಿಯಮಿತವಾಗಿ ಪರಿಶೀಲಿಸಲು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಮತ್ತು ಘಟನೆಯ ಕಾರಣವನ್ನು ನಿರ್ಧರಿಸಲು ವಿವರವಾದ ತನಿಖೆ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ